Advertisement

ಸಾಹಿತ್ಯ ಲೋಕದ ಭೀಷ್ಮ ಧರ್ಮಸ್ಥಳ ಮಂಜಯ್ಯ ಹೆಗ್ಗಡೆ  

07:31 PM Nov 08, 2020 | mahesh |

ಮಂಜಯ್ಯ ಹೆಗ್ಗಡೆ  ಅವರು ಶಿಕ್ಷಣದ ಮಹತ್ವ ಅರಿತು 1980ರಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲ, 1947ರಲ್ಲಿ ಉಜಿರೆಯಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಕರ್ನಾಟಕ ವಿದ್ಯಾಲಯ ಸ್ಥಾಪಿಸಿದ್ದರು.

Advertisement

ಬೆಳ್ತಂಗಡಿ: ಧರ್ಮದೇವತೆಗಳ ನೆಲೆ ಎಂದು ಪ್ರಸಿದ್ಧಿ ಪಡೆದಿರುವ ಧರ್ಮಸ್ಥಳದ ಧರ್ಮ ಪೀಠದಲ್ಲಿ ಮಾತನಾಡುವ ಮಂಜುನಾಥರೆಂದೇ ತಮ್ಮ ಋಜು ಬಾಳ್ವೆಯಿಂದಾಗಿ ಪ್ರಸಿದ್ಧರಾಗಿದ್ದ ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ಅವರು 37 ವರ್ಷ ಧರ್ಮಾಧಿಕಾರಿಯಾಗಿ ಸುದೀರ್ಘ‌ ಸೇವೆ ಸಲ್ಲಿಸಿ ಜನಮಾನಸದಲ್ಲಿ ಉಳಿದವರು.

ದ.ಕ. ಜಿಲ್ಲೆಯ ವಿಟ್ಲದ ಕೇಪು ಎಂಬ ಗ್ರಾಮದಲ್ಲಿ ಚಿಕ್ಕಿತ್ತಡಿ ಅಣ್ಣಿಯಾನೆ ಪದ್ಮ ಶೆಟ್ಟರು ಮತ್ತು ಅನಂತಮ್ಮ ದಂಪತಿ ಪುತ್ರನಾಗಿ 2-11-1889 ರಲ್ಲಿ ಜನಿಸಿದ ಮಂಜಯ್ಯ ಹೆಗ್ಗಡೆ ಅವರು 1922ರಲ್ಲಿ ಮೂಡುಬಿದಿರೆಯ ಲೋಕಮ್ಮ ಅವರನ್ನು ವಿವಾಹವಾದರು. ಧರ್ಮಸ್ಥಳ ಕ್ಷೇತ್ರದ ಭವ್ಯ ಪರಂಪರೆಗೆ ಮಂಜಯ್ಯ ಹೆಗ್ಗಡೆ ಪ್ರವೇಶಿಸಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ರಂಗದಲ್ಲಿ ಕ್ಷೇತ್ರದ ಘನತೆ ಹೆಚ್ಚಿಸುವುದರೊಂದಿಗೆ ಅಂದು ನಾಡಿನ ಪ್ರಮುಖ ಬರಹಗಾರ ಹಾಗೂ ಚಿತ್ರಕಲಾವಿದರಾಗಿ ಮೇರುಪಂಕ್ತಿಯ ಕೊಡುಗೆ ನೀಡಿದ್ದರು. ಕೋಟ ಶಿವರಾಮ ಕಾರಂತ, ಮುಂಡಾಜೆ ರಂಗನಾಥ ಭಟ್ಟ, ಮೊಳಹಳ್ಳಿ ಶಿವರಾಯರು, ಹೊಸನಗರ ಪಾಯಪ್ಪ ಶೆಟ್ಟರು, ಹುರುಳಿ ಭೀಮರಾಯರು, ಮಂಜೇಶ್ವರ ಗೋವಿಂದ ಪೈ, ಕೆ.ಬಿ. ಜಿನರಾಜ ಹೆಗಡೆ ಮುಂತಾದ ದಿಗ್ಗಜ ಸಾಹಿತಿಗಳು ಮಂಜಯ್ಯ ಹೆಗ್ಗಡೆ ಅವರ ಒಡನಾಡಿಗಳಾಗಿದ್ದರು.

ಸರ್ವಧರ್ಮ, ಸಾಹಿತ್ಯ ಸಮ್ಮೇಳನ
ಕಾರ್ತಿಕ ಮಾಸದಲ್ಲಿ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ನಡೆಯುವುದು ವಾಡಿಕೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ. 1933ರಲ್ಲಿ ಪ್ರಥಮ ಸರ್ವ ಧರ್ಮ, ಸಾಹಿತ್ಯ ಸಮ್ಮೇಳನ ಆಯೋಜಿಸಿ ಜನರಲ್ಲಿ ಸಾಹಿತ್ಯ ಮತ್ತು ಧರ್ಮಗಳ ಬಗ್ಗೆ ಆಸಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದರು. ಈ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳು ಮತ್ತು ವಿವಿಧ ಧರ್ಮಗಳ ಪಂಡಿತರಿಂದ ಗೋಷ್ಠಿಗಳನ್ನು ಆಯೋಜಿಸುತ್ತಿದ್ದರು. ಮಂಜಯ್ಯ ಹೆಗ್ಗಡೆ ಅವರ ಈ ಪ್ರಯತ್ನವನ್ನು ಡಾ| ಶಿವರಾಮ ಕಾರಂತರು ಜ್ಞಾನೋತ್ಸವವೆಂದು ಕರೆದಿದ್ದರು.

ಮಂಜಯ್ಯ ಹೆಗ್ಗಡೆ ಅವರು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಕೆಲವು ಗ್ರಂಥಗಳನ್ನು ರಚಿಸಿದ್ದಾರೆ. ನಾಡಿನ ಕೆಲವು ಅಭಿನಂದನ ಗ್ರಂಥಗಳಲ್ಲಿ ಹಾಗೂ ಧಾರ್ಮಿಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ದೇವೇರ್‌, ಜೈನೇರ್‌, ಪಾಪ-ಪುಣ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

Advertisement

ತುಳು ಕೃತಿಗಳು: ದೇವೇರ್‌, ಜೈನೇರ್‌, ಅಂದೇ ಸ್ವಾಮಿ ಪಾಪ-ಪುಣ್ಯೋ ಎಂಚಾ, ತುಳು ನಿತ್ಯವಿಧಿ.
ಕನ್ನಡ ಕೃತಿಗಳು: ನನ್ನ ಕೌನ್ಸಿಲ್‌ ಮೆಂಬರಿಕೆ, ಬಾಹುಬಲಿ ಸ್ವಾಮಿ ಚರಿತೆ, ಶ್ರೀ ಕ್ಷೇತ್ರದ ಇತಿಹಾಸ, ಸಂಕ್ಷಿಪ್ತ ಪೂಜಾ ಸಂಗ್ರಹ, ಪಾಪ-ಪುಣ್ಯ, ಪಂಚಕಲ್ಯಾಣ, ಮೃತ್ಯುಂಜಯ.

ಇಷ್ಟೇ ಅಲ್ಲದೆ ಮಂಜಯ್ಯ ಹೆಗ್ಗಡೆ ಅವರ ಬಿಡಿ ಲೇಖನಗಳು, ಭಾಷಣಗಳು, ಪತ್ರಗಳು, ಮುನ್ನುಡಿಗಳು ಪ್ರಕಟಗೊಂಡಿವೆ.

ಕಲೋಪಾಸಕ
ಮಂಜಯ್ಯ ಹೆಗ್ಗಡೆ ಆಸಕ್ತಿ ಬಹುಮುಖವಾದುದು. ಅವರ ಪ್ರತಿಭೆ ಅನೇಕ ಮಾಧ್ಯಮಗಳಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನ, ಜಾನಪದ, ನೃತ್ಯ, ಛಾಯಾಚಿತ್ರ, ವರ್ಣಚಿತ್ರ, ಪುಸ್ತಕ ಸಂಗ್ರಹ ಮುಂತಾದವು ಅವರ ಹವ್ಯಾಸ. ಮಂಜಯ್ಯ ಹೆಗ್ಗಡೆ ಅವರು ಕಲೆಗಾಗಿ ತಮ್ಮನ್ನು ತಾವು ಪೂರ್ತಿಯಾಗಿ ಅರ್ಪಿಸದಿದ್ದರೂ ಅವರು ಆಗಿನ ಕಾಲದಲ್ಲಿ 32ಕ್ಕೂ ಅಧಿಕ ಅಭೂತಪೂರ್ವ ಚಿತ್ರಗಳನ್ನು ರಚಿಸಿದ್ದು, ಅವುಗಳಲ್ಲಿ 5 ಚಿತ್ರಗಳನ್ನು ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಈಗಿನ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಸಂಗ್ರಹಿಸಿಟ್ಟಿದ್ದಾರೆ.

ಮೃತ್ಯುಂಜಯ ಹೆಸರಿನ ನಾಟಕ ಬರೆದಿದ್ದಾರೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಹೊಸತನ, ಶಿಸ್ತು ತಂದುಕೊಟ್ಟ ಕೀರ್ತಿ ಇವರದು. ಶ್ರೇಷ್ಠ ಕಲಾವಿದರನ್ನು ಒಗ್ಗೂಡಿಸಿ ಯಕ್ಷಗಾನ ವೇಷ ಭೂಷಣದಲ್ಲಿ ಸುಧಾರಣೆ ತಂದಿದ್ದರು. ಶಿಕ್ಷಣದ ಮಹತ್ವ ಅರಿತು 1980ರಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲ ಸ್ಥಾಪನೆ, 1947ರಲ್ಲಿ ಉಜಿರೆಯಲ್ಲಿ ಪ್ರೌಢ ಶಿಕ್ಷಣಕ್ಕಾಗಿ ಕರ್ನಾಟಕ ವಿದ್ಯಾಲಯ ಸ್ಥಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next