Advertisement

ದೊಡ್ಡ ಬಳ್ಳಾಪುರ ನಗರಸಭೆಗೆ ಚುನಾವಣೆ ಭಾಗ್ಯ

03:34 PM Aug 12, 2021 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೆಪ್ಟಂಬರ್‌ 3ರಂದು ದಿನಾಂಕ ನಿಗದಿಪಡಿಸಿದ್ದು,ಚುನಾವಣೆ ನಡೆಸಲು ಇದ್ದ ಸಮಸ್ಯೆಗಳು ನಿವಾರಣೆಯಾದಂತಾಗಿವೆ.

Advertisement

ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಎನ್‌.ಆರ್‌.ನಾಗರಾಜ್‌ ಮಾಡಿರುವ ಆದೇಶದ ಅನುಸಾರ ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ಸೆ.3ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಆ.16ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.23 ಕೊನೆಯ ದಿನವಾಗಿದೆ. ಆ.24 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಆ.26 ಕಡೆಯ ದಿನವಾಗಿದೆ.ಚುನಾವಣೆ ಸೆ.3ರಂದು ನಡೆಯಲಿದ್ದು, ಸೆ.6ರಂದು ಮತ ಎಣಿಕೆಗೆ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಚುನಾವಣೆಗಿದ್ದ ಅಡೆತಡೆಗಳ ನಿವಾರಣೆ:ನಗರಸಭೆಯ ಸದಸ್ಯರ ಅಧಿಕಾರ ಅವಧಿ 2019ರ ಮಾ.12ರ ಸಂಜೆ ಮುಕ್ತಾಯವಾಗಿ, ನಗರಸಭೆ ಈಗ ಆಡಳಿತಾಧಿಕಾರಿಗಳ ಸುಪರ್ದಿನಲ್ಲಿದೆ.2ವರ್ಷ 5 ತಿಂಗಳಾಗಿದ್ದರೂ ಚುನಾವಣೆಗೆ ಕಾಲ ಕೂಡಿ ಬಂದಿರಲಿಲ್ಲ. ವಾರ್ಡ್‌ಗಳ ಗಡಿ ನಿಗದಿ, ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸಿದ್ದರೂ ಸಹ ಇದು ಸರಿ ಇಲ್ಲ ಎನ್ನುವುದನ್ನು ಪ್ರಶ್ನಿಸಿ, ಕೆಲವರು ನ್ಯಾಯಾಲಯದ ಮೊರೆ ಹೋದ ಕಾರಣದಿಂದಾಗಿ ನಗರಸಭಾ ಚುನಾವಣೆ ವಿಳಂಬವಾಗುತ್ತಲೇ ಬರುತ್ತಿತ್ತು. ಈಹಿಂದೆ ನಗರಸಭೆಗೆ ಚುನಾವಣಾ ಆಯೋಗದಿಂದ ಏ.27ರಂದು ಚುನಾವಣೆ ನಡೆಸಲು, ಮಾರ್ಚ್‌ 29ರಂದು ವೇಳಾಪಟ್ಟಿಯ ಪ್ರಕಟಣೆ ಹೊರಡಿಸಲಾಗಿತ್ತು. ನಂತರ ಸಂಜೆ ವೇಳೆಗೆ ತಾಂತ್ರಿಕ ಕಾರಣ ನೀಡಿ,
ಚುನಾವಣೆ ವೇಳಾಪಟ್ಟಿಯನ್ನು ಹಿಂದಕ್ಕೆ ಪಡೆದು ಆದೇಶ ಹೊರಡಿಸಿತ್ತು. ವಾರ್ಡ್‌ಗಳ ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಜಿ.ಎಸ್‌.ಸೋಮರುದ್ರ ಶರ್ಮ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೆಲ್ಲವು ಇತ್ಯರ್ಥವಾಗಿ ಚುನಾವಣಾ ದಿನಾಂಕ ಪ್ರಕಟವಾಗುತ್ತದೆ ಎನ್ನುವಷ್ಟರಲ್ಲೇ ಮತ್ತೂಮ್ಮೆ ಲಾಕ್‌ಡೌನ್‌ ಜಾರಿಗೆ ಬಂತು. ಈಗ ವಾರ್ಡ್‌ ತಕರಾರು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಕರೇನಹಳ್ಳಿ ಗಡಿಗೆ ಸಂಬಂಧಿಸಿದಂತೆ ಈ ಹಿಂದಿನ ಮತದಾರರ ಪಟ್ಟಿಯನ್ನು ಪುರಸ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು ಚುನಾವಣೆಗೆ ಇದ್ದ ಆತಂಕಗಳು ನಿವಾರಣೆಯಾದಂತಾಗಿದೆ.

ಇದನ್ನೂ ಓದಿ:ಇಂದಿನಿಂದ ಲಾರ್ಡ್ಸ್ ಕದನ: ಟಾಸ್ ಗೆದ್ದ ಇಂಗ್ಲೆಂಡ್, ಭಾರತ ತಂಡದಲ್ಲಿ ಒಂದು ಬದಲಾವಣೆ

ಗರಿಗೆದರಿದ ರಾಜಕೀಯ ಚಟುವಟಿಕೆಗಳು:

ಡಿಸೆಂಬರ್‌ವರೆಗೂ ಯಾವುದೇ ಚುನಾವಣೆ ನಡೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ರಾಜ್ಯದಲ್ಲಿ ಶಾಲಾ ಕಾಲೇಜು,
ವಾಣಿಜ್ಯ ವ್ಯವಹಾರಗಳಿಗೆ ಕೊರೊನಾ ಅನ್‌ಲಾಕ್‌ ಮಾಡಿರುವ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಲು ಏನು ಅಡ್ಡಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜರೂರಾಗಿ ಚುನಾವಣೆ ದಿನಾಂಕ ಪ್ರಕಟವಾಗಿದೆ.

Advertisement

ಯಾವ ಸಮಯದಲ್ಲದಾರೂ ಚುನಾವಣೆ ನಡೆಯಬಹುದೆಂಬ ನಿರೀಕ್ಷೆಯಿಂದ ವಿವಿಧ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಭೆಗಳನ್ನು
ನಡೆಸಲಾಗುತ್ತಿತ್ತು. ವಿವಿಧ ರಾಜಕೀಯ ಮುಖಂಡರು ತಮ್ಮ ಪಕ್ಷಗಳನ್ನು ಬದಲಾಯಿಸಿ ಇತರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ವಾರ್ಡ್‌ಗಳ ಮೀಸಲಾತಿಯನ್ವಯ ತಾವು ಸ್ಪರ್ಧಿಸುವ ವಾರ್ಡ್‌ಗಳಿಗೆ ಭೇಟಿ ನೀಡಿ ಮತದಾರರನ್ನು ಓಲೈಸುವುದು, ವಾರ್ಡ್‌ಗಳು ತಮಗೊಪ್ಪದಿದ್ದರೆ ನಿರಾಶರಾಗುತ್ತಿರುವುದು ನಡೆಯುತ್ತಿದೆ. ಈಗ ನಗರಸಭೆ ಚುನಾವಣೆ ಘೋಷಣೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.

ನಗರಸಭೆ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಕಾಂಗ್ರೆಸ್‌ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬೇರೆ ಪಕ್ಷದವರು ಸೇರ್ಪಡೆಯಾಗುತ್ತಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರ ಗಮನಕ್ಕೆ ತಂದು ಅಂತಿಮಗೊಳಿಸಲಾಗುವುದು. ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.
-ಟಿ.ವೆಂಕಟರಮಣಯ್ಯ, ಶಾಸಕರು

ಈಗಾಗಲೇ ಆಕಾಂಕ್ಷಿಗಳ ಸಭೆ ನಡೆಸಲಾಗಿದೆ. ಮತದಾರರ ಪಟ್ಟಿ ಅಂತಿಮಗೊಳ್ಳುತ್ತಿದೆ. ಚುನಾವಣೆ ಸಮಯದಲ್ಲಿ ಪಕ್ಷಾಂತರ ಸಹಜ.
ನಗರಸಭೆಯಲ್ಲಿ 2 ಬಾರಿ ಜೆಡಿಎಸ್‌ನಿಂದ ಹೆಚ್ಚಿನ ಸದಸ್ಯರು ಆಯ್ಕೆಯಾಗಿದ್ದು, ಜನರು ಬೆಂಬಲಿಸುವ ವಿಶ್ವಾಸವಿದೆ. ಹಿರಿಯರ ಜೊತೆ ಸಮಾಲೋಚಿಸಿ ಅಭ್ಯರ್ಥಿಗಳಘೋಷಣೆ ಮಾಡಲಾಗುವುದು.
– ವಿ.ಎಸ್‌.ರವಿಕುಮಾರ್‌, ಅಧ್ಯಕ್ಷ, ಜೆಡಿಎಸ್‌ ನಗರ ಘಟಕ

31 ವಾರ್ಡ್‌ಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಪಡೆಯಲಾಗಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರುಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿಗಳ
ಕೊರತೆಯಿಲ್ಲ. ಚುನಾವಣೆ ಎದುರಿಸಲು ಬಿಜೆಪಿ ಪಕ್ಷ ಸಜ್ಜಾಗಿದ್ದು, ಈ ಬಾರಿ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ.
-ಎಚ್‌.ಎಸ್‌.ಶಿವಶಂಕರ್‌, ಅಧ್ಯಕ್ಷ, ಬಿಜೆಪಿ ನಗರ ಘಟಕ

ಮೀಸಲಾತಿ ಪಟ್ಟಿಯಂತೆ ಒಂದೆರಡು ವಾರ್ಡ್‌ಗಳಲ್ಲಿ ಮಾತ್ರ ಒಬ್ಬರೇ ಆಕಾಂಕ್ಷಿಗಳು ಇದ್ದಾರೆ. ಉಳಿದಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಎರಡಕ್ಕಿಂತಲು ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಸಭೆ ನಡೆಸಲಾಗಿದೆ.
-ಕೆ.ಪಿ.ಜಗನ್ನಾಥ್‌, ಅಧ್ಯಕ್ಷ,ಕಾಂಗ್ರೆಸ್‌ ನಗರ ಬ್ಲಾಕ್‌

Advertisement

Udayavani is now on Telegram. Click here to join our channel and stay updated with the latest news.

Next