Advertisement

ಜಿಲ್ಲಾದ್ಯಂತ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ

10:04 PM Mar 28, 2020 | Sriram |

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆಯನ್ನು ನಗರಾದ್ಯಂತ ಮಾಡಲಾಯಿತು. ಸಾಂಕ್ರಾಮಿಕ ರೋಗ ತಡೆಗಟ್ಟಲು ನಗರಸಭೆ, ಅಗ್ನಿಶಾಮಕ ದಳದಿಂದ ಈ ಕಾರ್ಯಾಚರಣೆ ನಡೆಯಿತು.

Advertisement

ನಗರದ ಸಿಟಿ ಮಾರುಕಟ್ಟೆ, ಸಿಟಿ, ಸರ್ವಿಸ್‌ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ತಂಗುದಾಣ, ಮುಖ್ಯರಸ್ತೆಗಳು, ರಾಜಾಂಗಣ ಹಾಗೂ ಶ್ರೀ ಕೃಷ್ಣಮಠದ ಸುತ್ತಮುತ್ತ ಈ ರಾಸಾಯನಿಕ ಸಿಂಪಡಿಸಲಾಯಿತು. ಸುಮಾರು 18 ಸಾವಿರ ಲೀಟರ್‌ಗಳಷ್ಟು ಸೋಡಿಯಂ ಕ್ಲೋರೈಟನ್ನು ಅನ್ನು ಸಿಂಪಡಣೆ ಮಾಡಲಾಯಿತು.

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಸೋಂಕುಗಳನ್ನು ತಡೆಗಟ್ಟುವು ದರೊಂದಿಗೆ ಸೂಕ್ಷಜೀವಿಯ ಜೀವಕೋಶ ಗಳನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನೂ ಈ ರಾಸಾಯನಿಕವು ಹೊಂದಿದೆ.

ಸೋಮವಾರ ಮಣಿಪಾಲ ಆಸುಪಾಸು ಈ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ನಗರದ 35 ವಾರ್ಡ್‌ ಗಳಿಗೂ ಇದೇ ರೀತಿ ರಾಸಾಯನಿಕ ಸಿಂಪಡಣೆ ಮಾಡಲಾಗುವುದು ಎಂದು ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹಾ ಅವರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರಸಭೆಯ ಪೌರಾಯುಕ್ತರಾದ ಆನಂದ ಕಲ್ಲೋಳಿಕರ್‌, ಎಇಇ ಮೋಹನ್‌ರಾಜ್‌, ಆರೋಗ್ಯ ನಿರೀಕ್ಷಕರಾದ ಶಶಿರೇಖಾ, ಕರುಣಾಕರ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.

ಮನೆಗಳ ಮೇಲೆ ನಿಗಾ
ವಿದೇಶದಿಂದ ಊರಿಗೆ ಆಗಮಿಸಿ ಹೋಮ್‌ ಕ್ವಾರಂಟೈನ್‌ನಲ್ಲಿರುವ ಮನೆಗಳ ಮೇಲೆ ಕಂದಾಯ, ಪೊಲೀಸ್‌, ಆರೋಗ್ಯ ಹಾಗೂ ಪುರಸಭಾ ಅಧಿಕಾರಿಗಳು ನಿಗಾ ವಹಿಸಿದ್ದರು. ಅವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮಾ. 28ರ ಮಧ್ಯಾಹ್ನ ಕೌಡೂರಿನ ಮಹಿಳೆಯೋರ್ವರು ಗಂಟಲು ದ್ರವ ಮಾದರಿ ಪರೀಕ್ಷೆಗಾಗಿ ಕಾರ್ಕಳ ಸರಕಾರಿ ಆಸ್ಪತೆಗೆ ದಾಖಲಾಗಿ ರುತ್ತಾರೆ. ಇವರು ವಿದೇಶದಲ್ಲಿ ಉದ್ಯೋಗಿ ಯಾಗಿದ್ದರು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next