Advertisement

ಸಾಲಿಗ್ರಾಮ ಪ.ಪಂ.: ಬಿಗಡಾಯಿಸಿದ ಡಂಪಿಂಗ್‌ ಯಾರ್ಡ್‌ ಸಮಸ್ಯೆ

01:10 AM Sep 18, 2018 | Karthik A |

ಕೋಟ: ಸಾಲಿಗ್ರಾಮ ಪ.ಪಂ.ಗೆ ಹತ್ತಾರು ವರ್ಷದಿಂದ ದೊಡ್ಡ ತಲೆನೋವಾಗಿರುವ ಕಸ ವಿಲೇವಾರಿ ಸಮಸ್ಯೆ ಇದೀಗ ಬಿಗಡಾಯಿಸಿದೆ. ಸೂಕ್ತ ಡಂಪಿಂಗ್‌ ಯಾರ್ಡ್‌ ಇಲ್ಲದಿರುವುದರಿಂದ ಎಲ್ಲಾ ಮನೆಗಳು, ಹೊಟೇಲ್‌, ಕೈಗಾರಿಕೆ, ಅಂಗಡಿ ಮುಂತಾದ ವಾಣಿಜ್ಯ ಘಟಕಗಳ ಕಸ ಸಂಗ್ರಹಣೆಯನ್ನು ಪ.ಪಂ. ಸೆ. 18ರಿಂದ ಸ್ಥಗಿತಗೊಳಿಸುತ್ತಿದೆ.  ಇದರಿಂದ ಸಾವಿರಾರು ಮಂದಿಗೆ ಮುಂದೆ ಸಮಸ್ಯೆ ಎದುರಾಗಲಿದೆ.

Advertisement

ಡಂಪಿಂಗ್‌ ಯಾರ್ಡ್‌ಗೆ ಸ್ಥಳವಿಲ್ಲ
ಸಾಲಿಗ್ರಾಮದ ಕಸವನ್ನು ಈವರೆಗೆ ಹಳೆಕೋಟೆ ಮೈದಾನದಲ್ಲಿ ಸಂಗ್ರಹಿಸಿ ಅಲ್ಲಿಂದ ಉಡುಪಿಯ ಡಂಪಿಂಗ್‌ ಯಾರ್ಡ್‌ನಲ್ಲಿ ವಿಲೇವಾರಿ ಮಾಡಲಾಗುತಿತ್ತು. ಆದರೆ ಉಡುಪಿಯಲ್ಲಿ ಕಸದ ಪ್ರಮಾಣ ಹೆಚ್ಚಿರುವುದರಿಂದ ಇಲ್ಲಿನ ಕಸವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಜತೆಗೆ ಹಳೆಕೋಟೆ ಮೈದಾನದ ತಾತ್ಕಾಲಿಕ ಡಂಪಿಂಗ್‌ ಯಾರ್ಡ್‌ ಕುರಿತು ಸ್ಥಳೀಯರಿಂದ ಸಾಕಷ್ಟು ವಿರೋಧವಿದೆ. ಹೀಗಾಗಿ ಕಸ ವಿಲೇವಾರಿಗೆ ಜಾಗವಿಲ್ಲವಾಗಿದೆ.

ಸ್ವಂತ ಡಂಪಿಂಗ್‌ ಯಾರ್ಡ್‌ ನಿರ್ಮಾಣಕ್ಕೆ ಹಿನ್ನಡೆ
ಈ ಹಿಂದೆ ಪ.ಪಂ. ಸ್ವಂತ ಡಂಪಿಂಗ್‌ ಯಾರ್ಡ್‌ ನಿರ್ಮಾಣಕ್ಕಾಗಿ ಉಳೂ¤ರಿನಲ್ಲಿರುವ ಸ್ಥಳ ಖರೀದಿ ನಡೆಸಿತ್ತು. ಆದರೆ ಅಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕುಂದಾಪುರ ಜೆ.ಎಮ್‌.ಎಫ್‌.ಸಿ. ನ್ಯಾಯಾಲಯದಲ್ಲಿ  ಈ ಕುರಿತು ವ್ಯಾಜ್ಯ ನಡೆಯುತ್ತಿದೆ. ಹೀಗಾಗಿ ಸ್ವಂತ ಡಂಪಿಂಗ್‌ ಯಾರ್ಡ್‌ ನಿರ್ಮಾಣ ಸಾಧ್ಯವಾಗಿಲ್ಲ.

ವ್ಯಾಜ್ಯ ಮುಗಿಯುವ ತನಕ ಸಮಸ್ಯೆ ಇತ್ಯರ್ಥವಿಲ್ಲ
ಉಳ್ತೂರು ಡಂಪಿಂಗ್‌ ಯಾರ್ಡ್‌ನ ವ್ಯಾಜ್ಯ ಮುಕ್ತಾಯವಾಗಿ ಶಾಶ್ವತ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗುವವರೆಗೆ ಪ.ಪಂ.ನಿಂದ  ಯಾವುದೇ ಹಸಿ ಕಸವನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಪಟ್ಟಣ ಪಂಚಾಯತ್‌ ಸಾರ್ವಜನಿಕರಿಗೆ ಸೂಚನೆ ನೀಡಿದೆ

ನಗರದ ಸ್ವಚ್ಛತೆಗೆ ಅಡ್ಡಿ ಇಲ್ಲ
ಹಸಿ ಕಸ ಸಂಗ್ರಹಣೆ ಸಂಪೂರ್ಣ ಸ್ಥಗಿತಗೊಂಡರು ನಗರದ ಬೀದಿಗಳನ್ನು ಸ್ವಚ್ಛಗೊಳಿಸುವುದು, ಬೀದಿಗಳಲ್ಲಿನ ಕಸ ಸಂಗ್ರಹಣೆ ಎಂದಿನಂತೆ ಮುಂದುವರಿಯಲಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಸಾವಿರಾರು ಮಂದಿಗೆ ಸಮಸ್ಯೆ
ಪ.ಪಂ. ವ್ಯಾಪ್ತಿಯ 16ವಾರ್ಡ್‌ಗಳ ಸುಮಾರು 1500 ಮನೆಗಳು ಹಾಗೂ 5 ವಸತಿ ಸಂಕಿರ್ಣಗಳು, 10ಕ್ಕೂ ಹೆಚ್ಚು ಹೊಟೇಲ್‌, ತರಕಾರಿ ಮಾರುಕಟ್ಟೆ, ನಾಲ್ಕೈದು ಕಲ್ಯಾಣ ಮಂಟಪಗಳಿಂದ ಪ್ರತಿದಿನ ಕಸ ಸಂಗ್ರಹಣೆ ನಡೆಯುತ್ತಿದೆ. ಇದೀಗ ದಿಢೀರ್‌ ಆಗಿ ಈ ತೀರ್ಮಾನ ಕೈಗೊಂಡಿರುವುದರಿಂದ ಸಾವಿರಾರು ಮಂದಿಗೆ ಸಮಸ್ಯೆಯಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಕಾಂಪೋಸ್ಟ್‌ ವಿಧಾನ ಅಳವಡಿಸಿಕೊಳ್ಳಲು ಸೂಚನೆ
ಒಣ ಕಸವನ್ನು ವಾರದಲ್ಲಿ ಒಂದು ದಿನ ಮಾತ್ರ ಪ.ಪಂ. ಸ್ವೀಕರಿಸಲಿದ್ದು, ಹಸಿ ಕಸವನ್ನು ಐಇಸಿ ಕಾರ್ಯಕ್ರಮದಂತೆ ಪೈಪ್‌ ಕಾಂಪೋಸ್ಟ್‌, ಪಿಟ್‌ ಕಾಂಪೋಸ್ಟ್‌, ಬಯೋ ಬಿನ್ಸ್‌ ಅಥವಾ ಇನ್ನಿತರ ವಿಧಾನಗಳಿಂದ ತಮ್ಮ ಸ್ವಂತ ಸ್ಥಳದಲ್ಲಿಯೇ ವಿಲೀನಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ.ಪಂ. ತಿಳಿಸಿದೆ.

ಸಮಸ್ಯೆಗೆ ಗ್ರಾಮಸ್ಥರು ಕಾರಣ 
ಉಡುಪಿಯ ನಮ್ಮ ಕಸ ಸ್ವೀಕರಿಸದಿರಲು ಕಸದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಹಾಗೂ ಹಸಿ ಕಸ-ಒಣ ಕಸವನ್ನು ಬೇರ್ಪಡಿಸದಿರುವುದು ಕಾರಣವಾಗಿದೆ.   ಆದರೆ ಎಷ್ಟೇ ಮನವಿ ಮಾಡಿದರು ನಮ್ಮ ಗ್ರಾಮಸ್ಥರು ಕಸವನ್ನು ಸರಿಯಾಗಿ ವಿಂಗಡಿಸುತ್ತಿಲ್ಲ. ಮನೆಯಲ್ಲೇ ವಿಲೇ ಮಾಡಬಹುದಾದ ತ್ಯಾಜ್ಯವನ್ನು ನೀಡುತ್ತಾರೆ. ಎಸ್‌.ಆರ್‌.ಎಲ್‌.ಎಂ. ಘಟಕ ಸ್ಥಾಪಿಸಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ ಈ ಘಟಕದಿಂದ ಯಾವುದೇ ಸಮಸ್ಯೆ ಇಲ್ಲ, ಹಲವು ಕಡೆ ನಗರದ ಮಧ್ಯದಲ್ಲಿ  ಘಟಕವಿದೆ ಎಂದು ಎಷ್ಟೇ ಮನವಿ ಮಾಡಿದರೂ 4 ಕಡೆಗಳಲ್ಲಿ ಘಟಕದ ಸ್ಥಾಪನೆಗೆ ಅಡ್ಡಿಪಡಿಸಲಾಯಿತು. ಈ ಎಲ್ಲ ಕಾರಣದಿಂದ ಕಸ ವಿಲೇವಾರಿ ಸಾಕಷ್ಟು  ತ್ರಾಸದಾಯಕವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಸ ಸ್ವೀಕರಿಸುವುದನ್ನು ನಿಲ್ಲಿಸಿದ್ದೇವೆ. ಇದು ದಿಢೀರ್‌ ನಿರ್ಧಾರವಲ್ಲ. ಹಲವು ಬಾರಿ ಸೂಚನೆ ನೀಡಲಾಗಿದೆ. ಉಳ್ತೂರಿನಲ್ಲಿ ಡಂಪಿಂಗ್‌ಯಾರ್ಡ್‌ ನಿರ್ಮಿಸುವ ಸಲುವಾಗಿ ಕಾನೂನು ಹೋರಾಟ ಮುಂದುವರಿಯಲಿದ್ದು, ಪರ್ಯಾಯ ವ್ಯವಸ್ಥೆಯಾಗುವ ತನಕ ಜನರು ಸಹಕರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next