Advertisement

ಆರೋಗ್ಯ ಮೇಳಕ್ಕೆ ಚಾಲನೆ

10:47 AM Apr 19, 2022 | Team Udayavani |

ಮಂಡ್ಯ: ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಎಲ್ಲ ತಾಲ್ಲೂಕುಗಳಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಮನವಿ ಮಾಡಿದ್ದಾರೆ.

Advertisement

ಮಂಡ್ಯ ಹಾಗೂ ಕೆ.ಆರ್‌. ನಗರಗಳಲ್ಲಿ ನಡೆಯುತ್ತಿರುವ ಆರೋಗ್ಯ ಮೇಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಆರೋಗ್ಯವಂತ ಸಮಾಜದಿಂದ ಸದೃಢ ದೇಶ ನಿರ್ಮಾಣ ಸಾಧ್ಯ. ಆ ಉದ್ದೇಶದಿಂದಲೇ ದೇಶಾದ್ಯಂತ ಎಲ್ಲ ತಾಲ್ಲೂಕಿನಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಿ ಪ್ರತಿ ಪ್ರಜೆಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ದೇಶದಲ್ಲೇ ಪ್ರಥಮ ಎಂದು ಹೇಳಿದರು.

ಐದು ದಿನಗಳ ಅವಧಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಒಂದು ದಿನ ಈ ಮೇಳ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್‌ ಸುಖ್‌ ಮಾಂಡವೀಯಾ ಅವರ ದೂರದರ್ಶಿತ್ವ ಮತ್ತು ಕ್ರಿಯಾಶೀಲತೆಯಿಂದ ಈ ವಿನೂತನ ಕಾರ್ಯಕ್ರಮ ಆಯೋಜನೆ ಆಗಿದೆ ಎಂದು ತಿಳಿಸಿದರು.

ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂಬ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವೇ ಪ್ರತಿ ತಾಲ್ಲೂಕಿಗೆ ಎರಡು ಲಕ್ಷ ರೂ. ಆರ್ಥಿಕ ನೆರವು ನೀಡಿದೆ. ಈ ಮೇಳದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪತ್ತೆಗಾಗಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಆ ಮೂಲಕ ಆರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆ ಮಾಡಿದರೆ ರೋಗವನ್ನು ಗುಣಪಡಿ ಸಲು ಸಾಧ್ಯ. ಇದರ ಜತೆಗೆ, ನೇತ್ರ ಮತ್ತು ಮಾನಸಿಕ ರೋಗಗಳ ತಪಾಸಣೆ, ವಿಕಲಚೇತನರಿಗೆ ಯೂನಿಕ್‌ ಐಡೆಂಟೆಂಟಿ ಕಾರ್ಡ್‌ ವಿತರಣೆ, ಎಲ್ಲ ನಾಗರಿಕರಿಗೆ ಡಿಜಿಟಲ್‌ ಆರೋಗ್ಯ ಗುರುತಿನ ಐಡಿ ನೀಡಲಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಎಬಿ-ಎಆರ್‌ಕೆ ಕಾರ್ಡ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಆಂದೋಲನ ಆಗಬೇಕು: ಆಯುಷ್ಮಾನ್‌ ಕಾರ್ಡ್‌ ವಿತರಣೆ ಜಗತ್ತಿನಲ್ಲೇ ಯಾವುದೇ ದೇಶದಲ್ಲಿ ಜಾರಿಯಾಗಿಲ್ಲ. ಯಾವುದೇ ಪ್ರೀಮಿಯಂ ಆಗಲೀ ನವೀಕರಣ ಶುಲ್ಕಗಳಿಲ್ಲದೆ ವಿಮೆ ಸೌಲಭ್ಯ ನೀಡಿರುವುದು ಭಾರತದಲ್ಲಿ ಮಾತ್ರ. ಕುಟುಂಬದ ಎಲ್ಲ ಸದಸ್ಯರಿಗೂ, ಬಿಪಿಎಲ್‌ ಮತ್ತು ಎಪಿಎಲ್‌ ತಾರತಮ್ಯವಿಲ್ಲದೆ ಸೌಲಭ್ಯ ನೀಡಲಾಗಿದೆ. ಆ ಮೂಲಕ ವರ್ಷದಲ್ಲಿ ಗರಿಷ್ಟ ಐದು ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದರು.

Advertisement

ಆರೋಗ್ಯ ತಪಾಸಣೆಗೆ ನೆರವಾಗುವಂತೆ ಪಿಎಚ್‌ಸಿ ಮತ್ತು ಉಪ ಕೇಂದ್ರಗಳಲ್ಲೂ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ವೆಲ್‌ನೆಸ್‌ ಕೇಂದ್ರಗಳ ಸ್ಥಾಪನೆ ಯಲ್ಲೂ ಗುರಿ ಮೀರಿ ಸಾಧನೆ ಮಾಡಲಾಗಿದೆ. ಇ- ಸಂಜೀವಿನಿ ಸೌಲಭ್ಯ ಜಾರಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದೇವೆ. ಕೋವಿಡ್‌ ಸಂದರ್ಭದಲ್ಲಿ ನೀಡಿರುವ ಟೆಲಿ ಕನ್ಸಲ್ಟಿಂಗ್‌ ಅನ್ನು ಪರಿಗಣಿಸಿದ್ದರೆ ನಾವು ಮೊದಲ ಸ್ಥಾನದಲ್ಲಿ ಇರುತ್ತಿದ್ದೆವು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next