Advertisement

Deepavali 2023; ದೀಪಾವಳಿಗೂ ಲಕ್ಷ್ಮಿದೇವಿಗೂ ಅವಿನಾಭಾವ ಸಂಬಂಧ

05:43 PM Nov 13, 2023 | Team Udayavani |

ಲಕ್ಷ್ಮಿದೇವಿಗೂ, ದೀಪಕ್ಕೂ ಅವಿನಾಭಾವ ಸಂಬಂಧ ಉಂಟು. ಸೊಡರು/ಹಣತೆಗಳಲ್ಲಿ ದೀಪಹಚ್ಚಿ ಮನೆ ಮುಂದೆ, ತುಳಸೀಕಟ್ಟೆ ಮುಂದೆ, ದೇವತಾ ವಿಗ್ರಹದ ಮುಂದಿಟ್ಟು ಲಕ್ಷ್ಮಿ ಪೂಜೆ ಮಾಡುವುದರ ಅರ್ಥ ಅಜ್ಞಾನ, ಅಂಧಕಾರ ನಾಶ, ದಾರಿದ್ರ್ಯ ನಿವಾರಣೆ,
ಪರಬ್ರಹ್ಮೋಪಾಸನೆ ಮಾಡುವುದು. ಶ್ರೀಲಕ್ಷ್ಮಿ ಆಗ ಜ್ಯೋತಿಲಕ್ಷ್ಮಿಯಾಗುತ್ತಾಳೆ. ಪರಬ್ರಹ್ಮ ಸ್ವರೂಪಳಾಗುತ್ತಾಳೆ.

Advertisement

ಲಕ್ಷ್ಮಿದೇವಿ ಸ್ವಯಂಪ್ರಕಾಶ ಸ್ವರೂಪಿಣಿ, ಜ್ಯೋತಿಷ್ಮತೀ. ಈ ಜ್ಯೋತಿ ದಿವ್ಯಜ್ಯೋತಿಯಾಗಿದ್ದು ಇದು ಚಂದ್ರ-ಸೂರ್ಯ-ತಾರಾಗಣಗಳ ಪ್ರಕಾಶಗಳೆಲ್ಲಕ್ಕಿಂತ ಕೋಟಿ-ಕೋಟಿ ಪಾಲು ಮಿಗಿಲು. ಇದು ಸೂರ್ಯಪ್ರಕಾಶದಂತೆ- ಜ್ವಾಜಲ್ಯಮಾನವೂ ಹೌದು. ಚಂದ್ರಿಕೆಯಂತೆ ಆಹ್ಲಾದಕರವೂ ಹೌದು. ಇದೇ ಸಮತೋಲನತತ್ವ. ದೇವಿ, ಅಮಾವಾಸ್ಯೆಯೂ ಹೌದು. ಪೌರ್ಣಿಮೆಯೂ ಹೌದು.
ಮಹಾಲಕ್ಷ್ಮಿಯಲ್ಲಿ ಬ್ರಹ್ಮಾಂಡದಲ್ಲಿರುವ ಸಕಲ ಗ್ರಹಗಳ ಅಗ್ನಿಗಳ ಪ್ರಕಾಶ, ತೇಜಸ್ಸು, ಓಜಸ್ಸುಗಳಿದ್ದು ಅವುಗಳಲ್ಲಿ ಅವಳಿದ್ದಾಳೆ ಎಂದು ಸಾರುವ ಕೆಲವು ನಾಮಗಳು ಈ ರೀತಿ ಇವೆ:
ಸಹಸ್ರಾದಿತ್ಯಸಂಕಾಶಾ, ಚಂದ್ರಿಕಾ, ಚಂದ್ರರೂಪಾ, ಯಜ್ಞೆಶಾ, ಸೂರ್ಯ-ಚಂದ್ರಾಗ್ನಿನೇತ್ರಾ, ಗ್ರಹನಕ್ಷತ್ರ ರೂಪಿಣೇ, ಸೂರ್ಯಮಂಡಲಸಂಸ್ಥಿತಾ, ಸೋಮ-ಸೂರ್ಯಾಗ್ನಿ ಲೋಚನಾ, ಜ್ವಾಲಾ, ಜ್ವಲಂತೀ, ನಾಭೌವಹಿ°ಶಿಖಾಕಾರಾ,
ಲಲಾಟೇಚಂದ್ರ ಸನ್ನಿಭಾ, ಮಧ್ಯೆಭಾಸ್ಕರಕಾರಾ, ಹೃದಿಸರ್ವತಾರಾಕೃತಾ, ಬಡಬಾಗ್ನಿರೇಖಾ, ವಕ್ತ್ರಾ ಇತ್ಯಾದಿ. ಹೀಗೆ ಶ್ರೀಲಕ್ಷ್ಮಿಯಲ್ಲಿನ ಜ್ಯೋತಿ ತತ್ವ ಅರಿತು ಆರ್ಚಿಸಿದಲ್ಲಿ ಸಾರ್ಥಕವೆನಿಸುತ್ತದೆ.

ಯೋಗ ಯೋಗಸಾಧನ ತತ್ವ ಎತ್ತಿ ತೋರಿಸುವ ನಾಮಗಳಲ್ಲಿ ಕಂಡುಕೊಳ್ಳಬೇಕಾದ ಅಂಶಗಳೆಂದರೆ, ಮೊದಲನೆಯದಾಗಿ ಶ್ರೀದೇವಿ ಗ್ರಂಥಿನಾಶಿನಿ. ಅಂದರೆ ಸಾಧನೆಯ ಹಾದಿಯಲ್ಲಿರುವಂಥ ಸಂಶಯ, ಅಜ್ಞಾನ, ಮಾಯಾಪಾಶಗಳೆಂಬ ಗ್ರಂಥಿಗಳನ್ನು (ಕಟ್ಟುಗಳು) ನಿವಾರಿಸುತ್ತಾಳೆ.

ಸಾಧಕನ ಶರೀರದ ಎಡ-ಬಲಗಳಲ್ಲಿರುವ ಇಡಾ ಮತ್ತು ಪಿಂಗಳಾ ನಾಡಿಗಳ ನಡುವಿನ ಸುಷಾಮ್ನಾ ನಾಡಿಯಲ್ಲಿ ಮೃಣಾಳ
ತಂತುರೂಪಿಣಿಯಾಗಿರುತ್ತಾಳೆ. ಇವಳೇ ಯೋಗನಿದ್ರೆ. ಸದಾಜಾಗ್ರತೆ ಯಿಂದಿರುವವಳೂ ಇವಳೇ. ಶ್ರೀಮಹಾಲಕ್ಷ್ಮಿಯೇ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,  ಧ್ಯಾನ, ಸಮಾಧಿಗಳೆಂಬ ಅಷ್ಟಾಂಗಯೋಗದೇವತೆ ಎಂದು ವರ್ಣಿಸಲ್ಪಟ್ಟಿದ್ದಾಳೆ.

ಸೌಂದರ್ಯ ಬೇರೆಯಲ್ಲ. ಸತ್ಯ ಬೇರೆಯಲ್ಲ:
ಶ್ರೀಲಕ್ಷ್ಮಿ ಬೇರೆಯಲ್ಲ, ಸೌಂದರ್ಯ ಬೇರೆಯಲ್ಲ. ಇದು ದಿವ್ಯ ಸೌಂದರ್ಯ.  ಸೌಂದರ್ಯವನ್ನು ಅರ್ಥಮಾಡಿಕೊಳ್ಳಲು
ನೆರವಾಗುವ ಅಂಶಗಳೆಂದರೆ ರೂಪ, ಆಕೃತಿ, ಕಾಂತಿ, ಲಕ್ಷಣಗಳು ಇತ್ಯಾದಿ. ಇವುಗಳ ಸಮಗ್ರ ಚಿತ್ರಣವೇ ಸೌಂದರ್ಯ. ಸೌಂದರ್ಯ ಬೇರೆಯಲ್ಲ. ಸತ್ಯ ಬೇರೆಯಲ್ಲ. ಆದ್ದರಿಂದಲೇ ಸತ್ಯಂ-ಶಿವಂ-ಸುಂದರಂ ಎಂದಿರುವುದು. ರೂಪೇ ಚ ಲಕ್ಷ್ಮಿ ಎಂಬುದು ಬಹುಮಾನ್ಯವಾದ ಹೇಳಿಕೆ. ಹಾಗೆಂದಾಗ ಉಳಿದ ದೇವತಾ ಸ್ತ್ರೀಯರ ರೂಪಗಳು ಪೇಲವವಾಗುತ್ತದೆ. ಶ್ರೀದೇವಿಯನ್ನು
ಮೋಹಿನೀ, ಮೇನಕಾ, ಸರ್ವವರ್ಣ, ತರುಣೀ, ರೂಪಾಧಿಕ, ಶ್ರೀಕರಾ, ಹಿರಣ್ಯವರ್ಣರೂಪಾ, ಇಂದು ರೂಪಾ, ಚಪಲಾ, ವåಧುವತೀ, ದೇವಾನಾಂ ದೇವತಾ- ಹೀಗೆಲ್ಲ ವಿಧ-ವಿಧವಾಗಿ ವರ್ಣಿಸಿದ್ದಾರೆ. ಸೌಂದರ್ಯ ಲಕ್ಷ್ಮಿಗೂ, ಸತ್ಯಲಕ್ಷ್ಮಿಗೂ ಭೇದವಿಲ್ಲವೆಂಬುದನ್ನರಿಯಬೇಕು.

Advertisement

ಪದ್ಮಾಲಯವಾಸಿನಿ: ಕಮಲ ಪುಷ್ಪವಿಲ್ಲದ ಶ್ರೀಲಕ್ಷ್ಮಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವಳು ಪದ್ಮಾಲಯವಾಸಿನಿ.
ಪದ್ಮವು ಸೌಭಾಗ್ಯದ ಸಂಕೇತ. ಈ ತಾಯಿಯ ಸೌಂದರ್ಯವನ್ನು ಪದ್ಮವು ಬಿಂಬಿಸುತ್ತದೆ.ಮುಖದಲ್ಲಿ ಕಮಲಕಾಂತಿ, ಕೈಗಳಲ್ಲಿ ಕಮಲ, ಮುಖವೇ ಕಮಲ, ಹುಟ್ಟಿದ್ದು ಕಮಲದಲ್ಲಿ, ಧರಿಸಿರುವುದು ಕಮಲಪುಷ್ಪಮಾಲೆ. ಇಂಥಾ ದೇವಿ ಪದ್ಮನಾಭಪ್ರಿಯ ಆಗಿರುವುದರಲ್ಲಿ ಆಶ್ಚರ್ಯವೇನಿದೆ. ತಾವರೆ ಹೂವನ್ನು ದೇವಿಗೆ ಅರ್ಪಿಸುತ್ತಾರೆ ಏಕೆ? ಈ ಪುಷ್ಪದ ಗೂಢಾರ್ಥವನ್ನರಿಯೋಣ.

ಪದ್ಮವು ಹೂವಾಗಿ ಸುಂದರವಾಗಿ ಕಂಡು ಬರುತ್ತದೆ. ನೋಡಿದಷ್ಟೂ ಆನಂದವೀಯುತ್ತದೆ. ಶ್ರೀ ಲಕ್ಷ್ಮಿಯೇ ಈ ಆನಂದ ಸ್ವರೂಪಗಳಾಗಿದ್ದಾಳೆ. ದೇವಿಯು ಭಕ್ತರ ಹೃತ್ಕಮಲಗಳಲ್ಲೂ ವಾಸಿಸುತ್ತಾಳೆಂದು ನಂಬಿಕೆಯುಂಟು. ಮನುಷ್ಯನಲ್ಲಿರುವ ಷಟ್‌ಚಕ್ರಗಳಲ್ಲಿ ಹುಬ್ಬುಗಳ ಮಧ್ಯೆ ಇದ್ದು ಎರಡು ದಳಗಳನ್ನು ಹೊಂದಿರುವ ಆಜ್ಞಾಚಕ್ರವು ಇರುವುದು ಪದ್ಮಾಕಾರದಲ್ಲೇ. ಇದು ದೇವಿಯ ವಾಸಸ್ಥಾನ.

ವೇದ-ವಾಙ್ಮಯ ತತ್ವ: ಶ್ರೀಲಕ್ಷ್ಮಿಯ ಉಪಾಸನೆಗೆ ಎಷ್ಟೆಷ್ಟೋ ಮಂತ್ರಗಳನ್ನೂ ಶ್ಲೋಕಗಳನ್ನೂ, ನಾಮಾವಳಿಗಳನ್ನೂ ಬಳಸುವುದು ರೂಢಿಯಲ್ಲಿದೆ. ಇವುಗಳಲ್ಲಿ ಅಡಗಿರುವ ಮಂತ್ರಸಾರ ಮತ್ತು ಶಾಸ್ತ್ರಸಾರಗಳು ಸ್ವಯಂ ದೇವಿಯೇ ಆಗಿರುವಳೆಂದು ಲಲಿತಾ ಸಹಸ್ರನಾಮ ತಿಳಿಸುತ್ತದೆ.

ಶ್ರೀಲಕ್ಷ್ಮಿದೇವಿಯಾದರೋ ವಾಗ್ದೇವಿಯಾಗಿದ್ದುಕೊಂಡು ವೇದಗರ್ಭಾ, ಸರ್ವಮಂತ್ರ ಫಲಪ್ರದಾಯಿನೀ, ವೇದಶಾಸ್ತ್ರಪ್ರಮಾಣೇ,
ತ್ರಯೀಶಿಖವಿಶೇಷಜ್ಞಾ, ವೇದಾಂತ ವಿಜ್ಞಾನರೂಪಿಣೇ, ಮಂತ್ರಬ್ರಾಹ್ಮಣವಿದ್ಯಾರ್ಥಾ, ಯಜುಷೀವಿದ್ಯಾ, ಸವೊಪ
ಉನಿಷದಾಸ್ಥಿತ, ಸೂತ್ರ ಭಾಷ್ಯನಿಬಂಧನಾ, ಸರ್ವಶಾಸ್ತ್ರಾಥ್ರಾತೃಕಾ, ಋಗ್‌-ಯಜುಸ್ಸಾಮ ರೂಪಿಣೇ, ಸಮಾಸತದ್ದಿತಾಕಾರ, ವಿಭಕ್ತಿವಚನಾತ್ಮಿಕಾ, ಆಕಾರಾದಿ ಕ್ಷಕರಾಂತ ಮಾತ್ರಾ ವರ್ಣಕೃತಸ್ಥಲಾ-ಹೀಗೆಲ್ಲ ವರ್ಣಿಸಲ್ಪಟ್ಟಿದ್ದಾಳೆ.ಮಹಾಲಕ್ಷ್ಮಿಯು ಒಲಿದರೆ ವೇದಗಳೂ  ಒಲಿಯುತ್ತವೆ. ಶಾಸ್ತ್ರಗಳು ವಶವಾಗುತ್ತವೆ. ವ್ಯಾಕರಣದಲ್ಲಿ ಪ್ರೌಢಿಮೆಯುಂಟಾಗುತ್ತದೆ. ಜ್ಞಾನಸಂಪತ್ತು ವೃದ್ಧಿಸುತ್ತದೆ.

ಒಂದು ಕಡೆ ಸ್ಥಿರವಾಗಿರಲ್ಲ ಲಕ್ಷ್ಮಿ: ಕ್ಷೀರಸಾಗರವು ಲಕ್ಷ್ಮಿಯ ತೌರುಮನೆಯಾದರೆ, ವೈಕುಂಠ ಅವಳ ಅತ್ತೆಯ ಮನೆ. ಆದರೆ ಈಕೆ ಎರಡು ಸ್ಥಳಗಳಲ್ಲೂ ಕಾಣ ಸಿಗುವುದು ಬಹಳ ಅಪರೂಪ. ಚಂಚಲ ಸ್ವಭಾವದ ಲಕ್ಷ್ಮಿ ಒಂದು ಕಡೆ ಸ್ಥಿರವಾಗಿರಲ್ಲ. ಸದಾ ಸಂಚರಿಸುತ್ತಲೇ ಇರುತ್ತಾಳೆ. ಯಾರ ಮೇಲೆ ಇವಳ ಅನುಗ್ರಹವಾಗುವುದೋ ಅಥವಾ ಇದ್ದಕ್ಕಿದ್ದಂತೆ ಯಾರ ಮೇಲೆ ಮುನಿಸಿಕೊಂಡು ಹೊರಟು ಬಿಡುತ್ತಾಳ್ಳೋ ಎಂಬುದು ಯಾರಿಗೂ ಗೊತ್ತಾಗಲ್ಲ. ಈ ಕಾರಣದಿಂದ ಭಕ್ತರು ಅವಳ ಇರುವಿಕೆಗಾಗಿ ನಿತ್ಯವೂ ಅನನ್ಯವಾಗಿ ಪ್ರಾರ್ಥಿಸುತ್ತಾರೆ.

ದಾಸರ ಕೃತಿಗಳಲ್ಲಿ ಲಕ್ಷ್ಮಿ: ಹರಿದಾಸ ಪರಂಪರೆಯಲ್ಲಿ ಎಲ್ಲ ದಾಸರುಗಳೂ ತಮ್ಮ ಕೃತಿಗಳಲ್ಲಿ ಲಕ್ಷ್ಮಿಯನ್ನು ಯಥೇಚ್ಛವಾಗಿ
ಹಾಡಿ ಹೊಗಳಿದ್ದಾರೆ. ಅವಳ ದಿವ್ಯ ಮಹಿಮೆಗಳನ್ನು ತಮ್ಮ ಹಾಡುಗಳಲ್ಲಿ ಸುಂದರವಾಗಿ ಬಣ್ಣಿಸಿದ್ದಾರೆ.

ಸಕಲಾಭರಣ ಭೂಷಿತಳಾಗಿ ಸೌಂದರ್ಯದ ಖಣಿಯಾಗಿ ನೂಪುರ ನಾದದಿಂದ ಹೆಜ್ಜೆ ಹಾಕುತ್ತಾ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಭಾಗ್ಯ ಕರುಣಿಸುವ ಮಂಗಳಕರಳಾದ ಲಕ್ಷ್ಮಿಯೇ ನಮ್ಮ ಮನೆಗೆ ಬರುವವಳಾಗು ಎಂಬುದಾಗಿ ಪುರಂದರದಾಸರು ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ ಎಂಬ ಹಾಡಿನಲ್ಲಿ ಲಕ್ಷ್ಮಿಯನ್ನು ಕಳಕಳಿಯಾಗಿ ಬೇಡಿಕೊಳ್ಳುತ್ತಾರೆ. ಅತ್ಯಂತ ಜನಪ್ರಿಯವಾದ ಈ ಹಾಡನ್ನು ಪರಿಣಿತ ಗಾಯಕರು ವಿವಿಧ ರಾಗಗಳಲ್ಲಿ ಸುಶ್ರಾವ್ಯವಾಗಿ ಹಾಡಿರುವುದನ್ನು ಕೇಳಬಹುದು. ಅವರ ಇನ್ನೊಂದು ಹಾಡಾದ ಏನು ಧನ್ಯಳೋ ಲಕುಮಿ ಎಂಬುದರಲ್ಲಿ ಸದಾಕಾಲದಲ್ಲೂ ವಿಷ್ಣುವಿನ ಸೇವೆ ಮಾಡುತ್ತಿರುವ ಲಕ್ಷ್ಮಿ ನಿಜವಾಗಿಯೂ ಧನ್ಯಳು ಎಂದಿದ್ದಾರೆ. ಕನಕದಾಸ ರಚಿತ ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ಹಾಗೂ ಗೋಪಾಲದಾಸರ ಒಲಿದ ಯಾಕಮ್ಮ ಲಕುಮಿ ವಾಸುದೇವಗೆ ಎಂಬ ಹಾಡುಗಳಲ್ಲಿ ಲಕ್ಷ್ಮಿಯ
ಗುಣಮಹಿಮೆಗಳ ವರ್ಣನೆ ಇದೆ.

ಎಲ್ಲಿ ನೆಲೆಸುತ್ತಾಳೆ ಲಕ್ಷ್ಮಿ:
ಸೂರ್ಯೋದಯ ಕಾಲದಲ್ಲಿ ಮನೆಯ ಮುಂದೆ ಸಗಣಿ ನೀರು ಹಾಕಿ ರಂಗೋಲಿ ಇಡುವವರ ಮನೆಯಲ್ಲಿ, ದಂಪತಿಗಳು ಪರಸ್ಪರ ಕಾದಾಡದೆ ಸಾಮರಸ್ಯದಿಂದ ಸಂಸಾರ ನಡೆಸುವ ಮನೆಯಲ್ಲಿ, ಆಚಾರ- ವ್ಯವಹಾರಗಳು ಅನುಷ್ಠಾನದಲ್ಲಿರುವವರ ಮನೆಯಲ್ಲಿ, ಉಷಃಕಾಲದಲ್ಲೆದ್ದು ನಿದ್ರಿಸದೆ ಜಪ-ಧ್ಯಾನಗಳಲ್ಲಿ ತೊಡಗುವವರ ಮನೆಯಲ್ಲಿ, ದೇವತಾರ್ಚನೆ, ಮಾತಾ- ಪಿತೃಗಳ ಸೇವೆ, ಗುರುಸೇವೆ, ಗೋಪೂಜೆ ನಡೆಯುವ ಮನೆಯಲ್ಲಿ ಹಾಗೂ ಸಂಜೆ, ಹಗಲು ದೀಪ ಬೆಳಗುವವರ ಮನೆಯಲ್ಲಿ ಲಕ್ಷ್ಮಿ ನೆಲೆಸಿ ಸಂಪತ್ಸಮೃದ್ಧಿ ಹರಿಸುತ್ತಾಳೆ.

ಪ್ರತ್ಯೇಕ ದೇವಾಲಯ ಅಪರೂಪ:
ಇತರ ದೇವತೆಗಳಿಗಿರುವಂತೆ ಲಕ್ಷ್ಮಿಗೆ ಪ್ರತ್ಯೇಕ ದೇವಾಲಯವಿರುವುದು ತುಂಬಾ ಅಪರೂಪ. ಇದಕ್ಕೆ ಹೊರತಾಗಿ ಮಹಾರಾಷ್ಟ್ರಕ್ಕೆ ಸೇರಿದ ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿ ದೇವಾಲಯವಿದೆ. ಕರವೀರಪುರ ಅದರ ಹಳೆಯ ಹೆಸರು. ರಾಮಾವತಾರ ಕಾಲದಲ್ಲಿ ರಾವಣನು ಸೀತೆಯನ್ನು ಅಶೋಕವನದಲ್ಲಿಟ್ಟಾಗ ಆ ಸೀತಾರೂಪವು ನಿಜರೂಪವಲ್ಲದೆ ಪ್ರತಿರೂಪವಾಗಿತ್ತೆಂದು ಪುರಾಣಗಳಲ್ಲಿ
ಹೇಳಲಾಗಿದೆ. ಕಲಿಯುಗದ ಆರಂಭದಲ್ಲಿ ಪ್ರತಿರೂಪಳಾದ ಸೀತೆಯೇ ಚೋಳದೇಶದ ಅರಸು ಆಕಾಶರಾಜ ಹಾಗೂ ಧರಣೀದೇವಿಯರ ಸಾಕು ಮಗಳಾಗಿ ಪದ್ಮಾವತಿ ಎಂಬ ಹೆಸರಿನಿಂದ ಬೆಳೆಯುತ್ತಾಳೆ. ಶ್ರೀದೇವಿಯಿಲ್ಲದ ವೈಕುಂಠದಲ್ಲಿ ವಾಸ ಮಾಡಲಿಚ್ಛಿಸದೆ ವಿಷ್ಣು ಭೂಲೋಕದಲ್ಲಿಯ ಶೇಷಾಚಲಕ್ಕೆ ಬಂದು ವಾಸ ಮಾಡುತ್ತಾನೆ. ಲಕ್ಷ್ಮಿ ವೈಕುಂಠ ತೊರೆದು ಕರವೀರಪುರಕ್ಕೆ ಬಂದು ನೆಲೆಸಿದುದಕ್ಕೆ ಒಂದು ಐತಿಹ್ಯವಿದೆ. ಲೋಕಕಲ್ಯಾಣಕ್ಕಾಗಿ ಋಷಿಗಳು ಯಾಗ ಮಾಡಿ ಅದರ ಹವಿಸ್ಸನ್ನು ತ್ರಿಮೂರ್ತಿಗಳಲ್ಲೊಬ್ಬರಿಗೆ ಅರ್ಪಿಸುವ ಸಲುವಾಗಿ ಭೃಗು ಮಹರ್ಷಿ ನಿಯೋಜಿಸಿದರು. ಸತ್ಯಲೋಕ-ಕೈಲಾಸಗಳನ್ನು ಸಂದರ್ಶಿಸಿದ ಭ್ರಗುಮುನಿಗೆ ಕಾರ್ಯ ಕೈಗೂಡದೆ ನಿರಾಶೆಯಾಯಿತು. ನಂತರ ವೈಕುಂಠಕ್ಕೆ ಬರಲು ವಿಷ್ಣುವು ಮುನಿಯ ಆಗಮನವನ್ನು ಗಮನಿಸದೆ ಲಕ್ಷ್ಮಿಯೊಡನೆ ವಿರಮಿಸುತ್ತಿದ್ದನು.

ಇದರಿಂದ ಕೋಪಗೊಂಡ ಭ್ರಗುಮುನಿಯು ವಿಷ್ಣುವಿನ ವಕ್ಷಃಸ್ಥಳಕ್ಕೆ ಪಾದದಿಂದ ತಾಡನಮಾಡಿದ. ಆಗ ವಿಷ್ಣುವು ಶಾಂತನಾಗಿ ಕೆಳಗಿಳಿದು ಮುನಿಯ ಕ್ಷಮೆ ಕೇಳಿ ಅವನನ್ನು ಅರ್ಘ್ಯ-ಪಾದ್ಯಾದಿಗಳಿಂದ ಸತ್ಕರಿಸಿ ಕಳುಹಿಸಿದನು. ತನ್ನ ಎದುರಿನಲ್ಲೆ ವಿಷ್ಣುವಿಗಾದ ಅವಮಾನ ಸಹಿಸದೆ ಶ್ರೀದೇವಿ ಧರೆಗಿಳಿದು ಕರವೀರಪುರದಲ್ಲಿ ಮಹಾಲಕ್ಷ್ಮಿಯಾಗಿ ನೆಲೆಸಿದರು. ಕರವೀರಪುರ ಮಹಾಶಕ್ತಿಪೀಠವಾಗಿದ್ದು ಭಕ್ತರ ಇಷ್ಟಾರ್ಥ ಈಡೇರಿಸುವ ಪುಣ್ಯಕ್ಷೇತ್ರವಾಗಿದೆ. ಭಕ್ತರು ತಿರುಪತಿ ಯಾತ್ರೆ ಮುಗಿಸಿಕೊಂಡು ಕರವೀರಪುರಕ್ಕೆ ತಪ್ಪದೇ ಭೇಟಿ ಕೊಡುವ ಸಂಪ್ರದಾಯವಿದೆ.

ಮೋಕ್ಷ ಸ್ವರೂಪಿನಿ: ಇದು ಚತುರ್ವಿಧ ಪುರುಷಾರ್ಥಗಳಲ್ಲಿ ಕಡೆಯದೂ ಅತ್ಯಂತ ಮಹತ್ವದ್ದೂ ಆಗಿರುವುದು. ಪುರುಷಾರ್ಥವೆಂದರೆ ಮೋಕ್ಷ. ದೇವಿ ಮೋಕ್ಷದಾಯಿನಿಯಷ್ಟೇ ಅಲ್ಲ ಮೋಕ್ಷ ಸ್ವರೂಪಿಣಿಯೂ ಆಗಿದ್ದಾಳೆ.ಮೋಕ್ಷಲಕ್ಷ್ಮಿಯ ಅನುಗ್ರಹಕ್ಕಾಗಿ ಏನು ಮಾಡಬೇಕು? ಬ್ರಹ್ಮವಿದ್ಯಾಪ್ರಾಪ್ತಿಗಾಗಿ ಪ್ರಾರ್ಥಿಸಬೇಕು. ಯಜ್ಞಕರ್ಮಗಳನ್ನು ಮಾಡಬೇಕು. ಗುಣಾತೀತರಾಗಬೇಕು. ಅವಸ್ಥಾತ್ರಯಾತೀತರಾಗಬೇಕು. ಯೋಗಧ್ಯಾನ ಪರಾಯಣರಾಗಿರಬೇಕು. ಕಾಮವರ್ಜಿತರಾಗಬೇಕು.
ನಿಷ್ಕಾಮಕರ್ಮಿಗಳಾಗಬೇಕು. ಶ್ರೀಲಕ್ಷ್ಮಿಯು ಬ್ರಹ್ಮವಿದ್ಯಾಪ್ರದಾಯಿನಿ ಆಗಿರುವುದರಿಂದಲೂ, ಅಂದರೆ ಕೈವಲ್ಯ ಜ್ಞಾನಲಕ್ಷಿತಳಾಗಿರುವುದ ರಿಂದಲೂ ಅವಳು ಅನುಗ್ರಹಿಸಿದರೆ ಸಾಕು ಆರಾಧಕರಿಗೆ ವಿವೇಕ, ವೈರಾಗ್ಯ, ಷಟ್‌ಸಂಪತ್ತಿಗಳು ಮತ್ತು ಮುಮುಕ್ಷತ್ವಗಳೂ ತಾನಾಗಿ ಲಭಿಸುತ್ತವೆ. ವಿವೇಕಲಕ್ಷ್ಮಿಯನ್ನು ಅನುಸರಿಸಿದರೆ ವೈರಾಗ್ಯ ಲಕ್ಷ್ಮಿ ಒಲಿಯುತ್ತಾಳೆ.
ಇದರೊಂದಿಗೆ ಲಕ್ಷ್ಮಿಯ ಲಕ್ಷಣಗಳಾಗಿರುವ ಶಮಾ, ದಮಾ, ತಿತಿಕ್ಷಾ, ಉಪರತಿ, ಸಮಾಧಾನ, ಶಾಂತಿಗಳು ಸಾಧಕರಲ್ಲಿ ಪ್ರಕಟಗೊಂಡು ಮೋಕ್ಷಲಕ್ಷ್ಮಿಯ ದರ್ಶನವಾಗುತ್ತದೆ.

ಲಕ್ಷ್ಮಿದೇವಿ ಹೀಗೆ ಬ್ರಹ್ಮಕೈವಲ್ಯ ಸಾಧನೆಗೆ ದಾರಿ ತೋರುತ್ತಾಳೆ. ಇದೇ ಮೋಕ್ಷ ಲಕ್ಷ್ಮಿ ತತ್ವ. ಅಂತರ್ಮುಖ ಸಮಾರಾಧ್ಯಾ ಆಗಿರುವ ದೇವಿಯನ್ನು ಧ್ಯಾನ, ನಿರಂತರಸ್ಮರಣಾದಿ ಮಾರ್ಗಗಳಿಂದ ಪೂಜಿಸಿದಾಗ ಲಭಿಸುವ ಸ್ಥಿತಿಯನ್ನೆ ಜೀವನ್ಮುಕ್ತಿ ಎನ್ನುತ್ತಾರೆ. ವ್ಯಕ್ತಿ ಜೀವಂತವಿರುವಾಗಲೇ ಪಡೆಯುವಂಥ ಬ್ರಹ್ಮಾನಂದ/ ಆತ್ಮಾನಂದದ ಅನುಭವವೇ ಜೀವನ್ಮುಕ್ತಿಯ ಅರ್ಥ. ತತ್ವದ ದೃಷ್ಟಿಯಿಂದ ಯಾ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅರ್ಥ ಮಾಡಿಕೊಂಡರೆ ಹ ಜೀವ, ಆತ್ಮ, ಮುಕ್ತಿ, ಆನಂದ ಎಲ್ಲವೂ ಶ್ರೀಲಕ್ಷ್ಮಿಯೇ ಆಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next