Advertisement

ಆಸ್ಪತ್ರೆ ಬಂದ್‌ ಮಾಡಿ ಬೀದಿಗಿಳಿದ ವೈದ್ಯರು

12:14 PM Nov 04, 2017 | Team Udayavani |

ಬೀದರ: ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಪೂರ್ವಾಗ್ರಹ ಪೀಡಿತವಾಗಿದ್ದು, ಆಸ್ಪತ್ರೆ, ವೈದ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆರೋಪಿಸಿ ನಗರದಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರನಡೆಸಿದರು.

Advertisement

ಬೀದರ ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಘದ ನೇತೃತ್ವದಲ್ಲಿ ವೈದ್ಯರು ಆಸ್ಪತ್ರೆಗಳನ್ನು ಬಂದ್‌ ಮಾಡಿ ಪ್ರತಿಭಟನೆ
ನಡೆಸಿದರು. ನಗರದ ಐಎಂಎ ಹಾಲ್‌ ನಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ
ನಡೆಸಿ ನಂತರ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಕಾಯ್ದೆ ಜಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅದರಲ್ಲಿನ ಕೆಲ
ಅಂಶಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.

ಕಾಯ್ದೆಯು ವೈಕ್ತಿಕವಾಗಿ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಸಂಪೂರ್ಣ ಘಾಸಿ ಉಂಟುಮಾಡುವ ಈ ಕರಾಳ ತಿದ್ದುಪಡಿಗಳನ್ನು ಜಾರಿಗೆ ತರದಂತೆ ಸಮಸ್ಯೆಯನ್ನು ಬಗೆಹರಿಸಿ ವೈದ್ಯರು ಹಾಗೂ ಜನರನ್ನು ನೆಮ್ಮದಿಯಾಗಿರಸಬೇಕು.  ತಿದ್ದುಪಡಿಗಳನ್ನು ಯಥಾವತ್ತಾಗಿ ನಮ್ಮ ಆಗ್ರಹದ ನಡುವೆಯೂ ಜಾರಿಗೆ ತಂದರೆ ನಾವು ನಮ್ಮ ವೃತ್ತಿಯನ್ನು ತ್ಯಜಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದಂತಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈಗಾಗಲೇ ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್‌ ಕೌನ್ಸಿಲ್‌ಗ‌ಳು ರೋಗಿಗಳಿಗೆ ನ್ಯಾಯ ಒದಗಿಸಲು ಇರುವ ಸಂಸ್ಥೆಗಳಾಗಿದ್ದು, ಜಿಲ್ಲಾ ಮಟ್ಟದಲ್ಲಿ ಮತ್ತೂಂದು ಕುಂದು ಕೊರತೆ ಪರಿಹಾರ ಸಮಿತಿಯ ರಚನೆಯ ಅವಶ್ಯಕತೆ ಇಲ್ಲ. ತಿದ್ದುಪಡಿ ಜಾರಿಗೆ ಬಂದಲ್ಲಿ ಮತ್ತಷ್ಟು ದೂರುಗಳು ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಳವಾಗಿ, ವೈದ್ಯ ಚಿಕಿತ್ಸೆ ನೀಡುವುದನ್ನು ಬಿಟ್ಟು ಈ ಸಂಸ್ಥೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು ಮಾನಸಿಕವಾಗಿ ಜರ್ಝರಿತರಾಗಿ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಮಿತಿಯನ್ನು ತಿದ್ದುಪಡಿಯಿಂದ ಕೈ ಬಿಡಬೇಕು ಎಂದು ಆಗ್ರಹಿಸಲಾಗಿದೆ.

ಚಿಕಿತ್ಸೆ ವೈಫಲ್ಯದಿಂದಾಗಲೀ, ಆಸ್ಪತ್ರೆಯ ವೆಚ್ಚಗಳ ಏರುಪೇರಿನ ಕಾರಣಕ್ಕೆ ಜೈಲುಶಿಕ್ಷೆ ಮತ್ತು ಜುಲ್ಮಾನೆ ಎಂದಾದಲ್ಲಿ, ಸದುದ್ದೇಶದಿಂದ ಚಿಕಿತ್ಸೆ ನೀಡಿದ ತಪ್ಪಿಗೆ ಅಕಸ್ಮಾತ್‌ ಅನಾಹುತಗಳಾದಲ್ಲಿ ವೈದ್ಯ ಜೈಲುಪಾಲಾಗುವುದು ಎಷ್ಟರ ಮಟ್ಟಿಗೆ ಸರಿ. ಪವಿತ್ರ ವೈದ್ಯ ವೃತ್ತಿಗೆ ಅಗೌರವ ತೋರುವುದು ಸಾಧುವಲ್ಲ. ಕಾಯಿದೆ-ಕಟ್ಟಳೆಗಳಿಂದ ಕೌಶಲ್ಯಯುತ ವೃತ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಜೈಲುಶಿಕ್ಷೆ ಮತ್ತು ದಂಡಗಳ ಭಯದಿಂದ ಹಲವು ಕಾರಣಗಳನ್ನು ನೀಡಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಮತ್ತೂಂದು ಆಸ್ಪತ್ರೆಗೆ ಕಳುಹಿಸುವ ಪರಿಸ್ಥಿತಿ ಉದ್ಭವವಾಗುತ್ತದೆ. ಇದು ರೋಗಿಗಳೂ ಮತ್ತವರ ಕುಟುಂಬದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ. 

Advertisement

ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕಾದರೆ, 2010ರಲ್ಲಿ ಯುಪಿಎ ಸರ್ಕಾರವೇ ಜಾರಿಗೆ ತಂದಿರುವ ಕೇಂದ್ರದ ಕ್ಲಿನಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್‌ನು ಜಾರಿಗೆ ತನ್ನಿ. ಕೇರಳ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಇದರ ಪ್ರಕಾರ ಸರ್ಕಾರಿ ಆಸ್ಪತ್ರೆಗಳೂ ಕೂಡ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ಸಲಹೆ ನೀಡಲಾಗಿದೆ.

ಚಿಕಿತ್ಸೆ ಸಿಗದೇ ರೋಗಿಗಳ ಪರದಾಟ

ಬೀದರ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ (ಕೆಪಿಎಂಇ) ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸಿ ಶುಕ್ರವಾರ ರಾಜ್ಯಾದ್ಯಂತ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಬಿಸಿ ಗಡಿ ಜಿಲ್ಲೆ ಬೀದರಗೂ ತಟ್ಟಿದ್ದು, ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಇ ಕಾಯ್ದೆ ವಿರುದ್ಧ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಸುಮಾರು 300ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿತ್ತು.
ಆಸ್ಪತ್ರೆ ಹೊರಗೆ ಚಿಕಿತ್ಸೆಗಾಗಿ ವೈದ್ಯರು ಅಲಭ್ಯ, ಆಸ್ಪತ್ರೆ ಬಂದ್‌ ಕುರಿತು ನೋಟಿಸ್‌ ಅಂಟಿಸಲಾಗಿತ್ತು. ವೈದ್ಯರ ಮುಷ್ಕರ ಕುರಿತು ಮಾಹಿತಿ ಇಲ್ಲದ ರೋಗಿಗಳು ಆಸ್ಪತ್ರೆಗೆ ಬಂದು ಹಿಂದಿರುಗುವಂತಾಯಿತು.

ಶುಕ್ರವಾರ ಬೆಳಗ್ಗೆ 8ಗಂಟೆಯಿಂದ ಶನಿವಾರ ಬೆಳಗ್ಗೆ 8ಗಂಟೆ ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗಿದೆ. ಮುಷ್ಕರದಲ್ಲಿ ಭಾಗವಹಿಸಿದ್ದ ವೈದ್ಯರು ತುರ್ತು ಸೇವೆ ನೀಡಿದ್ದು,
ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಇದರಿಂದ ಹಲವೆಡೆ ರೋಗಿಗಳು ಚಿಕಿತ್ಸೆಗಾಗಿ ಅಲದಾಡುವಂಥ ಸ್ಥಿತಿ ಎದುರಾಯಿತು.

ಖಾಸಗಿ ಆಸ್ಪತ್ರೆಗಳ ಬಂದ್‌ ಹಿನ್ನೆಲೆಯಲ್ಲಿ ಬಹುತೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾಯಿತು. ಆದರೆ, ಅಲ್ಲಿಯೂ ವೈದ್ಯರ ಕೊರತೆ ಕಂಡು ಬಂದಿತು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಆರೋಗ್ಯ ಇಲಾಖೆ ಹೇಳಿಕೆ ನೀಡಿತ್ತಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸೌಲಭ್ಯಕ್ಕಾಗಿ ರೋಗಿಗಳು ಪರದಾಡಿದರು. ತೀವ್ರ ಅಸ್ವಸ್ಥಗೊಂಡ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಹೈದ್ರಾಬಾದ್‌ಗೆ ಸಾಗಿಸುತ್ತಿದ್ದ ದೃಶ್ಯಗಳು ಕಂಡುಬಂದವರು.

Advertisement

Udayavani is now on Telegram. Click here to join our channel and stay updated with the latest news.

Next