Advertisement

ಎನ್‌ಟಿಆರ್‌ ಕನ್ನಡದಲ್ಲಿ ಮಾಡಬಹುದಾಗಿದ್ದ ಸಿನಿಮಾ ನಾಟಕ!

11:45 AM Sep 15, 2018 | |

ಅದೊಂದು ಜಮಾನ. ತೆಲುಗಿನ ಮೇರು ನಟ ಎನ್‌.ಟಿ. ರಾಮರಾವ್‌ ಅವರ ಸಿನಿಮಾಗಳು ಬಿಡುಗಡೆಗೊಳ್ಳುತ್ತಿದ್ದ ಕಾಲ. ತೆರೆಯ ಮೇಲೆ ಎನ್‌ಟಿಆರ್‌, ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಅದು ಆಯಾ ಪಾತ್ರಗಳ ಯಥಾವತ್ತಿನಂತೆ ಕಾಣುತ್ತಿದ್ದ ಕಾಲ. ಅದರಲ್ಲೂ ಕೃಷ್ಣನ ಪಾತ್ರ. ಪುಟ್ಟಗಟ್ಟಳೆ ಸಂಭಾಷಣೆಯನ್ನ ಒಂದೇ ಟೇಕ್‌ನಲ್ಲಿ ನಿರರ್ಗಳವಾಗಿ ಹೇಳುತ್ತಿದ್ದ ಎನ್‌ಟಿಆರ್‌ ತಾವು ಓತಪ್ರೋತವಾಗಿ ಸಂಭಾಷಣೆ ಹೇಳುವುದರಿಂದಲೇ ಜನಪ್ರಿಯರಾಗಿರಾಗಿದ್ದವರು. ಕೃಷ್ಣ, ಅರ್ಜುನ, ಕರ್ಣ, ಸುಯೋಧನ- ಹೀಗೆ ನಾಲ್ಕೆçದು ಪಾತ್ರಗಳನ್ನು ಒಟ್ಟೊಟ್ಟಿಗೆ ಮಾಡಿ ಬೆರಗು ಮೂಡಿಸಿ ಅನನ್ಯರಾಗಿದ್ದವರು ಅವರು.

Advertisement

  ಒಮ್ಮೆ ಬೆಂಗಳೂರಿನಲ್ಲಿರುವ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಎಂದು ನೆನಪು. ಎನ್‌ಟಿಆರ್‌ ಹಾಗೂ ರಾಜ್‌ಕುಮಾರ್‌ ಒಂದು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಂದು ರಾಜ್‌ ಕುಮಾರ್‌ರ ಬಗೆಗೆ “ಮಾ ತಮ್ಮುಡು…’ ಎಂದು ಮಾತು ಆರಂಭಿಸಿದ ಎನ್‌ಟಿಆರ್‌ “ರಾಜ್‌ಕುಮಾರ್‌ರ ಹಾಗೆ ಅಭಿನಯಿಸಿ ಭಾವಗಳನ್ನು ವ್ಯಕ್ತಪಡಿಸಲಿಕ್ಕೆ ನನಗೆ ಬರುವುದಿಲ್ಲ, ಹಾಗೇ ನನ್ನ ಹಾಗೆ ಡೈಲಾಗ್‌ ಹೇಳಲು ರಾಜ್‌ಕುಮಾರ್‌ಗೆ ಸಾಧ್ಯವಿಲ್ಲ…’ ಎಂದಿದ್ದರು. ಅಂದರೆ ಉದ್ದುದ್ದದ ಸಂಭಾಷಣೆಯನ್ನು ಒಂದೇ ಉಸಿರಿಗೆ ಹೇಳಿ ಬೆರಗು ಮೂಡಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿತ್ತು ಮತ್ತು ಜನ ಅದಕ್ಕಾಗಿಯೇ ಕಾತರಿಸುತ್ತಿದ್ದರು.

  ಈಚೆಗೆ ಕೆ.ಎಚ್‌. ಕಲಾಸೌಧದಲ್ಲಿ ಸಂಧ್ಯಾ ಕಲಾವಿದರು ತಂಡ ಅಭಿನಯಿಸಿದ “ಸುಯೋಧನ’ ನಾಟಕ ನೋಡಿದಾಗ ಮೇಲಿನ ಪ್ರಸಂಗ ನೆನಪಾಯಿತು. ಈ ನಾಟಕದ ಕತೃì ಎಸ್‌. ಕೃಷ್ಣಶರ್ಮರಿಗೆ ನಮ್ಮ ಎರಡು ಮಹಾಕಾವ್ಯಗಳಲ್ಲಿನ ಖಳನಾಯಕರ ಮತ್ತೂಂದು ಮಗ್ಗುಲನ್ನು ಪರಿಶೀಲಿಸುವ ಇರಾದೆ. ಅವರು ರಾಮಾಯಣಕ್ಕೆ ಸಂಬಂಧಿಸಿದ ತಮ್ಮ ಚಿಂತನೆಯನ್ನು “ಪೌಲಸ್ತ್ಯ ನ ಪ್ರಣಯ ಕಥೆ’ಯಲ್ಲಿ ರಾವಣನ ಪಾತ್ರದ ಮೂಲಕ ಪರಿಶೀಲಿಸಿ ಹೊಸ ಆಯಾಮ ದೊರಕಿಸಿಕೊಟ್ಟರೆ, “ಸುಯೋಧನ’ ನಾಟಕದಲ್ಲಿ ಸುಯೋಧನನ ಮೂಲಕವೇ ತರ್ಕ ಮಂಡಿಸಿದ್ದಾರೆ. ಭೀಷ್ಮ, ದ್ರೋಣ, ಕರ್ಣ, ಕೃಷ್ಣ, ಯುದಿrರ, ಭೀಮ, ಶಕುನಿ ಒಟ್ಟೊಟ್ಟಿಗೆ ಬಂದು ಮಾಡುವ ದೂಷಣೆಗಳಿಗೆಲ್ಲ ಸುಯೋಧನನಲ್ಲಿ ಸಮಂಜಸ ಎನಿಸುವ ಉತ್ತರಗಳಿವೆ. ಮತ್ತು ಅವೆಲ್ಲವೂ ತರ್ಕಬದ್ಧವಾಗಿವೆ. ಇದು ಅವರ ಅಧ್ಯಯನದ ಪರಿಯನ್ನು ಕಾಣಿಸುತ್ತದೆ. ಈ ವಾದ ಮಂಡನೆಗೆ ಅವರು ಬಳಸಿರುವ ಭಾಷೆಯ ಓಘ ಅನನ್ಯ ಅನಿಸುತ್ತದೆ. ಕನ್ನಡ ಭಾಷೆಯ ಸೊಗಸು, ಅದರ ಬನಿ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ಈ ನಾಟಕಕ್ಕೆ ಕಿವಿಯಾಗಬಹುದು. ಇಲ್ಲಿ ಕಿವಿಯಾಗಬಹುದು ಎಂದು ಹೇಳುತ್ತಿರುವ ಕಾರಣ ಅಂದರೆ ಮಾತುಗಳು ಅಷ್ಟು ಹೇರಳವಾಗಿವೆ ಎಂಬುದು. ಅಂದರೆ ಪಾತ್ರಗಳ ಒಳತೋಟಿಯನ್ನು ಕಾಣಿಸುವ ಭಾವನೆಗಳ ಪ್ರಕಟಣೆ ಇಲ್ಲಿ ಇಲ್ಲವೇ ಇಲ್ಲ ಎಂದಲ್ಲ. ಇದೆ; ಆದರೆ, ಅದಕ್ಕೆ ಹೆಚ್ಚು ಜಾಗ ಕಲ್ಪಿಸಲಿಕ್ಕೆ ಮಾತುಗಳು ಬಿಟ್ಟಿಲ್ಲ. ಹಾಗಾಗಿ ಇದು ಎನ್‌ಟಿಆರ್‌ರವರು ಕನ್ನಡದಲ್ಲಿ ಮಾಡಬಹುದಾಗಿದ್ದ ಸಿನಿಮಾದ ನಾಟಕ ರೂಪ ಅಂತನ್ನಿಸಿತು.

  ಈ ನಾಟಕದ ಆರಂಭ ಮತ್ತು ಅದರ ಬೆಳವಣಿಗೆ ಕವಿ ರನ್ನನ “ಗದಾಯುದ್ಧ ಕಾವ್ಯ’ ಅಳವಡಿಸಿಕೊಂಡಿರುವ “ಸಿಂಹಾವಲೋಕನ’ ಕ್ರಮದ ಜಾಡನ್ನೇ ಅನುಸರಿಸಿದೆ. ಕೆಲವೊಮ್ಮೆ ಗದಾಯುದ್ಧ ಕಾವ್ಯದಲ್ಲಿ ಸುಯೋಧನ ಮಂಡಿಸುವ ತರ್ಕಗಳ ರೀತಿಯಲ್ಲೇ ಇಲ್ಲೂ ತರ್ಕಗಳಿವೆ. ಈ ಸಿಂಹಾವಲೋಕನ ಕ್ರಮದಲ್ಲೇ ಸುಯೋಧನನ ಪಾತ್ರವನ್ನು ಎಸ್‌.ಸಿ. ಕೃಷ್ಣಶರ್ಮ ಕಡೆದಿದ್ದಾರೆ. ಕವಿ ಚಕ್ರವರ್ತಿ ರನ್ನನ ಕಾವ್ಯದ ನಾಯಕ “ಭೀಮ’ನಾದರೆ ಇಲ್ಲಿ ಸುಯೋಧನನೇ ನಾಯಕ. ಅಷ್ಟೇ ವ್ಯತ್ಯಾಸ.

  ಮೊದಲೇ ಹೇಳಿದಂತೆ ಈ ನಾಟಕದಲ್ಲಿ ಮಾತುಗಳು ವಿಜೃಂಭಿಸಿವೆ. ಆದರೆ, ಅಬ್ಬರ ಅನಿಸುವುದಿಲ್ಲ. ತೊಡೆ ಮುರಿದುಕೊಂಡು ನಲುಗುವ ಮತ್ತು ಕನಲುವ ಸುಯೋಧನನ ಭಾವಾವೇಶವೂ ಇದೆ. ಅದನ್ನು ಮರೆಮಾಡುವ ಮತ್ತದೇ ಮಾತುಗಳ ಮುಸುಕೂ ಇದೆ. ವಿಚಾರವನ್ನು ವಾಗ್ಝರಿಯಲ್ಲಿ ಹೇಳಿದರೆ ಹೇಗಿರುತ್ತದೆಯೋ ಹಾಗಿದೆ. 

Advertisement

   ಇಷ್ಟನ್ನು ಮಾತಿನ ಬಲದಲ್ಲೇ ಕಟ್ಟಿಕೊಟ್ಟ ಕೃಷ್ಣಶರ್ಮರದು ಒಂದು ಹೆಗ್ಗಳಿಕೆಯಾದರೆ ಆಯಾ ಪಾತ್ರಕ್ಕೆ ಜೀವತುಂಬಿದ ಪ್ರತಿ ನಟರೂ ಇಲ್ಲಿ ಅಷ್ಟೇ ಶ್ಲಾಘನೀಯ. ಪ್ರತಿಯೊಬ್ಬರ ಮಾತೂ ಸ್ಪಷ್ಟ. ಓಘದಲ್ಲಿ ತೊದಲದ ಎಚ್ಚರಿಕೆ. ಪಾತ್ರಗಳನ್ನು ಅಂತರಂಗೀಕರಿಸಿಕೊಳ್ಳದ ಹೊರತು ಹೀಗೆ ಮಾತಿಗೆ ನಿಲ್ಲುವುದು ಕಷ್ಟ. ಶಕುನಿ ಪಾತ್ರದಲ್ಲಿ ರಂಗನಾಥ ರಾವ್‌ರದು ಮಾಗಿದ ಅಭಿನಯ; ಕೃಷ್ಣನಾಗಿ ಪ್ರದೀಪ್‌ರಲ್ಲಿ ಚುರುಕುತನ, ನಸುನಗು ಮತ್ತು ಚಾಣಾಕ್ಷತನದ ಛಾಪನ್ನು ಕಾಣಿಸಿದರು. ಕರ್ಣ ಭಾವಾವೇಗದಿಂದ ಗಮನ ಸೆಳೆದರೆ ಪ್ರೇತಗಳು ತಮ್ಮ ಮಂದಗತಿಯಲ್ಲಿ ಬೇರೆ ಭಾವವಲಯ ಸೃrಸಿದವು. ಇಲ್ಲಿ ಉಲ್ಲೇಖೀಸಲೇಬೇಕಾದದ್ದು ಸುಯೋಧನನ ಪಾತ್ರ ನಿರ್ವಸಿದ ನರೇಂದ್ರ ಕಶ್ಯಪ್‌ ಅವರ ತನ್ಮಯತೆ ಮತ್ತು ಬದ್ಧತೆ. ಅವರ ನಿರರ್ಗಳ ಮಾತುಗಳು ಎನ್‌ಟಿಆರ್‌ರನ್ನು ನೆನಪಿಸುತ್ತಿದ್ದವು. ಇದು ಅತಿಶಯೋಕ್ತಿ ಅಲ್ಲ. ನರೇಂದ್ರ ಇಲ್ಲಿ ಪಾತ್ರ ತಾನೇ ಆಗಿ ಮೈಮರೆತು ನಟಿಸಿದ್ದು ಕಂಡುಬಂದಿತು. 

  ಇಷ್ಟರ ನಡುವೆ ಇದು ಮಾತುಗಳ ಜಲಪಾತ ಅನಿಸಿತು. ಉಧ್ದೋಉದ್ದಕ್ಕೆ ಮಾತುಗಳು ಧುಮುಕಿದವು ಎನ್ನುವುದು ಇಲ್ಲಿ ಸಣ್ಣ ಲೋಪ ಅನಿಸುತ್ತದೆ. ಆದರೆ, ಇಡೀ ನಾಟಕದ ರಚನಾ ವಿನ್ಯಾಸವೇ ಹಾಗೆ ರೂಪುತಳೆದಿರುವುದರಿಂದ ಮಾನ್ಯ ಮಾಡಿ ನೋಡಲೂಬಹುದು. 

– ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next