Advertisement

ಕಾಂಞಂಗಾಡು -ಕಾಣಿಯೂರು ರೈಲು ಯೋಜನೆಗೆ ನಿರಾಸಕ್ತಿ

04:01 PM Dec 07, 2017 | |

ಪುತ್ತೂರು: ಬಹು ನಿರೀಕ್ಷಿತ ಕಾಂಞಂಗಾಡು -ಕಾಣಿಯೂರು ರೈಲ್ವೇ ಯೋಜನೆಗೆ ಸಂಬಂಧಿಸಿ ಕೇರಳ ರಾಜ್ಯ ತನ್ನ ಅರ್ಧಪಾಲು ನೀಡಲು ಕೊನೆಗೂ ಒಪ್ಪಿಗೆ ಸೂಚಿಸಿದೆ. ಆದರೆ, ಕರ್ನಾಟಕ ಸರಕಾರ ಅನುದಾನ ಒದಗಿಸುವ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿಲ್ಲ!

Advertisement

ಸಂಸತ್‌ ಅಧಿವೇಶನ ಪೂರ್ವಭಾವಿಯಾಗಿ ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸಂಸದರ ಸಭೆಯಲ್ಲಿ ಕೇರಳ ರಾಜ್ಯದ ಪಾಲು ನೀಡಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದ ಪರಿಣಾಮ, ಕಾಂಞಂಗಾಡಿನಿಂದ ಕರ್ನಾಟಕದ ಗಡಿ ಭಾಗ ಪಾಣತ್ತೂರು ತನಕ ರೈಲು ಮಾರ್ಗ ಕಾಮಗಾರಿ ಆರಂಭಗೊಳ್ಳಲಿದೆ. ಈ ಯೋಜನೆಗಾಗಿ ಕೇರಳ ಸರಕಾರ ತನ್ನ ಆರ್ಥಿಕ ವರ್ಷದಲ್ಲಿ 20 ಕೋಟಿ ರೂ. ಮೀಸಲಿರಿಸಿ, ರೈಲು ಹಳಿಯ ಸರ್ವೇ ವರದಿಯನ್ನು ದಕ್ಷಿಣ ರೈಲ್ವೇ ಕೇಂದ್ರದಿಂದ ರೈಲ್ವೇ ಮಂಡಳಿಯ ಪರಿಗಣನೆಗಾಗಿ ಕಳುಹಿಸಿತ್ತು. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ಈ ಯೋಜನೆ ಕಾರ್ಯಸಾಧುವೋ ಅಲ್ಲವೋ ಎಂಬ ಬಗ್ಗೆಯೂ ತೀರ್ಮಾನ ಪ್ರಕಟಿಸಿಲ್ಲ.

ಯೋಜನೆಯ ಹಿನ್ನೆಲೆ
ಏಳೆಂಟು ವರ್ಷಗಳ ಹಿಂದೆ ಅಂದಾಜು 400 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾಪಗೊಂಡ ಕಾಂಞಂಗಾಡು -ಕಾಣಿಯೂರು ರೈಲ್ವೇ ಯೋಜನೆಯ ಈಗಿನ ಮೊತ್ತ ಬರೋಬ್ಬರಿ 1,295 ಕೋಟಿ ರೂ. ಆಗಿದೆ. 2008-09ರಲ್ಲಿ ಮಮತಾ ಬ್ಯಾನರ್ಜಿ ರೈಲ್ವೇ ಸಚಿವರಾಗಿದ್ದ ಸಂದರ್ಭ ಹಳಿ ಸರ್ವೇಗೆ ಘೋಷಿಸಲಾಗಿತ್ತು. ಕಾಂಞಂಗಾಡ್‌ನಿಂದ ಪಾಣತ್ತೂರು ತನಕ ಸರ್ವೇ ಕಾರ್ಯ ನಡೆದಿತ್ತು. ಬಳಿಕ ಸುಳ್ಯದವರೇ ಆದ ಡಿ.ವಿ. ಸದಾನಂದ ಗೌಡ 2014ರಲ್ಲಿ ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಎರಡನೇ ಹಂತದ ಸರ್ವೆ ಕಾರ್ಯಕ್ಕೆ ಅನುದಾನ ಮೀಸಲಿರಿಸಿದರೂ, ಸರ್ವೇ ಕಾರ್ಯ ಮಾತ್ರ ಕೊನೆ ಮುಟ್ಟಲಿಲ್ಲ.

ಯೋಜನೆ ವಿವರ
ಕಾಂಞಂಗಾಡು-ಕಾಣಿಯೂರು ರೈಲ್ವೇ ಮಾರ್ಗ ಒಟ್ಟು 91 ಕಿ.ಮೀ. ಉದ್ದದ ಯೋಜನೆ. ಎರಡೂ ರಾಜ್ಯಗಳಲ್ಲಿ 45 ಕಿ.ಮೀ.ನಷ್ಟು ಭೂಪ್ರದೇಶ ಒಳಗೊಂಡಿದೆ. 1,295 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರ ಶೇ. 50 ಹಣ ಭರಿಸುತ್ತಿದ್ದು, ಉಳಿದ ಪಾಲನ್ನು ರಾಜ್ಯ ಸರಕಾರಗಳು ಭರಿಸಬೇಕು. ಸರ್ವೆ ವರದಿಯೇ ಇನ್ನೂ ಸರಕಾರವನ್ನು ತಲುಪಿಲ್ಲ. ಮೂರು ಬಾರಿ ಮಾಡಿದ ಸರ್ವೆ ಕುರಿತು ದಾಖಲೆ ಸಲ್ಲಿಸುವಂತೆ ಉಭಯ ಸರಕಾರಗಳು ರೈಲ್ವೇ ಎಂಜಿನಿಯರಿಂಗ್‌ ವಿಭಾಗಕ್ಕೆ ಮನವಿ ಮಾಡಿವೆ. ಆದರೆ, ಸರ್ವೆ ವರದಿಯನ್ನು ನೀಡಿಲ್ಲ. ಇದರಿಂದ ಇದೊಂದು ಕಾಟಾಚಾರದ ಸರ್ವೆ ಅಷ್ಟೇ ಎಂಬ ಅಭಿಪ್ರಾಯವೂ ಇದೆ.

ಲಾಭ-ನಷ್ಟ…
ಸುಳ್ಯ ತಾಲೂಕು ರಾಜ್ಯದಲ್ಲಿ ಅತಿ ಹೆಚ್ಚು ರಬ್ಬರ್‌ ಉತ್ಪಾದಿಸುವ ಪ್ರದೇಶ. ಕೇರಳ ರಾಜ್ಯವೂ ವಾಣಿಜ್ಯ ಬೆಳೆಯಾಗಿ ರಬ್ಬರನ್ನೇ ನಂಬಿದೆ. ಇಲ್ಲಿನ ಅಡಿಕೆ, ರಬ್ಬರನ್ನು ಹೊರ ಜಿಲ್ಲೆ, ರಾಜ್ಯಗಳಿಗೆ ಪೂರೈಕೆ ಮಾಡಲು ರೈಲ್ವೇ ಮಾರ್ಗ ಅತ್ಯಂತ ಸಹಕಾರಿ. ಹೊರಭಾಗದಿಂದ ಕೇರಳಕ್ಕೆ, ಕೇರಳ- ಸುಳ್ಯ ಭಾಗದಿಂದ ಹೊರ ಜಿಲ್ಲೆಗೆ, ಶೈಕ್ಷಣಿಕ ಚಟುವಟಿಕೆಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕರ್ನಾಟಕಕ್ಕಿಂತಲೂ ಉತ್ತರ ಕೇರಳಿಯರಿಗೆ ಇದರಿಂದ ಪ್ರಯೋಜನ ಹೆಚ್ಚು. ಕೇರಳದ ಶಬರಿಮಲೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಹಿತ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲೂ ಸಹಕಾರಿ. ಭವಿಷ್ಯತ್ತಿನಲ್ಲಿ ಕೊಡಗು ಜಿಲ್ಲೆಗೂ ರೈಲ್ವೇ ಹಳಿ ವಿಸ್ತರಿಸಲು ಪೂರಕ ಆಗುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಮಹತ್ವ ನೀಡಲಾಗಿತ್ತು.

Advertisement

ಸರ್ವೆ ಕಾರ್ಯ
ಈಗಾಗಲೇ ಮೂರು ಹಂತದ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಟ್ರಾಫಿಕ್‌ ಎಂಜಿನಿಯರಿಂಗ್‌ ವಿಭಾಗದಲ್ಲೂ ಸರ್ವೆ ಪೂರ್ಣಗೊಂಡು, ಆ ಸರ್ವೆ ಪ್ರಕಾರ ಯೋಜನೆ ಜಾರಿ ಆದಲ್ಲಿ ಹೆಚ್ಚು ಲಾಭದಾಯಕ ಎಂಬ ವರದಿ ಸಲ್ಲಿಸಲಾಗಿತ್ತು. ಕರ್ನಾಟಕಕ್ಕೆ ಈ ಮಾರ್ಗದಿಂದ ಪ್ರಯೋಜನ ಸಿಗದು ಎಂದು ಬದಲಾವಣೆಗೆ ಒಂದಷ್ಟು ಪ್ರಯತ್ನ ನಡೆದಿದ್ದರೂ, ಅದರ ಬಗ್ಗೆ ತೀರ್ಮಾನಗಳು ಹೊರಬಿದ್ದಿಲ್ಲ.

ಶಿರಾಡಿಯಲ್ಲಿ ಅನುಮತಿ ಬೇಕು
ಕಾಂಞಂಗಾಡು- ಕಾಣಿಯೂರು ರೈಲು ಯೋಜನೆ ಅನುಷ್ಠಾನದ ಮೊದಲು ಶಿರಾಡಿಯಲ್ಲಿ ಹೆಚ್ಚುವರಿ ಪ್ರಯಾಣಿಕ ರೈಲಿಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಈ ಹೊಸ ಯೋಜನೆ ಅನುಷ್ಠಾನಗೊಳಿಸುವುದು ನಿರರ್ಥಕ. 
–  ದಿನೇಶ್‌ ಭಟ್‌
    ಸಂಚಾಲಕರು, ರೈಲ್ವೇ ಯಾತ್ರಿಕರ ಸಂಘ, ಪುತ್ತೂರು

ಪ್ರಯತ್ನ ಮುಖ್ಯ
ಕೇರಳ ಸರಕಾರ ಮೊದಲ ಹಂತದಲ್ಲಿ 20 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಇಲ್ಲಿನ ಸರಕಾರ ಅನುದಾನ ಮೀಸಲಿರಿಸಿಲ್ಲ. ಅನುದಾನಕ್ಕೆ ಶಾಸಕರಾದಿಯಾಗಿ ಜನಪ್ರತಿನಿಧಿಗಳ ಪ್ರಯತ್ನ, ಕಡತ ನಿರ್ವಹಣೆ ಮುಖ್ಯ. ಕ್ರಿಯಾ ಸಮಿತಿ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕ ಪ್ರಯತ್ನ ಮಾಡಿದೆ.
ಪಿ.ಬಿ. ಸುಧಾಕರ ರೈ
   ಕಾರ್ಯದರ್ಶಿ, ಕಾಂಞಂಗಾಡು- ಕಾಣಿಯೂರು ರೈಲ್ವೇ ಕ್ರಿಯಾ ಸಮಿತಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next