Advertisement

ಮನದೊಳಗಿನ ನೂರೆಂಟು ಮಾತು

08:53 PM Jul 24, 2021 | Team Udayavani |

ಯಾವುದೇ ವಿಷಯವಿರಲಿ ಹಲವು ವರ್ಷಗಳ ಕಾಲ ಅಧ್ಯಯನದ ಅನಂತರವೂ ಮತ್ತೆ ಅದೇ ವಿಷಯದ ಬಗ್ಗೆ ಹೆಚ್ಚು ತಿಳಿಯುವ ಅವಕಾಶವಿರುತ್ತದೆ. ಜೀವನಪೂರ್ತಿ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಅದ್ಯಾವುದೋ ವಸ್ತು, ನಿರ್ಜೀವ ವಸ್ತುಗಳ ಮೇಲೆ ನಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದರೆ ಅದರಿಂದ ಹೆಚ್ಚು ಹಾನಿಯಾಗದು. ಆದರೆ ಮನುಷ್ಯನಾಗಿ ಇನ್ನೊಬ್ಬ ಮನುಷ್ಯನ ಭಾವನಾತ್ಮಕ ವಿಚಾರಗಳ ಮೇಲೆ ದಾಳಿ ನಡೆಸುವುದು ಎಷ್ಟು ಸರಿ? ಈ ಬಗ್ಗೆ ಯೋಚಿಸಬೇಕಿದೆ

Advertisement

ತಾಯ್ನಾಡಿಗೆ ಮರಳಲು 12 ವರ್ಷದ ಬಾಲಕನೊಂದಿಗೆ ತಂದೆತಾಯಿ ಏರ್‌ಪೋರ್ಟ್‌ಗೆ  ಬಂದಿದ್ದರು. ನಿಂತಲ್ಲಿ ನಿಲ್ಲದೆ ಅತ್ತಿತ್ತ ಓಡಾಡುತ್ತಿದ್ದ ಬಾಲಕನನ್ನು ಎಲ್ಲರೂ ಗಮನಿಸತೊಡಗಿದರು. ಜತೆಗೆ  ನಮ್ಮನ್ನು ದುರುಗುಟ್ಟಿ  ನೋಡತೊಡಗಿದರು. ಇನ್ನು ದುಬೈ ಏರ್‌ಪೋರ್ಟ್‌ ತಲುಪಿದಾಗ ಇವನನ್ನು ಹಿಡಿಯುವುದೇ ಕಷ್ಟವಾಯಿತು. ಅಕ್ಕಪಕ್ಕದವರು ಕಂಪ್ಲೇಂಟ್‌ ಮಾಡಿದರು. ಒಂದಿಬ್ಬರು ಮಗನ ವಯಸ್ಸು ಕೇಳಿ, ಹುಡುಗನಿಗೆ ಬೆಳೆಯುವ ವಯಸ್ಸು, ಮ್ಯಾನರ್ಸ್‌ ಕಲಿಸಬೇಕು ಎಂದು ಪ್ರವಚನ ನೀಡಿದರು. ನಮ್ಮನ್ನು  ಅನಕ್ಷರಸ್ಥರಂತೆ, ತಪ್ಪಿತಸ್ಥರಂತೆ ನೋಡತೊಡಗಿದರು. ಆಗ ಕೆಲವರಿಗಾದರೂ ಕಾರಣ ಹೇಳಬೇಕಿತ್ತು ಎಂದರೆ ಯಾಕೋ ದುಃಖ ಒತ್ತರಿಸಿ ಬರುತ್ತಲಿತ್ತು. ಶಬ್ದ ಹೊರಡಲಿಲ್ಲ. ಕೊನೆಯಲ್ಲಿ ಪಕ್ಕದಲ್ಲಿ ಕುಳಿತ ಹೆಂಗಸು ಎದ್ದು ನಡೆದಾಗ ಹೇಳಬೇಕೆನಿಸಿದ್ದನ್ನು ಹೇಳಿದೆ. ಆದರೂ ಬೇಸರವೆನಿಸಿತು. ಬಹುಶ ನಾನೂ ಅವರ ಜಾಗದಲ್ಲಿದ್ದರೆ ಹೀಗೆನಿಸುವುದು ಸಹಜ ಎಂದುಕೊಂಡೆ ಎಂದು ತಾಯಿಯೊಬ್ಬಳು ನನ್ನ ಬಳಿ ಅಳಲು ತೋಡಿಕೊಂಡಳು.

ಫ‌ುಟ್‌ಬಾಲ್‌ ಆಡುವಾಗ ಮಗನಿಗೆ ಕಾಲು ಮುರಿದ ಅದರಿಂದ ಉಂಟಾದ ಸಮಸ್ಯೆ ಅರಿವಿಗೂ ಬಾರದೆ ಒಂದು ಅಪರೇಶನ್‌ನ ಅನಂತರ ಇನ್ನೊಂದು ನಡೆಯಿತು. ಒಟ್ಟಿನಲ್ಲಿ ಸರಿಸುಮಾರು ಒಂದೂವರೆ ವರ್ಷ ಇನ್ನೊಬ್ಬರ ನೆರವಿನಿಂದ ಎಲ್ಲ ಕೆಲಸ ಮಾಡುತ್ತಿದ್ದ ಬಾಲಕನ ಕಾಲು ಸರಿಯಾಯಿತು, ಓಡಾಡಬಹುದು ಎನ್ನುವಾಗ ಊರಿಗೆ ಹೊರಟಿದ್ದರು. ಹೀಗಾಗಿ ಮಗುವಿಗೆ ಹೊಸ ಜಗತ್ತಿಗೆ ಮತ್ತೆ ಬಂದ ಅನುಭವ. ಮಗುವಿನ ವಿಚಾರ ತಿಳಿದ ಕೆಲವರು ಮತ್ತೆ ವಿರೋಧಿಸಲಿಲ್ಲ. ಇನ್ನು ಕೆಲವು ಕ್ಷಮೆಯಾಚಿಸಿದರು. ಆದರೆ ಆ ತಾಯಿಯ ಮನ ಆಗಲೇ ಸಾಕಷ್ಟು ನೊಂದಿತ್ತು.

ನಿತ್ಯವೂ ನಮ್ಮ ಸುತ್ತಮುತ್ತ ಇಂತಹ ಬಹಳಷ್ಟು ವಿಮರ್ಶನಾತ್ಮಕ ಹೇಳಿಕೆ ನಡವಳಿಕೆಯನ್ನು ನೋಡುತ್ತೇವೆ. ಮೌನವಾಗಿದ್ದರೆ ಅಹಂ ಎಂದುಕೊಳ್ಳುತ್ತೇವೆ, ಹೆಚ್ಚು ಮಾತನಾಡಿದರೆ ಮ್ಯಾನರ್ಸ್‌ ಇಲ್ಲ, ಮೇಕಪ್‌ ಮಾಡಿದರೆ ಸಭ್ಯತೆ ಇಲ್ಲದವಳು.. ಹೀಗೆ ಸಣ್ಣ ವಿಷಯದಿಂದ ಬಹು ದೊಡ್ಡ ವಿಷಯದವರೆಗೂ ಕ್ಷಣ ಮಾತ್ರದಲ್ಲಿ  ವಿಮರ್ಶೆ ನಡೆಸಿ ತೀರ್ಪು ನೀಡುತ್ತೇವೆ. ವಿದ್ಯಾವಂತರೆಂದೆನಿಸಿಕೊಂಡಿದ್ದರೂ ಪ್ರತಿ ವಿಷಯದಲ್ಲೂ ನಮ್ಮದೇ ಆದ ರೀತಿಯಲ್ಲಿ ತೀರ್ಪು ನೀಡುವ ನಿರ್ಧಾರಾತ್ಮಕ ಮನಸ್ಥಿತಿಯನ್ನು ಯಾಕೆ ಹೊಂದಿರುತ್ತೇವೆ? ಇದಕ್ಕೆ  ಉತ್ತರ ಸಿಕ್ಕಿವುದು ಕಷ್ಟ. ಸಿಕ್ಕರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯತತ್ಪರರಾಗುವುದು ಎಲ್ಲಿರಗೂ ಸಾಧ್ಯವಿಲ್ಲ.

ನಮ್ಮ ಸುತ್ತ ಇರುವ ಕೆಲವು ಚಿಕ್ಕ ವಿಷಯಗಳು.. ನಾವೆಲ್ಲ ಕೆಲಸ ಮಾಡುವ ಸ್ಥಳದಲ್ಲಿ ಮೇಲಾಧಿಕಾರಿಗಳು ತಿಂಗಳ 30 ದಿನಗಳಲ್ಲಿ 28 ದಿನ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಿ ಶ್ರಮದಿಂದ ಕೆಲಸ ಮಾಡಿದ ಉದ್ಯೋಗಿಯ ಕ್ಷಮತೆಯನ್ನು ಮರೆತು ಎರಡು ದಿನ ತಡವಾಗಿ ಕಚೇರಿ ತಲುಪಿದ್ದನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಅಲ್ಲದೇ ಮನೆಯ ಕೆಲಸದಲ್ಲಿ ನೆರವಾಗುವ ಸಹಾಯಕಿ ಪಾತ್ರೆ ತೊಳೆಯವಾಗ ಒಡೆದ ಗ್ಲಾಸಿನ ಬಗ್ಗೆ ಪದೇಪದೇ ಜ್ಞಾಪಿಸಿ, ಪ್ರತಿದಿನ ಪಾತ್ರ ತೊಳೆಯುವಾಗ ಹುಷಾರು ಗ್ಲಾಸ್‌ ಒಡಿಬೇಡ ಎನ್ನುವ ನಾವು..  ಹೀಗೆ ಎಣಿಕೆಗೆ ನಿಲುಕದಷ್ಟು ಉದಾಹರಣೆಗಳು ನಮ್ಮಲ್ಲಿವೆ. ವಿದ್ಯಾವಂತರಾಗಿದ್ದರೂ ಕೆಲವೊಂದು ಸಂದರ್ಭದಲ್ಲಿ ನಮ್ಮ ವರ್ತನೆ ಸಣ್ಣತನದ ಪ್ರದರ್ಶನವಾಗಿಬಿಡುತ್ತದೆ.

Advertisement

ಇನ್ನೊಬ್ಬರಿಗೆ ನೋವು ಮಾಡುವ ನಿರ್ಧಾರಾತ್ಮಕ ಮನಸ್ಥಿತಿ ಹಲವರ ಖನ್ನತೆಗೂ ಕಾರಣವಾಗುತ್ತದೆ. ನಾವೆಲ್ಲ ಯಾಕೆ ಈ ಮನಸ್ಥಿತಿ ಹೊಂದಿದ್ದೇವೆ ಎನ್ನುವುದಕ್ಕೆ ಮನಃಶಾಸ್ತ್ರದಲ್ಲೂ ಹಲವು ಕಾರಣಗಳಿವೆ.

ನಕಾರಾತ್ಮಕ ಮನಸ್ಥಿತಿ- ಕೆಲವರು ಋಣಾತ್ಮಕ ಚಿಂತನೆಯನ್ನೇ ಬಹಳ ಮಾಡುತ್ತಾರೆ. ಹೀಗಾಗಿ ಅವರು ತಮ್ಮ ಹೊರತಾಗಿ ಯಾವುದೇ ಸಂದರ್ಭದಲ್ಲಿ ಇತರರ ವಿಷಯಕ್ಕೆ ಧನಾತ್ಮಕವಾಗಿ ಸ್ಪಂದಿಸಲು ಸಶಕ್ತರಲ್ಲ.

ಅಭದ್ರತೆ- ಜೀವನದಲ್ಲಿ ಯಾವುದೋ ಅಭದ್ರತೆ ಕಾಡುತ್ತಿದ್ದರೆ ಇನ್ನೊಬ್ಬರ ವಿಷಯದಲ್ಲೂ ನಿರ್ಧಾರಾತ್ಮಕವಾಗಿ ಮಾತನಾಡುವ ಹವ್ಯಾಸವನ್ನು ಕೆಲವರು ಹೊಂದಿರುತ್ತಾರೆ.

ನಾವೇ ಬುದ್ಧಿವಂತರು- ಕೆಲವರಲ್ಲಿ ಪ್ರತಿ ವಿಷಯದಲ್ಲಿ ತಾವು ಇತರರಿಗಿಂತ ಬುದ್ಧಿವಂತರೆಂದು ತೋರಿಸಿಕೊಳ್ಳುವ ವಿಚಿತ್ರ ರೂಪದ ಹವ್ಯಾಸವಿರುತ್ತದೆ. ಹೀಗಾಗಿ ಇಂಥವರು ಇನ್ನೊಬ್ಬರನ್ನು ಕೆಳಮಟ್ಟದಲ್ಲಿ ಚಿತ್ರಿಸಲು ವಿಮರ್ಶನಾತ್ಮಕ ಹೇಳಿಕೆ ಕೊಡುತ್ತಲೇ ಇರುತ್ತಾರೆ.

ಈರ್ಷೆ- ಇನ್ನೊಬ್ಬರ ಬಗ್ಗೆ ಈರ್ಷೆ ಹೊಂದುವುದು ಈ ನಿರ್ಧಾರಾತ್ಮಕ ಮನಸ್ಥಿತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಾವೇ ಶಕ್ತಿಶಾಲಿ- ಯಾವುದೋ ಕೆಲಸದಲ್ಲಿ  ತಾವು ಅಸಮರ್ಥರಾದಾಗ ಅನಿವಾರ್ಯವಾಗಿ ಇನ್ನೊಬ್ಬರಿಗೆ ತಾವು ಶಕ್ತಿಶಾಲಿಯೆಂದು ತೋರಿಸಿಕೊಳ್ಳಲು ವಿನಾಕಾರಣ ನೋವುಂಟು ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ.

ನಿರ್ಧಾರಾತ್ಮಕ ಮನಸ್ಥಿತಿಗೆ ಇದು ಕೆಲವು ಸಾಮಾನ್ಯ ಕಾರಣಗಳು. ಪ್ರಯತ್ನ ಪಟ್ಟರೆ ಇದರಿಂದ ಹೊರಬರಲು ಸಾಧ್ಯವಿದೆ.

ಜಾಗೃತಿ-  ಇನ್ನೊಬ್ಬರ ವಿಚಾರದಲ್ಲಿ ವಿಮರ್ಶನಾತ್ಮಕವಾಗಿ, ಅರಿವಿಲ್ಲದೆ ತೀರ್ಮಾನ ನೀಡಬಾರದೆಂಬ ಜಾಗೃತಿ ನಮ್ಮಲ್ಲಿ ಮೂಡಿದಾಗ ಇದರಿಂದ ಹೊರಬರಲು ಸಾಧ್ಯವಾಗುವುದು.

ಸ್ವೀಕೃತ ಮನೋಭಾವ-  ಇನ್ನೊಬ್ಬರ ವಿಚಾರದಲ್ಲಿ ನಾನು ವಿಮರ್ಶನಾತ್ಮಕ ತೀರ್ಮಾನ ನೀಡುತ್ತಿರುವೆ. ಇದು ಸರಿಯಲ್ಲ ಎನ್ನುವ ಸ್ವೀಕೃತ ಮನೋಭಾವ ಮೂಡಿದರೆ ಸರಿಪಡಿಸಿಕೊಳ್ಳಲು ಸಾಧ್ಯ. ನಾನೇ ಸರಿ ಎನ್ನುವ ಮನಸ್ಥಿತಿ ಹಾನಿಕಾರಕ.

ಇನ್ನೊಬ್ಬರ ಜಾಗದಲ್ಲಿ ನಮ್ಮನ್ನು ಕಲ್ಪಿಸಿಕೊಳ್ಳಿ- ನಮ್ಮ ಮನಸ್ಸಿಗೆ ನಾವೇ ಪ್ರಶ್ನಿಸಿಕೊಂಡರೆ ಇನ್ನೊಬ್ಬರ ಮನಸ್ಸನ್ನು ನೋಯಿಸಲಾರೆವು. ಯಾವಾಗ ನಾವು ನಿರ್ಧಾರಾತ್ಮಕ ಮನಸ್ಥಿತಿಗೆ ಹೋಗುತ್ತೇವೆಯೋ ಆಗ ನಮಗೆ ಅವರ ಪರಿಚಯವಿದೆಯೇ, ಅವರ ಬಗ್ಗೆ ಸಂಪೂರ್ಣ ಮಾಹಿತಿ ಇದೆಯೇ? ಇಲ್ಲವೆಂದಾದರೆ ಅವರ ಬಗ್ಗೆ ಮಾತನಾಡುವ ಅಧಿಕಾರ ನಮಗೆ ಇಲ್ಲವೆಂದು ಸುಮ್ಮನಾಗುವ ಮನೋಭಾವ ಬೆಳೆಸಿಕೊಳ್ಳಿ.

ನಮ್ಮಿಂದಾಗಿ ಇನ್ನೊಬ್ಬರಿಗೆ ನೋವಾಗ ಬಾರದು–  ಇತರರಿಗೆ ಆಹ್ಲಾದ ಮನೋಭಾವ ಮೂಡಿಸುವಂತೆ ನಮ್ಮ ವರ್ತನೆಯಿರಬೇಕೆಂಬ ಜಾಗೃತಿ ಮೂಡಿದಾಗ ಈ ಸ್ಥಿತಿಯಿಂದ ನಾವು ದೂರವಿರಲು ಸಾಧ್ಯ.

ಜಗತ್ತಿನ  ಪ್ರತಿ ಜೀವಿಯೂ ವಿಮರ್ಶೆಗೆ ಒಳಗಾಗುತ್ತದೆ. ಮನುಷ್ಯ ಮಾತ್ರ ಇನ್ನೊಬ್ಬರನ್ನು ವಿಶ್ಲೇಷಿಸಿ ತೀರ್ಮಾನ ನೀಡುವುದು ಸಹಜ ಗುಣವೆಂದು ಸ್ವೀಕರಿಸಿ ಜೀವನದ ಅವಿಭಾಜ್ಯ ಅಂಗವೆಂದು ಇದರ ಜತೆಯÇÉೇ ಸಾಗುತ್ತಿರುತ್ತಾನೆ. ಒಂದಷ್ಟು ಜಾಗೃತಿ, ಸ್ವೀಕೃತ ಮನೋಭಾವ, ಜತೆಗೆ ಸತತ ಪ್ರಯತ್ನ ಈ ವಿಚಿತ್ರ ಮನಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತವೆ. ಇನ್ನೊಬ್ಬರ ನೋವಿಗೆ ಕಾರಣೀಭೂತರಾಗುವುದನ್ನೂ ತಪ್ಪಿಸುತ್ತದೆ.

ವಾಣಿಸಂದೀಪ,   ಸೌದಿ ಅರೇಬಿಯಾ

Advertisement

Udayavani is now on Telegram. Click here to join our channel and stay updated with the latest news.

Next