Advertisement

ಡಾ|ಅಂಬೇಡ್ಕರ್‌ ಜಾತಿ ರಹಿತ ನಾಯಕ

02:01 PM Apr 15, 2022 | Team Udayavani |

ಹಾವೇರಿ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಜಾತಿ ರಹಿತರು. ಭಾರತಕ್ಕೆ ದೂರದೃಷ್ಟಿಯ ಸಂವಿಧಾನ ನೀಡಿದ ಮಹಾನ್‌ ಮುತ್ಸದ್ದಿ ಎಂದು ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಹೇಳಿದರು.

Advertisement

ನಗರದ ಡಾ|ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಒಕ್ಕೂಟಗಳ ಸಹಯೋಗದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ 131ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ|ಬಾಬು ಜಗಜೀವನರಾಮ್‌ ಅವರ 115ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ|ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಿಂದ ಭಾರತ ದೇಶ ಪ್ರಗತಿಯತ್ತ ಸಾಗುತ್ತಿದೆ. ಡಾ|ಬಾಬು ಜಗಜೀವನರಾಮ್‌ ಅವರು ದೇಶದ ಉಪ ಪ್ರಧಾನಿಗಳಾಗಿ, ಕೃಷಿ ಸಚಿವರಾಗಿ ದೇಶಕ್ಕೆ ಮಹಾನ್‌ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಉಭಯ ಮಹಾನ್‌ ನಾಯಕರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ ಮಾತನಾಡಿ, ಡಾ|ಬಿ.ಆರ್‌. ಅಂಬೇಡ್ಕರ್‌ ಅವರು ಜಗತ್ತಿನಲ್ಲಿ ದಲಿತ ಜನಾಂಗದ ಮೇಲೆ ಬೆಳಕು ಚೆಲ್ಲಿದ ಮಹಾನ್‌ ವ್ಯಕ್ತಿ. ದಲಿತರ ಸೂರ್ಯನಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಹಾಗೂ ಅವರು ರಚಿಸಿದ ಸಂವಿಧಾನ ಎಲ್ಲರಿಗೂ ಮಾದರಿಯಾಗಿದೆ. ಸಾಧನೆಗೆ ಪ್ರರಿಶ್ರಮ ಪಡಬೇಕೆಂದು ತೋರಿಸಿಕೊಟ್ಟಿದ್ದಾರೆ. ಡಾ|ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ|ಬಾಬು ಜಗಜೀವನರಾಮ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಹಾಗೂ ಅನುಯಾಯಿಗಳಾಗಬೇಕೆಂದು ಹೇಳಿದರು.

ಉಪನ್ಯಾಸಕರಾಗಿ ಭಾಗವಹಿಸಿದ ಧಾರವಾಡ ಕರ್ನಾಟಕ ಕಲಾ ಮಹಾ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ಸುರೇಶ ಹುಲ್ಲನ್ನವರ ಮಾತನಾಡಿ, ಬಿ.ಆರ್‌.ಅಂಬೇಡ್ಕರ್‌ ಅವರು ವೈಚಾರಿಕ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. 64 ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು ಹಾಗೂ ನಿರಂತರ ಅಧ್ಯಯನ ಮಾಡಿದ್ದರು. ಜಗತ್ತಿನಲ್ಲಿ ಅವರಷ್ಟು ಅಧ್ಯಯನ ಯಾರೂ ಮಾಡಿಲ್ಲ. ಸಾಮಾಜಿಕ ಬದಲಾವಣೆಗೆ ಪ್ರಯತ್ನ ಮಾಡಿದ್ದರೆಂದು ಹೇಳಿದರು.

Advertisement

ಇನ್ನೋರ್ವ ಉಪನ್ಯಾಸಕ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಉಪನ್ಯಾಸಕ ಡಾ|ನಿಟ್ಟೂರು ಶಿವಾಸೋಮಣ್ಣ ಮಾತನಾಡಿ, ಡಾ|ಬಾಬು ಜಗಜೀವನರಾಮ್‌ ಅವರು ದೇಶದಲ್ಲಿ ಆಹಾರ ಸದೃಢತೆಗಾಗಿ ಕೃಷಿಯಲ್ಲಿ ಹಲವಾರು ಬದಲಾವಣೆ ತರುವ ಮೂಲಕ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದರು.

ಇದೇ ವೇಳೆ ನಗರಸಭೆಯಿಂದ ಡಾ|ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ವಿವಿಧ ಅಡುಗೆ ಪಾತ್ರೆಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್‌, ಎಸ್‌ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ|ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ನಗರಸಭೆ ಆಯುಕ್ತ ಎಂ.ವಿ.ಪೂಜಾರ, ತಾಪಂ ಇಒ ಬಸವರಾಜಪ್ಪ, ನಗರಸಭೆ ಸದಸ್ಯ ದಾದಾಪೀರ ಚೂಡಿಗಾರ, ಸಮಾಜದ ಮುಖಂಡರಾದ ಪರಮೇಶಪ್ಪ ಮೆಗಳಮನಿ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿನಮನಿ, ನಾಗರಾಜ ಮಾಳಗಿ, ರಮೇಶ ಆನವಟ್ಟಿ, ಇತರರಿದ್ದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿ, ಶ್ರೀಕಾಂತ ಮೆಗಳಮನಿ ಹಾಗೂ ಪ್ರಭುಗೌಡ ನರೇಗಲ್‌ ನಿರೂಪಿಸಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ ವಂದಿಸಿದರು.

ಆಕರ್ಷಕ ಮೆರವಣಿಗೆ: ಡಾ|ಬಿ.ಆರ್‌.ಅಂಬೇಡ್ಕರ್‌ ಹಾಗೂ ಡಾ|ಬಾಬು ಜಗಜೀವನರಾಮ್‌ ಅವರ ಭಾವಚಿತ್ರಗಳ ಮೆರವಣಿಗೆ ನಗರದ ಅಂಬೇಡ್ಕರ್‌ ವೃತ್ತದಿಂದ ಡಾ|ಬಿ. ಆರ್‌.ಅಂಬೇಡ್ಕರ್‌ ಭವನದವರೆಗೆ ಅದ್ಧೂರಿಯಾಗಿ ಜರುಗಿತು. ಶಾಸಕ ನೆಹರು ಓಲೇಕಾರ್‌ ಹಾಗೂ ಜಿಲ್ಲಾಧಿಕಾರಿ ಸಚಿಜಯ ಶೆಟ್ಟೆಣ್ಣವರ ಮೆರವಣಿಗೆಗೆ ಚಾಲನೆ ನೀಡಿದರು. ಅಲಂಕೃತ ಸಾರೋಟಿನಲ್ಲಿ ಉಭಯ ನಾಯಕರ ಭಾವಚಿತ್ರದ ಮೆರವಣಿಗೆ ಜೊತೆಗೆ ಸಂವಿಧಾನದ ಪ್ರಿಯಂಬಲ್‌ ಅಂಬೇಡ್ಕರ್‌ ಹಾಗೂ ಜಗಜೀವನ್‌ರಾಮ್‌ ಅವರ ವೇಷಧಾರಿಗಳ ಟ್ಯಾಬ್ಲೋ ಹಾಗೂ ಡೊಳ್ಳು ಕುಣಿತ, ಗೊಂಬೆ ಕುಣಿತ ಮೆರವಣಿಗೆಗೆ ಮೆರಗು ತಂದವು.

ವಿದ್ಯಾರ್ಥಿಗಳಿಗೆ ಸನ್ಮಾನ: ಇದೇ ಸಂದರ್ಭದಲ್ಲಿ 2020-21 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಚಿತಾ ಲಮಾಣಿ, ಪ್ರಿಯಾ, ರೇಖಾ ಲಮಾಣಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಧಿ ಕ ಅಂಕ ಗಳಿಸಿದ ಮೇಘಾ ದೊಡ್ಡಮನಿ, ಸುನಿಲ್‌ ನಾಯ್ಕ ಮತ್ತು ಪ್ರಶಾಂತ್‌ ಕೆ. ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next