Advertisement

ರಾಜಕೀಯಕ್ಕಾಗಿ ಬಿಜೆಪಿಯಿಂದ ಕುಕ್ಕರ್ ಪ್ರಕರಣದ ದುರ್ಬಳಕೆ: ಡಿಕೆಶಿ ಪುನರುಚ್ಚರಣೆ

12:13 PM Dec 16, 2022 | Team Udayavani |

ಬೆಂಗಳೂರು: ಕುಕ್ಕರ್ ಬಾಂಬ್ ಪ್ರಕರಣವನ್ನು ಬಿಜೆಪಿ ರಾಜಕೀಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ಮರೆಯಲ್ಲಿ ಮತದಾರರ ಪಟ್ಟಿ ಅಕ್ರಮ ಸೇರಿದಂತೆ ಹಲವಾರು ಅವ್ಯವಹಾರಗಳನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಪುನರುಚ್ಚರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಯೋತ್ಪಾದನೆ ಪರವಾಗಿಲ್ಲ. ಭಯೋತ್ಪಾದನೆಯಿಂದ ಕಾಂಗ್ರೆಸ್ ನಾಯಕರುಗಳನ್ನು ಕಳೆದುಕೊಂಡಿದೆ. ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ದೇಶದ ಐಕ್ಯತೆ, ಸಮಗ್ರತೆ ವಿಷಯಕ್ಕೆ ನಾವು ಸದಾ ಬದ್ಧ. ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದಲ್ಲಿ ನನ್ನ ಹೇಳಿಕೆಯನ್ನು ಮುಂದಿಟ್ಟುಕೊಂಡು ಬೇರೆ ವಿಚಾರಣಗಳನ್ನು ನಗಣ್ಯ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾರಿದ್ದಾರೆ ಎಂಬುದನ್ನು ಸಮಗ್ರವಾಗಿ ತನಿಖೆ ಮಾಡಿ ಜನರ ಮುಂದಿಡಿ. ಅದಕ್ಕಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿ, ಜತೆಯಲ್ಲಿ ಮತದಾರರ ಪಟ್ಟಿ ಅಕ್ರಮದ ತನಿಖೆಯೂ ನಿಷ್ಪಕ್ಷಪಾತವಾಗಿ ನಡೆಯಲಿ. ಸರ್ಕಾರದ ಭ್ರಷ್ಟಾಚಾರ, ಕಮಿಷನ್ ದಂಧೆಗಳು ಚರ್ಚೆಯಾಗಲಿ ಎಂದು ಸಲಹೆ ನೀಡಿದರು.

ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ಬೆಂಗಳೂರನ್ನು ಟೆರರಿಸ್ಟ್ ಹಬ್ ಎಂದು ಹೇಳಿದ್ದರು. ಬಿಜೆಪಿಯವರು ರಾಜ್ಯದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೇ ಹರಾಜು ಹಾಕಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮ್ಮ ಅನುಕೂಲಕ್ಕನುಗುಣವಾಗಿ ಪರಿಸ್ಥಿತಿ ಬದಲಾಯಿಸಿಕೊಳ್ಳಲು ಯತ್ನಿಸುತ್ತಾರೆ. ಇತ್ತೀಚೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಿತು. 10 ಲಕ್ಷ ಕೋಟಿ ರೂ. ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಹೂಡಿಕೆಯಾಗಲಿದೆ ಎಂದು ಬಹಿರಂಗಪಡಿಸಲಿ. ಎಲ್ಲವನ್ನೂ ರಾಜಕೀಯ ದೃಷ್ಟಿಯಲ್ಲಿ ನೋಡಿ ಕೋಮುಭಾವನೆ ಕೆರಳಿಸಿ ಸಾಮರಸ್ಯ ಹಾಳು ಮಾಡಿ ಅಭಿವೃದ್ಧಿಯನ್ನು ಹಳ್ಳಹಿಡಿಸಿದ್ದಾರೆ. ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಸೈನಿಕರ ಕುಟುಂಬದವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ದ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ

Advertisement

ಕುಕ್ಕರ್ ಬಾಂಬ್ ವಿಷಯದಲ್ಲಿ ನಾನು ಹೇಳುವ ವಿಚಾರ ಚರ್ಚೆಯಾಗಲಿ. ಅದಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಅದೇ ರೀತಿ ಬಿಜೆಪಿಯ ಭ್ರಷ್ಟಾಚಾರಗಳೂ ಚರ್ಚೆಯಾಗಬೇಕು. ಕೆಲವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಅವರ ಮಾರುಕಟ್ಟೆಯೇ ನಿಂತು ಹೋಗುತ್ತದೆ. ಅದಕ್ಕಾಗಿ ಏನೇನೋ ಹೇಳುತ್ತಾರೆ. ನನ್ನ ಒಟ್ಟು ಅಭಿಪ್ರಾಯ ಬಿಜೆಪಿ ಆಡಳಿತದಲ್ಲಿ ರಾಜ್ಯಕ್ಕಾಗಿರುವ ದ್ರೋಹದ ಬಗ್ಗೆ ಮೊದಲು ಚರ್ಚೆಯಾಗಲಿ ಎಂದರು.

ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಅದರ ಬಗ್ಗೆ ನಿನ್ನೆ ಅವರು ಮಾತನಾಡುವುದರಲ್ಲೇ ನೋವು, ದುಗುಡಗಳು ವ್ಯಕ್ತವಾಗಿವೆ. ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದಂತೆ ಚುನಾವಣೆವರೆಗೂ ಸರ್ಕಾರವನ್ನು ತಳ್ಳಿಕೊಂಡು ಹೋಗಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್‍ ನಿಂದ 10 ಮಂದಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ತಕ್ಷಣವೇ ಸೇರಿಸಿಕೊಳ್ಳಿ. ವಿಳಂಬ ಏಕೆ ಎಂದು ಸವಾಲು ಹಾಕಿದರು.

ನಿನ್ನೆ ಬೆಂಗಳೂರಿನಲ್ಲಿ ನಡೆದ ಒಕ್ಕಲಿಗ ಸಮುದಾಯದ ನಾಯಕರ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಕುರಿತಂತೆ ಚರ್ಚೆಯಾಗಿದೆ. ಈ ಮೊದಲು ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈಗ ದೊರೆಯುತ್ತಿರುವ ಶೇ.2ರಷ್ಟು ಮೀಸಲಾತಿ ಜನಸಂಖ್ಯೆಗನುಗುಣವಾಗಿಲ್ಲ. ಅದನ್ನು ಹೆಚ್ಚಿಸಬೇಕು ಎಂಬುದು ಒಮ್ಮತದ ಅಭಿಪ್ರಾಯ. ಈ ಬಗ್ಗೆ ತಜ್ಞರ ತಂಡ ರಚಿಸುವಂತೆ ಸಲಹೆಗಳು ಕೇಳಿ ಬಂದಿವೆ. ಜತೆಗೆ ಜನ ಕಾಂಗ್ರೆಸ್‍ಗೆ ಏಕೆ ಮತ ಹಾಕಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next