Advertisement

ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಭಕ್ತರು

07:45 AM Mar 05, 2019 | |

ಚಿಕ್ಕಬಳ್ಳಾಪುರ: ಎಲ್ಲೆಲ್ಲೂ ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು. ಶಿವನ ದೇಗುಲಗಳಿಗೆ ಹರಿದು ಬಂದ ಭಕ್ತಸಾಗರ. ಚಿಕ್ಕಬಳ್ಳಾಪುರದ ದಕ್ಷಿಣ ಕಾಶಿ ನಂದಿ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ. ಜಿಲ್ಲೆಯ ಪಂಚಲಿಂಗ ಕ್ಷೇತ್ರ ಚಿಂತಾಮಣಿಯ ಕೈವಾರದಲ್ಲೂ ಶಿವರಾತ್ರಿ ಸಂಭ್ರಮ ಜೋರು. ಜಿಲ್ಲಾದ್ಯಂತ ಮೊಳಗಿದ ಶಿವನಾಮನ ಜಪ.

Advertisement

ಶಿವ‌ ನಾಮಸ್ಮರಣೆ: ಜಿಲ್ಲಾದ್ಯಂತ ಸೋಮವಾರ ಆಚರಿಸಿದ ಮಹಾ ಶಿವರಾತ್ರಿ ಹಬ್ಬದ ವೇಳೆ ಜಿಲ್ಲೆಯಲ್ಲಿ ಕಂಡು ಬಂದ ಪ್ರಮುಖ ದೃಶ್ಯಗಳು ಇವು. ಶಿವನ ಆರಾಧನೆಗಾಗಿ ಎಂದಿನಂತೆ  ಕುಟುಂಬಸ್ಥರೊಂದಿಗೆ ಶಿವನ ದೇಗುಲಗಳಿಗೆ ಆಗಮಿಸಿ ಶಿವನ ದರ್ಶನ ಪಡೆದ ಭಕ್ತರು,  ಶ್ರದ್ಧಾಭಕ್ತಿಯಿಂದ ಆರಾಧ್ಯ ದೈವನಿಗೆ ನೈವೇದ್ಯ, ಕ್ಷೀರಾಭಿಷೇಕ, ಹೋಮ, ಹವನ ಮಾಡಿಸಿ ಶಿವ‌ ನಾಮಸ್ಮರಣೆಯಲ್ಲಿ ಮುಳುಗಿದ್ದರು. 

ಬೆಳಗ್ಗೆಯಿಂದ ಮಹಿಳೆಯರು, ಮಕ್ಕಳು ಉಪವಾಸ ಇದ್ದು, ಶಿವನ ದೇಗುಗಳಲ್ಲಿ ದೀಪೋತ್ಸವ ನಡೆಸಿ ಮಹಾ ಶಿವರಾತ್ರಿಗೆ ವಿಶೇಷ ಮೆರಗು ತಂದು ಕೊಟ್ಟರು. ದೇವಾಲಯಗಳಿಗೆ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗಿಸಲಾಯಿತು. ಹೂವಿನ ಹಾಗೂ ವಿದ್ಯುತ್‌ ದೀಪಾಲಂಕಾರಗಳಿಂದ ದೇವಾಲಯಗಳು ಕಂಗೊಳಿಸಿದವು. ಚಿಕ್ಕಬಳ್ಳಾಪುರದ ನಂದಿಯ ಬೋಗನಂದೀಶ್ವರ ದೇವಾಲಯದಲ್ಲಿ ಹಾಗೂ ನಂದಗಿರಿಧಾಮದ ಮೇಲಿರುವ ಯೋಗ ನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. 

ಪಂಚಲಿಂಗ ಕ್ಷೇತ್ರದಲ್ಲಿ ಶಿವರಾತ್ರಿ: ಜಿಲ್ಲೆಯ ದೇವಾಲಯಗಳ ನಗರಿ ಕೈವಾರದ ಅಮರನಾರೇಯಣಸ್ವಾಮಿ ದೇವಾಲಯ, ಯೋಗಿ ನಾರೇಯಣಮಠದಲ್ಲಿ ಜನಸಂದಣಿ ಅಧಿಕವಾಗಿತ್ತು. ತಾತಯ್ಯನವರ ಮೂಲ ಬೃಂದಾವನವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ವಿಶೇಷವಾಗಿ ಕೈವಾರ ಮಠದಲ್ಲಿ ಜಾಗರಣೆ ಪ್ರಯುಕ್ತ ಆಗಮಿಸಿದ್ದರು. 

ದಿನವಿಡೀ ದಾಸೋಹ: ಭಕ್ತರಿಗೆ ಶ್ರೀ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಭೀಮಲಿಂಗೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೈವಾರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕೈವಾರ ಮಠದಲ್ಲಿ ದಿನವಿಡೀ ಭಕ್ತರಿಗೆ ದಾಸೋಹ ಆಯೋಜಿಸಲಾಗಿತ್ತು.

Advertisement

ಪ್ರಸಾದ ಹಂಚಿಕೆಗೆ ನಿಷೇಧ: ಶಿವರಾತ್ರಿ ಪ್ರಯುಕ್ತ ದೇವಾಲಯಗಳ ಸಮೀಪ ಭಕ್ತರ ಜನಸಂದಣಿ ಹೆಚ್ಚಾಗಿದ್ದ ಕಾರಣ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ದೇವಾಲಯಗಳ ಸಮೀಪ ವಿಶೇಷ ಪೊಲೀಸ್‌ ಬಂದೋಬಸ್ತ್ ವಹಿಸಿದ್ದರು. ಈ ನಡುವೆ ವಿಷ ಪ್ರಸಾದ ಪ್ರಕರಣಗಳು ಜಿಲ್ಲೆಯ ಚಿಂತಾಮಣಿ ಸೇರಿದಂತೆ ರಾಜ್ಯದ ಹಲವೆಡೆ ಕಂಡು ಬಂದಿದ್ದ ಪರಿಣಾಮ ಕೆಲ ದೇವಾಲಯಗಳ ಬಳಿ ಭಕ್ತರಿಗೆ ಪ್ರಸಾದ ಹಂಚಿಕೆ ಮಾಡಲು ಜಿಲ್ಲಾಡಳಿತ ನಿಷೇಧ ಏರಿತ್ತು.

ಶಿವನ ದೇಗುಲಗಳಲ್ಲಿ ಜನಸಾಗರ: ಮಹಾ ಶಿವರಾತ್ರಿ ಪ್ರಯುಕ್ತ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಶಿವನ ದೇವಾಲಯಗಳಿಗೆ ಭೇಟಿ ನೀಡಿದ್ದರು. ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನ ಮಾಡಲು ತಡೆಗೋಡೆಗಳನ್ನು ನಿರ್ಮಿಸಿ ಸರದಿ ಸಾಲಿನಲ್ಲಿ ಭಕ್ತರನ್ನು ದೇವರ ದರ್ಶನಕ್ಕಾಗಿ ಒಳ ಬಿಡಲಾಗುತ್ತಿದ್ದ ದೃಶ್ಯಗಳು ದೇವಾಲಯಗಳಲ್ಲಿ ಕಂಡು ಬಂತು. 

ಚಿಕ್ಕಬಳ್ಳಾಪುರದ ನಂದಿಯ ಬೋಗನಂದಿಶ್ವರ ದೇವಾಲಯದಲ್ಲಿ ಭಕ್ತರು ದಂಡು ನೆರೆದಿತ್ತು. ಬೋಗನಂದಿಶ್ವರನಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಚಿಂತಾಮಣಿಯ ಐತಿಹಾಸಿಕ  ನಾಗನಾಥೇಶ್ವರಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿದವು. ಮುರಗಮಲೆ ಮುಕ್ತಿಶ್ವರಸ್ವಾಮಿ ದೇವಾಲಯ, ಅಂಬಾಜಿದುರ್ಗದ ಕೈಲಾಸಗಿರಿ ಗವಿ ಗಂಗಧಾರೇಶ್ವರಸ್ವಾಮಿ ಹಾಗೂ ಗೌರಿಬಿದನೂರು ವಿಧುರಾಶ್ವತ್ಥಕ್ಕೆ ಭಕ್ತರ ಜನಸಾಗರವೇ ಹರಿದು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next