Advertisement

Dharmasthala ನ್ಯಾಯಕ್ಕಾಗಿ ತಲೆಬಾಗುವೆವು; ಅಧರ್ಮಕ್ಕಲ್ಲ: ಡಾ| ಹೆಗ್ಗಡೆ

11:29 PM Oct 29, 2023 | Team Udayavani |

ಬೆಳ್ತಂಗಡಿ: ಒಂದು ದೇಶ ನಾಶಮಾಡಬೇಕಾದರೆ ಅಲ್ಲಿನ ಧರ್ಮ, ಸಂಸ್ಕೃತಿಗೆ ಹಾನಿ ಮಾಡಬೇಕಂತೆ. ಶುದ್ಧ ನೀರನ್ನು ಕಲುಷಿತಗೊಳಿಸಿದಂತೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಎಸಗಲಾಗಿದೆ. ಮಳೆ ಬಂದು ಕಲುಷಿತ ತೊಯ್ದಂತೆ, ಶಿಷ್ಟರಕ್ಷಕರಾದ ನಾಡಿನ ಅಸಂಖ್ಯಾತ ಭಕ್ತರು ಧರ್ಮಸೈನಿಕರಾಗಿ ಸುನಾಮಿಯಂತೆ ಎದ್ದು ಬಂದಿದ್ದೀರಿ. ಸರಕಾರ, ನ್ಯಾಯಾಲಯ ಯಾವುದೇ ತನಿಖೆಗೂ ಸಿದ್ಧ, ಆದರೆ ಅಧರ್ಮದ ಮಾತುಗಳು ಅಳಿಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಧರ್ಮಸ್ಥಳಕ್ಕೆ ಅ.29ರಂದು ಕೊಲ್ಲೂರು ಹಾಗೂ ಮಂಗಳೂರಿನ ಕದ್ರಿಯಿಂದ ಭವ್ಯ ಮೆರವಣಿಗೆಯಲ್ಲಿ ಬಂದ ಧರ್ಮಸಂರಕ್ಷಣ ರಥದ ಜತೆ ಉಜಿರೆಯಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಬಳಿಕ ಡಾ| ಹೆಗ್ಗಡೆಯವರು ಭಕ್ತಸಮೂಹವನ್ನು ಉದ್ದೇಶಿಸಿ ಮಾತನಾಡಿದರು.

ಕ್ಷೇತ್ರದಲ್ಲಿರುವ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಮಂಜುನಾಥ ಸ್ವಾಮಿ ಶಾಂತಿ, ತಾಳ್ಮೆಯ ಸಾಕಾರ ಮೂರ್ತಿಗಳು. ಧರ್ಮ ಪ್ರಜ್ಞೆಯ ನಾಶ ವಿನಾಶಕ್ಕೆ ಹಾದಿ. ಶ್ರೀ ಮಂಜುನಾಥ ಸ್ವಾಮಿ ವಿಷಕಂಠನಾಗಿದ್ದು ವಿಷವನ್ನು ಕಂಠದಲ್ಲಿಟ್ಟುಕೊಂಡು ಲೋಕಕಲ್ಯಾಣ ಮಾಡುತ್ತಾರೆ. ದೇವರು ದುಷ್ಟಶಕ್ತಿಗಳ ನಾಶಮಾಡಿ ಶಿಷ್ಟರ ರಕ್ಷಣೆ ಮಾಡುತ್ತಾರೆ. ಧರ್ಮಸ್ಥಳದ ಅಭಿಮಾನಿ ಭಕ್ತರು ಸ್ವಯಂ-ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕ್ಷೇತ್ರ, ಧರ್ಮ ಸಂಪತ್ತಿನ ರಕ್ಷಣೆಗಾಗಿ ಧರ್ಮ ಸೈನಿಕರಾಗಿ ಬಂದಿದ್ದೀರಿ. ನಿಮ್ಮ ಒಗ್ಗಟ್ಟು ತ್ಯಾಗವೇ ನಮ್ಮ ಸಂಪತ್ತು ಎಂದರು.

ಧರ್ಮ ಪೀಠಕ್ಕೆ ಶ್ರೀಗಳ ಅಭಯ
ಸಭೆಯ ಆರಂಭದಲ್ಲಿ ಹೆಗ್ಗಡೆಯವರು ವೇದಿಕೆಯ ಮಧ್ಯದಲ್ಲಿರುವ ಧರ್ಮ ಪೀಠದಲ್ಲಿ ಆಸೀನರಾದರು. ಎಲ್ಲ ಸ್ವಾಮೀಜಿಯವರು ಹಣ್ಣು-ಹಂಪಲು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಅಭಿಮಂತ್ರಿಸಿದ ಮಂತ್ರಾಕ್ಷತೆ ಹಾಕಿ ಶುಭ ಹಾರೈಸಿದರು. ಬಳಿಕ ಸಂಕಲ್ಪ ಪೀಠದಲ್ಲಿದ್ದ ಹರಿವಾಣವನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ಬಳಿಕ ಸೇರಿದ ಸಭಾಸದರೆಲ್ಲರೂ ನಾವು ಸದಾ ಧರ್ಮದ ರಕ್ಷಣೆಗಾಗಿ ಧರ್ಮಸ್ಥಳದ ರಕ್ಷಣೆಗೆ ನಿಮ್ಮೊಂದಿಗಿದ್ದೇವೆ ಎಂದು ದೃಢಸಂಕಲ್ಪ ಮಾಡಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಸೇರಿದಂತೆ 15 ಮಂದಿ ಮಠಾಧೀಶರು ಉಪಸ್ಥಿತರಿದ್ದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕ ಹರೀಶ್‌ ಪೂಂಜ ಇದ್ದರು.

ಮುಖ್ಯಾಂಶಗಳು
-ಕೊಲ್ಲೂರಿನಿಂದ ಹೊರಟ ಧರ್ಮ ಸಂರಕ್ಷಣ ರಥ ಮತ್ತು ಮಂಗಳೂರಿನಿಂದ ಕದ್ರಿ ದೇವಸ್ಥಾನದಿಂದ ಹೊರಟ ಧರ್ಮಸಂರಕ್ಷಣ ರಥ ಉಜಿರೆಯ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಶಾಸಕ ಹರೀಶ್‌ ಪೂಂಜ, ಸಂಚಾಲಕ ಶಶಿಧರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಉಭಯ ರಥಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
– ಸುಮಾರು 50ರಿಂದ 75 ಸಾವಿರದಷ್ಟು ಭಕ್ತರಿಂದ ಉಜಿರೆಯಿಂದ ಧರ್ಮಸ್ಥಳಕ್ಕೆ ಹೆಜ್ಜೆ.
– ಪಾದಯಾತ್ರೆಯಲ್ಲಿ ಮೊಳಗಿದ ಹರಹರ ಮಹಾದೇವ ಘೋಷಣೆ
– ಧರ್ಮಸ್ಥಳ ಮುಖ್ಯ ಪ್ರವೇಶದ್ವಾರದ ಬಳಿ ಧರ್ಮರಥ ಮತ್ತು ಪಾದಯಾತ್ರಿಗಳಿಗೆ ಸ್ವಾಗತ ಕೋರಿದ ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಶ್ರೇಯಸ್‌ ಕುಮಾರ್‌, ನಿಶ್ಚಲ್‌ಕುಮಾರ್‌.
– ಉಚಿತ ಪಾನೀಯ ವಿತರಿಸಿ ಧರ್ಮ ಸಾಮರಸ್ಯ ಮೆರೆದ ಕನ್ಯಾಡಿ ಬದ್ರಿಯಾ ಮಸೀದಿ ಮುಸಲ್ಮಾನ ಬಾಂಧವರು.
– ಸಾಮೂಹಿಕ ಪ್ರಾರ್ಥನೆಯೊಂದಿಗೆ ಪವಿತ್ರ ಧರ್ಮಕ್ಷೇತ್ರಗಳ ಸಂರಕ್ಷಣೆಯ ದೃಢಸಂಕಲ್ಪ.
– ಮಳೆ ಲೆಕ್ಕಿಸದೆ ಭಕ್ತರ ಸಮಾಗಮ, ಸಂಜೆ 3ರಿಂದ ರಾತ್ರಿ 7ರವರೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತರು.

ಕ್ಷೇತ್ರದಿಂದ ದುಪ್ಪಟ್ಟು ದಾನ ಧರ್ಮ
ಶ್ರೀ ಮುಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆ ಸನ್ನಿಧಿಯಲ್ಲಿ ಪ್ರತಿ ತಿಂಗಳು ಸಂಕ್ರಾಂತಿಯಂದು ತಾನು ವರದಿ ಒಪ್ಪಿಸಬೇಕು. ಅವರ ಅಭಯ, ಅನುಗ್ರಹ ತಾನು ಮಾಡುವ ಎಲ್ಲ ಸೇವಾ ಕಾರ್ಯಗಳಿಗೆ ಇದೆ. ತಾನು ಮತ್ತು ಕುಟುಂಬದವರು ಎಲ್ಲರೂ ಶಾಂತಚಿತ್ತರಾಗಿದ್ದೇವೆ. ನಮ್ಮಲ್ಲಿ ಯಾವುದೇ ಸಂಶಯ, ಗೊಂದಲವಿಲ್ಲ. ನಿಮ್ಮ ಆಶೀರ್ವಾದದಿಂದ ಮುಂದೆ ನಿಶ್ಚಿಂತೆಯಾಗಿರುವೆ. ಪ್ರತಿ ವರ್ಷ ಮಹಾರಾಷ್ಟ್ರದಿಂದ ಕರ್ನಾಟಕದವರೆಗೆ ನೂರು ದೇವಸ್ಥಾನಗಳ ಅಭಿವೃದ್ಧಿಗೆ ಅಭಯ ನೀಡುತ್ತಿದ್ದೇವೆ. ನಿಮ್ಮ ಪ್ರೀತಿಗೆ ಕೃತಜ್ಞತೆಯಾಗಿ ನಮ್ಮ ಸೇವಾಕಾರ್ಯ ದುಪ್ಪಟ್ಟಾಗಲಿವೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next