Advertisement

ಸಂಪೂರ್ಣ ಪ್ರಯೋಜನಕರ‌ ಯೋಜನೆ ರೂಪಿಸಿ: ಪಿ. ಕರುಣಾಕರನ್‌

09:30 AM Mar 17, 2018 | Team Udayavani |

ಕಾಸರಗೋಡು: ಜಿಲ್ಲೆಯ ವಾರ್ಷಿಕ ಯೋಜನೆಗಳಿಗೆ ರೂಪು ನೀಡುವ ಸಂದರ್ಭದಲ್ಲಿ ಅನುಕೂಲ ಹಾಗೂ ಪ್ರತಿಕೂಲ ಅಂಶಗಳನ್ನು ಗಮನಿಸಿಕೊಂಡು ಹೆಚ್ಚು ಸೂಕ್ತವಾಗಿಸಿ ಸಂಪೂರ್ಣ ಪ್ರಯೋಜನ ದೊರಕುವಂತೆ ಮಾಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಾಧ್ಯವಾಗಬೇಕು. ಜತೆಗೆ ದೂರದೃಷ್ಟಿ ಹೊಂದಿರಬೇಕು ಎಂದು ಕಾಸರಗೋಡು ಸಂಸದ ಪಿ. ಕರುಣಾಕರನ್‌ ಹೇಳಿದ್ದಾರೆ. ಜಿಲ್ಲಾ  ಯೋಜನಾ ಸಮಿತಿಯ ಸಭಾಂಗಣದಲ್ಲಿ ಹದಿಮೂರನೇ ಪಂಚವಾರ್ಷಿಕ ಯೋಜನೆಯ ಅಂಗವಾಗಿ ಜರಗಿದ 2018-19ನೇ ವರ್ಷದ ಜಿಲ್ಲಾ  ಪಂಚಾಯತ್‌ನ ವಾರ್ಷಿಕ ಯೋಜನೆ ರಚನೆ ಪ್ರಕ್ರಿಯೆಯ ಅಂಗವಾಗಿರುವ ಅಭಿವೃದ್ಧಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯೋಜನೆ ಜಾರಿಗೊಳಿಸಿ ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ  ಜಿಲ್ಲಾ  ಪಂಚಾಯತ್‌ ನೊಂದಿಗೆ ಸಹಕರಿಸಿ ಬ್ಲಾಕ್‌, ಗ್ರಾಮ ಪಂಚಾಯತ್‌ಗಳು ಮುನ್ನಡೆಯಬೇಕು. ಜಿಲ್ಲೆಯ ಸಾವಿರಾರು ಹೆಕ್ಟರ್‌ ಬಂಜರು ಭೂಮಿಯನ್ನು ಕೃಷಿಯೋಗ್ಯವಾಗಿಸಲು ಸಾಧ್ಯವಾಗಬೇಕು. ಬೇಡಡ್ಕ ಗ್ರಾಮ ಪಂಚಾಯತ್‌ ಇದಕ್ಕೆ ಉತ್ತಮ ಮಾದರಿಯಾಗಿದೆ ಎಂದರು. ಜಿಲ್ಲಾ ಪ್ರವಾಸೋದ್ಯಮವನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗಬೇಕು. ನಮ್ಮ ಜಿಲ್ಲೆಯ ಸಪ್ತ ಭಾಷೆಯನ್ನು  ನಮ್ಮ ನಾಡಿನ ಅಭಿವೃದ್ಧಿಗಾಗಿ ಬಳಸಲು ವ್ಯವಸ್ಥೆ  ಆಗಬೇಕು ಎಂದರು.

ನವಕೇರಳ ರಚನೆಗಾಗಿ ರಾಜ್ಯ ಸರಕಾರವು ಮುಂದಿಟ್ಟ  ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಗೊಳಿಸಲು ಸಾಧ್ಯವಾದರೆ ಮತ್ತೂಂದು ಅಭಿವೃದ್ಧಿ ಮಾದರಿಯನ್ನು  ಸೃಷ್ಟಿಸಲು ಸಾಧ್ಯವಾಗುವುದು ಎಂದು ಪಿ. ಕರುಣಾ ಕರನ್‌ ಕಿವಿಮಾತು ಹೇಳಿದರು.

ಜಿಲ್ಲೆಯನ್ನು ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಆಗುವಂತೆ ಮಾಡಬೇಕು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಕೂಡ ಯೋಜನಾ ಮೊತ್ತವನ್ನು ಸಮರ್ಥವಾಗಿ ಬಳಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಾನ ಜವಾಬ್ದಾರಿ ಹೊಂದಿದ್ದಾರೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ  ಪಂಚಾಯತ್‌ ಅಧ್ಯಕ್ಷ  ಎ.ಜಿ.ಸಿ. ಬಶೀರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಕರಡು ಯೋಜನೆಯಲ್ಲಿ ಸೇರಿಸುವ ಹೊಸ ಪರಿಕಲ್ಪನೆಗಳ ಕ್ರೋಡೀಕರಣವನ್ನು ಪ್ರತಿ ಸಮಿತಿಗಳ ಅಧ್ಯಕ್ಷರು ಮಂಡಿಸಿದರು. ನೂತನ ಯೋಜನೆ ರಚನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ನ ದೂರದೃಷ್ಟಿ, ಅಭಿವೃದ್ಧಿ ತಂತ್ರಗಳ ಕುರಿತಾದ ವರದಿಯನ್ನು  ಡಿಪಿಸಿ ಸರಕಾರದ ಪ್ರತಿನಿಧಿ ಕೆ.ಬಾಲಕೃಷ್ಣನ್‌ ಮಂಡಿಸಿದರು.

Advertisement

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್‌, ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಫರೀದಾ ಝಕೀರ್‌ ಅಹಮ್ಮದ್‌, ಶಾನವಾಸ್‌ ಪಾದೂರು, ನ್ಯಾಯವಾದಿ ಎ.ಪಿ.ಉಷಾ, ಡಿಪಿಸಿ ಸರಕಾರಿ ಪ್ರತಿನಿಧಿ ಕೆ. ಬಾಲಕೃಷ್ಣನ್‌, ಜಿಲ್ಲಾ ಪಂಚಾಯತ್‌ ಕಾರ್ಯದರ್ಶಿ ಪಿ. ನಂದಕುಮಾರ್‌, ಜಿಲ್ಲಾ ಯೋಜನಾ ಸಮಿತಿಯ ಸದಸ್ಯರು, ಬ್ಲಾಕ್‌ ಮತ್ತು ಗ್ರಾಮ ಪಂಚಾಯತ್‌ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಕಾರ್ಯಪಡೆಗಳ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಆದ್ಯತೆಯೊಂದಿಗೆ ವಾರ್ಷಿಕ ಯೋಜನೆ 
ಸಂಯುಕ್ತ ಯೋಜನೆಗಳಿಗೆ ಆದ್ಯತೆ ನೀಡಿ ಜಿಲ್ಲೆಗೆ ಪ್ರಯೋಜನವಾಗುವ ರೀತಿಯಲ್ಲಿ ಜಿಲ್ಲಾ ಪಂಚಾಯತ್‌ 2018-19ನೇ ವಾರ್ಷಿಕ ಸಾಲಿಗೆ ಯೋಜನೆಗಳನ್ನು  ಜಾರಿಗೊಳಿಸಿಗಿದೆ. ಬಜೆಟ್‌ನ ಪಾಲು ಅಭಿವೃದ್ಧಿ ನಿಧಿಯ ಸಾಮಾನ್ಯ ನಿಧಿಯಲ್ಲಿ 35.81 ಕೋಟಿ ರೂ., ನಿರ್ವಹಣೆ ನಿಧಿಯಾಗಿ ರಸ್ತೆ , ಇತರ ಉದ್ದೇಶಗಳಿಗಾಗಿ 39.99 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಟ್ಟಾರೆಯಾಗಿ 86 ಯೋಜನೆಗಳನ್ನು ಅಭಿವೃದ್ಧಿ ಕಾರ್ಯಾಗಾರದ ಪೂರ್ವಭಾವಿಯಾಗಿ ಮಂಡಿಸಲಾಗಿತ್ತು.

ಜಿಲ್ಲಾ  ಪಂಚಾಯತ್‌ ರಸ್ತೆಗಳಿಗಾಗಿ 24 ಕೋಟಿ ರೂ., ಗ್ರಾಮೀಣ ರಸ್ತೆಗಳ ನವೀಕರಣಕ್ಕಾಗಿ 10.14 ಕೋಟಿ ರೂ., ಲೈಫ್‌ ಮಿಷನ್‌, ಬದಿಯಡ್ಕದಲ್ಲಿ  3.50 ಎಕ್ರೆಯಲ್ಲಿ  ಊರ ಕೋಳಿ ಫಾರ್ಮ್, ಜಲಸಂರಕ್ಷಣೆಗಾಗಿ ಬಾವಿ ಮರುಪೂರಣ ನಿಟ್ಟಿನಲ್ಲಿ  ಕಾಸರಗೋಡು, ಕಾರಡ್ಕ, ಮಂಜೇಶ್ವರ ಬ್ಲಾಕ್‌ ಪಂಚಾಯತ್‌ಗಳಿಗಾಗಿ 50 ಲಕ್ಷ  ರೂ. ಯೋಜನೆ, ಕ್ಯಾನ್ಸರ್‌ ಮುಕ್ತ  ಜಿಲ್ಲೆಯನ್ನಾಗಿಸುವ ಯೋಜನೆ, ಅಂಗಲವಿಕರಿಗಾಗಿ, ಶಿಶುಪ್ರಿಯ ಅಂಗನವಾಡಿ ಕಟ್ಟಡ ನಿರ್ಮಾಣ, ಮಹಿಳೆಯರಿಗಾಗಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೇಂದ್ರ, ಮಹಿಳಾ ಸೌಹಾರ್ದ ಶೌಚಾಲಯ, ಶೀಲಾಂಚ್‌, ಬಡ್ಸ್‌ ಸ್ಕೂಲ್‌ ಮುಂತಾದ ಯೋಜನೆಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next