Advertisement

ಸರ್ಕಾರಕ್ಕೆ ಗೊತ್ತೇ ಯುವಜನರ ಆದ್ಯತೆ?

08:15 AM Feb 11, 2018 | |

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಬಲೀಕರಣ ಎಂಬ ಪದವನ್ನು ಸರ್ಕಾರ ಮರೆತೇ ಹೋಗಿದೆ. ಕ್ರೀಡೆಗೊಂದಿಷ್ಟು ಹಣ ನೀಡಿದರೆ ಯುವಜನರ ಸಬಲೀಕರಣ ಸಾಧ್ಯವೇ? ಹೋಗಲಿ, ನೀಡಿರುವ ಈ ಪ್ರಮಾಣದ ಅನುದಾನದಿಂದ ಕ್ರೀಡಾ ಕ್ಷೇತ್ರದಲ್ಲಾದರೂ ಯುವಜನರು ಗಣನೀಯ ಸಾಧನೆ ಮಾಡಲು ಸಾಧ್ಯವೇ?

Advertisement

ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿದ ಯುವ ದೇಶ ನಮ್ಮದು ಎಂದು ಬೀಗುತ್ತಿದ್ದೇವೆ. ಇದು ಅತಿಶಯೋಕ್ತಿ ಏನಲ್ಲ. ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 35ಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ ಶೇ. 65ರಷ್ಟಿದೆ. ಹಾಗಾಗಿ ದೇಶದ ಅಭಿವೃದ್ಧಿಗೆ ಚಿಂತಿಸುವ ಎಲ್ಲರ ಕಣ್ಣು ಈ ದೊಡª ಪ್ರಮಾಣದ ಯುವಜನರ ಮೇಲೆ ನೆಟ್ಟಿದೆ. ದೇಶದ ಅಭಿವೃದ್ಧಿ ನಿಮ್ಮನ್ನೇ ಅವಲಂಬಿಸಿದೆ ಎಂದು ಬೊಗಳೆ ಬಿಟ್ಟು, ಯುವಜನ ಸಬಲೀಕರ ಣದ ಅರ್ಥವನ್ನೇ ತಿಳಿಯದ ರಾಜಕೀಯ ನೇತಾರರಿಂದ ಹಿಡಿದು, ಯುವಜನರನ್ನು ಯುವ ಸಂಪನ್ಮೂಲವನ್ನಾಗಿ ರೂಪಿ ಸುವ ಮಹತ್ತರ ಹೊಣೆಹೊತ್ತ ಪ್ರೊಫೆಸರ್‌ಗಳವರೆಗೆ ಎಲ್ಲರೂ ಯುವಜನರನ್ನು ಕೊಂಡಾಡುವವರೇ.  

ಹಾಗಾದಲ್ಲಿ ದೇಶದ ಭವಿಷ್ಯ ನಿರ್ಧರಿಸಬಲ್ಲ ಈ ಯುವ ಸಮುದಾಯದ ವಾಸ್ತವಗಳೇನು? ಅವರೆದುರು ಇರುವ ಸಾಧ್ಯತೆ ಸವಾಲುಗಳೇನು? ಅವರನ್ನು ಸಮರ್ಥ ಯುವ ಸಂಪನ್ಮೂಲ ವನ್ನಾಗಿ ರೂಪಿಸಲು ಅಗತ್ಯವಾದ ಪ್ರಕ್ರಿಯೆಗಳೇನು? ಎಂಬುದನ್ನು ನಮ್ಮ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು, ನೀತಿನಿರೂಪಕರು ಸರಿಯಾಗಿ ಗ್ರಹಿಸಿದ್ದಾರೆಯೇ? ಎಂಬುದು ಯುವಜನರ ಮುಂದಿರುವ ಪ್ರಶ್ನೆ. 

ಈ ಎಲ್ಲಾ ಪ್ರಶ್ನೆಗಳ ನಡುವೆ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ 2018ರ ಆಯವ್ಯಯದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಈ ಕೆಳಕಂಡಂತೆ ಅನುದಾನ ಘೋಷಿಸಿದೆ-ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 429.56 ಕೋಟಿ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ 342 ಕೋಟಿ, ಕ್ರೀಡಾಪಟುಗಳ ಕ್ಷೇಮಾಭಿವೃದ್ಧಿ ನಿಧಿಗೆ 374 ಕೋಟಿ, ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕಕ್ಕೆ 10 ಕೋಟಿ, ಕ್ರೀಡಾ ವಿಜಾnನ ಮತ್ತು ಸಂಶೋಧನೆ ರಾಷ್ಟ್ರೀಯ ಕೇಂದ್ರಕ್ಕೆ 40 ಕೋಟಿ, ರಾಷ್ಟ್ರೀಯ ಕ್ರೀಡಾ ತರಬೇತಿ ಕೇಂದ್ರಕ್ಕೆ 30 ಕೋಟಿ ಮತ್ತು ಮಣಿಪುರ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ 65 ಕೋಟಿ. 

ಇನ್ನು ನಮ್ಮ ಕರ್ನಾಟಕ ಸರ್ಕಾರ ಕಳೆದ ವರ್ಷ ಮಂಡಿಸಿದ ಆಯವ್ಯಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಟ್ಟು 285 ಕೋಟಿ ರೂ ಘೋಷಿಸಿದ್ದು ಅಷ್ಟೂ ಕ್ರೀಡೆಗೆ ಮೀಸಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಬಲೀಕರಣ ಎಂಬ ಪದವನ್ನು ಸರ್ಕಾರ ಮರೆತೇ ಹೋಗಿದೆ. ಕ್ರೀಡೆಗೊಂದಿಷ್ಟು ಹಣ ನೀಡಿದರೆ ಯುವಜನರ ಸಬಲೀಕರಣ ಸಾಧ್ಯವೇ? ಯುವಜನರಿಗೆ ಕ್ರೀಡೆ ಮಾತ್ರ ಆದ್ಯ ತೆಯೇ? ಹೋಗಲಿ, ನೀಡಿರುವ ಈ ಪ್ರಮಾಣದ ಅನುದಾನ ದಿಂದ ಕ್ರೀಡಾ ಕ್ಷೇತ್ರದಲ್ಲಾದರೂ ಯುವಜನರು ಗಣನೀಯ ಸಾಧನೆ ಮಾಡಲು ಸಾಧ್ಯವೇ? ಕರ್ನಾಟಕದಲ್ಲಿ 1.80 ಕೋಟಿ ಯುವಜನರಿದ್ದಾರೆ. 2012ರ ಕರ್ನಾಟಕ ರಾಜ್ಯ ಯುವ ನೀತಿಯೇ ಸ್ಪಷ್ಟಪಡಿಸುವಂತೆ ರಾಜ್ಯದ ಶೇ. 24ರಷ್ಟು ಯುವಜನತೆ ಅನಕ್ಷರಸ್ಥರು.  ಇದರಲ್ಲಿ ಶೇ. 65ರಷ್ಟು ಯುವತಿಯರು ಎಂಬುದು ಆಘಾತಕಾರಿ ಸಂಗತಿ. ಶೇ 54ರಷ್ಟು ಯುವಜನತೆ ಎಸ್‌.ಎಸ್‌.ಎಲ್‌.ಸಿ. ನಂತರ ಔಪಚಾರಿಕ ಶಿಕ್ಷಣದಿಂದ ವಂಚಿñ ‌ರಾಗಿದ್ದಾರೆ. ಶೇ. 87ರಷ್ಟು ಯುವಜನತೆ ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಈ ಆಶ್ಚರ್ಯಕರ ಅಂಕಿ-ಅಂಶಗಳು ಉನ್ನತ ಶಿಕ್ಷಣಕ್ಕೆ ನೋಂದಣಿ ಯಾಗುವ (ಗ್ರಾಸ್‌ ಎನ್‌ರೋಲ್‌ಮೆಂಟ್‌) ಯುವಜನರ ಅಧ್ಯಯನದಿಂದ ತಿಳಿದುಬಂದಿದೆ. ಅಭಿವೃದ್ಧಿ ಪರಿಧಿಯ ಅಂಚಿನಲ್ಲಿರುವ ಶೇ 76ರಷ್ಟು ಯುವಜನತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ. 

Advertisement

ಈ ಅಂಕಿ-ಅಂಶಗಳು ಗ್ರಾಮೀಣ ಹಿನ್ನೆಲೆಯ, ಗರಿಷ್ಟ ಪ್ರಮಾ ಣದ ಯುವಜನರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಯೋಜನೆಯ ಅವಶ್ಯಕತೆ ಇದೆ ಮತ್ತು ಆರ್ಥಿಕ ಸಬಲೀಕರಣ ಬಹುಮುಖ್ಯ ಆದ್ಯತೆ ಎಂಬುದನ್ನು ಒತ್ತಿ ಹೇಳುತ್ತವೆ. 

ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಯುವಜನರ ಕೌಶಲ್ಯಾ ಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿವೆ. ನಮ್ಮ ಕೇಂದ್ರ ಸರ್ಕಾರ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಗಳನ್ನು ತೆರೆಯುವ ಮತ್ತು 2020ರ ವೇಳೆಗೆ 50 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಿದೆ. ಪ್ರಶ್ನೆ ಇರುವುದು ಈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸ್ವರೂಪ ಎಂಥದ್ದು ಎನ್ನುವ ಬಗ್ಗೆ. ಈಗಾಗಲೇ ಯುವಜನರು ಹಳ್ಳಿ ಬಿಟ್ಟು ಹೊಟ್ಟೆಪಾಡಿಗಾಗಿ ನಗರಗಳತ್ತ ಮುಖಮಾಡಿದ್ದಾರೆ. ಸರ್ಕಾರಗಳೂ ಕೂಡ ಕೌಶಲ್ಯಾಭಿವೃದ್ಧಿಯ ಹೆಸರಿನಲ್ಲಿ ಯುವಜನರನ್ನು ನಗರಗಳಿಗಟ್ಟಿ ಹಳ್ಳಿಗಳನ್ನು ಸ್ಮಶಾನಗಳನ್ನಾಗಿ ಸದಿದ್ದರೆ ಸಾಕು. 

ಯುವಜನರನ್ನು ವ್ಯಾಪಕವಾಗಿ ಕಾಡುತ್ತಿರುವ ನಿರುದ್ಯೋಗ, ಶಿಕ್ಷಣೋದ್ಯಮದ ಆರ್ಥಿಕ ಪೆಟ್ಟು, ಕೌಶಲ್ಯಹೀನತೆ, ವಿದ್ಯಾಭ್ಯಾಸ ಮತ್ತು ಉದ್ಯೋಗದ ನಡುವಿನ ಸಹಸಂಬಂಧದ ಕೊರತೆ, ಸಾರ್ವಜನಿಕ ಸೇವೆಗಳ ಹೊರಗುತ್ತಿಗೆ, ನಿವೃತ್ತಿಯ ವಯಸ್ಸನ್ನು ಹೆಚ್ಚಿಸುವಂಥ ಯುವಜನ ವಿರೋಧಿ ನೀತಿಗಳು, ನಗರ ವಲಸೆ, ವ್ಯಾಪಕ ಉದ್ಯೋಗ ಸೃಷ್ಟಿಸಬಲ್ಲ ಕೃಷಿ ಕ್ಷೇತ್ರದ ಕಡೆಗಣನೆ, ಈ ಎಲ್ಲದರ ಹಿನ್ನೆಲೆಯಲ್ಲಿ ಯುವಜನರ ಮಾನಸಿಕ ಅರೋಗ್ಯದ ಮೇಲಿನ ನಕಾರಾತ್ಮಕ ಪರಿಣಾಮಗಳು ಮತ್ತು ಆತ್ಯಹತ್ಯೆಗಳ ಹೆಚ್ಚಳ ಹೀಗೆ ಹಲವಾರು ಸವಾಲುಗಳು, ಯುವಜನರಿಂದ ಅಭಿವೃದ್ಧಿ ನಿರೀಕ್ಷೆ ಮಾಡುವವರಿಗೆ ಕಾಣದಿ ರುವುದು ದುರದೃಷ್ಟಕರ. 

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ಯುವಜನತೆ 2018-19ನೇ ಸಾಲಿನ ರಾಜ್ಯದ ಆಯವ್ಯಯವನ್ನು ಎದುರು ಗೊಳ್ಳಲಿದ್ದಾರೆ. ಈಗಲಾದರೂ ಯುವಜನರ ಆದ್ಯತೆಯನ್ನು ಸರ್ಕಾರ ಸರಿಯಾಗಿ ಗ್ರಹಿಸುತ್ತದೆಯೇ ಕಾದು ನೋಡಬೇಕಿದೆ. ಇಲ್ಲವಾದರೆ ಆಳುವ ವ್ಯವಸ್ಥೆ ಮುಂದೆ ಇದಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ.

ತಿಪ್ಪೇಸ್ವಾಮಿ ಕೆ.ಟಿ.

Advertisement

Udayavani is now on Telegram. Click here to join our channel and stay updated with the latest news.

Next