Advertisement

ಡಾ|ನೀಲಾ ಚಿತ್ರ ಅಂತಾರಾಷ್ಟ್ರೀಯ ಆನ್‌ಲೈನ್‌ ಪ್ರದರ್ಶನಕ್ಕೆ ಆಯ್ಕೆ

09:25 AM Oct 22, 2021 | Team Udayavani |

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾ ದಾಸೋಹ ಪೀಠಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬರೆದ ಮಹಾದಾಸೋಹ ಸೂತ್ರದ “ಮದುವೆ ಮಧುರ ಸುಮಧುರ’ ವಿಷಯದ ಮೇಲೆ ಖ್ಯಾತ ಕಲಾವಿದ ಡಾ| ಸುಬ್ಬಯ್ಯ ಎಂ. ನೀಲಾ ರಚಿಸಿದ ವರ್ಣಚಿತ್ರ 4ನೇ ಅಂತಾರಾಷ್ಟ್ರೀಯ ಆನ್‌ಲೈನ್‌ ಕಲಾ ಪ್ರದರ್ಶನದಲ್ಲಿ ಆಯ್ಕೆಯಾಗಿದೆ.

Advertisement

ಚಂಡಿಗಡ್‌ ಮೂಲದ ನಿರಂತರ ಕಲಾ ಬಳಗದ ವತಿಯಿಂದ ಆಯೋಜಿಸಿದ್ದ “ನಿರಂತರ 2021′ ಪ್ರದರ್ಶನದಲ್ಲಿ ಆಯ್ಕೆಯಾಗುವ ಮೂಲಕ ಡಾ| ನೀಲಾ ಭಾರತವನ್ನು ಪ್ರತಿನಿಧಿಸಿದ್ದಾರೆ. ದೇಶದ ವಿವಿಧ ಭಾಗಗಳ 40ಕ್ಕೂ ಹೆಚ್ಚು ಪ್ರಖ್ಯಾತ ಚಿತ್ರಕಾರರಲ್ಲಿ ಡಾ| ನೀಲಾ ತಮ್ಮ ವರ್ಣಚಿತ್ರಗಳನ್ನು ಆಯ್ಕೆಗಾಗಿ ಸಲ್ಲಿಸಿದ್ದರು. ತಜ್ಞರ ತಂಡವು ಮಹಾದಾಸೋಹ ಸೂತ್ರದಲ್ಲಿ ಡಾ| ನೀಲಾ ಅವರ ವರ್ಣಚಿತ್ರವನ್ನು ನಾಲ್ಕನೇ ಅಂತಾರಾಷ್ಟ್ರೀಯ ಆನ್‌ಲೈನ್‌ ಪ್ರದರ್ಶನದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿತು.

ಈ ಕಲಾ ಪ್ರದರ್ಶನವು ಸೆಪ್ಟೆಂಬರ್‌ 30ರಿಂದ ಆರಂಭವಾಗಿದ್ದು, ಅಕ್ಟೋಬರ್‌ 30ಕ್ಕೆ ಮುಕ್ತಾಯ ವಾಗಲಿದೆ. ಯುಎಸ್‌ಎ, ಜಪಾನ್‌, ರಷ್ಯಾ, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಬಾಂಗ್ಲಾದೇಶ, ನೇಪಾಳ ಮತ್ತು ಇತರ ದೇಶಗಳ 38 ರಾಷ್ಟ್ರಗಳ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದರು ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಡಾ| ನೀಲಾ ಪ್ರಕಾರ, ಪ್ರದರ್ಶನದ ಆಯೋಜಕರು ಭಾಗವಹಿಸುವ ಪ್ರತಿಯೊಂದು ದೇಶದಿಂದ ಒಂದೊಂದು ವರ್ಣಚಿತ್ರ ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಿದ್ದಾರೆ.

Advertisement

ತಮ್ಮ ಈ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸ್‌ನ್‌ ಮಾತೋಶ್ರಿ ಡಾ| ದಾಕ್ಷಾಯಿಣಿ ಅವ್ವ, ಚಿರಂಜೀವಿ ದೊಡ್ಡಪ್ಪ ಅಪ್ಪ ಪ್ರೋತ್ಸಾಹ ಮತ್ತು ಆಶೀರ್ವಾದ ಕಾರಣ ಎಂದು ಅವರು ತಿಳಿಸಿದ್ದಾರೆ.

ಚಿತ್ರಕಲೆಗೆ ಜೀವ ತುಂಬಿದ ಕಾಲ್ಪನಿಕ ಬಣ್ಣ

ಆಕ್ರಿಲಿಕ್‌ ಬಳಸಿ ರಚಿಸಿದ ಈ ಕಲಾಕೃತಿ ನಮ್ಮ ಧಾರ್ಮಿಕ ಲಿಪಿ, ವೇದಗಳಲ್ಲಿ ಬರುವ ಸಿದ್ಧಾಂತಗಳ ಪ್ರಕಾರ ಸದ್ಗುಣ ಮತ್ತು ಧಾರ್ಮಿಕ ಜೀವನ ನಡೆಸಲು ಎರಡು ಮನಸ್ಸುಗಳ ಸಂಗಮವಾಗಿದೆ. ಕ್ಯಾನ್ವಾಸ್‌ನಲ್ಲಿ ಇದನ್ನು ವೀಕ್ಷಿಸಲು ಸಂತೋಷವೆನಿಸುತ್ತದೆ. ಸೃಜನಶೀಲ ಸಾಂಪ್ರದಾಯಿಕ ಮತ್ತು ಅಲಂಕಾರಿಕ ಶೈಲಿಯಲ್ಲಿ ಮಾಡಿದ ಚಿತ್ರಕಲೆ ವಧು ಮತ್ತು ವರನ ಮದುವೆಗೆ ಮುಂಚೆ ಅವರ ಕಣ್ಣುಗಳಲ್ಲಿ ಕನಸುಗಳನ್ನು ಬಿತ್ತುತ್ತದೆ. ಕಲಾವಿದರು ಆಯ್ಕೆ ಮಾಡಿದ ಕಾಲ್ಪನಿಕ ಬಣ್ಣಗಳು ಚಿತ್ರಕಲೆಗೆ ಹೆಚ್ಚು ಜೀವ ತುಂಬಿವೆ.

ಶರಣಬಸವ ವಿಶ್ವವಿದ್ಯಾಲಯದ ಸ್ನಾತಕೋತ್ತರ ದೃಶ್ಯ ಕಲಾ ವಿಭಾಗದ ಮುಖ್ಯಸ್ಥರಾಗಿರುವ ಡಾ| ಸುಬ್ಬಯ್ಯ ಎಂ. ನೀಲಾ ತಮ್ಮ ಸೃಜನಶೀಲ ಕೆಲಸಗಳಿಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶದ ಖಾಸಗಿ ಸಂಗ್ರಹಕಾರರ ಗೋಡೆಗಳನ್ನು ಇವರು ತಮ್ಮ ಚಿತ್ರಕಲೆಯಿಂದ ಅಲಂಕರಿಸಿದ್ದಾರೆ. ದೇಶಾದ್ಯಂತದ ಪ್ರಸಿದ್ಧ ವಸ್ತುಸಂಗ್ರಹಾಲಯ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ವ್ಯಕ್ತಿಗಳ ಖಾಸಗಿ ಸಂಗ್ರಹಗಳಲ್ಲಿ ಡಾ| ನೀಲಾ ಕಲಾಕೃತಿಗಳು ವಿಜೃಂಭಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next