Advertisement

ಧಾರವಾಡ: ಕೃಷಿ ಚಟುವಟಿಕೆ ಸ್ಥಗಿತ-ಕೈಕಟ್ಟಿ ಕುಳಿತ ಅನ್ನದಾತ

04:41 PM Oct 22, 2024 | Team Udayavani |

ಉದಯವಾಣಿ ಸಮಾಚಾರ
ಲಕಮಾಪುರ: ಕಳೆದ ವರ್ಷ ಹಿಂಗಾರು ಮಳೆ ಅಭಾವದಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವಂತೆ ಆಗಿವೆ. ಮೊದಲು ಮಾನ್ಸೂನ್‌ ಮಾರುತಗಳು ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಆದರೆ ಪ್ರಸಕ್ತ ವರ್ಷ ಹಿಂಗಾರು ಮಳೆ ಎಡೆಬಿಡದೇ ಕಾಡುತ್ತಿವೆ. ಹೀಗಾಗಿ ಈಗಾಗಲೇ ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

Advertisement

ಭೂಮಿ ಹದವೂ ಆಗಿಲ್ಲ: ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಕೆರೆಗಳಂತೆ ಕಾಣುತ್ತಿವೆ. ಕೊರಕಲುಗಳು ಬಿದ್ದಿವೆ. ಹೊಲಗಳಿಗೆ ಹೋಗುವ ಕಾಲುದಾರಿಗಳು ತಗ್ಗುಗಳಿಂದ ಕೂಡಿದ್ದು, ನೀರು ತುಂಬಿ ಸಂಪೂರ್ಣ ಹಾಳಾಗಿವೆ. ಟ್ರಾಕ್ಟರ್‌, ಚಕ್ಕಡಿಗಳು ಸಾಗುವ ದಾರಿಗಳು ಕೆಸರುಮಯವಾಗಿವೆ. ಇದರಿಂದ ವಾಹನಗಳ ಮೂಲಕ ಕೃಷಿ ಚಟುವಟಿಕೆಯೂ ಅಸಾಧ್ಯ ಎನ್ನುವಂತಾಗಿದೆ. ಈ ವೇಳೆಗಾಗಲೇ ಹಿಂಗಾರಿನ ಬೆಳೆಗಳ ಎಡೆ ಹೊಡೆಸಿಕೊಳ್ಳುವ ಕಾರ್ಯ ನಡೆಯುತ್ತಿದ್ದವು. ಆದರೆ ಈವರೆಗೆ ಭೂಮಿಯನ್ನು ಹದ ಸಹಿತ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ದೂರದ ಮಾತು. ಸದ್ಯ 10-12 ದಿನಗಳ ಕಾಲ ಮಳೆ ನಿಂತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗುತ್ತದೆ.

ದಿಕ್ಕು ತೋಚದ ಸ್ಥಿತಿ: ಹಿಂಗಾರಿನ ಬೆಳೆಗಳು ಅಲ್ಪ ಪ್ರಮಾಣದ ಮಳೆಯಾಶ್ರಿತ, ತಂಪು ಹವಾಮಾನ¨ ಮೇಲೆ ಬರುವ ಬೆಳೆಗಳಾಗಿವೆ. ಆದರೆ ಅತಿಯಾದ ಮಳೆಯಿಂದಾಗಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಇನ್ನೂ ಮಳೆ ಆಗುವುದಕ್ಕಿಂತ ಮುಂಚೆ ಬಿತ್ತನೆ ಮಾಡಿದ ಬೀಜಗಳು ಕೊಳೆತು ಮಣ್ಣಾಗಿವೆ. ತರಕಾರಿ ಬೆಳೆಗಳೆಲ್ಲ ಮಳೆ ಹೊಡೆತಕ್ಕೆ ಹಾಳಾಗಿವೆ. ಅಲ್ಲದೇ ಕೈಗೆ ಬರಬೇಕಿದ್ದ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮಣ್ಣಿನಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ 
ಅತಿಯಾದ ಮಳೆಗೆ ಆಲೂಗಡ್ಡೆ ಬೆಳೆ ಮಣ್ಣಿನಲ್ಲಿಯೇ ಶೇ.75 ಕೊಳೆತು ಹೋಗಿದೆ. ಕಡಲೆ ಬಿತ್ತನೆ ಮಾಡಿದ್ದರಲ್ಲಿ ಶೇ.20 ಹುಟ್ಟಿಲ್ಲ. ಕೆಲವು ರೈತರು ಬಿತ್ತಿದ ಕಡಲೆ ಬೀಜಗಳು ಮೊಳಕೆ ಒಡೆದಿದ್ದು, ಅತಿಯಾದ ಮಳೆಯಿಂದ ಕೆಂಪಾಗಿವೆ. ಕೆಲವು ವರ್ಷಗಳಿಂದ ಲಕಮಾಪುರದಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ಗಣನೀಯವಾಗಿದೆ. ಶೇ.4 ಹತ್ತಿ ಬೆಳೆಗಾರರು ಇದ್ದಾರೆ. ಹತ್ತಿ ಗಿಡಗಳೆಲ್ಲ ಅತಿಯಾದ ತಂಪಿನಿಂದ ಕೆಂಪಾಗಿವೆ. ಕಾಯಿ ಸಮೇತ ಹತ್ತಿ ಗಿಡಗಳು ನೆಲಕ್ಕುರುಳಿವೆ. ತರಕಾರಿ ಬೆಳೆಗಳಾದ ಟೊಮ್ಯಾಟೋ, ಸೌತೆಕಾಯಿ, ಮೆಣಸಿನ ಕಾಯಿಗಿಡಗಳು ಶೇ.5 ಹಾಳಾಗಿವೆ.

7 ಎಕರೆಯಲ್ಲಿ ಬಿತ್ತಿದ್ದ ಕಡಲೆ ಬೀಜ ಮಳೆಯಿಂದ ನಾಶವಾಗಿದೆ. ಅಲ್ಲಲ್ಲಿ ಮೊಳಕೆಯೊಡೆದ ಬೀಜಗಳನ್ನು ಹಾಗೆ
ಬಿಟ್ಟರೂ ಉಪಯೋಗವಿಲ್ಲ. ಸಾಲಸೋಲ ಮಾಡಿ ಲಾವಣಿಗೆ ಪಡೆದ ಹೊಲಗಳು ಮೈಮೇಲೆ ಬಂದಿವೆ. ಮತ್ತೆ ಹರಗಿ ಬಿತ್ತಲು ಸಾಕಷ್ಟು ಖರ್ಚಾಗುತ್ತದೆ. ಬೀಜ-ಗೊಬ್ಬರ ಮತ್ತೆ ಖರೀದಿಸುವುದು ಕಷ್ಟ.
*ಚಂದ್ರಪ್ಪ ಗಬ್ಬೂರು, ರೈತ

Advertisement

ಒಂಭತ್ತು ಎಕರೆ ಆಲೂಗಡ್ಡೆ ಬೆಳೆ ಬಂದಿದೆ. ಆದರೆ ಆಲೂಗಡ್ಡೆ ತೆಗೆಯಲು ಮಳೆ ಬಿಡುತ್ತಿಲ್ಲ. ಇದರಿಂದ ಭೂಮಿ ಒಳಗೆ ಕೊಳೆಯುತ್ತಿದೆ. ಲಕ್ಷಗಟ್ಟಲೆ ಖರ್ಚು ಮಾಡಲಾಗಿದೆ. ಮಳೆ ಸಡಿಲವಾಗುವಂತೆ ಕಾಣುತ್ತಿಲ್ಲ. ಹೀಗಾದರೆ ಸುಮಾರು 14 ಲಕ್ಷ ರೂ. ಮೌಲ್ಯದ ಬೆಳೆ ಕೈತಪ್ಪಲಿದೆ.
*ಕಾಂತಪ್ಪ ಗಬ್ಬೂರು, ರೈತ

ಅತಿಯಾದ ಮಳೆಯಿಂದ ಹೊಲದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಫಲ ಕೈಗೆ ಹತ್ತುತ್ತಿಲ್ಲ. ಇದರಿಂದ  ಮಾಡಿದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸರ್ಕಾರ ಹಾನಿಗೆ ಪರಿಹಾರ ಒದಗಿಸಬೇಕು.
*ಮಹಾಂತೇಶ ಬೆಟಗೇರಿ,
ಯುವ ರೈತ, ಲಕಮಾಪೂರ

ನಾಲ್ಕು ತಿಂಗಳ ಕಾಲ ಕಷ್ಟಪಟ್ಟು ಬೆಳೆಸಿದ ಮೆಣಸಿನ ಗಿಡಗಳು ಮಳೆಯಿಂದ ಹಾಳಾಗಿವೆ. ಇದರಿಂದ ಆರ್ಥಿಕ ಹೊರೆಯಾಗಿದೆ.
ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ಫಲ ನೀಡಲಿಲ್ಲವೆಂದರೆ ಬಹಳಷ್ಟು ನೋವಾಗುತ್ತದೆ. ಮತ್ತೆ ಸಾಲದ ಬರೆ ಹೆಚ್ಚಾಗುತ್ತದೆ.
*ಚನ್ನಬಸಪ್ಪ ಮೂಲಿಮನಿ, ರೈತ

*ಸುನೀಲ ತೇಗೂರ

Advertisement

Udayavani is now on Telegram. Click here to join our channel and stay updated with the latest news.

Next