Advertisement

ವಿಭಿನ್ನ ಪ್ರಚಾರದಲ್ಲಿ ‘ಹೊಂದಿಸಿ ಬರೆಯಿರಿ..’

04:26 PM Jun 10, 2022 | Team Udayavani |

ಸಿನಿಮಾ ಮಾಡೋದೇ ಒಂದು ಸವಾಲಾದರೆ, ಅದನ್ನು ಥಿಯೇಟರ್‌ಗೆ ತರುವುದು ಪ್ರೇಕ್ಷಕರಿಗೆ ಮುಟ್ಟಿಸುವುದು ಇನ್ನೊಂದು ಸವಾಲು. ಅದರಲ್ಲೂ ಹೊಸಬರ ಸಿನಿಮಾಗಳಿಗೆ, ಹೊಸಥರದ ಕಂಟೆಂಟ್‌ ಸಿನಿಮಾಗಳಿಗೆ ಈ ಸವಾಲುಗಳನ್ನು ಎದುರಿಸಿದರೇನೇ, ಗೆಲುವಿನ ನಗೆ ಬೀರಲು ಸಾಧ್ಯ. ಹೀಗಾಗಿ ಇತ್ತೀಚೆಗೆ ಸಿನಿಮಾ ತಂಡಗಳು ಹೊಸರೀತಿಯ ಪ್ರಚಾರ ಕಾರ್ಯಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುತ್ತವೆ. ಇದೀಗ “ಹೊಂದಿಸಿ ಬರೆಯಿರಿ’ ಚಿತ್ರತಂಡ, ಅಂಥದ್ದೊಂದು ವಿಭಿನ್ನ ಪ್ರಮೋಶನ್ಸ್‌ ಮೂಲಕ ಗಮನ ಸೆಳೆಯುತ್ತಿದೆ.

Advertisement

ಹೌದು, “ಹೊಂದಿಸಿ ಬರೆಯಿರಿ’ ಸಿನಿಮಾ ಟೀಂ ಸಾಮಾಜಿಕ ಕಾರ್ಯಗಳ ಮೂಲಕ ವಿಭಿನ್ನವಾಗಿ ಚಿತ್ರದ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಇತ್ತೀಚೆಗೆ ನಡೆದ “ವಿಶ್ವ ಪರಿಸರ ದಿನ’ದ ಅಂಗವಾಗಿ ಸೈಕಲ್‌ ಜಾಥಾ ನಡೆಸುವ ಮೂಲಕ ಚಿತ್ರತಂಡ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.

ನಾಯಕ ನಟರಾದ ಪ್ರವೀಣ್‌ ತೇಜ್‌, ನವೀನ್‌ ಶಂಕರ್‌, ಶ್ರೀ ಮಹಾದೇವ್‌, ನಾಯಕಿಯರಾದ ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು, ಭಾವನಾ ರಾವ್‌, ಅರ್ಚನಾ ಜೋಯಿಸ್‌, ಅನಿರುದ್ಧ್ ಆಚಾರ್ಯ, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಹೀಗೆ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಸರ ಸಂರಕ್ಷಣೆಯ ಕಾರ್ಯದ ಜೊತೆಗೆ ಪ್ರಚಾರ ಕಾರ್ಯವನ್ನೂ ನಡೆಸಿದರು.

ಇದನ್ನೂ ಓದಿ:ಫ್ಯಾಮಿಲಿ ಪ್ಯಾಕ್‌ ಜೋಡಿಯ ‘ಅಬ್ಬಬ್ಬ’ ಸ್ಟೋರಿ!

ಇನ್ನೂ ಇದೇ ಭಾನುವಾರ “ವಿ ರನ್‌ ಫಾರ್‌ ಕಾಸ್‌’ ಎಂಬ ಮ್ಯಾರಾಥಾನ್‌ ಕಾರ್ಯಕ್ರಮದಲ್ಲೂ ಭಾಗಿಯಾಗಲಿರುವ “ಹೊಂದಿಸಿ ಬರೆಯಿರಿ’ ಸಿನಿಮಾ ತಂಡ, ಈ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಜಾಗೃತಿ ಮೂಡಿಸುವ ಕೆಲಸಕ್ಕೂ ಮುಂದಾಗಿದೆ.

Advertisement

“ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಶಾಂತಿ ಸಾಗರ್‌ ಛಾಯಾಗ್ರಹಣ, ಜೋಕೋಸ್ಟ ಸಂಗೀತವಿದೆ. ಕೆ. ಕಲ್ಯಾಣ್‌, ಹೃದಯಶಿವ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಂಡೇ ಸಿನಿಮಾಸ್‌’ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಿದೆ. ಇದೇ ತಿಂಗಳ 24ಕ್ಕೆ “ಹೊಂದಿಸಿ ಬರೆಯಿರಿ’ ಸಿನಿಮಾದ ಮೊದಲ ಹಾಡು, ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next