Advertisement

ಪುತ್ತೂರಿನಲ್ಲಿ 60ನೇ ಶೌರ್ಯ ತಂಡ ರಚನೆ

11:43 AM Oct 15, 2022 | Team Udayavani |

ಪುತ್ತೂರು: ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ರಚಿಸಲಾದ ಶೌರ್ಯ ಎಂಬ ಹೆಸರಿನ ವಿಪತ್ತು ನಿರ್ವಹಣ ಅಭಿಯಾನದಲ್ಲಿ ರಾಜ್ಯದಲ್ಲಿ ಒಟ್ಟು 60 ತಂಡ ರಚಿಸಲಾಗಿದೆ.

Advertisement

ಜನಜಾಗೃತಿ ವೇದಿಕೆ, ನವಜೀವನ ಸಮಿತಿ, ಪ್ರಗತಿಬಂಧು, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರ, ಜಂಟಿ ಬಾಧ್ಯತ ಗುಂಪುಗಳ ಸದಸ್ಯರು, ಸ್ವತ್ಛತ ಸೇನಾನಿಗಳು, ಒಕ್ಕೂಟ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೀಗೆ ವಿವಿಧ ವಲಯಗಳಿಂದ ಆಸಕ್ತ ಕಾರ್ಯಕರ್ತರನ್ನು ಒಳಗೊಂಡು ಶೌರ್ಯ ತಂಡ ರಚಿಸಲಾಗುತ್ತದೆ. ಪುತ್ತೂರಿನಲ್ಲಿ 60 ನೇ ತಂಡ ರಚನೆಯಾಗಿದ್ದು, 180 ಸ್ವಯಂ ಸೇವಕರ ಬಲಿಷ್ಠ ತಂಡ ರೂಪುಗೊಂಡಿದೆ. ಈ ತಂಡದಲ್ಲಿ 12 ಮಹಿಳೆಯರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ.

ಆರಂಭ ಹೀಗೆ

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ ಎಫ್‌ ತಂಡಗಳು ವಹಿಸಿದ ಶ್ರಮವನ್ನು ಗಮನಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಯೋಚನೆಯ ಫಲವೇ ಶೌರ್ಯ ತಂಡ. 2019ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿ ಸಿದ ಭೀಕರ ಪ್ರವಾಹ, ಉಂಟಾದ ಹಾನಿ ಕಂಡಾಗ ಡಾ| ಹೆಗ್ಗಡೆ ಅವರ ಆಸಕ್ತಿ ಮತ್ತಷ್ಟು ಹೆಚ್ಚಿಸಿತು. ಧರ್ಮಸ್ಥಳದ ಆಶ್ರಯದಲ್ಲಿ ತಂಡ ರಚನೆಯ ಬಗ್ಗೆ ಸಮಗ್ರ ಪ್ರಸ್ತಾವನೆ ತಯಾರಿಸಿ ಕೇಂದ್ರದ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಯಿತು. ಅಲ್ಲಿಂದ ಅನುಮತಿ ಸಿಕ್ಕಿದ ಬಳಿಕ 2020ರಲ್ಲಿ ಶೌರ್ಯ ತಂಡ ರಚಿಸಿ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.

ರಾಜ್ಯಕ್ಕೆ ವಿಸ್ತರಣೆ

Advertisement

ರಾಜ್ಯದ ಇತರ ಕಡೆಗಳಲ್ಲೂ ಈ ತಂಡ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಮೂಡಿದ ಬಳಿಕ ವಿಸ್ತರಿಸಲಾಯಿತು. ಈಗ 60ನೇ ತಂಡ ರಚನೆಯಾಗಿದೆ. ಒಟ್ಟು 8200 ಸ್ವಯಂ ಸೇವಕರು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ 2 ವರ್ಷ ದಲ್ಲಿ ಇದು 20 ಸಾವಿರಕ್ಕೆ ಏರುವ ಗುರಿ ಇದೆ ಎನ್ನುತ್ತಾರೆ ಬೆಳ್ತಂಗಡಿ ವಿಪತ್ತು ನಿರ್ವಹಣ ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ್‌.

2 ಲಕ್ಷ ರೂ. ಪರಿಕರ

ಶೌರ್ಯ ತಂಡದ ಸದಸ್ಯರಿಗೆ ಲೋಗೋ ಸಹಿತ ಸಮವಸ್ತ್ರವಿದೆ. ತುರ್ತು ಸಂದರ್ಭ ಬಳಕೆಯಾಗುವ ರೋಪ್‌, ಜಾಕೆಟ್‌, ಸ್ಟ್ರೆಚರ್‌ ಸೇರಿದಂತೆ ಪ್ರತೀ ತಂಡಕ್ಕೆ 2 ಲಕ್ಷ ರೂ.ಗಳ ಪರಿಕರ ಒದಗಿಸಲಾಗುತ್ತದೆ. ತಂಡದ ಸದಸ್ಯರು ವಿಪತ್ತು ಸಂದರ್ಭ ಮಾತ್ರ ಧಾವಿಸಬೇಕಾದ ಕಾರಣ ಇತರ ಸಂದರ್ಭದಲ್ಲಿ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಚಿಸಲಾಗಿದೆ. ಅದ ರಂತೆ ಸಭೆ, ಸಾಮಾಜಿಕ ಕೆಲಸಗಳನ್ನು ಮಾಡುತ್ತಾರೆ.

ಸೂಕ್ತ ತರಬೇತಿ

ಶೌರ್ಯ ತಂಡದ ಸದಸ್ಯರಿಗೆ ಎಸ್‌ಡಿಆರ್‌ಎಫ್‌, ಎನ್‌ ಡಿಆರ್‌ಫ್‌, ಅಗ್ನಿಶಾಮಕ ದಳಗಳಿಂದ ವೈಜ್ಞಾನಿಕ ತರಬೇತಿಯನ್ನು ಪ್ರತೀ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ತರಬೇತಿ ಮತ್ತಿತರ ಕಾರ್ಯಕ್ರಮಗಳಿಗಾಗಿ ಈ ವರ್ಷ ಎಸ್‌ಕೆಡಿಆರ್‌ಡಿಪಿಯಿಂದ ರಾಜ್ಯಕ್ಕೆ 2 ಕೋ. ರೂ.ಮೀಸಲಿಡಲಾಗಿದೆ.

ವೈಜ್ಞಾನಿಕ ಪರಿಕಲ್ಪನೆ: ದುರಂತಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಲ್ಪಿಸುವ ವೈಜ್ಞಾನಿಕ ಪರಿಕಲ್ಪನೆ ಇದು. ಪುತ್ತೂರಿನ ತಂಡಕ್ಕೆ ಈಗ ಅಗ್ನಿಶಾಮಕ ದಳದಿಂದ ತರಬೇತಿ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಎಸ್‌ಡಿಆರ್‌ಎಫ್‌ ನಿಂದ ತರಬೇತಿ ನೀಡಿ ಬಲಿಷ್ಠ ತಂಡ ರಚಿಸಲಾಗುವುದು. –ಗಿರೀಶ್‌ ನಂದನ್‌, ಸಹಾಯಕ ಆಯುಕ್ತರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next