ನವದೆಹಲಿ:ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ (ಮಾರ್ಚ್ 24) ನಿರಾಕರಿಸಿದೆ.
ಇದನ್ನೂ ಓದಿ:ವನಿತಾ ವಿಶ್ವಕಪ್: ಇಂಗ್ಲೆಂಡ್ ಗೆ ಭರ್ಜರಿ ಜಯ, ಭಾರತದ ಹಾದಿ ಕಠಿಣ, ವಿಂಡೀಸ್ ಗೆ ಮಳೆ ಲಾಭ
“ಪರೀಕ್ಷೆಗಳು ನಡೆಯುತ್ತಿರುವುದರಿಂದ ಹಿಜಾಬ್ ಕುರಿತ ಮೇಲ್ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು” ಹಿರಿಯ ವಕೀಲ ದೇವದತ್ತ ಕಾಮತ್ ಸುಪ್ರೀಂಕೋರ್ಟ್ ನ ಸಿಜೆಐ ಎನ್ ವಿ ರಮಣ ಮತ್ತು ಜಸ್ಟೀಸ್ ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠದಲ್ಲಿ ಮನವಿ ಮಾಡಿಕೊಂಡಿದ್ದು, ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದ ಪೀಠ, ಪರೀಕ್ಷೆಗಳಿಗೂ, ವಿವಾದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
ಪದೇ, ಪದೇ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದಾಗ, ಸುಪ್ರೀಂಕೋರ್ಟ್ ಪೀಠ, ಸಾಲಿಸಿಟರ್ ಜನರಲ್ ಸ್ವಲ್ಪ ಕಾಯಬಹುದೇ ಎಂದು ಹೇಳಿ, ಕಾಮತ್ ನೀವು ಈ ವಿಷಯವನ್ನು ಅತಿರಂಜಿತಗೊಳಿಸಬೇಡಿ ಎಂದು ಸೂಚಿಸಿದೆ.
ಆದರೂ ಪಟ್ಟು ಬಿಡದ ವಕೀಲ ಕಾಮತ್, ಅವರೆಲ್ಲ ಹುಡುಗಿಯರು, ಏಪ್ರಿಲ್ 28ರಿಂದ ಪರೀಕ್ಷೆಗಳು ಆರಂಭವಾಗಲಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಿಸಲು ಅನುಮತಿ ನೀಡಿಲ್ಲ. ಹೀಗಾದರೆ ಒಂದು ವರ್ಷ ನಷ್ಟವಾಗಲಿದೆ ಎಂದು ಹೇಳಿದಾಗ, ಸುಪ್ರೀಂಕೋರ್ಟ್ ಮತ್ತೆ ಅವರ ಮನವಿಯನ್ನು ತಿರಸ್ಕರಿಸಿತ್ತು.
ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್ , ಹಿಜಾಬ್ ಇಸ್ಲಾಂ ಧರ್ಮದ ಅಗತ್ಯದ ಭಾಗಗಳಲ್ಲಿ ಒಂದಾಗಿಲ್ಲ ಎಂದು ತೀರ್ಪು ನೀಡಿತ್ತು.