Advertisement

ರೈತ-ಕೃಷಿ ಕಾರ್ಮಿಕರ ಪ್ರಥಮ ಜಿಲ್ಲಾ ಸಮ್ಮೇಳನ 

05:13 PM Dec 16, 2018 | Team Udayavani |

ಧಾರವಾಡ: ರೈತ-ಕೃಷಿಕಾರ್ಮಿಕರ ಸಂಘಟನೆ ವತಿಯಿಂದ ರೈತ-ಕೃಷಿ ಕಾರ್ಮಿಕರ ಪ್ರಥಮ ಜಿಲ್ಲಾ ಸಮ್ಮೇಳನ ಕವಿಸಂನಲ್ಲಿ ಶನಿವಾರ ನಡೆಯಿತು. ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಲು, ಬರಗಾಲ ಕಾಮಗಾರಿ ಕೈಗೆತ್ತಿಕೊಳ್ಳಲು, ಕೆರೆಗಳಿಗೆ ನೀರು ತುಂಬಿಸಲು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗೊತ್ತುವಳಿಗಳನ್ನು ಮಂಡಿಸಲಾಯಿತು.

Advertisement

ಅತಿಥಿಯಾಗಿದ್ದ ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯಾಧ್ಯಕ್ಷ ಡಾ| ಟಿ. ಸುನಿತ್‌ ಕುಮಾರ ಮಾತನಾಡಿ, ಆಳುವ ಸರ್ಕಾರಗಳು ಹಾಗೂ ವ್ಯವಸ್ಥೆಯ ಒಲವು ಮತ್ತು ಹಿತಾಸಕ್ತಿ ಬಂಡವಾಳಗಾರರ ಪರವಾಗಿದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಿದೆ. ಪಕ್ಷಗಳನ್ನು ಬದಲಿಸುವುದರಿಂದಾಗಲಿ, ಚುನಾವಣೆಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಮಾಜವಾದಿ ಕ್ರಾಂತಿಯಿಂದ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಅದಕ್ಕಾಗಿ ಸರಿಯಾದ ವೈಚಾರಿಕತೆ ಮತ್ತು ನಾಯಕತ್ವದಡಿ ಹಳ್ಳಿಗಳಲ್ಲಿ ರೈತ ಸಮಿತಿಗಳನ್ನು, ಜನ ಸಮಿತಿಗಳನ್ನು ರಚಿಸಿಕೊಂಡು ಸ್ಥಳೀಯ ಸಮಸ್ಯೆಗಳ ವಿರುದ್ಧ ರಾಜಿ ರಹಿತ ಹೋರಾಟಗಳನ್ನು ಬೆಳೆಸಬೇಕು ಎಂದರು. ಸಮ್ಮೇಳನ ಉದ್ಘಾಟಿಸಿದ ಎಸ್‌ ಯುಸಿಐ-ಕಮ್ಯುನಿಸ್ಟ್‌ ಪಕ್ಷದ ರಾಜ್ಯಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ರಾಜಕಾರಣಿಗಳಿಗೆ ರೈತರು ಕೇವಲ ಓಟಿನ ದಾಳಗಳಾಗಿ ಕಾಣುತ್ತಿದ್ದಾರೆಯೇ ಹೊರತು ಯಾವ ರಾಜಕೀಯ ಪಕ್ಷಗಳೂ ಅವರ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್‌ ಪ್ರಯತ್ನವನ್ನೂ ಮಾಡಿಲ್ಲ. ಎಲ್ಲಾ ಪಕ್ಷಗಳು ದೊಡ್ಡ ದೊಡ್ಡ ಬಂಡವಾಳಗಾರರ ಪರವಾದ ನೀತಿಗಳನ್ನು ರೂಪಿಸುತ್ತ ಬಂದಿವೆ. ಈ ಕೊಳಕು ರಾಜಕೀಯ ವ್ಯವಸ್ಥೆ ತೊಲಗಿಸಲು ಹಾಗೂ ದುಡಿಯುವ ಜನರ ಶ್ರೇಷ್ಠ ರಾಜಕೀಯವನ್ನು ಎತ್ತಿ ಹಿಡಿಯಲು ರೈತರು ತಳಮಟ್ಟದಿಂದ ಸಂಘಟಿತರಾಗಿ ಸಮಾಜದ ಮೂಲಭೂತ ಬದಲಾವಣೆಗೆ ಕೈ ಜೋಡಿಸಬೇಕು ಎಂದರು.

ಆರ್‌ಕೆಎಸ್‌ ಸಂಘಟನೆ ಜಿಲ್ಲಾ ನಾಯಕ ಲಕ್ಷ್ಮಣ ಜಡಗನ್ನವರ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು. ನೂತನ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ ಜಡಗಣ್ಣವರ, ಉಪಾಧ್ಯಕ್ಷರಾಗಿ ಮಂಜುನಾಥ ಜೋಡಳ್ಳಿ, ಕಾರ್ಯದರ್ಶಿಯಾಗಿ ಶರಣು ಗೋನವಾರ, ಜಂಟಿ ಕಾರ್ಯದರ್ಶಿಯಾಗಿ ಅಲ್ಲಾವುದ್ದಿನ ಅಡ್ಲಿ, ಕಚೇರಿ ಕಾರ್ಯದರ್ಶಿಯಾಗಿ ಶಿವಲಿಂಗಪ್ಪ ಉಳಕಲ್‌ ಮತ್ತು ಕಲ್ಲಪ್ಪ ರಾಮನಾಳ ಸೇರಿ 30 ರೈತರನ್ನೊಳಗೊಂಡ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next