Advertisement

ವದಂತಿಗೆ ಕಿವಿಗೊಡಬೇಡಿ: ಯತ್ನಾಳ

04:41 PM May 03, 2021 | Girisha |

ವಿಜಯಪುರ: ಕೊರೊನಾ ಸೋಂಕು ಕುರಿತಂತೆ ಸಾರ್ವಜನಿಕರು ಆತಂಕ ಪಡಬಾರದು. ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ, ಸುಳ್ಳು ವದಂತಿ ಹಬ್ಬಿಸುತ್ತಿರುವವರ ಊಹಾಪೋಹಗಳನ್ನು ನಂಬಬಾರದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ ರವಿವಾರ ವಾರ್ಡ್‌ ನಂ-35 ರಾಜಕುಮಾರ ಲೇಔಟ್‌, ಸಿದ್ಧಿವಿನಾಯಕ ದೇವಸ್ಥಾನ ಆವರಣ ಹಾಗೂ ವಾರ್ಡ್‌ ನಂ-4, ಸರ್ಕಾರಿ ಶಾಲೆ ನಂ. 51 ಭೂತನಾಳ ತಾಂಡಾದಲ್ಲಿ ಉಚಿತ ಕೋವಿಡ್‌ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ಕೊರೊನಾ ಸೋಂಕು ಕುರಿತಂತೆ ಆತಂಕ ಪಡದೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಆರ್‌ಟಿಪಿಸಿಆರ್‌ ಹಾಗೂ ಎಚ್‌ಆರ್‌ಸಿಟಿ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದ ಅವರು, ಕೋವಿಡ್‌ ಲಸಿಕೆ ಪಡೆದು ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು. ಕೊರೊನಾ ವೈರಸ್‌ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬಂದರೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮುಂಜಾಗ್ರತಾ ದೃಷ್ಟಿಯಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಬಳಸಿ, ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಧರಿಸಿ ಕೈಗಳನ್ನು ಆಗಾಗ ಸೋಪಿನಿಂದ ತೊಳೆಯಿರಿ. ಸ್ವತ್ಛತೆಯನ್ನು ಕಾಪಾಡಿಕೊಳ್ಳಿ. ರೋಗದ ಲಕ್ಷಣಗಳನ್ನು ಹೊಂದಿರುವವರು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.

ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು, ಸ್ವತ್ಛತಾ ಕರ್ಮಿಗಳು, ಪೊಲೀಸ್‌ ಸಿಬ್ಬಂದಿಗಳನ್ನು ಗೌರವದಿಂದ ಕಾಣಿ. ಮಾಸ್ಕ್ ಧರಿಸದೆ ಅನಗತ್ಯವಾಗಿ ಹೊರಗಡೆ ತಿರಗುವುದು ಹಾಗೂ ಕೊರೊನಾ ಮಾರ್ಗಸೂಚಿ ಮುರಿದು ಪೊಲೀಸ್‌ ಸಿಬ್ಬಂದಿಗಳೊಂದಿಗೆ ವಾದಕ್ಕಿಳಿಯದೇ ಎಲ್ಲರೂ ಸಹ ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳಬೇಕು. ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾದುಕೊಳ್ಳಬೇಕು, ಕೇವಲ ವ್ಯವಸ್ಥೆಯನ್ನು ದೂರುವುದಕ್ಕಿಂತ ಮೊದಲು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.

Advertisement

ಒಬ್ಬ ಜನಪ್ರತಿನಿಧಿಯಾಗಿ ನಾನು ನನ್ನ ಜವಾಬ್ದಾರಿ ಮಾಡುತ್ತಿದ್ದೇನೆ. ಲಸಿಕೆ ಕಾರ್ಯಕ್ರಮಗಳನ್ನು ಯಶಶ್ವಿ‌ಯಾಗಿ ಮಾಡೋಣ, ಸಾರ್ವಕನಿಕರು ಸಹ ಈ ಕಾರ್ಯಕ್ಕೆ ಸಹಕಾರ ನೀಡಿ, ಈ ಮೂಲಕ ಕೊರೊನಾ ಮಹಾಮಾರಿಯನ್ನು ತಡೆಗಟ್ಟಿ ವಿಜಯಪುರ ನಗರವನ್ನ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗಿ ಮಾಡೋಣ ಎಂದರು. ಕೋವಿಡ್‌ ಎರಡನೇ ಅಲೆ ಅತ್ಯಂತ ಭಯಾನಕವಾಗಿದೆ. ಮೂರನೇ ಅಲೆ ಬರುವುದಕ್ಕಿಂತ ಮೊದಲು ನಾವೆಲ್ಲ ಜಾಗರೂಕರಾಗಿರಬೇಕು. ಎಚ್ಚರ ವಹಿಸಬೇಕು. ಹೀಗಾಗಿ ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಕೋವಿಡ್‌ ಮುಕ್ತ ವಿಜಯಪುರಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದರು. ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಂಜಯ್‌ ಪಾಟೀಲ ಕನಮಡಿ, ಚಂದ್ರು ಚೌಧರಿ, ಸಂತೋಷ ಪಾಟೀಲ, ಡಾ| ಜನ್ನತ್‌ ಮುಶ್ರಿಫ್‌, ಡಾ| ಉಮೇಶ ನಾಲಾ, ಚಿದಾನಂದ ಹಿರೇಮಠ, ಎಂ.ಎಸ್‌. ರುದ್ರಗೌಡ್ರ, ಆರ್‌.ಎಸ್‌. ಮನಗೂಳಿ, ಆರ್‌.ಎಸ್‌. ಕೋಳಿ, ರವಿ ದೇಶಪಾಂಡೆ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next