Advertisement

ಬಹುರೂಪಿ ವಾತಾಪಿ (ಬಾದಾಮಿ) ಸಮಸ್ಯಾನಾಂ ಭಜೆ..

04:56 PM May 14, 2018 | |

ಬಾದಾಮಿ: ಹೆಸರು ಬೀರಪ್ಪ, ನಾನು ಕುರಿ ಕಾಯೋನು, ನನಗೆ ರಾಜಕೀಯ ಗೊತ್ತಿಲ್ಲ. ಆದ್ರ ಯಾರರ ಗೆದಿಲಿ ನಾವು ಕೊಟ್ಟ ಓಟಿಗೆ ನಮ್ಮಂತಾ ಬಡವರ ಉಪಕಾರನ್ನ ಅವರು ನೆನಪಿಟ್ರ ಸಾಕು… ನನ್ನ ಹೆಸರು ಬಸವಂತಪ್ಪ ಹಿರೇಮನಿ. ನಾನು ಕೃಷಿ ಮಾಡಿ ಜೀವನಾ ಮಾಡಾತಿದ್ದೀನಿ. ಆದ್ರ ಜೀವನ ಪರ್ಯಂತ ಬ್ಯಾಂಕ್‌ ಬಡ್ಡಿ ತುಂಬಿರೋ ನಮಗೆ ರೈತರ ಸಾಲ ಮನ್ನಾ ಮಾಡಿದ್ರ ಅದೇ ಅವರು ನಮಗೆ ಮಾಡೋ ದೊಡ್ಡ ಉಪಕಾರ… ನನ್ನ ಹೆಸರು ಮಲ್ಲವ್ವ. ಯಪ್ಪಾ ಮೊದಲ ಕುಡಿಯಾಕ್‌ ನೀರ ಕೊಡ್ಲಿ ಸಾಕು….ನಾಲ್ಕ ಸಣ್ಣ ಮಕ್ಕಳನ್ನ ಕಟ್ಟಕೊಂಡು ನಮ್ಮಂತ ಹೆಣ್ಣುಮಕ್ಕಳು ಜೀವನಾ ಮಾಡೋದ ಹ್ಯಾಂಗ್‌…

Advertisement

ಹೌದು. ಹಕ್ಕು ಚಲಾವಣೆ ಬಳಿಕ ಇಲ್ಲಿನ ಮತದಾರ ಪ್ರಭುಗಳು ರಾಜಕೀಯ ನಾಯಕರಿಗೆ ಹೇಳುವ ಮಾತು ಒಂದೇ. ನೀವು ಯಾರಾದ್ರು ಗೆಲ್ಲರ್ರಿ. ಆದ್ರ ನಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸಿ ಸಾಕು ಎಂಬುದು. ಕುರಿ ಕಾಯುವ ಕುರುಬರು, ಕೂಲಿ ಮಾಡುವ ವಾಲ್ಮೀಕಿಗಳು, ಕೃಷಿ ಮಾಡುವ ರೈತರು ಒಟ್ಟಾರೆ ಬಡವರು…ಹೀಗೆ ಎಲ್ಲರದ್ದೂ ಒಂದೇ ಬೇಡಿಕೆ.
ನಮ್ಮ ಉಪಕಾರಕ್ಕೆ ಅಪಕಾರ ಮಾಡಿದಿದ್ದರೆ ಸಾಕು.. ಸಮಸ್ಯೆಗಳು ನೂರು: ಬಾದಾಮಿ ಕ್ಷೇತ್ರದಲ್ಲಿ ಸಮಸ್ಯೆಗಳ ಪಟ್ಟಿ ಮಾಡಿದರೆ ಅದು ತುಳಸಿಗೇರಿ ಹನುಮಂತನ ಬಾಲದಷ್ಟೇ ದೊಡ್ಡದಾಗಿ ಬೆಳೆಯುತ್ತದೆ. ಇಲ್ಲಿನ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರು ಸರಿಯಾಗಿ
ಸಿಕ್ಕುತ್ತಿಲ್ಲ. ಮಲಪ್ರಭಾ ನದಿ ಪಕ್ಕದಲ್ಲಿಯೇ ಇರುವ ಗ್ರಾಮಗಳಲ್ಲಿ ಇಂದಿಗೂ ಬೇಸಿಗೆಯಲ್ಲಿ ನದಿಯಲ್ಲಿ ಮರುಳು ಕೆದರಿ ವರತೆ ನಿರ್ಮಿಸಿ ನೀರು ತುಂಬುವ ಸ್ಥಿತಿ ಇದೆ. ರಸ್ತೆಗಳ್ಳೋ ದೇವರಿಗೆ ಪ್ರೀತಿ. ಪಕ್ಕದಲ್ಲಿಯೇ ಸಿಕ್ಕುವ ಕಲ್ಲನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ರಸ್ತೆ,
ಒಳಚರಂಡಿ ಮತ್ತು ಸುಂದರ ವೃತ್ತಗಳನ್ನು ನಿರ್ಮಿಸಲು ಅವಕಾಶವಿದ್ದರೂ ಈವರೆಗೂ ಯಾವ ಸರ್ಕಾರಗಳು ಈ ಬಗ್ಗೆ ಗಮನಹರಿಸಿಲ್ಲ.

ರಾಷ್ಟ್ರೀಯ ಹೆದ್ದಾರಿಯಿಂದ ಬಾದಾಮಿ ಸಂಪರ್ಕಿಸುವ ಯಾವ ರಸ್ತೆಯೂ ಇನ್ನೂ ಪರಿಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. ಕೊಣ್ಣೂರು- ಗೋವನಕೊಪ್ಪ-ಹೆಬ್ಬಳ್ಳಿ-ಚೊಳಚಗುಡ್ಡ ಮೂಲಕ ಬಾದಾಮಿ ಸೇರುವ ರಸ್ತೆ ಕಥೆಯೂ ಅಷ್ಟೇ. ಇನ್ನು ಹುಳೇದಗುಡ್ಡ-ಬಾದಾಮಿ ರಸ್ತೆ ಸುಸ್ಥಿತಿಯಲ್ಲಿಲ್ಲ. ಕೆರೂರು, ಬಾದಾಮಿ ಮತ್ತು ಗುಳೇದಗುಡ್ಡದಂತಹ ದೊಡ್ಡ ಊರುಗಳ ಮೂಲ ಸೌಕರ್ಯಗಳ ಬಗ್ಗೆ
ಮಾತನಾಡುವಂತಿಲ್ಲ. ಎಲ್ಲೆಡೆಯೂ ಗಬ್ಬು ವಾಸನೆ, ಬಹಿರ್ದೆಸೆ ಕೊಮುಟು ವಾಸನೆ, ಎಲ್ಲೆಂದರಲ್ಲಿ ನೂಕಿ ಬಿಸಾಕಿರುವ ತಿಪ್ಪೆಗುಂಡಿಗಳು..ಬಾದಾಮಿಯ ಅಸಲಿ ಚಿತ್ರಣವನ್ನು ಬಿಚ್ಚಿಡುತ್ತವೆ.

ಪ್ರವಾಸೋದ್ಯಮವೆಲ್ಲಿ?: ನಂದಿಕೇಶ್ವರ, ಚೊಳಚಗುಡ್ಡ, ಬನಶಂಕರಿ, ಬಾದಾಮಿ 1500 ವರ್ಷಗಳ ಹಿಂದೆ ಸಂಪದ್ಭರಿತವಾಗಿದ್ದವು. ಆದರೆ ಇಂದು ಇಲ್ಲಿ ಮೂಲ ಸೌಕರ್ಯಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗುಹಾಂತರ ದೇವಾಲಯ ಮತ್ತು ಇತಿಹಾಸ ಪ್ರಸಿದ್ಧ ರಾಜಮನೆತನದಿಂದಾಗಿ ವಿಶ್ವದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಇಲ್ಲಿನ 10ಕ್ಕೂ ಹೆಚ್ಚು ಸ್ಥಳಗಳಿಗೆ ಇಂದಿಗೂ ಉತ್ತಮ ಸಂಪರ್ಕ ಕಲ್ಪಿಸುವ ರಸ್ತೆಗಳು ನಿರ್ಮಾಣಗೊಂಡಿಲ್ಲ. ಪ್ರವಾಸೋದ್ಯಮ ದೃಷ್ಠಿಯಿಂದಲೂ ಬಾದಾಮಿ, ಐಹೊಳೆ, ಪಟ್ಟದಕಲ್ಲು,
ಮಹಾಕೂಟದಲ್ಲಿ ಮೂಲ ಸೌಕರ್ಯಗಳಿಲ್ಲ.

ಐಹೊಳೆಯ ಪುನರ್‌ವಸತಿ ಸಮಸ್ಯೆಗೆ ದಶಕಗಳ ಕಾಲವಾದರೂ ಪರಿಹಾರ ಸಿಕ್ಕಿಲ್ಲ. ಇಲ್ಲಿನ ಇತಿಹಾಸದ ಕುರುಹುಗಳು ಜನ ಸಂದಣಿಗೆ ಸಿಲುಕಿ ಮನೆಯ ಗೋಡೆಯ ಕಲ್ಲುಗಳಾಗುತ್ತಿವೆ. ರಾಜಕೀಯ ಹಿತಾಸಕ್ತಿ, ಸ್ವಜನ ಪಕ್ಷಪಾತ ಇದನ್ನು ಪ್ರಶ್ನಿಸುತ್ತಿಲ್ಲ. ಹೀಗಾಗಿ
ಮುಂದಿನ ತಲೆಮಾರಿಗೆ ಇತಿಹಾಸ ಪರಿಚಯಿಸುವ ಮೂಲ ಕುರುಹುಗಳೇ ಇಲ್ಲಿ ಅಳಸಿ ಹೋಗುತ್ತಿವೆ.

Advertisement

ಕನ್ನಡದ ಸಾಮ್ರಾಜ್ಯವನ್ನು ನರ್ಮದಾ ನದಿ ತೀರದವರೆಗೂ ವಿಸ್ತರಿಸಿದ್ದ ವೀರಪುಲಿಕೇಶಿಯ ಬಾದಾಮಿ ಕ್ರಿ.ಶ. 5ನೇ ಶತಮಾನದಲ್ಲಿಯೇ ಸಂಪದ್ಬರಿತ ಕನ್ನಡ ರಾಜ್ಯ. ಚಿನ್ನದ ನಾಣ್ಯಗಳ ಚಲಾವಣೆ, ಮುತ್ತು ರತ್ನದ ವ್ಯಾಪಾರ, ಮಲಪ್ರಭೆಯ ಪರಿಶುದ್ಧ ನೀರು, ದೈತ್ಯ ಮರಗಳ ದಟ್ಟ ಕಾಡು, ಹೊಲಗಳಿಗೆ ನೀರು, ವ್ಯವಸಾಯಕ್ಕೂ ಹರಿದು ಬರುತ್ತಿದ್ದ ಅಂತರ್ಜಲ..ಇಂತಿಪ್ಪ ಸಾಮ್ರಾಜ್ಯದ ಕುರುಹು ಆಗಿರುವ ಇಂದಿನ ಬಾದಾಮಿ ಕ್ಷೇತ್ರ ಸದ್ಯಕ್ಕೆ ಕುಡಿಯುವ ನೀರು, ಉತ್ತಮ ರಸ್ತೆ, ನೈರ್ಮಲ್ಯದ ಕೊರತೆ ಜೊತೆಗೆ ಬಡತನ ಮತ್ತು ಅಪೌಷ್ಠಿಕತೆ ತಾಂಡವವಾಡುವ ತಾಲೂಕಾಗಿದ್ದು ವಿಪರ್ಯಾಸ. 

Advertisement

Udayavani is now on Telegram. Click here to join our channel and stay updated with the latest news.

Next