Advertisement

ಪತ್ನಿಯ ಕಥೆಗೆ ಪತಿಯ ನಿರ್ದೇಶನ 

01:12 PM Oct 03, 2017 | Team Udayavani |

ಓಂಪ್ರಕಾಶ್‌ ರಾವ್‌ ತಮ್ಮ ನಿರ್ದೇಶನದ “ಹುಚ್ಚ-2′ ಚಿತ್ರವನ್ನು ಸೆಪ್ಟೆಂಬರ್‌ಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಇತ್ತ ಕಡೆ ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ಅವರು “ಮುಸ್ಸಂಜೆ’ ಮಹೇಶ್‌ ನಿರ್ದೇಶನದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಒಂದೇ ದಿನ ಎರಡು ಸಿನಿಮಾ ಮುಹೂರ್ತ ಮಾಡಿದ್ದಲ್ಲದೇ, ಮುಂದಿನ ಎರಡು ಪ್ರಾಜೆಕ್ಟ್ಗಳಿಗೂ ಮಹೇಶ್‌ ನಿರ್ದೇಶಕರು ಎಂದು ಘೋಷಿಸಿಕೊಂಡಿದ್ದರು.

Advertisement

ಆದರೆ, ಆ ಎರಡು ಚಿತ್ರಗಳು ನಿಂತ ಸುದ್ದಿ ಗಾಂಧಿನಗರದಲ್ಲಿದೆ. ಈ ಗ್ಯಾಪಲ್ಲೇ ಓಂಪ್ರಕಾಶ್‌ ರಾವ್‌ ಹಾಗೂ ದತ್ತಾತ್ರೇಯ ಬಚ್ಚೇಗೌಡ ಒಂದಾಗಿದ್ದಾರೆ. ಅದರ ಪರಿಣಾಮವಾಗಿ ಸಿನಿಮಾವೊಂದು ಆರಂಭವಾಗುತ್ತಿದೆ. ಇತ್ತೀಚೆಗೆ ಓಂಪ್ರಕಾಶ್‌ ರಾವ್‌ ಅವರ ಹೊಸ ಚಿತ್ರದ ಮುಹೂರ್ತ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆಯಿತು.  ಈಗಾಗಲೇ ಓಂ ಅವರ “ಹುಚ್ಚ-2′ ಚಿತ್ರದಲ್ಲಿ ನಾಯಕರಾಗಿರುವ ಮದರಂಗಿ ಕೃಷ್ಣ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ಓಂಪ್ರಕಾಶ್‌ ರಾವ್‌ ಅವರ ಪತ್ನಿ ಡೆನ್ನಿಸಾ ಪ್ರಕಾಶ್‌ ಕಥೆ ಬರೆದಿದ್ದು, ಓಂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕೆ ಎಂ.ಎಸ್‌.ರಮೇಶ್‌ ಸಂಭಾಷಣೆ ಇದೆ. ಚಿತ್ರದಲ್ಲಿ ನಾಯಕಿಯಾಗಿ ಕೃತಿಕಾ ನಟಿಸುತ್ತಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ಅವಿನಾಶ್‌, ಅಚ್ಯುತ ಕುಮಾರ್‌, ಚಿತ್ರಾ ಶೆಣೈ, ಸುಧಾ ಬೆಳವಾಡಿ, ಸಾಧು ಕೋಕಿಲ, ನಾಗಶೇಖರ್‌, ಪ್ರಶಾಂತ್‌ ಸಿದ್ಧಿ ಮುಂತಾದವರಿದ್ದಾರೆ. 

ಚಿತ್ರಕ್ಕೆ ಜೆ.ಬಿ ಸಂಗೀತ ನಿರ್ದೇಶನ, ವಿ. ರವಿಕುಮಾರ್‌ ಛಾಯಾಗ್ರಹಣ, ಲಕ್ಷ್ಮಣ್‌ ರೆಡ್ಡಿ ಸಂಕಲನ ಹಾಗೂ ಪಳನಿರಾಜ್‌ ಅವರ ಸಾಹಸ ನಿರ್ದೇಶನವಿದೆ. ಅಕ್ಟೋಬರ್‌ ಹದಿನೈದರಿಂದ ಚಿತ್ರಕ್ಕೆ ಬೆಂಗಳೂರು, ಮೈಸೂರು, ಕೊಡಗು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಓಂಪ್ರಕಾಶ್‌ ರಾವ್‌ ಅನೌನ್ಸ್‌ ಮಾಡಿ, ಇನ್ನೂ ಆರಂಭವಾಗದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಆ ಸಿನಿಮಾ ಆ ಸಾಲಿಗೆ ಸೇರದಿದ್ದರೆ ಸಾಕು ಎಂಬುದು ಚಿತ್ರ ಪ್ರೇಮಿಗಳ ಹಾರೈಕೆ. 

Advertisement

Udayavani is now on Telegram. Click here to join our channel and stay updated with the latest news.

Next