Advertisement

ನಮ್ಮನ್ನು ಕಡೆಗಣಿಸಬೇಡಿ…!

10:26 AM Feb 26, 2020 | mahesh |

ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ ಪಾಠ ಮಾಡಿ 99 ಅಂಕ ಬರುವ ಹಾಗೇ ಮಾಡಿದ್ದೇನೆ ಅಂತ ಬೀಗುವ ಶಿಕ್ಷಕರಿದ್ದಾರೆ. ಆದರೆ, ಫ‌ಸ್ಟ್‌ ಕ್ಲಾಸ್‌ ಗಳಿಸಿದವನನ್ನು ರ್‍ಯಾಂಕ್‌ ಬರುವ ಹಾಗೇ ಮಾಡುವುದಕ್ಕೆ ಯಾರಿಗೂ ಆಸಕ್ತಿ ಇಲ್ಲ. ಈ ರ್‍ಯಾಂಕ್‌, ಕ್ಲಾಸ್‌ಗಳ ಮಧ್ಯೆ ಜಸ್ಟ್‌ ಪಾಸುಗಳಲ್ಲೇ ಬದುಕು ಕಟ್ಟಿಕೊಳ್ಳುವ ದೊಡ್ಡ ವರ್ಗ ನಮ್ಮಲ್ಲಿದೆ. ಇವರು ಕ್ಲಾಸಲ್ಲಿ ರ್‍ಯಾಂಕ್‌ ಬರದೇ ಇದ್ದರೇನಂತೆ? ಬದುಕಲ್ಲಿ ಮೊದಲನೇ ರ್‍ಯಾಂಕಲ್ಲೇ ಇರ್ತಾರೆ. ಕ್ಲಾಸಲ್ಲಿ ರ್‍ಯಾಂಕ್‌ ಪಡೆದವನು ಬದುಕಲ್ಲಿ ಫೇಲಾಗಿರುತ್ತಾನೆ. ಹೀಗಾಗಿ, ಇವರನ್ನು ನೆಗ್ಲೆಕ್ಟ್ ಮಾಡುವ ಹಾಗೇ ಇಲ್ಲ.

Advertisement

ಈ ಜಗತ್ತನ್ನು ಗಮನಸಿದ್ದೀರ? 99 ಅಂಕ ತೆಗೆದುಕೊಂಡವನನ್ನು ನೋಡಿ ವಾವ್‌ ಅನ್ನುತ್ತದೆ. ಅದೇ 30 ಇಲ್ಲವೇ ಅದಕ್ಕಿಂತ ಕಡಿಮೆ ಅಂಕ ಪಡೆದವನನ್ನು ಪಾಪ ಅನ್ನುವಂತೆ ನೋಡಿ ಮುಂದೆ ಹೋಗಿಬಿಡುತ್ತದೆ. ಆದರೆ, ಇನ್ನೂ ಒಂದು ವರ್ಗವಿದೆ. ಸ್ವಾರಸ್ಯವೆಂದರೆ, ಇವರನ್ನು ಯಾರೂ ಗಂಭೀರವಾಗಿ ಗಮನಿಸುವುದಿಲ್ಲ. ಇವರು ನಲವತ್ತರಿಂದ ಅರವತ್ತು ಮಾರ್ಕ್ಸಿನ ಒಳಗೆ ಸಿಕ್ಕಿ ಹಾಕಿಕೊಂಡು ಆರಕ್ಕೇರದೆ ಮೂರಕ್ಕಿಳಿಯದೆ ಅಲ್ಲೇ ಉಳಿದುಬಿಡುವವರು. ಇದುವರೆಗೂ ಜಗತ್ತು ಇವರ ಬಗ್ಗೆ ಸೀರಿಯಸ್ಸಾಗಿ ಯೋಚಿಸಿದ್ದು ಮಾಡಿದ್ದು ಕಡಿಮೆ. “ಬಿಡು, ಹೆಂಗೂ ಪಾಸ್‌ ಆಗ್ತಾರೆ’ ಎಂಬ ಒಂದು ಉಡಾಫೆಯ ಉತ್ತರ ಸದಾ ಅವರ ಪಾಲಿಗಿರುತ್ತದೆ. ನಿಮಗೆ ಗೊತ್ತಾ? ಕ್ಲಾಸಿನಲ್ಲಿ ಇವರ ಸಂಖ್ಯೆ ಶೇ.60, 70 ಇರುತ್ತದೆ. ಚೆನ್ನಾಗಿ ಓದುವವರು ಬೆರಳೆಣಿಕೆ ಅಂದರೆ ಶೇ.10ರಷ್ಟು ಸಿಗಬಹುದು. ಕನಿಷ್ಠಮಟ್ಟದಲ್ಲಿ ಓದುವವರು ಕೂಡ ಬೆರಳೆಣಿಕೆಯೇ! ಆದರೆ, ಪಾಸಾಗುವ ಕೆಟಗರಿ ಅನ್ನುತ್ತೇವಲ್ಲ; ಅಂಥವರ ಗುಂಪು ಮಾತ್ರ ದೊಡ್ಡದು. ಎಲ್ಲಾ ತರಗತಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಬಿಡು ಇದೆಲ್ಲಾ ಕಾಮನ್‌, ಮಕ್ಕಳಲ್ಲಿ ವೈಯಕ್ತಿಕ ಭಿನ್ನತೆ ಇರುವುದಿಲ್ಲವೇ ಅದರಿಂದ ಏನು ಮಾಡೋಕೆ ಆಗುತ್ತೆ? ಎಂದು ಷರಾ ಬರೆದುಕೊಂಡು ಕೂರಬಾರದು. ನಾಳೆ ಸಮಾಜದಲ್ಲಿ ಬಂದು ನಿಂತುಕೊಂಡು ಎಲ್ಲವನ್ನೂ ನೋಡಿಕೊಳ್ಳಬೇಕಾಗಿರುವುದರ ಪೈಕಿ ಇವರದೇ ಹೆಚ್ಚಿನ ಪಾಲು. ಏಕೆಂದರೆ, ಇವರ ತಾನೇ ಸಂಖ್ಯೆಯಲ್ಲಿ ಜಾಸ್ತಿ ಇರುವವರು. ಜಾಸ್ತಿ ಮಾರ್ಕಿನವರು ಇಸ್ತ್ರಿ ಮಾಡಿದ ಅಂಗಿ ತೊಟ್ಟು ಯಾವುದೋ ಊರಿನಲ್ಲಿ ಫ್ಯಾನ್‌ ಕೆಳಗೆ ಕೂತು ಕೆಲಸ ಮಾಡುತ್ತಿರುತ್ತಾನೆ. ಕಲಿಕೆಯಲ್ಲಿ ಕನಿಷ್ಠ ಮಟ್ಟದಲ್ಲೇ ಉಳಿದವರು ತಮ್ಮ ಓದನ್ನು ಪೂರ್ಣಗೊಳಿಸಲಾಗದೆ ಅರ್ಧಕ್ಕೆ ನಿಲ್ಲಿಸಿ ಎಲ್ಲೋ ಒಂದು ಕಡೆ ಕಳೆದುಹೋಗಿಬಿಡುತ್ತಾರೆ. ನಾಳೆ ನಮ್ಮ ಸಮಾಜವನ್ನು ಆಳುವವರು ಆ ಕಡೆ ರ್‍ಯಾಂಕು ಇಲ್ಲ, ಈ ಕಡೆ ಫೇಲ್‌ ಕೂಡ ಅಲ್ಲ ಎಂಬಂಥ ಜನರೇ. ಶೈಕ್ಷಣಿಕ ಮನೋವಿಜ್ಞಾನ ಹೇಳುವಂತೆ ಸಾಮಾನ್ಯ ಸಂಭಾವ್ಯ ವಕ್ರರೇಖೆಯಲ್ಲಿ(NPC) ಬರುವ ಮಧ್ಯದವರು ಇವರು.

ಅವರೇಕೆ ಅಲ್ಲಿಯೇ ಉಳಿದುಬಿಡುತ್ತಾರೆ..?
ಅದೇನು ಅವರ ತವರು ಮನೆಯಲ್ಲ. ಹತ್ತು ಹಲವು ಕಾರಣಗಳು ಅವರನ್ನು ಅಲ್ಲಿಯೇ ತಡೆದು ನಿಲ್ಲಿಸುತ್ತವೆ. ಬಯಸಿ ಬಯಸಿ ಯಾವ ಮಗುವೂ ತಾನು ಸಾಧಾರಣ ಹಂತದಲ್ಲಿಟದ್ದುಕೊಂಡೇ
ಓದಿ ಮುಗಿಸುತ್ತೇನೆ ಎಂದು ಬಯಸುವುದಿಲ್ಲ. ಈ ಮಕ್ಕಳ ಬುದ್ಧಿಮಟ್ಟ, ಪ್ರತಿಭಾವಂತ ಮಕ್ಕಳಿಗಿಂತ ತುಸು ಕಡಿಮೆ ಇರುತ್ತದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಸಿಗುವ ಮನೆಯ ಮತ್ತು ಶಾಲೆಯ ಪರಿಸರಗಳು ಕೂಡ ಪ್ರಭಾವ ಬೀರುತ್ತವೆ. ಶಿಕ್ಷಕರ ಬೋಧನೆಯು ಇಡೀ ತರಗತಿಗೆ ಒಂದೇ ಆಗಿದ್ದರೂ ಪ್ರತಿಭಾವಂತರು ಅದನ್ನು ಬಳಸಿಕೊಂಡು ಆದಷ್ಟು ಬೇಗ ತಮ್ಮ ಕಲಿಕೆಯನ್ನು ಸಾಧಿಸಿಕೊಳ್ಳುತ್ತಾರೆ. ಇವರು ಇದ್ದಲ್ಲಿಯೇ ಉಳಿಯುತ್ತಾರೆ. ಹಾಗಂತ, ಇವರು ಕಲಿಯುವುದಿಲ್ಲ ಅಂತಲ್ಲ, ಕಲಿಕೆಯ ವೇಗ ನಿಧಾನಗತಿಯಲ್ಲಿ ಆಗುತ್ತಿರುತ್ತದೆ ಅಷ್ಟೇ! ಕಾಲಕಾಲಕ್ಕೆ ಆಗುವ ಪರೀಕ್ಷೆಯಲ್ಲಿ ಇವರಿಗೆ ಪ್ರತಿಭಾವಂತ ವಿದ್ಯಾರ್ಥಿಗಳು ತೆಗೆದಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಹಾಗಂತ ಎಲ್ಲಾ ಮಕ್ಕಳು ಅಲ್ಲೇ ಉಳಿದು ಬಿಡುತ್ತಾರೆ ಅಂತ ಅರ್ಥವಲ್ಲ. ಕೆಲವರು ನಿರಂತರ ಅಭ್ಯಾಸ ಮತ್ತು ಪ್ರಯತ್ನಗಳಿಂದ ತಮ್ಮ ಮಿತಿಯನ್ನು ದಾಟಿ ಹೋಗಬಹುದು ಅಥವಾ ಇನ್ನೂ ಕೆಲವರು ನಿರಾಶೆಯಿಂದ ಕೈಚೆಲ್ಲಿ ಕನಿಷ್ಠಮಟ್ಟದ ಕಲಿಕೆಯ ಗುಂಪನ್ನು ಸೇರಿಕೊಳ್ಳಬಹುದು.

ಇವರ ಮನಸಲ್ಲಿ ಏನಿರುತ್ತದೆ?
ಇವರ ಸಂಖ್ಯೆ ತುಂಬ ಇರುವುದರಿಂದ ಮತ್ತು ಅಷ್ಟೊ ಇಷ್ಟೋ ಕಲಿಯುತ್ತಲೇ ಇರುವುದರಿಂದ ಬಹುತೇಕರ ಗಮನ ಅತ್ತ ಸುಳಿಯುವುದಿಲ್ಲ. ಕನಿಷ್ಠ ಕಲಿಕೆ ಮಟ್ಟದವರು ಅನುಭವಿಸುವ ಮಾನಸಿಕ ತಳಮಳವು ಇವರನ್ನು ಅಷ್ಟಾಗಿ ಬಾಧಿಸುವುದಿಲ್ಲ. ತರಗತಿಯಲ್ಲಿ ಪ್ರತಿಭಾವಂತರಿಗೆ ಸಿಗುವ ವಿಶೇಷ ಗಮನ, ತಮಗೆ ದಕ್ಕದೇ ಇದ್ದಾಗ ಕಿರಿಕಿರಿಗೊಳ್ಳುತ್ತಾರೆ. ನಮ್ಮನ್ನು ಯಾರೂ ಗುರುತಿಸುವುದಿಲ್ಲ. ಹನ್ನೊಂದರಲ್ಲಿ ಇನ್ನೊಂದು ಅನ್ನುವ ಒಂದು ವಿಚಿತ್ರ ಮನೋಭಾವವನ್ನು ಅವರನ್ನು ಕಾಡಲಾರಂಭಿಸುತ್ತದೆ. ಅದು ತರಗತಿಯಿಂದ ಆರಂಭವಾಗಿ ಮಗುವಿನ ಮುಂದಿನ ಜೀವನದಲ್ಲೂ ವ್ಯಾಪಿಸಬಹುದು. ಬಿಡು ಅದು ನನ್ನಿಂದಾಗದು, ನನ್ನ ಸಾಮರ್ಥ್ಯವೇ ಇಷ್ಟು ಎನ್ನುವ ಕೀಳರಿಮೆ ಶಾಶ್ವತವಾಗಿ ಉಳಿದುಬಿಡಬಹುದು.

Advertisement

ನಿಮಗೆ ಗೊತ್ತಾ? ಅವರ ನಿರೀಕ್ಷೆಗಳು ಹೆಚ್ಚಿರುತ್ತವೆ. ಅವರು ಅನುಕೂಲಕರ ಪಾಠಕ್ಕೆ, ವಿಷಯಕ್ಕೆ, ಸರಳವಾಗಿ ಕಲಿಸುವ ವಿಧಾನಕ್ಕೆ, ಖುಷಿಯಿಂದ ಕಲಿಯಬಹುದಾದ ಪಠ್ಯಕ್ಕೆ ಕಾದಿರುತ್ತಾರೆ. ತಮ್ಮನ್ನು ಯಾರಾದರೂ ಗುರುತಿಸಲಿ ಎಂಬ ಆಸೆಗಣ್ಣು ಅವರಿಗಿರುತ್ತದೆ. ನಾವು ಕೂಡ ಮುಖ್ಯವಾಹಿನಿಗೆ ಸೇರಿಕೊಳ್ಳಬೇಕೆಂಬ ತುಡಿತದಲ್ಲಿರುತ್ತಾರೆ. ಒಂದೆರಡು ಬಾರಿಯ ಸತತ ಸೋಲಿನಿಂದಾಗಿ ಪ್ರಯತ್ನವನ್ನೇ ನಿಲ್ಲಿಸಿಬಿಟ್ಟಿರುತ್ತಾರೆ. ದೊಡ್ಡ ದೊಡ್ಡ ತರಗತಿಗೆ ಹೋದಹಾಗೆ, “ನಂಗೆ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ, ಒಳ್ಳೆ ಕೆಲಸ ಸಿಗಲಿಲ್ಲ’ ಅನ್ನುವ ವಿಚಾರ ಹೊಳೆದು ಜರ್ಜರಿತರಾಗುತ್ತಾರೆ. ಹಾಗಂತ ಅದನ್ನು ಬಿಟ್ಟು ಬೇರೆ ಏನಾದರೂ ಮಾಡಲು ಕೂಡ ಅವರ ಮನಸ್ಸು ಮಾತು ಕೇಳಲ್ಲ. ಮನೆಯಲ್ಲಿ ನಿರೀಕ್ಷೆಗಳಿರುತ್ತವೆ. ಸಮಾಜಕೂಡ ಅವರಿಂದ ಮತ್ತೇನನ್ನೋ ಬಯಸುತ್ತದೆ. ಆಗ ನಾವು ಅಲ್ಲಿಯೇ ಉಳಿದು ಬಿಡಬಾರದಿತ್ತು ಅಂತ ಅನಿಸುತ್ತದೆ.

ಅವರನ್ನು ನಾವ್ಹೇಗೆ ನೋಡುತ್ತಿದ್ದೇವೆ?
ಲೆಕ್ಕಕ್ಕುಂಟು ಆದರೆ ಆಟಕ್ಕಿಲ್ಲ. ಬರೀ ಪಾಸಾಗುವ ಐಟಂ. ಅವರಿಂದ ಮತ್ತೇನೂ ಸಾಧ್ಯವಿಲ್ಲ ಎಂಬ ದೃಷ್ಟಿಯಲ್ಲೇ ಬಹುತೇಕರು ಅವರನ್ನು ನೋಡುತ್ತಾರೆ. ಬರೇ 60 ಅಂಕ ಪಡೆದವರಿಂದ ಏನಾಗುತ್ತೆ ಎನ್ನುವ ಅಭಿಪ್ರಾಯ ಅವರದು. ತರಗತಿಯಿಂದ ತರಗತಿಗೆ ದಂಡಯಾತ್ರೆ ಕೈಗೊಂಡು ಕೊನೆಗೊಮ್ಮೆ ಸಮಾಜವೆಂಬ ಹಳ್ಳಕ್ಕೆ ಬಿದ್ದು, ಅಲ್ಲೂ ಕೂಡ ಮಧ್ಯಮವರ್ಗದ ಬದುಕನ್ನು ಕಟ್ಟಿಕೊಂಡು ಜೀವನ ತಳ್ಳುವುದೇ ಆಗಿಬಿಡುತ್ತದೆ. ಅವನ ಬದುಕು ಕೂಡ ಜಸ್ಟ್‌ 60 ಮಾರ್ಕ್ಸಿನಂತೆಯೇ ಆಗಿಬಿಡುತ್ತದೆ.

ಇವತ್ತು ನಮ್ಮಲ್ಲಿ 90 ಅಂಕ ಪಡೆದವರನ್ನು, ತಿದ್ದಿ ತೀಡಿ, ನೂರು ಅಂಕ ಬರುವ ಹಾಗೇ ಮಾಡುವ ಅನೇಕ ಶಿಕ್ಷಕರ ಗುಂಪೇ ಇದೆ. ಆದರೆ, 50 ಅಂಕ ಪಡೆದವನನ್ನು ಹಿಡಿದು ಕೂಡಿಸಿ, 95 ಅಂಕ ಬರುವಹಾಗೇ ಮಾಡುವ ಕಸರತ್ತು ಯಾರಿಗೂ ಬೇಡ. ಹೀಗಾಗಿಯೇ, ಈ ಗುಂಪು ಹಲವು ವಿಶೇಷಗಳ ಗುಚ್ಚು. 99 ಅಂಕ ತೆಗೆಯುವವರು ಬರೇ ಓದಿನಲ್ಲಿ ಮುಂದೆ ಇದ್ದರೆ, ಇವರು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಝಳಪಿಸಲು ಸಿದ್ಧರಾಗಿರುತ್ತಾರೆ. ಅವರನ್ನು ಕೇಂದ್ರವಾಗಿಟ್ಟು ಕಲಿಸುವ ಮತ್ತು ಕಲಿಯುವಿಕೆಗೆ ಸಂಬಂಧಿಸಿದಂತೆ ಹೊಸ ಪ್ರಯತ್ನಗಳು ಆಗಬೇಕಿದೆ. ಅವನಿಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ, ಎಷ್ಟೇ ಪ್ರಯತ್ನಿಸಿದರೂ ಇಷ್ಟೇ ಅನ್ನುವ ನಿಮ್ಮ ತೀರ್ಮಾನಿಸುವ ಮೊದಲು ಅವನನ್ನು ಸುಮ್ಮನೆ ಗಮನಿಸಿನೋಡಿ. ಅವರಲ್ಲೊಬ್ಬ ಅದ್ಭುತ ಆಟಗಾರರನಿರುತ್ತಾರೆ. ತುಂಬಾ ಚೆಂದ ಮಾತನಾಡುವ ಭಾಷಣ ಕಾರನಿರುತ್ತಾನೆ. ಮೀನಿನಂತೆ ಈಜುವವನಿರುತ್ತಾನೆ. ಚೆಂದದ ಚಿತ್ರ ಬರೆಯುವವರ ಕಲಾವಿದ ಇರ್ತಾನೆ. ಒಳ್ಳೆಯ ಹಾಡುಗಾರ ಇರ್ತಾನೆ. ಕರಕುಶಲಿ ಇರ್ತಾನೆ. ವ್ಯವಸಾಯದ ಬಗ್ಗೆ ತೀವ್ರ ಕುತೂಹಲ ಇರೋನು ಇರ್ತಾನೆ. ಇವೆಲ್ಲಾ ಎಂಥ ಪ್ರತಿಭೆಗಳು ನೋಡಿ. ನಾವು ಬರೀ ಮಾರ್ಕ್ಸ್ ಅನ್ನು ಪ್ರತಿಭೆ ಅಂದುಕೊಂಡು ಬಿಡುವ ಇವನಿಂದ ಏನಾಗುತ್ತೆ ಅಂತಿರುತ್ತೀವಿ. ಅವನಿಗೆ ತನ್ನ ಇಷ್ಟದ ಕ್ಷೇತ್ರದಲ್ಲಿ ಚೂರು ಅವಕಾಶ ಸಿಕ್ಕರೆಸಾಕು, ರ್‍ಯಾಂಕ್‌ ವಿದ್ಯಾರ್ಥಿಗಿಂತ ಜೋರಾಗಿ ನೆಗೆಯುತ್ತಾನೆ. ಕಡಿಮೆ ಅಂಕ ಪಡೆದರೂ ಅದು ಪರೀಕ್ಷೆಗಷ್ಟೇ ಸಮೀತ. ಬದುಕಿಗಲ್ಲ. ಕಡಿಮೆ ಅಂಕಿಗಳನ್ನು ಅವರಿಗೆ ಸಲ್ಲುವ ಜಾಗಕ್ಕೆ ಅವರನ್ನು ತೆಗೆದುಕೊಂಡು ಹೋಗಿ ನಿಲ್ಲಿಸಬೇಕು. ಅದು ನಮ್ಮ ಜವಾಬ್ದಾರಿ. ಅದನ್ನು ಬಿಟ್ಟು ಮಾರ್ಕ್ಸ್ ಆಧರಿಸಿ ಅವರನ್ನು ದೂರುವುದರಲ್ಲಿ ಅರ್ಥವಿಲ್ಲ.

ಸದಾಶಿವ್‌ ಸೊರಟೂರು.

Advertisement

Udayavani is now on Telegram. Click here to join our channel and stay updated with the latest news.

Next