Advertisement

ಬಾಕಿ ಪ್ರಕರಣ ರಾಜಿಗೆ ಇ-ಅದಾಲತ್‌

06:20 PM Aug 29, 2020 | Suhan S |

ಬಾಗಲಕೋಟೆ: ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ರಾಜ್ಯ ಹೈಕೋರ್ಟ್‌, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೆಗಾ ಇ-ಅದಾಲತ್‌ ಹಮ್ಮಿಕೊಂಡಿದೆ. ಈ ಹಿಂದೆ ನಡೆಯುತ್ತಿದ್ದ ರಾಷ್ಟ್ರೀಯ ಲೋಕ ಅದಾಲತ್‌ ಮಾದರಿಯಲ್ಲೇ ಇ ಅದಾಲತ್‌ ಕೂಡ ನಡೆಯಲಿದ್ದು, ಕಕ್ಷಿದಾರರು, ತಾವು ಇರುವ ಸ್ಥಳದಲ್ಲಿಂದಲೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.

Advertisement

ಈ ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಅರವಿಂದಕುಮಾರ, ವಿಡಿಯೋ ಕಾನ್ಫೆರೆನ್ಸ್‌ ಸುದ್ದಿಗೋಷ್ಠಿ ಮೂಲಕ ವಿವರ ನೀಡಿದರು. ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್‌ ಪ್ರಕರಣಗಳನ್ನು ಸೆ. 19ರಂದು ನಡೆಯುವ ಮೆಗಾ ಇ-ಲೋಕ ಅದಾಲತ್‌ ಮೂಲಕ ಇತ್ಯರ್ಥಗೊಳಿಸಲು ಅವಕಾಶವಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 6 ತಿಂಗಳುಗಳ ಕಾಲ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ಮೂಲಕ ಯಾವುದೇ ರೀತಿಯ ಪ್ರಕರಣಗಳು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲಿಯೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ ಎಂದರು.

ಸೆ. 19ರಂದು ಇ-ಲೋಕ ಅದಾಲತ್‌ ಮೂಲಕ ಆರಂಭ ಮಾಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸುವ ಕೊಡುವ ಉದ್ದೇಶ, ಧ್ಯೇಯ ವಾಕ್ಯವಾಗಿದೆ. ಇ-ಅದಾಲತ್‌ ಪ್ರಾರಂಭಿಸುವ ಉದ್ದೇಶದಿಂದ ವಿಮಾ ಕಂಪನಿಗಳ ಮೇಲಧಿಕಾರಿಗಳ ಜತೆ ಸಂಪರ್ಕ ಮಾಡಿ ಪರಿಹಾರ ನೀಡಲು ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ಬರದೇ ತೊಂದರೆಗೊಳದಾದವರಿಗೆ ತುರ್ತಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತಿದೆ. ಅಲ್ಲದೇ ಕಳೆದ 4 ತಿಂಗಳುಗಳಿಂದ ವಕೀಲರಿಗೆ ಆದ ತೊಂದರೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ಲೀಗಲ್‌ ಸರ್ವಿಸಸ್‌ ಕಮೀಟಿಯ ಅಧ್ಯಕ್ಷರಾದ ನ್ಯಾ| ಅಲೋಕ ಆರಾದ್ಯ ಮೆಗಾ ಇ ಅದಾಲತ್‌ ಬಗ್ಗೆ ಮಾಹಿತಿ ನೀಡಿದರು. ಸಣ್ಣ ಪುಟ್ಟ ಪ್ರಕರಣಗಳಿದ್ದಲ್ಲಿ ಇನ್ನು ಮುಂದೇ ಕೋರ್ಟ್‌ಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್‌ ಆಪ್‌ ಮೂಲಕ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿದರೆ ಅವರಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ, ತಾಲೂಕುವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿ ಸಭೆ ಮಾಡಿ ಸಾಧಕ ಬಾಧಕಗಳ ಬಗ್ಗೆ ವಿಮರ್ಶೆ ಮಾಡಲಾಗಿದೆ. ಅಲ್ಲದೇ ವಕೀಲರು ಹಾಗೂ ಬಾರ್‌ ಕೌನ್ಸೆಲಿಂಗ್‌ನ ಅಧ್ಯಕ್ಷರ ಜತೆ ಸಮಾಲೋಚನೆ ಮಾಡಲಾಗಿದೆ. ಅದಕ್ಕೆ ಅವರು ಸಹಕಾರ ನೀಡಲು ತಿಳಿಸಿದ್ದಾರೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಮಾತನಾಡಿ ಇ-ಲೋಕ್‌ ಅದಾಲತ್‌ಗೆ ಸೆಪ್ಟೆಂಬರ್‌ 18ರವರೆಗೆ ನೊಂದಣಿ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್‌ 19ರಂದು ಏಕ ಕಾಲಕ್ಕೆ ಇ-ಲೋಕ ಅದಾಲತ್‌ನಡೆಸಲಾಗುತ್ತಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ನಿರ್ದೇಶನದ ಮೇರೆಗೆ ಬಾಗಲಕೋಟೆ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಈಗಾಗಲೇ ಇತ್ಯರ್ಥವಾಗದ ಒಟ್ಟು 42,097 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸಿವಿಲ್‌ 24,245 ಪ್ರಕರಣಗಳು, ಕ್ರಿಮಿನಲ್‌ 17,852 ಪ್ರಕರಣಗಳಿದ್ದು, ಇವುಗಳನ್ನು ಇ-ಲೋಕ ಅದಾಲತ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಸಿಪಿಒ ಕಡಕೋಳ ಉಪಸ್ಥಿತರಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಸಾಧ್ಯವಾಗಿಲ್ಲ. ಸುಮಾರು 8ರಿಂದ 10 ವರ್ಷಗಳ ಹಿಂದೆ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟವರ ವಾರಸುದಾರರಿಗೆ ಪರಿಹಾರ ಕೊಡುವ ಪ್ರಕರಣ ಬಾಕಿ ಇವೆ. ಇಂತಹ ಹಲವು ಬಾಕಿ ಉಳಿದ ಪ್ರಕರಣಗಳನ್ನು ಇ ಮೇಗಾ ಅದಾಲತ್‌ ಮೂಲಕ ಬಗೆಹರಿಸಿ, ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಕೊಡಿಸುವ ಮೂಲ ಪ್ರಯತ್ನ ಇದಾಗಿದೆ. ಇದಕ್ಕಾಗಿ ಹಲವು ಇನ್ಸುರೆನ್ಸ್‌ ಕಂಪನಿಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳ ಜತೆಗೂ ಸಭೆ ನಡೆಸಲಾಗಿದೆ. ಬಾಕಿ ಪ್ರಕರಣಗಳ ಕಕ್ಷಿದಾರರು ಇದರ ಪ್ರಯೋಜನ ಪಡೆಯಬೇಕು. –ನ್ಯಾಯಮೂರ್ತಿ ಅರವಿಂದಕುಮಾರ, ಕಾರ್ಯ ನಿರ್ವಾಹಕ ಅಧ್ಯಕ್ಷರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು

ಕೋವಿಡ್ ಹಿನ್ನೆಲೆ ವಕೀಲರು, ಕಕ್ಷಿದಾರರು ಕೋಟ್‌ಗೆ ಬಾರದೇ ತಾವಿದ್ದ ಮನೆ, ವಕೀಲರ ಕಚೇರಿಯಲ್ಲೇ ಇ-ಮೇಗಾ ಅದಾಲತ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲೆಯಲ್ಲಿ 42,097 ಪ್ರಕರಣ ಬಾಕಿ ಇದ್ದು, ಸೆ. 18ರವರೆಗೆ ಇ ಮೇಗಾ ಅದಾಲತ್‌ನಲ್ಲಿ ಭಾಗಿಯಾಗಿಲು ನೋಂದಾಯಿಸಕೊಳ್ಳಬಹುದು. ಸೆ. 19ರಂದು ಜಿಲ್ಲೆಯ ಎಲ್ಲ ಕೋರ್ಟ್‌ಗಳಲ್ಲೂ ಇ ಮೇಗಾ ಅದಾಲತ್‌ ನಡೆಯಲಿದೆ. – ಕಲ್ಪನಾ ಎಂ. ಕುಲಕರ್ಣಿ, ಪ್ರಧಾನ ಜಿಲ್ಲಾ , ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next