Advertisement

ಮತದಾರರ ಸೆಳೆಯಲು ವಿಭಿನ್ನ ಯತ್ನ

06:00 AM May 12, 2018 | |

ಶನಿವಾರ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು, ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಆಯೋಗ ಹಲವು ವಿಭಿನ್ನ, ವಿನೂತನ ಮಾದರಿಗಳನ್ನು ಅನುಸರಿಸುತ್ತಿದೆ. ಮಹಿಳೆಯರಿಗಾಗಿಯೇ ಪಿಂಕ್‌ ಮತಗಟ್ಟೆಗಳ ಸ್ಥಾಪನೆ, ಸ್ಥಳೀಯ ಕಲೆ, ಸಂಸ್ಕೃತಿಗೆ ಒತ್ತು ನೀಡುವ ಸಾಂಪ್ರದಾಯಿಕ ಮತಗಟ್ಟೆಗಳ ನಿರ್ಮಾಣ, ಮಾದರಿ ಮತಗಟ್ಟೆ ಸ್ಥಾಪನೆ ಸೇರಿ ಹಲವು ಪ್ರಯೋಗಗಳಿಗೆ ಮುಂದಾಗಿದೆ.

Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 5 ಕಡೆ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳು ಸಿಂಗಾರಗೊಂಡಿವೆ. ತಾಳೆಗರಿ, ತೆಂಗಿನ ಗರಿ, ಸಾಂಪ್ರದಾಯಿಕ ಡೋಲು, ಕಳಸ, ಒನಕೆ, ಕೆಂಪು, ಬಿಳಿ ವರ್ಣದ ಚಿತ್ತಾರಗಳು ಇಲ್ಲಿ ಕಂಗೊಳಿಸುತ್ತಿವೆ. ಪ್ರವೇಶದ್ವಾರವನ್ನು ಹುಲ್ಲಿನ ಹೆಣಿಗೆಯೊಂದಿಗೆ ಸಿದಟಛಿಪಡಿಸಲಾಗಿದೆ. ಅಕ್ಕಪಕ್ಕದಲ್ಲಿ ಸಾಂಪ್ರದಾಯಿಕ ಚಿತ್ರಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಸಾಂಪ್ರದಾಯಿಕ ಮತಗಟ್ಟೆಗಳ ವಿನ್ಯಾಸ ರೂಪಿಸಿದವರು ಯಕ್ಷಗಾನ ಕಲಾವಿದರಾದ ಸುರತ್ಕಲ್‌ನ ಗಿರೀಶ್‌ ನಾವಡ.

ಅಕ್ರಮ ತಡೆಯಲು ಅಮೆಂಟ್ಮೆಂಟ್ ಲಿಸ್ಟ್‌!
ಪುತ್ತೂರು: ವಿದೇಶದಲ್ಲಿರುವ ತಮ್ಮ ಸಂಬಂಧಿಕರ ಪರವಾಗಿ ಇನ್ನೊಬ್ಬರು ಮತ ಚಲಾಯಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅವಕಾಶವೇ ಇಲ್ಲ. ಹೊರರಾಜ್ಯ ಹಾಗೂ ವಿದೇಶದಲ್ಲಿರುವ ಮತದಾರರ ಪಟ್ಟಿಯನ್ನು ಈ ಬಾರಿ ಚುನಾವಣಾ ಆಯೋಗ ಸಿದ್ಧಪಡಿಸಿದ್ದು, ಇದನ್ನು ಮತಗಟ್ಟೆ ಅಧಿಕಾರಿ, ಅಧ್ಯಕ್ಷಾಧಿಕಾರಿಗೆ ನೀಡಲಾಗಿದೆ. ಅಮೆಂಟ್ಮೆಂಟ್ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ಇನ್ನೊಬ್ಬರು ಮತ ಚಲಾಯಿಸಿದರೆ ತಕ್ಷಣ ಇದು ಅಧಿಕಾರಿಗಳ ಗಮನಕ್ಕೆ ಬರಲಿದೆ. ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 5,276 ಮಂದಿಯನ್ನು ಅಮೆಂಟ್ಮೆಂಟ್ ಪಟ್ಟಿಗೆ ಸೇರಿಸಲಾಗಿದೆ.

ಮೂಲಸೌಲಭ್ಯ ಸಹಿತ ವ್ಯವಸ್ಥೆ
ಮಂಗಳೂರು: ನಗರದ ಲೇಡಿ ಹಿಲ್‌ ವಿಕ್ಟೋರಿಯಾ ಪ್ರೌಢಶಾಲೆಯ ಬೂತ್‌ ಸಂಖ್ಯೆ 12 ಹಾಗೂ ಗಾಂಧಿನಗರದ ಸ.ಹಿ.ಪ್ರಾ. ಶಾಲೆಯ ಬೂತ್‌ ಸಂಖ್ಯೆ 74ರ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಸಿದಟಛಿಪಡಿಸಲಾಗಿದೆ. ಇಲ್ಲಿ ಸರದಿ ಸಾಲು ಇರುವುದಿಲ್ಲ. ಮತ ಹಾಕಲು ಬರುವ ಮತದಾರ ನೇರವಾಗಿ ಬಂದು ಮತ ಹಾಕಬಹುದು. ಅದಕ್ಕಿಂತ ಮೊದಲು ಬಂದ ಮತದಾರರು ಇದ್ದರೆ, ಟೋಕನ್‌ ಕೊಡಲಾಗು ತ್ತದೆ. ಅಲ್ಲಿಯವರೆಗೆ ಮತದಾರ ಅಲ್ಲಿಯೇ ವಿಶ್ರಾಂತಿ ಪಡೆಯಲು ಕುರ್ಚಿ, ಬೆಂಚು, ಸೋಫಾ ಸೇರಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಮತಗಟ್ಟೆಗಳ ಪ್ರವೇಶದ್ವಾರದಿಂದಲೇ ಸುಸಜ್ಜಿತವಾಗಿ ನವೀಕರಿಸಲಾಗಿದೆ. ಸ್ವಾಗತ  ಕಮಾನು ಮಾಡಲಾಗಿದೆ. ಮತದಾರರಿಗೆ ಮಾಹಿತಿ ತಿಳಿಸುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಜೋಡಿಸಲಾಗಿದೆ. ಮತಗಟ್ಟೆಯ ಒಳಗಡೆ ಬಲೂನುಗಳ ಸಹಾಯದಿಂದ ಆಕರ್ಷಕವಾಗಿ ಕೋಣೆ ಶೃಂಗರಿಸಲಾಗಿದೆ. ಮದುವೆ ಮನೆಯಲ್ಲಿರುವ ಶೃಂಗಾರ ಮತಗಟ್ಟೆಯಲ್ಲಿದೆ.
ಫ್ಯಾನ್‌, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ವ್ಯವಸ್ಥೆಯಿದೆ. ಮತಗಟ್ಟೆಗಳಿಗೆ ಮತದಾರರು ಬರುವಾಗ ಅನಿವಾರ್ಯವಾಗಿ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದರೆ ನೋಡಿಕೊಳ್ಳಲು ಒಬ್ಬ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಜತೆಗೆ, ಮಕ್ಕಳಿಗೆ ಆಟವಾಡಲು ಆಟೋಟ ಸಾಮಗ್ರಿಗಳನ್ನು ಜೋಡಿಸಿ ಡಲಾಗಿದೆ.

ಗಿರಿಜನರ ಹಟ್ಟಿಯಲ್ಲ, ಮತಗಟ್ಟೆ
ಮೈಸೂರು: ಆದಿವಾಸಿ ಗಿರಿಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಕರೆತರಲು ಆದಿವಾಸಿ ಗಿರಿಜನರು ಹೆಚ್ಚಾಗಿ ವಾಸಿಸುವ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜ ನಗರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ 28 ಮತಗಟ್ಟೆಗಳನ್ನು ಸಾಂಪ್ರದಾಯಿಕವಾಗಿ ಸಜ್ಜುಗೊಳಿಸಲಾಗಿದೆ. ಹಾಡಿ/ಪೋಡುಗಳಲ್ಲಿನ ಹಟ್ಟಿಗಳ ಮಾದರಿಯಲ್ಲಿಯೇ ಮತಗಟ್ಟೆ ಸ್ಥಾಪಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಮೂಲಕ ಪ್ರತಿ ಜಿಲ್ಲೆಯಲ್ಲಿ ನಾಲ್ಕು ಮತಗಟ್ಟೆಗಳನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ಎಂಸಿಎ ಸಂಸ್ಥೆಯ ಮೂಲಕ ವ್ಯವಸ್ಥೆ ರೂಪಿಸಿದ್ದು, ಎಂಸಿಎ ಪ್ರತಿನಿಧಿಯಾಗಿ ಕಲಾವಿದ ವೇಣುಗೋಪಾಲ್‌ ಮುಂದಾಳತ್ವದಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ಬಸವನಗಿರಿ ಗಿರಿಜನ ಆಶ್ರಮ ಶಾಲೆ, ಡಿ.ಬಿ.ಕುಪ್ಪೆ ಆನೆಮಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಹಾಗೂ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಗಿರಿಜನರ ಜೋಪಡಿಗಳ ಮಾದರಿಯಲ್ಲೇ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next