Advertisement

ನಗರಸಭೆ ರಸ್ತೆ ಬದಿ ತ್ಯಾಜ್ಯ ಎಸೆದರೆ ದಂಡ

08:40 AM May 04, 2018 | Team Udayavani |

ನಗರ: ಪುತ್ತೂರು ಪೇಟೆಯ ಹೆಚ್ಚಿನ ರಸ್ತೆಗಳ ಬದಿ ತ್ಯಾಜ್ಯ ರಾಶಿ ಬಿದ್ದುಕೊಂಡಿದೆ. ಇವುಗಳನ್ನು ನಾಯಿ, ಕಾಗೆಗಳು ಹೆಕ್ಕಿ ತಿನ್ನುತ್ತಿದ್ದು, ರೋಗಭೀತಿ ಎದುರಾಗಿದೆ. ಇದನ್ನು ನಿಯಂತ್ರಿಸಲು ಸಿಸಿ ಕೆಮರಾ ಅಳವಡಿಸಿ, ತ್ಯಾಜ್ಯ ಸುರಿಯುವವರಿಗೆ ಪೊಲೀಸರ ಮೂಲಕ ದಂಡ ವಿಧಿಸಲು ನಗರಸಬೆ ಮುಂದಾಗಿದೆ. ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಸಹಿತ ಹಲವು ರಸ್ತೆಗಳಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಡಸ್ಟ್‌ ಬಿನ್‌ಗಳನ್ನು ಅಲ್ಲಲ್ಲಿ ಇಟ್ಟಿದ್ದರೂ, ಯಾವುದೇ ಪ್ರಯೋಜನ ಇಲ್ಲ. ಕೆಲ ಡಸ್ಟ್‌ಬಿನ್‌ ಗಳಲ್ಲಿ ಕಸ ತುಂಬಿ, ಹೊರಗಡೆ ಚೆಲ್ಲಾಡುತ್ತಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿ ಹೇಳಲಾಗಿದೆ. ಆದರೆ ಯಾರೊಬ್ಬರಿಗೂ ಇದರ ಬಗ್ಗೆ ಅರಿವು ಮೂಡಿದಂತೆ ಕಾಣುತ್ತಿಲ್ಲ. ಆದ್ದರಿಂದ ದಂಡ ಹಾಕುವುದೇ ಅಂತಿಮ ದಾರಿ ಎನ್ನುವುದನ್ನು ನಗರಸಭೆ ಮನಗಂಡಿದೆ.

Advertisement

ದುರ್ವಾಸನೆ, ನಾಯಿ ಕಾಟ
ಮೊದಲು ರಸ್ತೆ ಬದಿ ಡಬ್ಬಿ ಇಟ್ಟು, ಪ್ರತಿದಿನ ಪೌರಕಾರ್ಮಿಕರು ಲಾರಿಯಲ್ಲಿ ಬಂದು ಕಸ ತೆರವು ಮಾಡುತ್ತಿದ್ದರು. ಇದರ ಸಮಸ್ಯೆ ಏನೆಂದರೆ, ತ್ಯಾಜ್ಯ ಸುರಿಯುತ್ತಿದ್ದ ರಸ್ತೆ ಬದಿಯಿಂದ ನಡೆದುಕೊಂಡು ಹೋಗಲಾಗದಷ್ಟು ಕೆಟ್ಟ ವಾಸನೆ ಬೀರುತ್ತಿತ್ತು. ನಾಯಿಗಳ ಉಪಟಳವೂ ಹೆಚ್ಚಾಗಿತ್ತು. ಇದಕ್ಕೆ ಪರಿಹಾರ ನೀಡಲು ಮುಂದಾದ ನಗರಸಭೆ, ಡಬ್ಬಿಗಳನ್ನು ತೆರವು ಮಾಡಿ, ಮನೆ- ಅಂಗಡಿಗಳ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವ ಹೊಸ ವ್ಯವಸ್ಥೆಗೆ ಬುನಾದಿ ಹಾಡಿತು.

ದರ್ಬೆಯಿಂದ ಪುತ್ತೂರು ಪೇಟೆ ಹಾಗೂ ಪುತ್ತೂರು ಪೇಟೆಯಿಂದ ಬೊಳುವಾರು ವರೆಗೆ ಎರಡು ವಿಭಾಗ ಮಾಡಿ, ಪ್ರತಿ ಅಂಗಡಿ- ಮನೆಗಳ ಬಾಗಿಲಿಗೇ ತೆರಳಿ ಕಸ ಸಂಗ್ರಹ ಮಾಡಲಾಯಿತು. ಇದರ ಗುತ್ತಿಗೆಯನ್ನು ಸ್ವಸಹಾಯ ಸಂಘಗಳಿಗೆ ಹೊರಿಸಲಾಯಿತು. ಜನರ ಅಸಹಕಾರ ಹಾಗೂ ನಗರಸಭೆಯ ನಿರ್ಲಕ್ಷ್ಯವೋ ಎಂಬಂತೆ ಇದು ಅಷ್ಟಾಗಿ ಚಾಲ್ತಿಗೆ ಬರಲೇ ಇಲ್ಲ. ಇದೀಗ ಮತ್ತೂಮ್ಮೆ ಇದೇ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಜಾರಿಗೆ ತರಲು ನಗರಸಭೆ ಮುಂದಾಗಿದೆ.

ಕೆಟ್ಟು ನಿಂತ ಲಾರಿ
ಹಲವು ರಸ್ತೆಗಳ ಬದಿ ತ್ಯಾಜ್ಯ ರಾಶಿ ಹಾಗೆಯೇ ಬಿದ್ದುಕೊಂಡಿದೆ. ಇದಕ್ಕೆ ಕಾರಣ ಹುಡುಕಿದಾಗ, ತ್ಯಾಜ್ಯ ಕೊಂಡೊಯ್ಯುವ ಲಾರಿ ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ. ಪುತ್ತೂರು ನಗರಸಭೆಯಲ್ಲಿ ಒಟ್ಟು 14 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ ಹತ್ತು ಮಂದಿ ಮನೆ- ಅಂಗಡಿ ಬಾಗಿಲಿನಿಂದ ಕಸ ಸಂಗ್ರಹಿಸಲು ತೆರಳುತ್ತಾರೆ. ಉಳಿದ ನಾಲ್ವರನ್ನು, ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆಂದೇ ನೇಮಿಸಲಾಗಿದೆ. ಇವರು ಲಾರಿಯಲ್ಲಿ ಕಸ ತುಂಬಿ, ಡಂಪಿಂಗ್‌ ಯಾರ್ಡ್‌ಗೆ ಸುರಿಯಬೇಕು. ಆದರೆ ಲಾರಿ ಕೆಟ್ಟು ನಿಂತಿರುವುದರಿಂದ ಕಸ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಡೋರ್‌ ಟು ಡೋರ್‌ ಕಲೆಕ್ಷನ್‌
ಮೇ ಪ್ರಥಮ ವಾರದಿಂದಲೇ ಪ್ರತಿ ಮನೆ, ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆದರೆ ಪೌರಕಾರ್ಮಿಕರಿಗೆ ಇದು ಹೊಸ ಕೆಲಸವಾದ ಕಾರಣ, ಇನ್ನೂ ಸಮರ್ಪಕ ಕೆಲಸಕ್ಕೆ 15 ದಿನ ಬೇಕು ಎನ್ನುತ್ತಾರೆ ಪೌರಾಯುಕ್ತರು.

Advertisement

ಕಸ ಪ್ರತ್ಯೇಕಿಸಿಯೇ ನೀಡಬೇಕು
ಈ ಯೋಜನೆಯಡಿ 11,500 ಡಸ್ಟ್‌ ಬಿನ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದನ್ನು ಇಡಿಯ ಪುತ್ತೂರಿನ ಮನೆ, ಅಂಗಡಿಗಳಿಗೆ ಅಗತ್ಯದಷ್ಟು ವಿತರಿಸಲಾಗುವುದು. ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿಯೇ ಕಸ ನೀಡಬೇಕು. ಆದರೆ ಈ ವ್ಯವಸ್ಥೆ ಇನ್ನೂ ಜಾರಿಗೇ ಬಂದಿಲ್ಲ. ಸದ್ಯ ಚುನಾವಣೆ ಮುಗಿಯುವವರೆಗೆ ಇದನ್ನು ಜಾರಿಗೆ ತರುವುದು ಸುಲಭದ ಮಾತಲ್ಲ. ಏನಿದ್ದರೂ ಚುನಾವಣೆ ಮುಗಿದ ಬಳಿಕವಷ್ಟೇ ಕ್ರಮ ಕೈಗೊಳ್ಳಬೇಕು. ಇದರ ಬೆನ್ನಿಗೇ ಪೊಲೀಸರ ಸಹಕಾರ ಪಡೆದುಕೊಂಡು ತ್ಯಾಜ್ಯ ರಾಶಿ ಬೀಳುವ ಸ್ಥಳಗಳ ಬಳಿ ಸಿಸಿ ಕೆಮರಾ ಹಾಕಲಾಗುವುದು. ಇದರ ಮೂಲಕ ಕಸ ರಾಶಿ ಹಾಕುವವರನ್ನು ಪತ್ತೆ ಹಚ್ಚಿ, ದಂಡ ವಿಧಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಟಿಪ್ಪರ್‌ ದುರಸ್ತಿ
ರಸ್ತೆ ಬದಿ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಪಾಯಿಂಟ್‌ಗಳನ್ನು ಗುರುತಿಸಿ ಸಿಸಿ ಕೆಮರಾ ಹಾಕಲಾಗುವುದು. ಇದರಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ದಂಡ ವಿಧಿಸಲಾಗುವುದು. ಸದ್ಯ ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆ ಟಿಪ್ಪರ್‌ ಹಾಳಾಗಿದೆ. ಸರಿಪಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next