Advertisement

ಉದಾಸೀನ ಬೇಡ; ಹೋಮ್‌ ಐಸೊಲೇಶನ್‌ ಕಟ್ಟುನಿಟ್ಟಾಗಿರಲಿ

11:38 PM Jan 10, 2022 | Team Udayavani |

ಒಮಿಕ್ರಾನ್‌ ಕಾಣಿಸಿಕೊಂಡ ಬಳಿಕ ದೇಶಾದ್ಯಂತ ಕೊರೊನಾ ಕೇಸುಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸೋಮವಾರದ ವೇಳೆಗೆ 1.79 ಲಕ್ಷ ಕೇಸುಗಳು ಕಾಣಿಸಿಕೊಂಡಿವೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕದಲ್ಲಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಕೊರೊನಾ ನಿಯಂತ್ರಣ ಸಂಬಂಧ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಹೋಮ್‌ ಐಸೊಲೇಶನ್‌ಕುರಿತಂತೆ ಮಾರ್ಗಸೂಚಿ ಹೊರಡಿಸಿದೆ.

Advertisement

ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಈಗ ಶೇ.5ರಿಂದ ಶೇ.10ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗ ಬಹುದು. ಇದು ಮುಂದಿನ ದಿನಗಳಲ್ಲಿ ಬದಲಾಗಲೂಬಹುದು ಎಂದು ಕೇಂದ್ರ ಸರಕಾರವೇ ಹೇಳಿದೆ.

ಈಗಿನ ಲೆಕ್ಕಾಚಾರದಂತೆ ನೋಡಿದರೆ ಮೂರನೇ ಅಲೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಇಡುವುದು ಕಷ್ಟ ಸಾಧ್ಯವಾದ ಕೆಲಸವಾಗಲಿದೆ. ಈಗಾಗಲೇ ಬಹಳಷ್ಟು ಮಂದಿ ಕೊರೊನಾ ಪಾಸಿಟಿವ್‌ ಆಗಿದ್ದರೂ ಹೇಳದೇ ಕೇಳದೇ ಬೆಂಗಳೂರು ಬಿಟ್ಟು ಹೋಗಿರುವುದೂ ಕಂಡು ಬಂದಿದೆ. ಹೀಗಾಗಿ ಮನೆಯಲ್ಲಿರುವವರನ್ನು ಹೊರಗೆ ಹೋಗದಂತೆ ಕಾಯ್ದುಕೊಳ್ಳಬೇಕಾಗಿದೆ.

ಹೋಮ್‌ ಐಸೊಲೇಶನ್‌ವಿಚಾರದಲ್ಲಿ ಕೇವಲ ಸರಕಾರ ಮಾತ್ರ ಕಠಿನ ನಿಯಮ ಮಾಡಿದರೆ ಸಾಕಾಗುವುದಿಲ್ಲ. ಸರಕಾರಗಳ ಜತೆ ನಾಗರಿಕರು ಕೈಜೋಡಿಸಬೇಕಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಕೊರೊನಾ ಸೋಂಕಿತರು, ಮನೆಯಲ್ಲಿಯೇ ಐಸೋಲೇಟ್‌ ಆಗಿ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವುದು, ಮನೆಯಲ್ಲೇ ಇರುವವರೊಂದಿಗೆ ಸಂಪರ್ಕದಲ್ಲಿರುವುದನ್ನು ಮಾಡಬಾರದು.

ಮೂರನೇ ಅಲೆ ಹೆಚ್ಚು ತೀವ್ರವಾಗಿರುತ್ತದೆ, ಹರಡುವಿಕೆಯ ಶಕ್ತಿಯೂ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಜಗತ್ತಿನ ನಾನಾ ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ. ಇದಕ್ಕೆ ಪೂರಕವೆಂಬಂತೆ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಈ ಹೆಚ್ಚಳಕ್ಕೆ ಈಗಾಗಲೇ ಸೋಂಕು ತಗುಲಿರುವವರೇ ಕಾರಣ ಎಂಬುದನ್ನು ಮರೆಯುವಂತಿಲ್ಲ. ಈಗಾಗಲೇ ಸೋಂಕು ಕಾಣಿಸಿಕೊಂಡವರು ಜಾಗ್ರತೆಯಲ್ಲಿ ಇದ್ದಿದ್ದರೆ, ಹೆಚ್ಚು ಜನಕ್ಕೆ ಸೋಂಕು ತಗುಲುತ್ತಿರಲಿಲ್ಲ.

Advertisement

ಈಗ ಹೋಮ್‌ ಐಸೋಲೆಶನ್‌ನಲ್ಲಿರುವವರ ಕಥೆಯೂ ಅಷ್ಟೇ. ಅಲ್ಲದೆ ಈ ರೀತಿ ಮನೆಯಲ್ಲಿ ಇರುವವರು ಲಕ್ಷಣ ರಹಿತ ಅಥವಾ ಸೌಮ್ಯ ಸ್ವಭಾವದ ಸೋಂಕು ಹೊಂದಿರುತ್ತಾರೆ. ಇವರು ತಮಗೆ

ಕೊರೊನಾವೇ ಇಲ್ಲ ಎಂಬಂತೆ ವರ್ತನೆ ಮಾಡಿ, ಆಚೀಚೆ ಓಡಾಡುವುದು ಹೆಚ್ಚು. ಇವರೆಲ್ಲಾದರೂ ಬೇಕಾಬಿಟ್ಟಿಯಾಗಿ ಓಡಾಡಿದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ.

ಕೊರೊನಾ ಎರಡನೇ ಅಲೆ ವೇಳೆ ಶೇ.20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಾರಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರಬಹುದು ಎಂದು ಕೇಂದ್ರ ಸರಕಾರವೇ ಹೇಳಿದೆ. ಎರಡನೇ ಅಲೆಗಿಂತ ಈ ಬಾರಿ ಕೊರೊನಾ ಹರಡುವಿಕೆ ಪ್ರಮಾಣ ಹೆಚ್ಚಿರುವುದರಿಂದ, ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಬಹುದು. ಹೀಗಾಗಿ, ಕೊರೊನಾ ನಿಯಂತ್ರಣದಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next