Advertisement

ಮುಂಗಾರು ಅಧಿವೇಶನಕ್ಕೆ ಅಭೂತಪೂರ್ವ ಸಿದ್ಧತೆ

02:40 AM Aug 17, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಕಾಟದ ನಡುವೆಯೇ ಪ್ರಸಕ್ತ ವರ್ಷದ ಮುಂಗಾರು ಅಧಿವೇಶನಕ್ಕೆ ಸಂಸತ್ತು ಸಿದ್ಧಗೊಳ್ಳುತ್ತಿದೆ.

Advertisement

ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ.

ಅದಕ್ಕಾಗಿ 68 ವರ್ಷಗಳ ಇತಿಹಾಸವಿರುವ ಸಂಸತ್‌ ಭವನದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಕಟ್ಟುಪಾಡುಗಳು ಮತ್ತು ಮುನ್ನೆಚ್ಚರಿಕೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಇದರನ್ವಯ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಅವಧಿ ಬದಲಾಗಲಿದ್ದು, ದಿನದ ಬೇರೆ ಬೇರೆ ಅವಧಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಂಸತ್ತಿನ ಅಲ್ಲಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸಿಂಗ್‌ ಮತ್ತು ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸದಸ್ಯರಿಗೂ ಗ್ಯಾಲರಿ ವ್ಯವಸ್ಥೆ
ಮುಖ್ಯ ಚೇಂಬರ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸೀಮಿತ ಸಂಖ್ಯೆಯ ಪ್ರಮುಖ ಸದಸ್ಯರಿಗಷ್ಟೇ ಆಸೀನರಾಗಲು ಅವಕಾಶ ಕಲ್ಪಿಸಲಾಗಿದ್ದು, ಮಿಕ್ಕವರು ಗ್ಯಾಲರಿಯಿಂದ ಕಲಾಪವನ್ನು ವೀಕ್ಷಿಸಬೇಕಿದೆ. ಪ್ರತಿಯೊಂದು ಆಸನಕ್ಕೂ ಆಡಿಯೋ ಕನ್ಸೋಲ್‌ಗ‌ಳನ್ನು ಅಳವಡಿಸಲಾಗಿದ್ದು, ಸದಸ್ಯರು ಕುಳಿತೇ ಮಾತನಾಡಬಹುದು.

Advertisement

ಅಧಿಕಾರಿಗಳ ಚೇಂಬರ್‌ ಮತ್ತು ಸದನವನ್ನು ಪ್ರತ್ಯೇಕಿಸಲು ಅವರಿಗೂ ವಿಭಾಗಗಳ ನಡುವೆ ಪಾಲಿಕಾಬೊìನೇಟ್‌ ಶೀಟ್‌ ಅಳವಡಿಸಲಾಗಿದೆ. ರಾಜ್ಯಸಭೆಯ ಏರ್‌ ಕಂಡೀಷನ್‌ ವ್ಯವಸ್ಥೆಯಲ್ಲಿ ಸೂಕ್ಷ್ಮಾಣು ನಿರ್ಮೂಲನೆ ಮಾಡುವಂಥ ಅಲ್ಟ್ರಾವಯಲೇಟ್‌ ಜರ್ಮಿಸೈಡ್‌ ಇರ್ಯಾಡಿಯೇಶನ್‌ ಸಿಸ್ಟಂ ಅಳವಡಿಸಲಾಗಿದೆ.

ಗ್ಯಾಲರಿ ಮತ್ತು ಪ್ರಸ್‌ ಗ್ಯಾಲರಿಗಳಲ್ಲಿ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಸೀಮಿತ ಸಂಖ್ಯೆಯ ಅಧಿಕಾರಿಗಳು ಮತ್ತು ವರದಿಗಾರರಿಗೆ ಮಾತ್ರ ಸದನದೊಳಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಎಲ್ಲ ಸಿದ್ಧತೆಗಳನ್ನು ಆಗಸ್ಟ್‌ ಮೂರನೇ ವಾರದೊಳಗೆ ಪೂರ್ಣ ಗೊಳಿಸುವಂತೆ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹಾಗೂ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರು ಸಮಿತಿ ಅಧಿಕಾರಿಗಳಿಗೆ ಸೂಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ರಾಜ್ಯಸಭಾ ಟಿವಿ, ಲೋಕಸಭಾ ಟಿವಿಗಳು ಸದನದಲ್ಲಿ ತಾವು ಹೊಂದಿರುವ ಸೌಕರ್ಯಗಳ ಮೂಲಕವೇ ಎಲ್ಲ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡಲಿವೆ.

ಲೋಕಸಭೆಯ ಸಿದ್ಧತೆಗಳು
– ಆಯಾ ಪಕ್ಷಗಳ ಸದಸ್ಯ ಬಲಕ್ಕೆ ಅನುಗುಣವಾಗಿ ಆಸನ ಮೀಸಲಿರಿಸಲಾಗಿದೆ. ಹೆಚ್ಚು ಸ್ಥಾನಗಳನ್ನು ಪಡೆದಿರುವ ಪಕ್ಷಗಳು ಮುಖ್ಯ ಸದನದಲ್ಲಿ ಸ್ಥಾನ ಪಡೆಯಲಿದ್ದು, ಕಡಿಮೆ ಸ್ಥಾನಗಳನ್ನು ಹೊಂದಿರುವ ಪಕ್ಷಗಳ ಸದಸ್ಯರು ಗ್ಯಾಲರಿಯಲ್ಲಿ  ಆಸೀನರಾಗಬೇಕಾಗುತ್ತದೆ.

– ಮುಖ್ಯ ಚೇಂಬರಿನಲ್ಲಿ ಪ್ರಧಾನಿ ಮತ್ತು ಅವರ ಸಂಪುಟ ದರ್ಜೆ ಸಚಿವರು ಹಾಗೂ ವಿಪಕ್ಷಗಳ ಪ್ರಮುಖ ಸದಸ್ಯರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ.

– ಲೋಕಸಭೆ ಅಧಿಕಾರಿಗಳ ವಿಭಾಗ ಮತ್ತು ಮುಖ್ಯ ಚೇಂಬರನ್ನು ಪಾಲಿ ಕಾರ್ಬೊನೇಟ್‌ ಶೀಟ್‌ಗಳಿಂದ ಪ್ರತ್ಯೇಕಿಸಲಾಗುತ್ತದೆ.

ರಾಜ್ಯಸಭೆಯ ಸಿದ್ಧತೆಗಳು
– 60 ಸದಸ್ಯರು ಮುಖ್ಯ ಚೇಂಬರ್‌ನಲ್ಲಿ, 51 ಸದಸ್ಯರು ಗ್ಯಾಲರಿಯಲ್ಲಿ, ಉಳಿದ 132 ಸದಸ್ಯರು ಲೋಕಸಭೆಯಲ್ಲಿ ಆಸೀನ.

– ಲೋಕಸಭಾ ಚೇಂಬರ್‌ನಲ್ಲಿ ಕುಳಿತ ರಾಜ್ಯಸಭಾ ಸದಸ್ಯರಿಗೆ ವರ್ಚ್ಯುವಲ್‌ ಆಗಿ ಭಾಗವಹಿಸಲು ಅನುಕೂಲವಾಗುವಂತೆ ಎಲ್‌ಸಿಡಿ ಪರದೆ, ಕೆಮರಾ, ಆಡಿಯೋ-ವಿಡಿಯೋ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಹೈ ಕ್ವಾಲಿಟಿ ಕೇಬಲ್‌ಗ‌ಳನ್ನು ಅಳವಡಿಸಲಾಗಿದೆ.

– ಹಿರಿಯರಾದ ಡಾ| ಮನಮೋಹನ್‌ ಸಿಂಗ್‌, ಎಚ್‌.ಡಿ. ದೇವೇಗೌಡ, ರಾಮ್‌ ವಿಲಾಸ್‌ ಪಾಸ್ವಾನ್‌, ರಾಮದಾಸ್‌ ಅಠಾವಳೆ ಮುಂತಾದ ಪ್ರಮುಖ ಸಂಸದರ ಆಸನಗಳನ್ನು ಅವರ ಹೆಸರು ಗಳಿಂದ ಗುರುತು ಮಾಡಲಾಗಿದೆ.

– ಪ್ರತಿಯೊಬ್ಬ ಸದಸ್ಯರ ಕುರ್ಚಿಯ ಬಳಿಯೇ ಆಡಿಯೋ ಕನ್ಸೋಲ್‌ಗ‌ಳನ್ನು ಅಳವಡಿಸಲಾಗಿದ್ದು, ಅವರು ಕುಳಿತೇ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next