ಧಾರವಾಡ: ಮೀಸಲಾತಿ ಪಟ್ಟಿಯ ಪ್ರವರ್ಗ-1ರಲ್ಲಿ ಧನಗರ ಗೌಳಿ ಸಮುದಾಯವನ್ನೂ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿಯ ಕಪಡಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಒಕ್ಕೂಟವು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಇದಲ್ಲದೇ ತಾಪಂ ಕಚೇರಿಗೂ ತೆರಳಿದ ಒಕ್ಕೂಟವು, ಸಚಿವ ಲಾಡ್ ಹಾಗೂ ಸಚಿವ ಕುಲಕರ್ಣಿ ಅವರಿಗೂ ಮನವಿ ಸಲ್ಲಿಸಿದೆ. ಧನಗರ ಗೌಳಿ ಜನಾಂಗವನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಹಿಂದುಳಿದ ಆಯೋಗ, ಸರ್ಕಾರಿ ಅಧಿಧಿಕಾರಿ ಹಾಗೂ ರಾಜಕಾರಣಿಗಳಿಗೆ ಸಾಕಷ್ಟು ಸಲ ಮನವಿ ಮಾಡಲಾಗಿದೆ.
ಆದರೆ, ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಹಲವು ಸಭೆಗಳನ್ನು ನಡೆಸಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಮನವಿ ಸಲ್ಲಿಸಿದರೂ ನಮ್ಮ ಬೇಡಿಕೆ ಈಡೇರಿಲ್ಲ ಎಂದು ದೂರಲಾಗಿದೆ. ಧನಗರ ಗೌಳಿ ಸಮುದಾಯ ಸ್ವತಂತ್ರ ಭಾರತದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯ.
ಧನಗರ ಗೌಳಿ ಸಮುದಾಯ ಗೌಳಿ, ಹಿಂದು, ಧನಗರ, ಕಚ್ಚೆ ಗೌಳಿ, ಗೊಲ್ಲ ಗೌಳಿ, ಕಾಡು ಗೌಳಿ, ಢಂಗೆ ಗೌಳಿ, ಕೃಷ್ಣ ಮರಾಠಿ, ಗಾವಳಿ ಇತ್ಯಾದಿ ಹೆಸರಿನ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಆದರೆ, ಈ ಪಂಗಡಗಳು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಬಿ ಕೆಟಗರಿಗಳಲ್ಲಿ ಹೊಡೆದು ಹೋಗಿದೆ.
ಈ ರಾಜ್ಯದಲ್ಲಿ ಧನಗರ ಹಾಗೂ ಗೌಳಿ ಸಮುದಾಯಗಳಿವೆ. ದನಗರ ಗೌಳಿ ಹೆಸರನು ಧನಗರ್ ಅಥವಾ ಗೌಳಿ ಎಂದು ನೋಂದಾಯಿಸಿದರೆ ಅಥವಾ ಜಾತಿ ಪ್ರಮಾಣ ಪತ್ರ ನೀಡಿದರೆ, ಆ ಜಾತಿಗಲು ವಿಲೀನಗೊಂಡಂತೆ ಆಗುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಾಗರಾಜ ತೋರತ್, ದುಂಡುಬಾಬು ಲಾಂಬೋತ್, ಬಾಬು ಕೋಳವಾಟೆ, ಗುಂಡುಬಾಬು ಆಡೋಳಕರ, ಬಾಬುನಾಗು ಲಾಬೊಂರ ಸೇರಿದಂತೆ ಧಾರವಾಡ ಜಿಲ್ಲೆಯ ಹುಣಸಿಕುಮರಿ, ಹೊತ್ತಿಕೋಟಿ, ಶಿವಾನಗರ, ಕಿವುಂಡಬಯಲು, ನಾಗಲಾವಿ, ಅಂಬೋಳಿ, ಟಿ.ರಾಮಚಂದ್ರಪುರ, ಕೊಕ್ಕರೆವಾಡೆ, ಧೂಪಾರ್ತಿ ಹತ್ತಾರು ಹಳ್ಳಿಯಗಳ ಧನಗರ ಗೌಳಿ ಜನಾಂಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.