Advertisement

Desi Swara:‘ಪ್ರತ್ಯಭಿಜ್ಞಾ’ ಎಂಬ ಅರಿವಿನ ನೆನಪು-:ಸಮರ್ಪಣೆಯೇ ಪ್ರಪಂಚದ ಅರ್ಥ, ಜೀವನದ ಅರ್ಥ

12:10 PM Jun 22, 2024 | Team Udayavani |

ಕೆಲವು ದಿನಗಳ ಹಿಂದೆ ಕನ್ನಡ ಸಂಘ ಟೊರಂಟೊ ಹಾಗೂ ಶೃಂಗೇರಿ ಶಾರದಾ ಪೀಠ ಜಂಟಿಯಾಗಿ ನಡೆಸಿದ್ದ ‘ಜ್ಞಾನ ಸ್ಪಂದನ’ ಎಂಬುವ ಕಾರ್ಯಕ್ರಮದಲ್ಲಿ ಡಾ| ಗುರುರಾಜ ಕರ್ಜಗಿ ಅವರು ಉದ್ಧರಿಸಿದ ಕಗ್ಗವೊಂದನ್ನು ಕೆಲವು ದಿನಗಳಿಂದ ಒಳಮನದಲ್ಲಿ ಮಥಿಸುತ್ತಾ ಇದೆ.
ಏನು ಜೀವನದರ್ಥ?
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ?
ಅದೇನು, ಜ್ಞಾನಪ್ರಮಾಣವೇಂ? ಮಂಕುತಿಮ್ಮ
ಕಾಣದ ಏನೋ ಒಂದು ಇಲ್ಲಿ ಇರುವುದೇ ? ಅದೇನು? ಜ್ಞಾನಕ್ಕೆ ಪ್ರಮಾಣವೇನು? ಮುನ್ನಿನ ನೆನಪಿಗೂ, ಪ್ರಪಂಚದ ಅರ್ಥಕ್ಕೂ , ಶರೀರಕ್ಕೂ , ಮನಸ್ಸಿಗೂ, ಜ್ಞಾನಕ್ಕೂ (ಅನುಭವದಿಂದ ಮೂಡುವ ತಿಳುವಳಿಕೆ) ಏನಾದರೂ ಪ್ರಮಾಣವಿರಬಹುದೇ?

Advertisement

ಪ್ರಾಚೀನದ ಕಾಶ್ಮೀರದಲ್ಲಿ ಅಭಿನವ ಗುಪ್ತ ಎಂಬ ಶೈವ ಸಂಪ್ರದಾಯದ ವಿಜ್ಞಾನಿ (ವೈಶೇಷಿಕ – ಜ್ಞಾನಿ) ಆರಂಭಿಸಿದ ‘ಪ್ರತ್ಯಭಿಜ್ಞಾ’ ಎಂಬ ವೈಚಾರಿಕ ಪ್ರಸ್ತಾವದಲ್ಲಿ ಹೇಳಿರುವ ಹಾಗೆ, ಪ್ರತಿ ಎಂದರೆ ಒಮ್ಮೆ ತಿಳಿದಿದ್ದ, ಈಗ ಮರೆತಂತೆ ಕಂಡುಬರುವ, ಅಭಿ ಎಂದರೆ “ತಕ್ಷಣದ’’ ಮತ್ತು ಜ್ಞಾ – “ತಿಳಿಯುವಿಕೆ”. ಇದರ ಅರ್ಥ ಪ್ರತೀ ಅನುಭವವೂ ಮರುಕಳಿಸುವ ಪ್ರಾಪಂಚಿಕ ನೆನಪು.

ಅರಿವು ಹಾಗೂ ಜ್ಞಾನ – ಏನು ಸಂಬಂಧ?
ಮನುಷ್ಯನಿಗೆ ಪ್ರಪಂಚದ, ಸೃಷ್ಟಿಯ ಇರುವಿಕೆಯ ಅರಿವು ಮೂಡುವುದು ಅನ್ನಮಯ ಕೋಶದಿಂದುಂಟಾದ ಶರೀರದಲ್ಲಿ ಕಿವಿ-ಕಣ್ಣುಗಳೆಂಬ ಕರ್ಮೇಂದ್ರಿಯಗಳಿಂದ. ಇವುಗಳ ಮುಖಾಂತರ ಇಳಿಯುವ ಅರಿವಿನ ಅನುಭೂತಿಯು, ಮನಸ್ಸು ಬುದ್ಧಿಗಳೆಂಬ ಜ್ಞಾನೇಂದ್ರಿಯಗಳ ಮೂಲಕ ಮನೋಮಯಕೋಶದಲ್ಲಿ ಏಕೀಕೃತ ಜ್ಞಾನರೂಪಿಯಾಗಿ ಒಂದು ವಾಸ್ತವ ಚಿತ್ರದ ಮೂಡುವಿಕೆಯಾಗುತ್ತದೆ.

ಉದಾಹರಣೆಗೆ, ಕಿವಿಗೆ ಒಂದೇ ರೀತಿಯಲ್ಲಿ ಕೇಳುವ ಎರಡು ಬೇರೆ ಬೇರೆ ಶಬ್ದಗಳು – ಯಾವುದೋ ವಾಹನದ ಕರೆಗಂಟೆ ಹಾಗೂ ಅದೇ ರೀತಿ, ಅದೇ ತರಂಗಾಂತರದಲ್ಲಿ ಸದ್ದು ಮಾಡಬಲ್ಲ ಸಂಗೀತೋಪಕರಣದ ನಾದ – ಮನಸ್ಸಿನಲ್ಲಿ ಇಳಿದು ಬೇರೆ ಬೇರೆ ಭಾವನೆ ಹಾಗೂ ಪ್ರತಿಕ್ರಿಯೆ ಮೂಡಿಸುವುದು, ಆಯಾ ಶಬ್ದಗಳೊಂದಿಗೆ ಹೊಂದಿಕೊಂಡ ನೆನಪು ಸೇರಿ ಆ ಶಬ್ದದ ಸಮಗ್ರ ಚಿತ್ರಣ ಮನಃಪಟಲದಲ್ಲಿ ಮೂಡಿದಾಗ.

Advertisement

ಜ್ಞಾನದ ನೆನಪು
ಪ್ರಾಥಮಿಕ ಅನುಭೂತಿಯ ಅನಂತರದ ಅನುಭವವೆಲ್ಲವೂ ಮರುಕಳಿಕೆ. ಮೂಲಭೂತ ಜೀವದ ಸೃಷ್ಟಿಗೆ ಕಾರಣ ಶಕ್ತಿಯು, ಬ್ರಹ್ಮ. ಪ್ರಥಮವಾಗಿ ತನ್ನಲ್ಲಿ ಹುಟ್ಟುವ ಬ್ರಹ್ಮದ ನೆನಪು, ಸಂವಹಿಸುವ ನಾದವಾಗಿ, ಮತ್ತೋರ್ವನಲ್ಲಿ ಉಂಟಾಗಿಸುವ ಮಾರ್ದನಿಕೆಯೇ ‘ತತ್‌ ತ್ವಂ ಅಸಿ’ (ತತ್ವಮಸಿ – ನೀನು ಕೂಡ ಅದೇ ಆಗಿದ್ದೀಯೆ) ಎಂದು ಪ್ರತಿಪಾದಿತವಾಗಿದೆ ಎನ್ನುವ ಭಾವ.
ವಿಶ್ವ ಹಾಗೂ ಮನುಷ್ಯನ ಆತ್ಮಗಳನಾದ ಒಂದೇ ಆದಾಗ ನೋಡುವ ಕಣ್ಣಿಗೆ ಮಾತ್ರ ಎರಡರ ಗೋಚರವೇ ಹೊರತು ಕೇಳುವ ಕಿವಿ, ಮಾರ್ದನಿಸುವ ಅನಾಹತ ಹಾಗೂ ಮಥಿಸುವ ಸ್ಮತಿಗಳಿಗೆ ಒಂದೇ ಮೂಲದ ಅನುಭವ. ಹೀಗೆ ಕರ್ಮೇಂದ್ರಿಯಗಳಿಂದ ಜ್ಞಾನೇಂದ್ರಿಯಗಳ ಮಧ್ಯೆ ಸಂವಹನವಾಗುವ ಅನುಭವವನ್ನು ಸಂಗೀತದ ಅನುಭೂತಿಗೆ ಹೋಲಿಸಬಹುದು.

ಕರಣಗಣಗಳ ರಿಂಗಣ
ತನ್ಮಯರಾಗಿ, ಸ್ವರಗಳಿಗೆ ಆತ್ಮಸಮರ್ಪಣೆ ಮಾಡಿಕೊಂಡ ಸಂಗೀತಗಾರರಿಂದ ಹೊಮ್ಮುತ್ತಿರಬಹುದಾದ ನಾದಶಕ್ತಿಯು, ಅಮೂರ್ತ ಪರಾಧ್ವನಿಯ, ವಿಶ್ವವೀಣೆಯ ನಾದದ ಮಿಡಿತದೊಂದಿಗೆ ಭಗವಂತನ ಉಪಸ್ಥಿತಿಯ ಅನುಭವ ಕೊಡುವುದು. ಸಂಗೀತಾಸಕ್ತರಿಗೆ ಹಲವು ಬಾರಿ ಸ್ಪಷ್ಟವಾಗಿ ವೇದ್ಯವಾಗಿರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಒಂದೇ ತಾನಿನ (‘ತಾನ್‌’ನ) ತಾನು ನಮ್ಮ ಒಳಗನ್ನು ತಟ್ಟಿರುವ, ಪರಮದ ನೆನಪನ್ನು ಕೆದಕಿರುವ, ಭಾವೋ ತ್ಕಟತೆಯ ಶಿಖರದಲ್ಲಿ, ಕಣ್ಣಂಚಿನಲ್ಲಿ ಹನಿಗೂಡಿರುವ ಅನುಭವವು ನಮ್ಮೆಲ್ಲರಿಗೂ ಒಮ್ಮೆಯಾದರೂ ಆಗಿದೆ ಎಂದು ನಂಬಿದ್ದೇನೆ.

ಸಂಗೀತದ ಪ್ರತೀ ಸ್ವರ-ಸಪ್ತಕದಲ್ಲಿ ಮುಂಬರುವ ಷಡ್ಜದ ಪುನರ್ನಿರೂಪಣೆಯೇ ರಿಷಭದಿಂದ ನಿಶಾದದ ವರೆಗೆ, ಕಾಲದ ಇಂತಿಷ್ಟೇ ಮಾತ್ರೆಯ ಅಂತರದಲ್ಲಿ ಇರುವ ಮರುಕಳಿಕೆಗಳು. ಮಂದ್ರ ಸ್ಥಾಯಿಯ ಸಪ್ತಕದ ಷಡ್ಜವು ಹೆಚ್ಚು- ಕಡಿಮೆ 261Hzಗಳಲ್ಲಿ ಬಂದರೆ ಮುಂದಿನ ಮಧ್ಯ ಸ್ಥಾಯಿಯ ಸಪ್ತಕದ ಷಡ್ಜವು, ಎರಡರಷ್ಟು ಅಂದರೆ 528Hzಗಳಲ್ಲಿ ಬರುತ್ತದೆ. ಹಾಗೆಯೇ ತಾರಕ ಸ್ಥಾಯಿಯ ಸಪ್ತಕದ ಷಡ್ಜವು, ಮಧ್ಯದ ಎರಡರಷ್ಟು ಅಂದರೆ 1056Hzಗಳಲ್ಲಿ ಬರುತ್ತದೆ. ಮಧ್ಯಸ್ಥಾಯಿಯ ಸಪ್ತಕದ ಷಡ್ಜಕ್ಕೂ ಹಾಗೂ 592 Hzಗಳ ರಿಷಭಕ್ಕೂ ಎಷ್ಟು ತರಂಗಾಂತರವೋ, ಹೆಚ್ಚು ಕಡಿಮೆ ಅಷ್ಟೇ ಅಂತರ ರಿಷಭಕ್ಕೂ ಹಾಗೂ 660 Hzಗಳ ಗಾಂಧಾರಕ್ಕೆ.

ನೆನಪಿನ ಮರುಕಳಿಕೆಗಳು – ಸಪ್ತಕದ ಮರುಕಳಿಕೆಗಳು
ಅಳೆದು ತೂಕ ಮಾಡಿದ, ಸಮ ಶ್ರುತಿ-ಲಯಗಳಲ್ಲಿ, ಉಸಿರ ಶಾರೀರಿಕ ನಿಯಂತ್ರಣದಲ್ಲಿ ಹುಟ್ಟಿದ ಸಂಗೀತದ ಅನುಭವವು ಹಾಡುಗಾರರಿಗೂ, ಕೇಳುಗರಿಗೂ ಏಕಕಾಲದಲ್ಲಿ ಅಧಿಭೌತಿಕ (ಶರೀರಕ್ಕೆ ಸಂತೈಸುವ), ಅಧಿದೈವಿಕ (ದೈವದ ಉಪಸ್ಥಿತಿ ತೋರುವ) ಹಾಗೂ ಅಧ್ಯಾತ್ಮಿ ಕ (ಆತ್ಮಕ್ಕೆ ಮುಟ್ಟುವ) ಅನುಭವ ನೀಡುತ್ತದೆ. ಅವೆಲ್ಲವೂ ಬೇರೆ-ಬೇರೆ ಎನಿಸಿದರೂ ಒಂದೇ ಅರಿವಿನ ಮರುಕಳಿಕೆಗಳು, ಸಂಗೀತದ ಮಂದ್ರ-ಮಧ್ಯ-ತಾರ ಸಪ್ತಕಗಳು ಶ್ರಾವ್ಯ ತರಂಗಮಾಲೆಯ, ಸಮಾನ ಅಂತರಗಳ ಬೇರೆ ಬೇರೆ ಮರುಕಳಿಕೆಗಳಂತೆ.

ಹೀಗೆ ಪ್ರತ್ಯಭಿಜ್ಞಾ ಎಂಬ ವೈಚಾರಿಕತೆಯನ್ನು ಮರುಕಳಿಕೆಗಳ ಮೂಲಕ ಶರೀರದಿಂದ ಪರಮಕ್ಕೆ ಸಮರ್ಪಿತಗೊಳ್ಳುವ ಸಪ್ತಸ್ವರಗಳ ಶಕ್ತಿಯಲ್ಲಿ ಅರಿಯಬಹುದು. ಕಾಲದ ಪರಿಧಿಯನ್ನು ಮೀರಿ ನೋಡಿದಾಗ, ಜೀವದ ನರ್ನಿನಿರೂಪಣೆಯನ್ನು ಕೂಡ ಸ್ವರಗಳಂತೆಯೇ ಕಾಣಬಹುದು. ಕರ್ಮದ ತರಂಗಾಂತರಗಳಲ್ಲಿ ಪುನರ್ನಿರೂಪಣೆಗೊಳ್ಳುವ ಪರಮದ ಮರುಕಳಿಕೆಯೇ ಜೀವಚಕ್ರ ಎಂಬ ಭಾವದಲ್ಲಿ, ಚಕ್ರಕ್ಕೆ ಮೊದಲಿಲ್ಲ, ಕೊನೆಯಿಲ್ಲದ, ಪರಮದಲ್ಲಿ ಜೀವದ, ಜೀವದಲ್ಲಿ ಪರಮದ ಸಮರ್ಪಣೆ.

ಸಂಗೀತದ ನಾದದ ತರಂಗಗಳು ನಾದ ಶಕ್ತಿಯು ಇರುವವರೆಗೆ ಸಂವಹಿಸಿ, ನಿಧಾನವಾಗಿ ವಿಶ್ವದಲ್ಲಿ ಲೀನವಾಗುವ ಹಾಗೆ ಕರ್ಮದ ತರಂಗ ಶಕ್ತಿಯು ಇರುವವರೆಗೆ, ಅದರ ನೆನಪು ಇರುವವರೆಗೆ ಜೀವ ಶಕ್ತಿಯು ಸಂವಹಿಸಿ, ಅನಂತರ ವಿಶ್ವದಲ್ಲಿ ಸಮರ್ಪಿತಗೊಳ್ಳುವ ಭಾವವೇ ಜೀವಚಕ್ರ. ಪೂಜ್ಯ ಆದಿ ಶಂಕರಾಚಾರ್ಯರು ಅಪ್ಪಣೆ ಕೊಡಿಸಿದ ಹಾಗೆ ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ
ಶಯನಂ…
ಸಮರ್ಪ ಣೆಯ ಉಪಸಂಹಾರ
ಒಂದು ಸಪ್ತಕದ ರಸಯಾತ್ರೆಯ ಕೊನೆಯ ಸಮರ್ಪಣೆಯಲ್ಲಿ ಇನ್ನೊಂದರ ಆರಂಭಿಕ ಷಡ್ಜ, ಒಂದು ಜೀವದ ರಸಯಾತ್ರೆಯ ಕೊನೆಯ ಸಮರ್ಪಣೆಯಲ್ಲಿ ಮತ್ತೂಂದರ ಆರಂಭ, ಹೀಗೆಯೇ ಕಾಲಾಂತರಗಳು, ಮನ್ವಂತರಗಳು. ಮತ್ತದೇ ಮೊದಲ ನೆನಪು, ಪರಮದ ನೆನಪು, ಸಮರ್ಪಣೆಯ ನೆನಪು, ಪುನರಪಿ ಜನನದ ನೆನಪು.ಸಮರ್ಪಣೆಯೇ ಪ್ರಪಂಚದ ಅರ್ಥ, ಜೀವನದ ಅರ್ಥ ಎನ್ನುವ ಭಾವನೆ ನನ್ನ ಮನಸಿನಲ್ಲಿ ಅಚ್ಚಾಗುತ್ತಿರುವ ಭಾವ.

(ನನ್ನ ಪ್ರೀತಿಯ ತೀರ್ಥರೂಪ ಶ್ರೀ. ಜಿ. ವಿ. ಸುಬ್ಬಣ್ಣ ಕಲಿಸಿದ ವಿದ್ಯೆ ಹಾಗೂ ಪ್ರೀತಿಯ ಶ್ರೀ ಎಂ. ಜಿ. ಪ್ರಭಾಕರ್‌ ಅಂಕಲ್‌ ಅವರು ಬರೆದ ಲೇ ಖನದ ಸ್ಫೂರ್ತಿಯಲ್ಲಿ)

– ಪ್ರಶಾಂತ್‌ ಸುಬ್ಬಣ್ಣ, ಟೊರಂಟೋ

Advertisement

Udayavani is now on Telegram. Click here to join our channel and stay updated with the latest news.

Next