Advertisement

ಕಾಂಗ್ರೆಸ್‌ ರಣತಂತ್ರ ಲಘು ಹಿಂದುತ್ವ ಫ‌ಲ ನೀಡೀತೇ? 

06:00 AM Jan 15, 2018 | Team Udayavani |

ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ನ ಲಘು ಹಿಂದುತ್ವ ಮತ್ತು ಬಿಜೆಪಿಯ ತೀವ್ರ ಹಿಂದುತ್ವದ ನಡುವಿನ ಹಣಾಹಣಿಯಾಗಲಿದೆಯೇ ಎನ್ನುವ ಕುತೂಹಲವೊಂದು ಹುಟ್ಟಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ನೀಡಿರುವ ಸೂಚನೆ. ಬಿಜೆಪಿಯ ತೀವ್ರ ಹಿಂದುತ್ವಕ್ಕೆ ಎದುರಾಗಿ ಕಾಂಗ್ರೆಸ್‌ ಲಘು ಹಿಂದುತ್ವವನ್ನು ಅನುಸರಿಸಬೇಕು. ಹಿಂದುಗಳು ಮತ್ತು ಹಿಂದುತ್ವದ ಕುರಿತು ಹೇಳಿಕೆಗಳನ್ನು ನೀಡುವಾಗ ಎಚ್ಚರ ವಹಿಸಬೇಕು. ಹಿಂದುಗಳಿಗೆ ನೋವಾಗುವಂತಹ ಹೇಳಿಕೆ ನೀಡಬಾರದು ಎಂದು ರಾಹುಲ್‌ ಸೂಚಿಸಿದ್ದಾರೆ ಎನ್ನುತ್ತಿವೆ ವರದಿಗಳು. 

Advertisement

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಲಘು ಹಿಂದುತ್ವ ಅನುಸರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಆದರೆ ರಾಹುಲ್‌ ಈ ಸೂಚನೆ ನೀಡಲು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್‌ ಗುಂಡೂರಾವ್‌ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ನೀಡಿರುವ ಹೇಳಿಕೆಗಳು ಕಾರಣವಾಗಿರಬಹುದು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಉಗ್ರ ಸಂಘಟನೆಗಳು ಎಂದಿದ್ದರು ಅವರು. 

ಪ್ರಸ್ತುತ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಏನೇ ಹೇಳಿಕೆ ನೀಡಿದರೂ ಅದು ಹಿಂದುಗಳ ವಿರುದ್ಧ ನೀಡಿದ ಹೇಳಿಕೆ ಎಂದು ಅರ್ಥೈಸಿಕೊಳ್ಳಲಾಗುತ್ತಿರುವುದರಿಂದ ರಾಹುಲ್‌ ಈ ಎಚ್ಚರಿಕೆ ನೀಡಿರಬಹುದು.  ಆದರೆ ಒಂದು ವಿಷಯ ಮಾತ್ರ ಸ್ಪಷ್ಟ, ಕಾಂಗ್ರೆಸ್‌ಗೆ ಕೂಡ ಬಹುಸಂಖ್ಯಾತರ ಬೆಂಬಲವಿಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಾಗದು ಎನ್ನುವುದು ತಡವಾಗಿಯಾದರೂ ಅರ್ಥವಾಗಿದೆ. ಹಾಗೆ ನೋಡಿದರೆ 2014ರ ಲೋಕಸಭಾ ಚುನಾವಣೆಯ ಘೋರ ಸೋಲಿನ ಕುರಿತು ಎ. ಕೆ. ಆ್ಯಂಟನಿ ಸಲ್ಲಿಸದ ವರದಿಯಲ್ಲೇ ಅಲ್ಪಸಂಖ್ಯಾತರ ಅತಿಯಾದ ಓಲೈಕೆಯೇ ಸೋಲಿಗೆ ಕಾರಣ ಎಂದು ವಿವರಿಸಲಾಗಿತ್ತು. 

ಅಂದಿನಿಂದಲೇ ಕಾಂಗ್ರೆಸ್‌ ತುಸು ಹಿಂದುತ್ವದೆಡೆಗೆ ವಾಲಿದ್ದರೂ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಲಘು ಹಿಂದುತ್ವವನ್ನು ಪ್ರಯೋಗಕ್ಕೊಡ್ಡಿತು. ರಾಹುಲ್‌ ಗಾಂಧಿ ಗುಜರಾತಿನಲ್ಲಿ 27 ದೇವಸ್ಥಾನಗಳಿಗೆ ಭೇಟಿ ನೀಡಿದರು. ಹಣೆಗೆ ಎದ್ದು ಕಾಣುವಂತೆ ಕುಂಕುಮ ಧರಿಸಿಕೊಂಡರು. ನಾನು ಹಿಂದು , ಶಿವನ ಭಕ್ತ ಎಂದೆಲ್ಲ ಬಹಿರಂಗವಾಗಿ ಹೇಳಿಕೊಂಡರು. ಈ ನಡುವೆ ಕೆಲವು ಎಡವಟ್ಟುಗಳನ್ನೂ ಮಾಡಿಕೊಂಡರು. ಜನಿವಾರಧಾರಿ ಬ್ರಾಹ್ಮಣ ಎಂದು ಹೇಳಿಕೊಂಡು ನಗೆಪಾಟಲಿಗೂ ಈಡಾದರು. 

ಗಮನಾರ್ಹ ಅಂಶವೆಂದರೆ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ತಪ್ಪಿಯೂ ಮುಸ್ಲಿಮರ ವಿಚಾರ ಮಾತನಾಡಲಿಲ್ಲ. ಹೀಗೆ ಹಿಂದುಗಳ ಬಗ್ಗೆ ತನಗೂ ಕಾಳಜಿ ಇದೆ ಎಂದು ನಂಬಿಸುವ ಮೂಲಕ ಕಾಂಗ್ರೆಸ್‌ ತುಸು ಚೇತರಿಸಿಕೊಂಡಿತು ಅಥವ ಹಾಗೆಂದು ಪಕ್ಷ ಅಂದುಕೊಂಡಿತು. ಆದರೆ ಲಘು ಹಿಂದುತ್ವದಿಂದ ಗುಜರಾತಿನಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಿದೆಯೇ ಎನ್ನುವುದು ಇನ್ನೂ ನಿಷ್ಕರ್ಷೆಯಾಗಿಲ್ಲ. ಸ್ಥಾನಗಳ ಸಂಖ್ಯೆ ಹೆಚ್ಚಾಗಲು ಇತರ ಕಾರಣಗಳು ಇದ್ದಿದ್ದರೂ ಕಾಂಗ್ರೆಸಿಗೇಕೋ ರಾಹುಲ್‌ ಗಾಂಧಿಗೆ ಜನಿವಾರ ತೊಡಿಸಿದರೆ ಗೆಲ್ಲಬಹುದು ಎಂಬ ನಂಬಿಕೆ ಹುಟ್ಟಿದೆ. ಹೀಗಾಗಿ ಆ ಕಾರ್ಯತಂತ್ರವನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಮುಂದಾಗಿರಬಹುದು. 

Advertisement

ಈಗಾಗಲೇ ಕರ್ನಾಟದಲ್ಲಿ ಕಾಂಗ್ರೆಸ್‌ ಹಿಂದು ವಿರುದ್ಧ ಎನ್ನುವ ಭಾವನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ 20ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರ ಹತ್ಯೆಯಾಗಿರುವುದು ಹಾಗೂ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಪದೇ ಪದೇ ಸಂಭವಿಸಿರುವ ಕೋಮುಗಲಭೆಗಳು. ಇದರ ಜತೆಗೆ ಸರಕಾರ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಹಠ ಹಿಡಿದು ಆಚರಿಸಿ ತನ್ನ ತುಷ್ಟೀಕರಣ ನೀತಿಯನ್ನು ಜಗಜ್ಜಾಹೀರುಪಡಿಸಿಕೊಂಡಿದೆ. ದನಕಳ್ಳರ ಪ್ರಕರಣಕ್ಕೆ ಸಂಬಂಧಿಸಿ ಮೃದು ಧೋರಣೆ ತಳೆದದ್ದು ಸೇರಿದಂತೆ ಹಿಂದುಗಳಿಗೆ ಅಸಮಾಧಾನವಾಗುವಂತೆ ಹಲವು ನಡೆಗಳನ್ನಿಟ್ಟಿದೆ. 

ಇದರಿಂದ ಹಿಂದು ಮತ ಧ್ರುವೀಕರಣವಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್‌ ನಾಯಕರು ಕೂಡ ಹಿಂದುತ್ವ ಜಪ ಮಾಡಲಾರಂಭಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಹಿಂದುತ್ವವೇ ಮುಖ್ಯ ವಿಷಯವಾಗುವ ಸಾಧ್ಯತೆಯಿದೆ. ಇದರಿಂದ ಕಾಂಗ್ರೆಸ್‌ಗೆ ಅನುಕೂಲವೂ ಇದೆ ಅನನುಕೂಲವೂ ಇದೆ. ಅನುಕೂಲ ಏನೆಂದರೆ ಅಭಿವೃದ್ಧಿ, ಆಡಳಿತ ವೈಫ‌ಲ್ಯ ಇತ್ಯಾದಿ ವಿಚಾರದ ಚರ್ಚೆ ಹಿನ್ನೆಲೆಗೆ ಸರಿಯುತ್ತದೆ. ಸ್ವಲ್ಪಮಟ್ಟಿಗೆ ಮುಸ್ಲಿಂ ಮತ್ತು ಜಾತ್ಯತೀತ ಮತಗಳು ಕೈತಪ್ಪಿದರೆ ಅನನುಕೂಲವಾಗಬಹುದು.  ಗುಜರಾತ್‌ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಮುಖ್ಯವಾದ ವ್ಯತ್ಯಾಸವೊಂದಿದೆ.

ಗುಜರಾತಿನ ಚುನಾವಣೆಯಲ್ಲಿ ಭಾವನೆಯೇ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕರ್ನಾಟಕದ ಸಂದರ್ಭದಲ್ಲಿ ಮತದಾರ ಭಾವನೆಯ ಹಿನ್ನೆಲೆಯಲ್ಲಿ ಮತದಾನ ಮಾಡಿದ ಉದಾಹರಣೆಗಳು ಕಡಿಮೆ. ಹಾಗೊಂದು ವೇಳೆ ಭಾವನೆಯೇ ಮುಖ್ಯವಾಗಿದ್ದರೆ 2013ರಲ್ಲೂ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸಬೇಕಿತ್ತು. ಬಿಜೆಪಿಯ ದುರಾಡಳಿತದಿಂದ ರೋಸಿಹೋಗಿ ಜನರು ಕಾಂಗ್ರೆಸ್‌ನ್ನು ಆರಿಸಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ನ ಲಘು ಹಿಂದುತ್ವ ಸಫ‌ಲವಾಗಬಹುದೇ ಎನ್ನುವುದನ್ನು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next