Advertisement

ಈಗ ನಿನಗೂ ಹಾಗೇ ಅನ್ನಿಸ್ತಾ ಇದೆಯಾ?

12:24 PM Aug 04, 2020 | mahesh |

ಆ ದಿನ ನಾನು ನನ್ನ ಮನೆಗೆ, ನೀನು ನಿನ್ನೂರಿಗೆ ಹೋದದ್ದು ಈ ರೀತಿ ದೀರ್ಘ‌ ಬೇರ್ಪಡಿಸುವಿಕೆಗೆ ನಾಂದಿ ಹಾಡುತ್ತದೆ ಅಂತ ಗೊತ್ತೇ ಆಗಲಿಲ್ಲ. ಮರೆಯಲಿ ಹೇಗೆ ಆ ದಿನವನ್ನ? ಸಾಧ್ಯವಿಲ್ಲ. ಆ ದಿನವೇ ಮೊದಲು ಮತ್ತೆ ಕೊನೆ ಎನ್ನಬಹುದು. ಮುಂದೆ ಜೀವನದಲ್ಲಿ ಹಾಗೆ ಎಂದೂ ಆಗಲಿಲ್ಲ. ಹೀಗಾದದ್ದು ವಿಚಿತ್ರ ಅಂದ್ರೂ ನಿಜ. ಯಾರ್ಯಾರ್‌ ಜೀವನದಲ್ಲಿ ಘಟನೆಗಳು ಹೇಗೆ ಘಟಿಸುತ್ತವೆ ಅಂತ ಹೇಳಲು ತುಂಬಾ ಕಷ್ಟ. ಅಂದು ನೀ ವಾರ್ಷಿಕ ಪರೀಕ್ಷೆಯ ನಂತರ ನಮ್ಮ ಮನೆಗೆ ಬಂದಿದ್ದೆ . ಮೇಲಿಂದ ಮೇಲೆ ಬರೋದು ನಿನಗೆ ರೂಢಿ.

Advertisement

ಬೆಳ್ಳಂಬೆಳಿಗ್ಗೆ ದುಂಡು ಮಲ್ಲಿಗೆಯ ಮೊಗ್ಗಿನ ಮಾಲೆಯನ್ನು ಮನೆಯವರಿಗೆಲ್ಲ ಸಾಲುವಂತೆ, ಮಾರುಗಟ್ಟಲೆ ತಂದುಕೊಟ್ಟಿದ್ದೆ. ಮನೆಯವರೆಲ್ಲರೂ ಪರಿಚಯ ನಿನಗೆ. ಅವರ ಕಣ್ಣಲ್ಲಿ ಒಳ್ಳೆಯ ಹುಡುಗ ಎಂಬ ಮುದ್ರೆ ಆಗಲೇ ಬಿದ್ದಾಗಿತ್ತು. ಅಭ್ಯಾಸದ ವಿಷಯಕ್ಕೆ ಸಂಬಂಧಿಸಿದ ಬುಕ್ಸ್, ನೋಟ್ಸ್ ಗಳನ್ನು, ನಾ ಕೇಳದಿದ್ದರೂ ತಂದುಕೊಟ್ಟು ಓದು, ಚೆನ್ನಾಗಿ ಬರೆ ಎಂದಿದ್ದೆ. ಅವತ್ತು, ಹಾಗೆಯೇ ತುಸುಹೊತ್ತು ನಿನ್ನ ಜೊತೆ ನಡೆದರಾಯ್ತು ಎಂದು, ಅಲ್ಲೇ ಸಮೀಪದಲ್ಲಿದ್ದ ರಾಘವೇಂದ್ರರ ದೇವಾಲಯವನ್ನು ಹೊಕ್ಕಿದ್ದಾಯ್ತು. ಗಂಟೆ ಬಾರಿಸಿ, ಕೈಮುಗಿದು, ತೀರ್ಥ ಸ್ವೀಕರಿಸಿ, ಎರಡು ಸುತ್ತು ಪ್ರದಕ್ಷಿಣೆ ಹಾಕಿ ಕುಂತಾಗ, ಅಲ್ಲೇ ಗಿಡದಲ್ಲಿ ಆಟವಾಡುತ್ತಿದ್ದ ಗುಬ್ಬಚ್ಚಿಗಳ ಕಲರವ ಮನಸೂರೆಗೊಂಡಿತ್ತು.

ಪ್ರತಿದಿನದಂತೆ ಆ ದಿನವೂ ಇದ್ದರೂ, ಹೇಳಲಾಗದ ಏನೋ ವಿಶೇಷವಿದೆ ಅನಿಸುತ್ತಿತ್ತು. ಅವತ್ತು ನಾವಿಬ್ಬರೂ ಮುಂಬರುವ ಪರೀಕ್ಷೆಯ ಫ‌ಲಿತಾಂಶದ ಬಗ್ಗೆ
ಮಾತನಾಡಿದೆವೇ ಹೊರತು ಬೇರೇನೂ ಇಲ್ಲ. ಕ್ಲಾಸ್‌ನಲ್ಲಿ ಸಹಪಾಠಿಯಾದ ನಿನ್ನ ಜೊತೆ, ಹೆಸರಿಸಲಾಗದ ಬಂಧ. ಮುಂದಿನ ವಿದ್ಯಾಭ್ಯಾಸ ಮತ್ತು ಕೆಲಸಕ್ಕೆ ನೀನು ಬೆಂಗಳೂರಿಗೆ ಹೋಗು ವುದು ಪಕ್ಕಾ ಆಗಿತ್ತು. ಕ್ಷಣಕಾಲ ದೇವಾಲಯದಲ್ಲಿ ಕಳೆದು ಮತ್ತೆ ಮನೆಗೆ ಬರುವಾಗ ಮತ್ತೆ ಮೌನ. ಕಾಲ ಹೆಜ್ಜೆಗಳಿಗೆ ಗಿಡಮರಗಳೇ ಸಾಥ್‌ ನೀಡಿದ್ದವು. ನಿನ್ನಲ್ಲಿರುವ ಎಲ್ಲಾ ಭಾವನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಮುಂದೆ ಇಬ್ಬರೂ ಮುಂದಿನ ಅಭ್ಯಾಸ, ವೃತ್ತಿ ಎಂದು ಬಿಜಿಯಾಗಿ, ನಮ್ಮ ನಮ್ಮ ಲೋಕದಲ್ಲಿ ಕಳೆದುಹೋದೆವು.

ಆಗೊಮ್ಮೆ ಈಗೊಮ್ಮೆ ಉಭಯ ಕುಶಲೋಪರಿಯ ಪತ್ರಗಳು ಸಂದಾಯವಾಗುತ್ತಿದ್ದವು. ಕಾಲಚಕ್ರದ ಉರುಳುವಿಕೆಯಲ್ಲಿ, ಮುಂದಿನ ದಿನಗಳಲ್ಲಿ ಆಶ್ಚರ್ಯ ಎನ್ನುವಂತೆ ಪತ್ರಗಳೂ ದೀರ್ಘ‌ ವೇಳೆಯ ಬೇರ್ಪಡಿಸುವಿಕೆ ಡಿಟ್ಯಾರ್ಜೆಂಟನ್ನು ಹುಟ್ಟಿಸಿತ್ತು. ಜೀವನದಲ್ಲಿ ಏನು ನಡೀತಾ ಇದೆ ಎಂದು ಕೇಳುವ ಉತ್ಸುಕತೆಯೂ ಆಗ ಇರಲಿಲ್ಲ. ದಿನಗಳು ಉರುಳುತ್ತಾ ಹೋದವು. ನಾನು ವೃತ್ತಿ, ಮದುವೆ- ಮಕ್ಕಳೆಂದು ನಿರತಳಾದರೆ, ನಿನ್ನದು ಏನೂ ಗೊತ್ತಾಗಲಿಲ್ಲ. ಆ ದಿನ ನಾನು ನನ್ನ ಮನೆಗೆ, ನೀನು ನಿನ್ನೂರಿಗೆ ಹೋದದ್ದು ಈ ರೀತಿ ದೀರ್ಘ‌ ಬೇರ್ಪಡಿಸುವಿಕೆಗೆ ನಾಂದಿ ಹಾಡುತ್ತದೆ ಅಂತ ಗೊತ್ತೇ ಆಗಲಿಲ್ಲ. ಮಾತುಗಳು ಎಷ್ಟೊಂದು ಆಡದೇ ಉಳಿದವು. ಭಾವನೆಗಳು ಒಳಗೇನೇ ಖುದ್ದು, ನಂದಿ ಹೋದವು.

ಉಸಿರಾಡಲೂ ಪುರಸೊತ್ತಿಲ್ಲ ಎನ್ನುವ ಘಳಿಗೆ ಸ್ವಲ್ಪ ವೇಳೆ ಕೊಟ್ಟಾಗ ನೀನು ನೆನಪಾಗುತ್ತೀಯಾ. ಈಗ ಅನಿಸ್ತಿದೆ ಕಣೋ; ಅಂದು ನೀನಾದರೂ ಮಾತನಾಡಬೇಕಿತ್ತು. ಇಬ್ಬರಲ್ಲಿಯೂ ವೈರುಧ್ಯಕ್ಕಿಂತ ಸಾಮ್ಯತೆಯೇ ಹೆಚ್ಚಾಗಿತ್ತು. ಪ್ರೀತಿ ಅಂತಾ ಹೆಸರಿಸಲಾಗದಿದ್ದರೂ, ಆತ್ಮೀಯತೆ ಇತ್ತು. ಈ ಆತ್ಮೀಯತೆಯಿಂದ, ನಮ್ಮಿಬ್ಬರದು ಸಖತ್‌ ಜೋಡಿ ಆಗುತ್ತಿತ್ತೇನೋ? ಇದು ಬರೀ ನನ್ನ ಕಲ್ಪನೆ ಆಗಿರಬಹುದು ಅಥವಾ, ಈಗ ನಿನಗೂ ಹಾಗೇ ಅನಿಸುತ್ತಾ?

Advertisement

ಮಾಲಾ ಮ. ಅಕ್ಕಿಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next