Advertisement

ಕನಸಿನ ಮಕ್ಕಳು

03:45 AM Apr 30, 2017 | Harsha Rao |

ಮಕ್ಕಳಿಗೆ ತಮ್ಮ ಹಿರಿಯರ ಕುರಿತಾದ ಕತೆಗಳನ್ನು ಕೇಳುವುದು ತುಂಬಾ ಇಷ್ಟದ ಸಂಗತಿ; ತಾವೆಂದೂ ನೋಡದೆ ಇದ್ದ ಅಜ್ಜನ ಅಥವಾ ಅಜ್ಜಿಯ ಬಗ್ಗೆ ತಮ್ಮ ಕಲ್ಪನೆಯನ್ನು ಹಬ್ಬಿಸುವುದು ಅವರಿಗೆ ಖುಷಿ ಕೊಡುವ ಸಂಗತಿ. ಈ ಮನಃಸ್ಥಿತಿಯÇÉೇ ನನ್ನ ಮಕ್ಕಳು ಆ ದಿನ ಸಂಜೆ ನನ್ನ ಸುತ್ತು ಬಂದು ಸೇರಿದುದು. ಅವರಿಗೆ ತಮ್ಮ ಮುತ್ತಜ್ಜಿಯ ಫೀಲ್ಡ್‌ ನ ಬಗ್ಗೆ ಕೇಳಬೇಕಿತ್ತು. ಅವಳು ನಾರ್‌ಫಾಕ್‌ನ ದೊಡ್ಡ ಮನೆಯಲ್ಲಿ ನೆಲಸಿದ್ದಳು. ತಮ್ಮ ಅಪ್ಪನಿರುವ ಮನೆಗಿಂತ ನೂರು ಪಾಲು ದೊಡ್ಡದಾದ ಮನೆ ಅದು. ಈಚೆಗೆ ಕಾಡಿನ ಕಂದರ  ಲಾವಣಿಯ ಮೂಲಕ ಈ ನನ್ನ ಮಕ್ಕಳು ಕೇಳಿ ಪರಿಚಿತರಾದ ದುರಂತ ಘಟನೆಗಳು ಅಲ್ಲಿಯೇ ನಡೆದಿದ್ದು ಎಂಬ ನಂಬಿಕೆ ಆ ಕಡೆ ಜನರಲ್ಲಿ ಇತ್ತು. ಈ ಕಂದಮ್ಮರು ಮತ್ತು ಅವರ ಕ್ರೂರಿ ಮಾವನ ಇಡೀ ಕತೆಯನ್ನು ಮನೆಯ ಸಭಾಂಗಣದ ಚಿಮಿಣಿಯ ಪಕ್ಕದ ಮರದ ಭಿತ್ತಿಹಲಗೆಯ ಮೇಲೆ ಕೆತ್ತಲಾಗಿದ್ದುದು ನಿಜ- ಅದರಲ್ಲಿ ಬರುವ ರಾಬಿನ್‌ ರೆಡ್‌ಬ್ರೆಸ್ಟ್‌ನ ವರೆಗೆ. ಒಬ್ಬ ಮೂರ್ಖ ಧನಿಕ ಯಜಮಾನ ಅದನ್ನೆಲ್ಲ ಕಿತ್ತು ತೆಗೆಸಿ ಅದರ ಜಾಗದಲ್ಲಿ ಕತೆಯಿಲ್ಲದ ಆಧುನಿಕ ಆವಿಷ್ಕಾರವಾದ ಮಾರ್ಬಲಿನ ಹಾಳೆಗಳನ್ನು ನಿಲ್ಲಿಸುವ ತನಕ ಹಾಗಿತ್ತು; ಇಲ್ಲಿ ಎಲಿಸ್‌ ತನ್ನ ಮುದ್ದಿನ ಅಮ್ಮನದೊಂದು ದೃಷ್ಟಿಯನ್ನು ಬೀರಿದಳು, ಛೀಮಾರಿಯೆಂದು ಹೇಳಲಾರದಷ್ಟು ಮೃದುವಾದ ದೃಷ್ಟಿ ಅದು. ಆಮೇಲೆ ನಾನು ಅವರ ಮುತ್ತಜ್ಜಿ ಫೀಲ್ಡ್‌ ಅದೆಷ್ಟು ದೈವಭಕ್ತಳಾಗಿದ್ದಳು, ಅದೆಷ್ಟು ಒಳ್ಳೆಯವಳಾಗಿದ್ದಳು ಎಂದು ವಿವರಿಸಿದೆ, ಮಂದಿಗೆ ಅವಳೆಂದರೆ ಅದೆಷ್ಟು ಗೌರವ ಇತ್ತು, ಆಕೆ ನಿಜಕ್ಕೂ ಆ ಮನೆಯ ಒಡತಿ ಅಲ್ಲದೆ ಇದ್ದರೂ; ಮನೆಯ ನಿಜವಾದ ಯಜಮಾನ ಅದನ್ನು ಅವಳ ವಶಕ್ಕೆ ಬಿಟ್ಟು ದೂರದಲ್ಲಿ ಹೊಸ ಮನೆಯೊಂದನ್ನು ಖರೀದಿಸಿ ಅದರಲ್ಲಿ ವಾಸವಾಗಿದ್ದ. ಆದರೂ ಆಕೆ ಈ ದೊಡ್ಡ ಮನೆಯನ್ನು ತನ್ನದೇ ಎಂಬಷ್ಟು ಮಮತೆಯಿಂದ, ಅದರ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತ ಇದ್ದಳು, ಕೊನೆಗೂ ಅದು ಜೀರ್ಣಾವಸ್ಥೆಯನ್ನು ತಲಪುವವರೆಗೆ. ಅದು ಇನ್ನೇನು ಮುರಿದೇ ಬಿತ್ತು ಎಂಬ ಸ್ಥಿತಿಗೆ ಬಂದು, ಅದರ ಅಲಂಕಾರಗಳನ್ನೆಲ್ಲ ಕಳಚಿ ಯಜಮಾನನ ಮನೆಗೆ ಸಾಗಿಸಲಾಯಿತು, ಅಲ್ಲಿ ಅವು ಯಾವುದೋ ಗೋರಿಗಳಿಂದ ತಂದಿರಿಸಿದ ಹಾಗೆ ಕಾಣಿಸುತ್ತಿದ್ದವು. ಇಲ್ಲಿ ಜಾನ್‌ ಮುಗುಳ್ನಕ್ಕ, ಅದು ನಿಜಕ್ಕೂ ಮೂರ್ಖತನವೇ ಎಂಬಂತೆ….

Advertisement

ಹೀಗೆ ಈ ಕಥನದಲ್ಲಿ ತಂದೆ ತನ್ನ ಮಕ್ಕಳಿಗೆ ಮುತ್ತಜ್ಜಿಯ ಕತೆ ಹೇಳುತ್ತಾನೆ; ಅವಳು ತೀರಿಕೊಂಡಾಗ ಹೇಗೆ ಊರಿಗೆ ಊರೇ ಶವಸಂಸ್ಕಾರಕ್ಕೆ ಬಂತು ಎನ್ನುತ್ತಾನೆ; ಯಾಕೆಂದರೆ ಅವಳು ಎಲ್ಲರಿಗೂ ಒಳ್ಳೆಯವಳಾಗಿದ್ದಳು. ಅವಳು ತನ್ನೆÇÉಾ ಮೊಮ್ಮಕ್ಕಳನ್ನು ಪ್ರೀತಿಸುತ್ತಿದ್ದರೂ, ಅವರಲ್ಲಿ ಜಾನ್‌ ಎಂದರೆ ಅವಳಿಗೆ ಹೆಚ್ಚು ಪ್ರೀತಿಯಿತ್ತು; ತಾನು ಮತ್ತು ಜಾನ್‌ ಪರಸ್ಪರ ಜಗಳಾಡುವುದು ಇತ್ತಾದರೂ, ತಾವು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿ¨ªೆವು ಎನ್ನುತ್ತಾನೆ ನಿರೂಪಕ. ನಂತರ ಜಾನ್‌ನ ಸಾವನ್ನು ವರ್ಣಿಸುತ್ತಾನೆ. ಮಕ್ಕಳು ಅಳಲು ಸುರುಮಾಡುತ್ತವೆ; ತಮ್ಮ ಮು¨ªಾದ ತಾಯಿಯ ಬಗ್ಗೆ ಹೇಳುವಂತೆ ತಂದೆಯನ್ನು ಕೋರುತ್ತವೆ. ನಿಮ್ಮ ತಾಯಿ ಎಲಿಸಾಳ ಮುಂದೆ ತಾನು ಏಳು ವರ್ಷಗಳಷ್ಟು ಕಾಲ ಪ್ರೇಮ ನಿವೇದನೆ ಮಾಡಿಕೊಂಡೆ, ಆದರೆ ಅವಳು ನಾಚಿಕೊಂಡಳು ಎನ್ನುತ್ತಾನೆ. ಆಗ ಪುಟ್ಟ ಎಲಿಸಾಳ ಕಣ್ಣುಗಳ ಮೂಲಕ ತನ್ನ ಎಲಿಸಾಳೇ ನೋಡುತ್ತಿರುವಂತೆ ಅನಿಸಿ ತನ್ನ ಮುಂದೆ ನಿಜಕ್ಕೂ ಯಾರಿ¨ªಾರೆ ಎಂದು ಅವನಿಗೆ ಗೊತ್ತಾಗುವುದಿಲ್ಲ. ಆಗ ಆ ಮಕ್ಕಳು We are not of Alice, nor of thee, nor are we children at all. The children of Alice call Bartrum father. We are nothing; less than nothing, and dreams. We are only what might have been ಎನ್ನುತ್ತ ಮಾಯವಾಗುತ್ತ¤ವೆ! ನಿರೂಪಕನಿಗೆ ಥಟ್ಟನೆ ಎಚ್ಚರವಾಗುತ್ತದೆ; ತಾನು ತನ್ನ ಬ್ರಹ್ಮಚಾರಿ ಕುರ್ಚಿಯಲ್ಲಿ ಕುಳಿತಿರುವುದು ಗೊತ್ತಾಗುತ್ತದೆ. 

ಈ ಮನಕರಗುವ ಕಲ್ಪನಾಲಹರಿ ಬರುವುದು ಇಂಗ್ಲಿಷ್‌ ಲೇಖಕ ಚಾರ್ಲ್ಸ್‌  ಲ್ಯಾಂಬ್‌ನ Dream-Children: A  Reverie ಎಂಬ ಲೇಖನದಲ್ಲಿ. ಇದು ಮೊದಲು ಪ್ರಕಟವಾದುದು ಲಂಡನ್‌ ಮ್ಯಾಗಝಿನ್‌ನಲ್ಲಿ 1822ರಲ್ಲಿ; ಆಗ ಲ್ಯಾಂಬಿಗೆ ನಲವತ್ತಾರು ವರ್ಷ ಪ್ರಾಯ. ಈಸ್ಟ್‌ ಇಂಡಿಯಾ ಕಂಪೆನಿಯ ಇಂಡಿಯಾ ಹೌಸ್‌ನಲ್ಲಿ ಗುಮಾಸ್ತನಾಗಿದ್ದ ಅವನು ಪ್ರಬಂಧಗಳನ್ನು ಬರೆಯುತ್ತಿದ್ದು ಈಲಿಯಾ (Elia) ಎಂಬ ಹೆಸರಿನಲ್ಲಿ. ಲ್ಯಾಂಬಿನ ಲೇಖನ ಕಾಲ್ಪನಿಕವಾಗಿದ್ದರೂ ಅದರಲ್ಲಿ ಬರುವ ಕೆಲವು ವ್ಯಕ್ತಿಗಳು ಮತ್ತು ವಿವರಗಳು ವಾಸ್ತವವೇ ಆಗಿದ್ದವು. ತಾನು ಪ್ರೀತಿಸಿ¨ªೆ ಎಂಬ ಎಲಿಸ್‌ ವಾಸ್ತವದಲ್ಲಿ ಏನ್‌° ಸಿಮ್ಮನ್ಸ್‌ ಎಂಬ ಒಬ್ಬ ನೆರೆಮನೆಯ ಹುಡುಗಿ; ಇವಳು ಬಟ್ರìಮ್‌ ಎಂಬಾತನನ್ನು ಮದುವೆಯಾದಳು ಮತ್ತು ತಾರುಣ್ಯದÇÉೇ ತೀರಿಕೊಂಡಳು. ಲ್ಯಾಂಬ್‌ ಎಂದೂ ಮದುವೆಯಾಗದೆ ಉಳಿದ.  ಆದರೆ ಈ ಇಡೀ ಲೇಖನ ಅವನ ಮನದಾಳದ ಹತಾಶೆಯನ್ನು ಪ್ರಕಟಿಸುತ್ತದೆ. ನಾವು ನಿನ್ನ ಮಕ್ಕಳೇ ಅಲ್ಲ, ಯಾರ ಮಕ್ಕಳೂ ಅಲ್ಲ, ಕನಸಿನ ಮಕ್ಕಳು ಎಂಬಲ್ಲಿನ ದಾರುಣತೆ ಮನಸ್ಸನ್ನು ಕಲಕುವಂತಿದೆ. 

ಚಾರ್ಲ್ಸ್‌ ಲ್ಯಾಂಬ್‌ (1775-1834) ಹುಟ್ಟಿದ್ದು ಲಂಡನ್‌ನ ಕಾನೂನು ಪ್ರದೇಶವಾದ ಇನ್ನರ್‌ ಟೆಂಪ್‌Éನಲ್ಲಿ, ಒಬ್ಬ ಗುಮಾಸ್ತನ ಕೊನೆಯ ಮಗನಾಗಿ. ಇವನಿಗಿಂತ ಹನ್ನೊಂದು ವರ್ಷ ಹಿರಿಯ ಅಕ್ಕ ಮೇರಿ, ಆಕೆಗಿಂತಲೂ ಹಿರಿಯ ಒಬ್ಬ ಅಣ್ಣ ಜಾನ್‌ ಇದ್ದರು. ಲ್ಯಾಂಬ್‌ ಹತ್ತಿರದ ಕ್ರೆçಸ್ಟ್‌ ಚರ್ಚ್‌ ಶಾಲೆಗೆ ಹೋದ; ಅಲ್ಲಿ ಅವನಿಗೆ ಓದಿನ ಗೀಳು ಅಂಟಿಕೊಂಡಿತು; ಇನ್ನೊಂದು ಲಾಭವೆಂದರೆ ಕಾಲರಿಜ್‌ನ ಗೆಳೆತನ ಅದು ಜೀವನವಿಡೀ ಮುಂದುವರಿಯಿತು. ಆದರೆ ಲ್ಯಾಂಬಿಗೆ ಹುಟ್ಟಿನಿಂದಲೂ ಬಂದಿದ್ದ ಉಗ್ಗು ಅವನ ಭವಿಷ್ಯವನ್ನು ಮೊಟಕುಗೊಳಿಸಿತು. ಅವನು ಯೂನಿವರ್ಸಿಟಿಗೆ ಹೋಗಲಿಲ್ಲ. ಒಬ್ಬ ಗುಮಾಸ್ತನಾಗಿ ಈಸ್ಟ್‌ ಇಂಡಿಯಾ ಕಂಪೆನಿಯ ಇಂಡಿಯಾ ಹೌಸ್‌ ವಿಭಾಗವನ್ನು ಸೇರಿ ಮುಂದೆ ನಿವೃತ್ತನಾಗುವ ವರೆಗೆ ಅಲ್ಲಿಯೇ ದುಡಿದ. ಅಲ್ಲದೆ ಇಡೀ ಲ್ಯಾಂಬ್‌ ಕುಟುಂಬಕ್ಕೆ ಮಾನಸಿಕ ಅಸ್ವಸ್ಥತೆ ಒಂದು ಶಾಪದಂತೆ ತಗಲಿತ್ತು. ಸ್ವತಃ ಲ್ಯಾಂಬ್‌ ಎರಡೆರಡು ಬಾರಿ ಆಸ್ಪತ್ರೆ ಸೇರಿ ಬಂದಿದ್ದ. ಆದರೆ ಅದು ಅತಿ ತೀವ್ರವಾಗಿ ಕಾಡಿದುದು ಅವನ ಅಕ್ಕ ಮೇರಿಯನ್ನು. ಒಂದು ದಿನ ಅವಳು ಅಮ್ಮನೊಡನೆ ನಡೆದ ಮಾತಿನ ಜಗಳದಲ್ಲಿ ಚೂರಿಯಿಂದ ಅವಳನ್ನು ತಿವಿದು ಕೊಂದೇಬಿಟ್ಟಳು. ಹುಚ್ಚಾಸ್ಪತ್ರೆ ಸೇರಿದ ಮೇರಿ ಇಡೀ ಜೀವಿತ ಕಾಲ ಅಲ್ಲಿ ಇರಬೇಕಾಗುತ್ತಿತ್ತು; ಆದರೆ ಚಾರ್ಲ್ಸ್‌ ಅವಳನ್ನು ತಾನು ನೋಡಿಕೊಳ್ಳುವೆನೆಂದು ಮುಚ್ಚಳಿಕೆ ಬರಕ್ಕೊಟ್ಟು ಬಿಡಿಸಿಕೊಂಡು ಬಂದ. ಹಾಗೆಯೇ ಮಾಡಿದ. ಮುಂದೆ ಜೀವನವೆÇÉಾ ಅವರು ಒಂದೇ ಮನೆಯಲ್ಲಿ ಇದ್ದರು; ಮದುವೆಯಾಗುವ ಗೋಜಿಗೇ ಅವರು ಹೋಗಲಿಲ್ಲ.

ಸಾಹಿತ್ಯವೇ ಅವರ ಆಸಕ್ತಿಯಾಯಿತು. (ಫ್ಯಾನಿ ಕೆಲ್ಲಿ ಎಂಬ ನಟಿಯೊಬ್ಬಳನ್ನು ಮದುವೆಯಾಗಲು ಚಾರ್ಲ್ಸ್‌ ತನ್ನ ನಲವತ್ತನಾಲ್ಕನೆಯ ವಯಸ್ಸಿನಲ್ಲಿ ಬಯಸಿದ್ದು ಇತ್ತು; ಆದರೆ ಆಕೆ ನಿರಾಕರಿಸಿದಳು.)

Advertisement

ಇಬ್ಬರೂ ಸೇರಿ ಶೇಕ್ಸ್‌ಪಿಯರನ ಇಪ್ಪತ್ತು ನಾಟಕಗಳ ಕತೆಗಳನ್ನು ಸರಳ ಗದ್ಯದಲ್ಲಿ ಬರೆದು Tales from Shakespeare ಎಂಬ ಪುಸ್ತಕವನ್ನು ಪ್ರಕಟಿಸಿದರು. ಕಾಮೆಡಿಗಳನ್ನು ಅಕ್ಕನೂ ಟ್ರ್ಯಾಜಿಡಿಗಳನ್ನು ತಮ್ಮನೂ ಹಂಚಿಕೊಂಡಿದ್ದರು. ಪುಸ್ತಕ ತಕ್ಷಣ ಜನಪ್ರಿಯವಾಯಿತಲ್ಲದೆ ಇಂದಿಗೂ ಪ್ರಿಂಟಿನಲ್ಲಿದೆ. ತಮಗೆ ಮಕ್ಕಳಿಲ್ಲದಿದ್ದರೇನಾಯಿತು, ಲೋಕದ ಮಕ್ಕಳಿಗೋಸ್ಕರ ಅವರು ನೀಡಿದ ಕೃತಿ ಇದು. ಪ್ರತಿ ಗುರುವಾರ ಅವರ ಮನೆಯಲ್ಲಿ ಲೇಖಕರ ಬಳಗ ಸೇರುತ್ತಿತ್ತು. ಹ್ಯಾಝಿÉಟ್‌, ಲೀ ಹಂಟ್‌, ಕಾಲರಿಜ್‌ ಮುಂತಾದವರು ಅಲ್ಲಿ ಸೇರುತ್ತಿದ್ದರು. 

ಆದರೆ, ಇಂಗ್ಲಿಷ್‌ ಸಾಹಿತ್ಯಾಸಕ್ತರಿಗೆ ಲ್ಯಾಂಬ್‌ ಗೊತ್ತಿರುವುದು ಅವನ ಪ್ರಬಂಧಗಳಿಗಾಗಿ. ಈಲಿಯಾ ಎಂಬ ಹೆಸರಿನಲ್ಲಿ ಅವನು ಸೊಗಸಾದ ಪ್ರಬಂಧಗಳನ್ನು ಬರೆದಿ¨ªಾನೆ. ಅವುಗಳಲ್ಲಿನ ವಿಷಯ ವೈವಿಧ್ಯ, ವಿಚಾರಗಳು, ಶೈಲಿ ಎಲ್ಲವೂ ಓದುಗರಿಗೆ ಆಪ್ಯಾಯಮಾನವಾಗುತ್ತವೆ. ಮೇಲೆ ಉÇÉೇಖೀಸಿದ ಡ್ರೀಮ್‌ ಚಿಲ್ಡ್ರನ್‌ ಅವುಗಳಲ್ಲಿ ಒಂದು. ಲ್ಯಾಂಬ್‌ ಬೆರಳೆಣಿಕೆಯಷ್ಟು ಕವಿತೆಗಳನ್ನೂ ಬರೆದಿ¨ªಾನೆ. ಅವುಗಳಲ್ಲಿ Old Familiar Faces ಎನ್ನುವುದು ಒಂದು. ಇದಕ್ಕೂ ಕನ್ನಡಿಗರಿಗೂ ಒಂದು ನಂಟಿದೆ: ಬಿಎಂಶ್ರೀಯವರು ತಮ್ಮ ಇಂಗ್ಲಿಷ್‌ ಗೀತಗಳಲ್ಲಿ ಹಳೆಯ ಪಳಕೆಯ ಮುಖಗಳು ಎಂದು ಈ ಕವಿತೆಯನ್ನೂ ಸೇರಿಸಿಕೊಂಡಿ¨ªಾರೆ. 

ಕಂದ ಬಿ¨ªೆಯ ಎಂದು ಮುದ್ದಿಸಿ ನನಗೆ ಮರುಗುವರಿದ್ದರು;
ಅಂದಿನೋದಿನ ಸುಖದ ದಿನದಲಿ ಜತೆಗೆ ಕುಣಿಯುವರಿದ್ದರು.
ಎಲ್ಲ, ಎÇÉಾ ಮಾಯವಾದುವು ಹಳೆಯ ಪಳಕೆಯ ಮುಖಗಳು. 
ಎಂದು ಈ ಗೀತ ಸುರುವಾಗುತ್ತದೆ, ಹಾಗೂ: 
ಕೆಲವರಳಿದರು, ಕೆಲವರುಳಿದರು, ಕೆಲವರೊಗ್ಗದೆ ಮುಳಿದರು.
ಕೆಲವರೆನ್ನನು ದೂರಿ ಹಳಿದರು, ಹೊರಗೆ ಹಾಕಿದರೆಲ್ಲರೂ!
ಎಲ್ಲ, ಎÇÉಾ ಮಾಯವಾದುವು ಹಳೆಯ ಪಳಕೆಯ ಮುಖಗಳು.
ಎಂದು ಕೊನೆಗೊಳ್ಳುತ್ತದೆ. ಎಷ್ಟೊಂದು ಸುಂದರವಾದ ಅನುವಾದ! ಚೆಲುವಾದ ಕನ್ನಡದಲ್ಲಿ ಅನುರಣಿಸುವ ಈ ಸಾಲುಗಳು ಪ್ರತಿಯೊಬ್ಬ ಓದುಗರ ಮನದಾಳವನ್ನು ಮಿಡಿದರೆ ಆಶ್ಚರ್ಯವಿಲ್ಲ. ಮೂಲವನ್ನು ಬರೆದ ಲ್ಯಾಂಬ್‌, ಅದನ್ನು ಕನ್ನಡಕ್ಕೆ ತಂದ ಬಿಎಂಶ್ರೀ ಇಬ್ಬರೂ ನಮಗೆ ಬೇಕಾದವರೇ. 

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next