Advertisement

ಕಳಪೆ ಕಾಮಗಾರಿ: ಹದಗೆಟ್ಟ ಅಂಪಾರು –ಕ್ರೋಢಬೈಲೂರು ರಸ್ತೆ

02:05 AM Jul 04, 2018 | Karthik A |

ಕ್ರೋಢಬೈಲೂರು: ಕ್ರೋಢ ಬೈಲೂರಿಗೆ ಸಂಪರ್ಕ ಕಲ್ಪಿಸುವ ಅಂಪಾರು – ಹೊಸೂರು – ಕ್ರೋಢ ಬೈಲೂರು ರಸ್ತೆ ಹಾಗೂ ಶಾನ್ಕಟ್ಟು – ಕೊಂಡಳ್ಳಿ – ಕ್ರೋಢಬೈಲೂರು ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇದರಿಂದ ಈ ಭಾಗದಲ್ಲಿ ನಿತ್ಯ ಸಂಚರಿಸುವ ನೂರಾರು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಶಾನ್ಕಟ್ಟು ಮಾರ್ಗವಾಗಿ ಕೊಂಡಳ್ಳಿ ಮೂಲಕ ಕ್ರೋಢಬೈಲೂರಿಗೆ 6 ಕಿ.ಮೀ. ಅಂತರವಿದ್ದರೆ, ಅಂಪಾರು ಮಾರ್ಗವಾಗಿ ಹೊಸೂರು ಮೂಲಕ ಕ್ರೋಢಬೈಲೂರಿಗೆ ಕೇವಲ 2 ಕಿ.ಮೀ. ದೂರವಿದೆ. ಆದರೆ ವಿಪರ್ಯಾಸವೆಂದರೆ ಈ ಎರಡೂ ರಸ್ತೆಗಳಲ್ಲಿ ಈಗ ಹೊಂಡ – ಗುಂಡಿಗಳದ್ದೇ ಕಾರುಬಾರು.

Advertisement

ಕಳಪೆ ಕಾಮಗಾರಿ
ಅಂಪಾರು – ಕ್ರೋಢ ಬೈಲೂರು ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಡಾಮರೀಕರಣಗೊಂಡ ಅತ್ಯಲ್ಪ ಸಮಯದಲ್ಲೇ ತೀವ್ರ ಹದಗೆಟ್ಟು ಹೋಗಿದೆ. ಈ ರಸ್ತೆಯ 500 ಮೀಟರ್‌ನಷ್ಟು ದೂರ ಇನ್ನೂ ಕೂಡ ಡಾಮರೀಕರಣ ಆಗಿಲ್ಲ. ಬಾಕಿ ಉಳಿದ ಭಾಗ ಡಾಮರೀಕರಣಗೊಂಡ 2 ವರ್ಷಗಳಷ್ಟೇ ಆಗಿದೆ. ಇನ್ನೂ ಶಾನ್ಕಟ್ಟು ಕೊಂಡಳ್ಳಿ – ಕ್ರೋಢಬೈಲೂರು ರಸ್ತೆ ದುರಸ್ತಿಯಾಗದೇ 4-5 ವರ್ಷಗಳೇ ಆಗಿವೆ. ಈ ಭಾಗದಿಂದ ಅನೇಕ ಮಂದಿ ವಿದ್ಯಾರ್ಥಿಗಳು ಸೇರಿದಂತೆ ಕೆಲಸಕ್ಕಾಗಿ ಶಂಕರನಾರಾಯಣ ಕಡೆಗೆ ಸಂಚರಿಸುತ್ತಾರೆ. ಪ್ರತಿ ದಿನ ಕ್ರೋಢಬೈಲೂರಿಗೆ 1 ಸರಕಾರಿ ಹಾಗೂ 2 ಖಾಸಗಿ ಬಸ್‌ಗಳು ಈ ಹೊಂಡ – ಗುಂಡಿಗಳ ರಸ್ತೆಯಲ್ಲಿಯೇ ನಿತ್ಯ 5 ಟ್ರಿಪ್‌ ನಲ್ಲಿ ಸಂಚರಿಸುತ್ತವೆ.


ಬಂದ ಅನುದಾನ ಬೇರೆ ರಸ್ತೆಗೆ?

ಅಂಪಾರು- ಕ್ರೋಢಬೈಲೂರು ರಸ್ತೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ಬಂದಿದ್ದರೂ, ಅದನ್ನು ಈ ರಸ್ತೆಗೆ ಬಳಸದೇ ಬೇರೆ ರಸ್ತೆಗೆ ನೀಡಿ, ಈ ಭಾಗಕ್ಕೆ ವಂಚಿಸಿದ್ದಾರೆ ಎನ್ನುವ ಆರೋಪ ಕ್ರೋಢಬೈಲೂರು ನಾಗರಿಕರದು.

ಸಂಚಾರವೇ ದುಸ್ತರ
ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಈಗ ಹೊಂಡ – ಗುಂಡಿಗಳಿಂದಾಗಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಶೀಘ್ರ ಸಂಬಂಧಪಟ್ಟವರು ದುರಸ್ತಿಪಡಿಸಲು ಮುಂದಾಗಲಿ. 
– ಭುಜಂಗ ಶೆಟ್ಟಿ, ಕ್ರೋಢಬೈಲೂರು

ದೂರಿತ್ತರೂ ಪ್ರಯೋಜನವಿಲ್ಲ
ಶಾನ್ಕಟ್ಟು – ಕೊಂಡಳ್ಳಿ- ಕ್ರೋಢಬೈಲೂರು ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ತೀರಾ ಹದಗೆಟ್ಟು ಹೋಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ದೂರು ನೀಡಿದರೂ, ಅವರದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ರಸ್ತೆ ದುರಸ್ತಿಯಾಗದೇ 4-5 ವರ್ಷಗಳೇ ಕಳೆದಿವೆ. 
– ಚಂದ್ರಶೇಖರ ಶೆಟ್ಟಿ, ಕೊಂಡಳ್ಳಿ 

Advertisement

ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆ
ಅಂಪಾರು- ಕ್ರೋಢಬೈಲೂರು ರಸ್ತೆ ಡಾಮರಾಗಿದ್ದರೂ, ಇಲ್ಲಿ ರಸ್ತೆ ಬದಿ ಮರಗಳೆಲ್ಲ ಹೆಚ್ಚಾಗಿರುವುದಿರಿಂದ ನೀರು ರಸ್ತೆಗೆ ಬಿದ್ದು ಹಾಳಾಗುತ್ತಿದೆ. ಇನ್ನೂ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಡಾಮರಾಗಿದೆ.ಆದರೆ ಅಂಪಾರು ಗ್ರಾ.ಪಂ. ವಾಪ್ತಿಯಲ್ಲಿ ಡಾಮರೇ ಆಗಿಲ್ಲ. ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಬೇರೆ ಯಾವ ಅನುದಾನವೂ ಬಂದಿಲ್ಲ. 
– ಸದಾಶಿವ ಶೆಟ್ಟಿ, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷರು

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next