ಬೆಂಗಳೂರು: ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರದ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎನ್ನುವ ಆರೋಪದ ನಡುವೆಯೆ ಸಂಸದ ಡಿ.ಕೆ.ಸುರೇಶ್ ಅವರು ಬಿ.ಎಸ್.ಯಡಿಯೂರಪ್ಪ ಅವರು ಆದಾಯ ತೆರಿಗೆ ಇಲಾಖೆಗೆ ಬರೆದಿದ್ದರೆನ್ನಲಾದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸುರೇಶ್ ಯಡಿಯೂರಪ್ಪ ಅವರು ಐಟಿ ಇಲಾಖೆಗೆ ಡಿ.ಕೆ.ಶಿವಕುಮಾರ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಪತ್ರವೊಂದನ್ನು ಬಿಡುಗಡೆ ಮಾಡಿದರು.
ನಮ್ಮ ಮೇಲೆ ಇಡಿ ದಾಳಿಯಾಗಿಲ್ಲ. ಬಿಜೆಪಿಯ ಕೆಲ ನಾಯಕರು ವದಂತಿ ಹಬ್ಬಿಸುತ್ತಿದ್ದಾರೆ. ಕೆಲ ಮಾಧ್ಯಮಗಳು ಸುಳ್ಳು ಪ್ರಚಾರವನ್ನೂ ಮಾಡುತ್ತಿವೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಮಿಷನ್ 25 , 25 ಲೋಕಸಭಾ ಚುನಾವಣೆಗಳನ್ನು ಗೆಲ್ಲಲು ನಮ್ಮನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದರು.
ವಿಪಕ್ಷದಲ್ಲಿರುವ ಪ್ರಬಲ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಹಿಂಬಾಗಿಲಿಂದ ದಾಳಿ ಮಾಡಿ ನಮ್ಮನ್ನು ಪಕ್ಷಕ್ಕೆ ಸೆಳೆಯಲು ನೋಡುತ್ತಿದ್ದಾರೆ. ಆದರೆ ನಾವು ಕಲ್ಲು ಬಂಡೆಯ ಹಾಗೆ ನಿಂತಿದ್ದೇವೆ. ನಮ್ಮ ನಿವಾಸ ಸೇರಿದಂತೆ ನಮ್ಮವರ 68 ಕಡೆ ದಾಳಿ , 80 ಕ್ಕೂ ಹೆಚ್ಚ ಕೇಸ್ಗಳು ದಾಖಲಿಸಿದ್ದಾರೆ. ಎಷ್ಟೇ ಕೇಸ್ ಹಾಕಿದರೂ ನಮ್ಮನ್ನೂ ಏನೂ ಮಾಡಲು ಆಗುವುದಿಲ್ಲ ಎಂದರು.
ರಾಜ್ಯದಲ್ಲಿ ಎನಾದರೂ ಮಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲೆಬೇಕೆಂದು ತನಿಖಾ ಸಂಸ್ಥೆಗಳ ಮೇಲೆ ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪುಯೋಗಪಡಿಸಿಕೊಳ್ಳುತ್ತಿದೆ. ಇಡಿ ಮೋರ್ಚಾ, ಸಿಬಿಐ ಮೋರ್ಚಾ, ಐಟಿ ಮೋರ್ಚಾಗಳು ಕೆಲಸ ಮಾಡುತ್ತಿವೆ. ಸರ್ಕಾರದ ಬೆನ್ನಿಗೆ ನಿಂತವರನ್ನು ಬಂಧಿಸಲು ಸಂಚು ಹೂಡಿದೆ ಎಂದು ಕಿಡಿ ಕಾರಿದರು.