Advertisement

Desi Swara: ದುಬೈ-17ನೇ ವರ್ಷದ ಬಸವ ಜಯಂತಿಯ ಅರ್ಥಪೂರ್ಣಆಚರಣೆ

11:08 AM Jun 01, 2024 | Team Udayavani |

ದುಬೈ:ದುಬೈಯ ಜೆಎಸ್‌ಎಸ್‌ ಶಾಲೆಯ ಪ್ರಾಂಗಣದಲ್ಲಿ ಮೇ 19ರಂದು ಯುಎಇ ಬಸವ ಸಮಿತಿ ದುಬೈ ವತಿಯಿಂದ 17ನೇ ಬಸವ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಶ್ವ ಗುರು ಬಸವಣ್ಣನ ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಬಾಲ ಬಸವಣ್ಣ ತೊಟ್ಟಿಲು ತೂಗಿ …ಸುಂದರ ಬಸವಣ್ಣಗ ಚಂದಾಗಿ ತೂಗಿರೆ ಎಂಬ ಜೋಗುಳ ಪದದೊಂದಿಗೆ ….. ಮುತ್ತೈದೆಯರಿಗೆ ಉಡಿ ತುಂಬಿ ….. ಪೂರ್ಣ ಕುಂಭ ಹಾಗೂ ಚಂಡೆ ಮೇಳ ಸ್ವಾಗತದೊಂದಿಗೆ ಭಾರತ ದೇಶದಿಂದ ಬಂದಂತ ಅತಿಥಿಗಳನ್ನು ಸ್ವಾಗತ ಮಾಡಲಾಯಿತು.

Advertisement

ವಿದುಷಿ ಮಾಧವಿ ಪ್ರಸಾದ ಅವರಿಂದ ಬಸವ ಜ್ಯೋತಿ ಬೆಳಗಲಿ …ಶರಣ ತತ್ತ್ವ ಕಾಯಕ ಕೈಲಾಸವೆಂದ ಸುಮಧುರ ಗೀತೆಯೊಂದಿಗೆ ಬಸವ ಸಮಿತಿ ಪದಾಧಿಕಾರಿಗಳು ಹಾಗೂ ಅತಿಥಿಗಳು ಬಸವ ಜ್ಯೋತಿ ಬೆಳಗಿದರು. ಧರ್ಮವ ಬೆಳಗಿದೆ ಅಣ್ಣ ಕರ್ಮವ ಕಳೆದೆ ಅಣ್ಣ ಎಂಬ ವಚನಕ್ಕೆ ಶಾಸ್ತ್ರೀಯ ನೃತ್ಯಕ್ಕೆ ವಿದುಷಿ ರೋಹಿಣಿ ಅನಂತ ಅವರ ಶಾಲೆಯ ಶಿಷ್ಯರು ಹೆಜ್ಜೆ ಹಾಕಿದರು.

ಯುಎಇ ಬಸವ ಸಮಿತಿ ದುಬೈಯ ವಚನ ಪಾಠ ಶಾಲೆಯ ಪುಟಾಣಿ ಮಕ್ಕಳಿಂದ ನಡೆದ ವಚನ ಗಾಯನ ಹಾಗೂ ವಚನ ವಾಚನ ಜನರನ್ನು ಮನಸೂರೆಗೊಂಡಿತು. ನಮ್ಮ ಸಂಸ್ಕೃತಿ ನಮ್ಮ ಇತಿಹಾಸಾದ ಬಗ್ಗೆ, ಚಿಣ್ಣರ ಛದ್ಮವೇಷ ಹಾಗೂ ವಚನ ನೃತ್ಯಗಳು ಎಲ್ಲರ ಮನಸೂರೆಗೊಂಡವು. ಮಕ್ಕಳ ಅನುಭವ ಮಂಟಪ ಹಾಗೂ ಪೌರಾಣಿಕ ಪಾತ್ರಗಳು ಎಲ್ಲರ ಮೆಚ್ಚುಗೆ ಪಡೆದವು. ಬಸವ ಭಕ್ತರಿಂದ ಭಕ್ತಿ ಗೀತೆಗಳು ಹಾಗೂ ಮಹಿಳೆಯರ ನೃತ್ಯ ಜನಮನಗೊಂಡು ಸಭಿಕರೆಲ್ಲರನ್ನು ಮಂತ್ರಮುಗ್ಧಗೊಳಿಸಿದವು.

ಅಧ್ಯಕ್ಷ ಶರಣಶ್ರೀ ಡಾ| ಬಸವರಾಜ ಹೊಂಗಲ್‌ ಅವರು ನೆರೆದ ಎಲ್ಲ ಬಸವ ಭಕ್ತರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು.
ಭಾರತೀಯ ದೂತವಾಸ ಕಚೇರಿಯ ಅಧಿಕಾರಿ (ಕಾನ್ಸುಲ್‌ ಜನರಲ್‌ ಆಫ್‌ ಇಂಡಿಯಾ ) ಸತೀಶ ಕುಮಾರ್‌ ಶಿವನ್‌ ಅವರು ಮಾತನಾಡಿ, ಬಸವಣ್ಣ ಒಬ್ಬ ಮಹಾನ ದಾರ್ಶನಿಕ. ಸಮಾಜ ಸುಧಾರಕರಾಗಿದ್ದು ಅವರು ಕಲಿಸಿದಂತಹ ವಚನಗಳು ಭೋದನೆಗಳು ಸಮಾಜದಲ್ಲಿ ಗುರುತು ಮೂಡಿಸಿವೆ ಎಂದರು. ಕಾರ್ಯಕ್ರಮದಲ್ಲಿ ಖಾಸ ಮಠ ಗುರುಮಠಕಲದ ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.

Advertisement

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ಶ್ರೀ ತರಳಬಾಳು ಜಗದ್ಗುರುಗಳು
ಯುಎಇ ಬಸವ ಸಮಿತಿ ದುಬೈ ವತಿಯಿಂದ 17ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಉದ್ಘಾಟಿಸಿ ಆಶೀರ್ವಚನ ದಯಪಾಲಿಸಿದ ಶ್ರೀ ಜಗದ್ಗುರುಗಳವರು ಬಸವ ಜಯಂತಿ ಕಾರ್ಯಕ್ರಮದ ನಿಮಿತ್ತ ಬಸವಾದಿ ಶರಣರನ್ನು ಸ್ಮರಿಸುವ ಸ್ತುತ್ಯಾರ್ಹ ಕಾರ್ಯವು ಅರ್ಥಪೂರ್ಣವಾಗಿದ್ದು ಆಚರಣೆಗೆ ಮಾತ್ರ ಸೀಮಿತವಾಗದೆ ಶರಣರ ತತ್ತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಬಸವಾದಿ ಶರಣರ ವಚನಗಳು ಷಟ್‌ಸ್ತಲಗಳ ಆಧಾರದ ಮೇಲೆ ರಚಿತವಾಗಿವೆ ಎಂಬ ಅಭಿಪ್ರಾಯ ಇದೆ. ಆದರೆ ನಮ್ಮ ಅಭಿಪ್ರಾಯದಲ್ಲಿ ಶರಣರ ಎಲ್ಲ ವಚನಗಳು ಜನ ಸಾಮಾನ್ಯರ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ, ಕಾಯಕದ ಅನುಭವದಲ್ಲಿ ರಚಿತವಾಗಿವೆ ಎಂಬುದಕ್ಕೆ ವಚನಗಳಲ್ಲಿಯೇ ಉತ್ತರವಿದೆ ಎಂದು ಒಳಾರ್ಥವನ್ನು ವಿವರಿಸಿದರು.

ನಮ್ಮನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡ ಮಹಿಳೆಯರು ಆರತಿ ಬೆಳಗಿ ಸಂಪ್ರದಾಯ ಮೆರೆದರು, ನಮ್ಮ ಮಹಿಳೆಯರು ಆರತಿಯನ್ನು ಬೆಳಗುವುದರ ಜತೆ ಸಂದರ್ಭ ಬಂದರೆ ಒನಕೆ ಓಬವ್ವ, ಕಿತ್ತೂರ ಚೆನ್ನಮ್ಮನಂತೆ ಹೋರಾಡಬಲ್ಲರು ಎಂದು ಮಹಿಳಾ ಶಕ್ತಿಯನ್ನು ಅರ್ಥೈಸಿದರು. ಅಲ್ಲಮ ಪ್ರಭುಗಳ ವಚನ ಉಲ್ಲೇಖಿಸಿದ ಪೂಜ್ಯರು ದೇವರು ಬ್ರಹ್ಮಾಂಡದ ಒಳಗೆ ಇದ್ದಾನೆ ಎಂಬುದನ್ನು ಇದ್ದಲ್ಲಿಯೇ ಒಳಗಣ್ಣಿನಿಂದ ಕಂಡುಕೊಳ್ಳಲು ಬಸವಣ್ಣನವರು ಇಷ್ಟಲಿಂಗ ಕರುಣಿಸಿದರು.

ದೇವರನ್ನು ದರ್ಶಿಸುವ ದರ್ಶಕವೇ ಲಿಂಗವಾಗಿದೆ. ಬಸವಣ್ಣನವರ ಹೃದಯವು ಶರಣರ ಸಂಘಕ್ಕೆ ಸದಾ ಮಿಡಿಯುತ್ತಿತ್ತು. ಈ ಜಗತ್ತಿನಲ್ಲಿ ಅಸಂಖ್ಯಾಕ ಜನರು ಮರೆಯಾಗಿದ್ದಾರೆ. ಆದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದರು ಮಾತ್ರ ಪ್ರಾತಃ ಸ್ಮರಣೀಯರಾಗಿದ್ದಾರೆ ಅದರಲ್ಲಿ ಬಸವಣ್ಣನವರು ಮನುಕುಲ ಜಗತ್ತಿನ ಉದ್ಧಾರಕ್ಕೆ ಉದಯಿಸಿದ ಯುಗ ಪ್ರವರ್ತಕರು ಎಂದು ಮನಸಾ ಸ್ಮರಿಸಿದರು. ಶ್ರೀ ಜಗದ್ಗುರು ಗಳವರಿಂದ ದುಬೈ ಬಸವಾಭಿಮಾನಿಗಳಿಗೆ ಬಸವಾದಿ ಶರಣರ ಮೊಬೈಲ್‌ ಆಪ್‌ ಪ್ರಾತ್ಯಕ್ಷಿಕೆ ವಿವರಣೆ ನೀಡಿದರು.

ಚಿತ್ರಕಲಾವಿದ ದೊಡ್ಡಣ್ಣ ನೆರದಂತಹ ಎಲ್ಲ ಶರಣಶರಣೆಯರಿಗೆ ಭಕ್ತಿಪೂರ್ವಕ ನಮಸ್ಕಾರ ಎಂದು, ಗುರುವನ್ನು ನರನೆಂಬುವಗೆ, ಶಿವನನ್ನು ಶಿಲೆ ಎಂಬುಗೆ ಎಂಬ ಸರ್ವಜ್ಞ ನುಡಿಯೆಂದ ಪ್ರಾರಂಭಿಸಿ ಜಗತ್ತಿನ 3 ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದು ಎಂದು ಹೇಳಿದರು. ಬಸವ ಸೆಂಟರ್‌ ಆಫ್ ನಾರ್ಥ್ ಅಮೆರಿಕ BCNA , ಮಸ್ಕತ್‌ನಿಂದ ಮತ್ತು ಕತಾರ್‌ ದೇಶಗಳಿಂದ ಬಸವ ಭಕ್ತರೆಲ್ಲರೂ ಶುಭ ಕೋರಿದರು.

ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದಂತಹ ಶಿವರಾಜ್‌ ತಂಗಡಗಿ ಶುಭಾಶಯಗಳು ಕೋರಿರುತ್ತಾರೆ.

ಯುಎಇ ಬಸವ ಸಮಿತಿ ಅಧ್ಯಕ್ಷ ಡಾ| ಬಸವರಾಜ ಹೊಂಗಲ, ಪದಾಧಿಕಾರಿಗಳಾದ ವೀರೇಶ್‌ ಪಾಟೀಲ್‌, ಚಂದ್ರಶೇಖರ್‌ ಲಿಂಗದಳ್ಳಿ, ಮಲ್ಲಿಕಾರ್ಜುನ ಹವಾಲ್ದಾರ, ಮೋಹನ್‌ ಬಿ.ಪಿ., ಪ್ರಕಾಶ್‌ ರುದ್ರಪ್ಪ , ಅನಿಲ್‌ ಪೂಜಾರ್‌, ಆದರ್ಶ ಹಾಗೂ ಮಮತಾ ರಡ್ಡೇರ ಉಪಸ್ಥಿತರಿದ್ದರು. ಆರತಿ ಅಡಿಗ ಹಾಗೂ ಕಾವ್ಯ ಯುವರಾಜ ಅವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಪ್ರಸಾದ ದಾಸೋಹದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಹೆಸರು ಕಾಳು ಪಲ್ಯ ಜುಣಕದ ವಡೆ ಹೋಳಿಗೆ ಮಾವಿನಹಣ್ಣಿನ ಶ್ರೀಕರಣಿ, ಉಪ್ಪಿನಕಾಯಿ, ಮೊಸರನ್ನ ಸಾಂಬಾರು ಹಪ್ಪಳ ಸೆಂಡಿಗೆ ಈ ಎಲ್ಲ ತರಹದ ವಿವಿಧ ಬಗೆ ತಿಂಡಿಗಳನ್ನು ಬಂದಂತಹ ಬಸವ ಭಕ್ತರೆಲ್ಲರೂ ಬಹಳ ಸಂತೋಷದಿಂದ ಸ್ವೀಕರಿಸಿ ಹಾಡಿ ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next