Advertisement

 ಬೆಳ್ಳಾರೆಯಲ್ಲಿ ಜಿಲ್ಲಾ  ಮಟ್ಟದ ಯುವಜನೋತ್ಸವ

02:10 PM Nov 20, 2017 | Team Udayavani |

ಬೆಳ್ಳಾರೆ: ಈ ನೆಲದ ಸಂಸ್ಕೃತಿ, ಜನಪದೀಯ ಆಚಾರ – ವಿಚಾರಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗದೆ ಇದ್ದಲ್ಲಿ, ನಮ್ಮೊಳಗಿನ ಜೀವಂತಿಕೆಯ ಲಕ್ಷಣ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಎಸ್‌. ಅಂಗಾರ ಹೇಳಿದರು.

Advertisement

ಯುವ ಸಬಲೀಕರಣ ಕ್ರೀಡಾ ಇಲಾಖೆ, ಜಿ.ಪಂ., ತಾ.ಪಂ., ಬೆಳ್ಳಾರೆ ಗ್ರಾ.ಪಂ., ಜಿಲ್ಲಾ ಯುವಜನ ಒಕ್ಕೂಟ, ಸಂಯುಕ್ತ ಮಂಡಳಿ ಹಾಗೂ ಬೆಳ್ಳಾರೆ ಸ್ವಾಗತ ಸಮಿತಿ ಆಶ್ರಯದಲ್ಲಿ ರವಿವಾರ ಬೆಳ್ಳಾರೆ ನಾರಾಯಣ ಶೇಖ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಯುಜನೋತ್ಸವ-2017 ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಕಾಲದ ಸಂಸ್ಕೃತಿ, ಮೌಲ್ಯಯುತ ಬದುಕು ಪರಿಪೂರ್ಣ ವ್ಯಕ್ತಿತ್ವದ ಪ್ರತೀಕವಾಗಿತ್ತು. ಎಲ್ಲರ ಜತೆ ವಿಶ್ವಾಸದೊಂದಿಗೆ ಬದುಕು ಸಾಗಿಸುವ ನಿಟ್ಟಿನಲ್ಲಿ ಈ ನೆಲದ ಜನಪದೀಯ ಸಂಗತಿಗಳ ಕೊಡುಗೆ ಅಪಾರ ಎಂದರು.

ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಸರಕಾರದ ಅನುದಾನ ಬಂದರೆ ಮಾತ್ರ ಸಾಲದು. ಅದರ ಜತೆಗೆ ಯಶಸ್ವಿ ಸಂಘಟನೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಮಹತ್ವದ್ದು. ಹಾಗಾಗಿ ಯುವಜನೋತ್ಸವದಂತಹ ಸಾಂಸ್ಕೃತಿಕ ಸಂಭ್ರಮದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಿ ಕೊಳ್ಳಬೇಕು ಎಂದರು.

ಡೋಲು ಬಾರಿಸಿ ಉದ್ಘಾಟನೆ
ಡೋಲು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಜನಪದ ಕಲೆ ಸೇರಿದಂತೆ ಭಾರತೀಯ ಮಣ್ಣಿನ ಸಂಸ್ಕೃತಿಗಳನ್ನು ಭವಿಷ್ಯದ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಯುವಜನೋತ್ಸವದ ಮೂಲಕ ನಡೆಯುತ್ತಿರುವುದು ಉತ್ತಮ ಕಾರ್ಯ ಎಂದರು.

Advertisement

ಮನಸ್ಥಿತಿ ಬದಲಾಗಲಿ
ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ ಮಾತನಾಡಿ, ಮೊಬೈಲ್‌ನಂತಹ ಆಧುನಿಕ ತಂತ್ರಜ್ಞಾನದ ತೆಕ್ಕೆಯೊಳಗೆ ಮುಳಗಿಹೋದ ಕಾಲಘಟ್ಟದಲ್ಲಿ ಕುಟುಂಬದೊಳಗೆಯೇ ಪರಸ್ಪರ ಸಂಬಂಧ ಇರದಷ್ಟು ಮೌನವಾಗಿದ್ದೇವೆ. ಯುವ ಜನತೆಯಲ್ಲಿ ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉತ್ಸಾಹ ಇಳಿಮುಖವಾಗುತ್ತಿದ್ದು, ಆ ಮನಸ್ಥಿತಿಯನ್ನು ಬದಲಾಯಿಸಬೇಕಾದ ಅನಿವಾರ್ಯ ಇಂದಿದೆ. ಯುವಜನೋತ್ಸವದಂತಹ ಕಾರ್ಯ ಚಟುವಟಿಕೆಗಳು ಕಾಟಾಚಾರಕ್ಕೆಂಬಂತೆ ಪ್ರಸ್ತುತವಾಗದೆ, ಈ ನೆಲದ ಸಂಸ್ಕೃತಿಯನ್ನು ಯುವಜನತೆಗೆ ತಿಳಿಸುವ ದಾರಿದೀಪವಾಗಬೇಕು ಎಂದರು.

ಉತ್ತಮ ವ್ಯಕ್ತಿತ್ವ ನಿರ್ಮಾಣ
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಮಾತನಾಡಿ, ಯುವಜನೋತ್ಸವ, ಯುವಜನ ಮೇಳದಂತಹ ಕಾರ್ಯಕ್ರಮ ಸರಕಾರಗಳ ಕಾರ್ಯಕ್ರಮ ಎಂದು ಭಾವಿಸುವ ಬದಲು, ಅದು ನಮ್ಮ ಪ್ರತಿಭಾ ಪ್ರದರ್ಶನಕ್ಕೆ ಇರುವ ಅವಕಾಶ ಎಂದರಿತು, ಪಾಲ್ಗೊಳ್ಳಬೇಕು. ಯುವ ಜನರು ರಾಜಕೀಯ ಸಂಘಟನೆಗಳಲ್ಲಿ ಮಾತ್ರ ಸೀಮಿತವಾಗುವ ಬದಲು, ತನ್ನೂರಿನ ಸಂಘ-ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಹಕಾರಿ ಆಗುತ್ತದೆ ಎಂದರು.

ತಾ.ಪಂ. ಸದಸ್ಯ ಅಶೋಕ್‌ ನೆಕ್ರಾಜೆ ಮಾತನಾಡಿ, ಬೆಳೆದು ಬಂದ ಹಾದಿಯನ್ನು ಮರೆತೆರೆ, ದಾರಿ ತಪ್ಪುತ್ತೇವೆ. ಯುವ ಜನರು ಸಮಾಜಕ್ಕೆ ಸಹಕಾರಿ ಆಗುವ ನಿಟ್ಟಿನಲ್ಲಿ ಬೆಳೆಯಬೇಕು ಹೊರತು ದಾರಿ ತಪ್ಪುವ ದಿಕ್ಕಿನಲ್ಲಿ ಸಾಗಬಾರದು ಎಂದರು.

ಸದುಪಯೋಗಿಸಿ
ಸಭಾಧ್ಯಕ್ಷತೆ ವಹಿಸಿದ್ದ ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ ನಾಗರಾಜ್‌ ಮಾತನಾಡಿ, ಇಂತಹ ಅವಕಾಶಗಳನ್ನು ಯುವ ಜನತೆ ಸದುಪಯೋಗಪಡಿಸಿಕೊಂಡು, ಯಶಸ್ಸು ಸಾಧಿಸಲಿ ಎಂದರು.

ಜನಪ್ರತಿನಿಧಿಗಳ ಗೈರು
ಜಿಲ್ಲಾ ಯುವಜನೋತ್ಸವ ಉದ್ಘಾಟಿಸಬೇಕಿದ್ದ ಸಚಿವ ರಮನಾಥ ರೈ, ಮುಖ್ಯ ಅತಿಥಿಗಳಾಗಿದ್ದ ಸಚಿವ ಯು.ಟಿ ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ವಸಂತ ಬಂಗೇರ, ಕೆ. ಅಭಯಚಂದ್ರ ಜೈನ್‌, ಶಕುಂತಳಾ ಟಿ. ಶೆಟ್ಟಿ, ಐವನ್‌ ಡಿ’ಸೋಜಾ, ಗಣೇಶ್‌ ಕಾರ್ಣಿಕ್‌, ಬಿ.ಎ. ಮೊದೀನ್‌ ಬಾವಾ, ಜೆ.ಆರ್‌. ಲೋಬೋ, ಕೋಟ ಶ್ರೀನಿವಾಸ ಪೂಜಾರಿ, ಕೆ. ಪ್ರತಾಪ್‌ ಚಂದ್ರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮೊದಲಾದವರು ಗೈರು ಹಾಜರಾಗಿದ್ದರು. ಸಭಾಕಾರ್ಯಕ್ರಮದ ಅನಂತರ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪಾಲ್ಗೊಂಡಿದ್ದರು.

ಜಿ.ಪಂ. ಮಾಜಿ ಸದಸ್ಯೆ ರಾಜೀವಿ ಆರ್‌. ರೈ ಶುಭ ಹಾರೈಸಿದರು. ತಾ.ಪಂ. ಸದಸ್ಯೆ ನಳಿನಾಕ್ಷಿ, ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಬೆಳ್ಳಾರೆ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಯು. ಸುಬ್ರಾಯ ಗೌಡ, ಉಪ ಪ್ರಾಂಶುಪಾಲೆ ಉಮಾ, ಸುಳ್ಯ ಸಹಾಯಕ ಕ್ರೀಡಾಧಿಕಾರಿ ದೇವರಾಜ್‌ ಮುತ್ಲಾಜೆ, ಪುತ್ತೂರು ಸಹಾಯಕ ಕ್ರೀಡಾಧಿಕಾರಿ ಮಾಮಚ್ಚನ್‌ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ರೈ ಪನ್ನೆ ಪ್ರಸ್ತಾವನೆಗೈದರು. ಜಿಲ್ಲಾ ಯುವ ಕ್ರೀಡಾ ಮತ್ತು ಸಬಲೀಕರಣ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕ ಮಿಥುನ್‌ ಶೆಣೈ ವಂದಿಸಿದರು. ಸ್ವಾಗತ ಸಮಿತಿ ಸದಸ್ಯ ಪ್ರಸಾದ್‌ ಸೇವಿತ ಬೆಳ್ಳಾರೆ ನಿರೂಪಿಸಿದರು.

ವಿವಿಧ ಸ್ಪರ್ಧೆ
ಜಿಲ್ಲೆಯ 5 ತಾಲೂಕಿನ ಸ್ಪರ್ಧಿಗಳು ಆಗಮಿಸಿದ್ದರು. ಜನಪದ ನೃತ್ಯ, ಹಾಡು, ಏಕಾಂಕ ನಾಟಕ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಗಿಟಾರ್‌ ವಾದನ, ಶಾಸ್ತ್ರೀಯ ನೃತ್ಯ, ಆಶುಭಾಷಣ ಸ್ಪರ್ಧೆಗಳು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next