Advertisement

Desi Swara: ಅದ್ದೂರಿಯಾಗಿ ನಡೆದ ನಾವಿಕ ಏಳನೇ ವಿಶ್ವ ಕನ್ನಡ ಸಮಾವೇಶ-ಕನ್ನಡದ ಕಂಪು

02:50 PM Sep 16, 2023 | Team Udayavani |

“ಆನಂದ- ಅನುಭವ-ಅನುಬಂಧ’ ಎಂಬ ಟ್ಯಾಗ್‌ಲೈನ್‌ ನೊಂದಿಗೆ ಅಮೆರಿಕ ದೇಶದ ಟೆಕ್ಸಾಸ್‌ ರಾಜ್ಯದ ಆಸ್ಟಿನ್‌ನಲ್ಲಿ ಏಳನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023 ಸೆ.1-3ರ ವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.

Advertisement

ಕನ್ನಡಿಗರ ಈ ಮಹಾಸಮ್ಮೇಳನದಲ್ಲಿ ಅಮೆರಿಕದ ಮೂಲೆ ಮೂಲೆಗಳಿಂದ ಬಂದಿದ್ದ ಸುಮಾರು ಮೂರು ಸಾವಿರ ಮಂದಿ ಭಾಗವಹಿಸಿದ್ದರು. ಇವರೆಲ್ಲ ಕನ್ನಡ ನೆಲದಿಂದ ಬಹುದೂರ ಇದ್ದರೂ ತಾವು ಮೆಟ್ಟುವ ನೆಲ ಕರ್ನಾಟಕ ಎಂಬ ಭಾವದಲ್ಲಿದ್ದರು.
ಇಡೀ ಸಮ್ಮೇಳನ ಭಾಗವಹಿಸಿದ್ದ ಎಲ್ಲರಿಗೂ ರೋಮಾಂಚನದ ಅನುಭವ ಕೊಟ್ಟಿತು.

ಪ್ರಾಯಶಃ ಅದುವರೆಗೂ ಕನ್ನಡವನ್ನೇ ಕೇಳಿರದ ಎಂಬೆಸಿ ಸೂಟ್ಸ್‌ ಹೊಟೇಲ್‌ ಮೂರು ದಿನಗಳ ಕಾಲ ಸಂಪೂರ್ಣ ಕನ್ನಡಮಯವಾಗಿತ್ತು. ಹೊಟೇಲ್‌ ಪ್ರವೇಶ ದ್ವಾರದಲ್ಲೇ ಕನ್ನಡದಲ್ಲಿ “ಹೆಬ್ಟಾಗಿಲು’ ಎಂಬ ಫಲಕವಿತ್ತು. ಒಳಗೆ ಹೋಗುತ್ತಿದ್ದಂತೆ ಕನ್ನಡದ ಶಿಲ್ಪಕಲೆಯನ್ನು ಬಿಂಬಿಸುವ ಕಲ್ಲಿನ ರಥದ ಮಾದರಿಯನ್ನು ನಿರ್ಮಿಸಲಾಗಿತ್ತು.

Advertisement

ಕನ್ನಡ ಸಿನೆಮಾ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಲೈವ್‌ ಸಂಗೀತ ಸಂಜೆಯಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್‌ ಹೀರೊ ಡಾ| ಶಿವರಾಜ್‌ ಕುಮಾರ್‌ ಅಮೆರಿಕದಲ್ಲಿ ಹುಟ್ಟಿ ಬೆಳೆದ ಕನ್ನಡ ಮಕ್ಕಳ ಜತೆ ಮತ್ತು ವಯಸ್ಕರ ಜತೆ ವೇದಿಕೆ ಮೇಲೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಶಿವಣ್ಣ ಮತ್ತು ಅವರ ಪತ್ನಿ ಗೀತಾ ಅಮೆರಿಕದ ಕನ್ನಡಿಗರ ಮಾತೃ ಭಾಷೆಯ ಅಭಿಮಾನವನ್ನು ಮುಕ್ತಕಂಠದಿಂದ ಹೊಗಳಿದರು. ಅರ್ಜುನ್‌ ಜನ್ಯ ಲೈವ್‌ ಸಂಗೀತ ಸಂಜೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ವ್ಯಾಸರಾಜ ಸಾಸೋಲೆ, ಕೀರ್ತನ್‌ ಹೊಳ್ಳ, ಇಂದು ನಾಗರಾಜ್‌, ಐಶ್ವರ್ಯ ರಂಗ ರಾಜನ್‌, ಮುಂತಾದ ಗಾಯಕರು ಪ್ರೇಕ್ಷಕರನ್ನು ರಂಜಿಸಿದರು.

ವಲ್ಲೀಶ ಶಾಸ್ತ್ರಿ ನಡೆಸಿಕೊಟ್ಟ “ಪ್ರ„ಮ್‌ ಟೈಮ್‌’ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತು ಗೀತಾ ಅವರು ಎಲೆಮರೆಯ ಕಾಯಿಯಂತೆ ಸುಮಾರು 25+ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ “ಶಕ್ತಿಧಾಮ’ ಸಂಸ್ಥೆಯ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಶೋಷಿತ ಮಹಿಳೆಯರ ಮತ್ತು ಅಶಕ್ತ ಅನಾಥ ಮಕ್ಕಳ ಸಶಕ್ತೀಕರಣದ, ಕಲ್ಯಾಣದ ಯೋಚನೆಗಳಾಗಿವೆ ಎಂದರು.

ಈ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಶಿವರಾಜ್‌ ತಗಡಗಿ, ಡಾ| ರಾಮಲಿಂಗಾರೆಡ್ಡಿ, ಎಚ್‌. ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಶ್ರೀಮತಿ ಲಕ್ಷಿ$¾ ಹೆಬ್ಟಾಳ್ಕರ್‌, ಮುಂತಾದ ಸಚಿವರು ವೀಡಿಯೋ ಸಂದೇಶದ ಮೂಲಕ ಶುಭಹಾರೈಸಿದರು.

ಈ ನಾವಿಕ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸರಕಾರದ ಪ್ರತಿನಿಧಿಯಾದ ಎಂ. ಸಿದ್ದಲಿಂಗೈಶ್‌ ಅವರನ್ನು ಮುಖ್ಯ ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಇವರು ನಾವಿಕ ಸಮ್ಮೇಳನಕ್ಕೆ ಕರ್ನಾಟಕ ಸರಕಾರದಿಂದ ನೆರವು ಪಡೆಯುವಲ್ಲಿ ಬಹಳಷ್ಟು ಸಹಾಯವನ್ನು ಮಾಡಿದ್ದರು.

ನಾವಿಕ ಸಂಸ್ಥೆಯ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್‌ ಬೆಂಗಳೂರು ಅವರನ್ನು ಹಾಲಿ ಅಧ್ಯಕ್ಷ ಮಂಜುನಾಥ್‌ ರಾವ್‌ ಸಮ್ಮಾನಿಸಿದರು. ನಾವಿಕ ಸಂಸ್ಥೆಯ ಆಯೋಜಿತ ಅಧ್ಯಕ್ಷರಾಗಿ ಅಟ್ಲಾಂಟ ನಗರದಲ್ಲಿ ವಾಸಿಸುತ್ತಿರುವ ಡಾ| ಅನು ಭಟ್‌ ಆಯ್ಕೆಯಾಗಿದ್ದಾರೆ. ಇದೇ ವೇಳೆ ಸ್ಯಾನ್‌ ಮಾರ್ಕೋಸ್‌ ಮೇಯರ್‌ ರೆಬೆಕ್ಕಾ ಜೋನ್ಸ್‌, ಶಿವಣ್ಣ ಮತ್ತು ಡಾ| ಗಜಾನನ ಶರ್ಮರನ್ನು ಸಮ್ಮಾನಿಸಲಾಯಿತು.

ಸಾಂಸ್ಕೃತಿಕ ಮೆರುಗು
ಆಸ್ಟಿನ್‌ ಕನ್ನಡ ಸಂಘದ ಅನುಸೂಯ ಪೂಂಜಾ ಅವರ ನೇತೃತ್ವದಲ್ಲಿ 60 ಕನ್ನಡಿಗರ ತಂಡವನ್ನು ಕಟ್ಟಿಕೊಂಡು ತುಳುನಾಡಿನ ಭವ್ಯ ಪರಂಪರೆ, ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ “ತುಳುನಾಡ ಐಸಿರಿ’ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.
ಉತ್ತರ ಕರ್ನಾಟಕದ ಪ್ರಸಿದ್ಧ ಸಹೋದರರಾದ ಖಾನ್‌ ಸಹೋದರರು “ಕೃಷ್ಣಾ ನೀ ಬೇಗನೆ ಬಾರೋ’ ಎಂದು ಕೃಷ್ಣನನ್ನು ಕರೆದರು! ಸುಶ್ರಾವ್ಯವಾಗಿ “ಹರಿ ಕುಣಿದಾ ನಮ್ಮ ಹರಿ ಕುಣಿದಾ’ ಎಂದು ಶ್ರೀಹರಿಯನ್ನು ಕಣಿಸಿದರು…. ಶಿಶನಾಳ ಶರೀಫ‌ಜ್ಜನ ಅನಭಾವವನ್ನು ಹಾಡಿದರು.

“ಬೀಟ್‌ ಗುರುಸ್‌ ‘ ಮ್ಯೂಸಿಕ್‌ ಬ್ಯಾಂಡ್‌ ವಿನೂತನ ರೀತಿಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಶನಿವಾರ ಸಂಜೆ ಪ್ರ„ಮ್‌ ಶೋನಲ್ಲಿ ರಘು ದೀಕ್ಷಿತ್‌ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ತೆಗೆದುಕೊಂಡು ಹೋಗಿದ್ದರು. ಕರ್ನಾಟಕದ ಪ್ರಖ್ಯಾತ ಯುವ ಸ್ಟಾಂಡ್‌ಅಪ್‌ ಕಾಮಿಡಿಯನ್ಸ್‌ಗಳಾದ ರಾಘವೇಂದ್ರ ಆಚಾರ್‌, ಕಾರ್ತಿಕ್‌ ಪತ್ತಾರ್‌ ಮತ್ತು ನಿರೂಪ್‌ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.

ಸ್ಪರ್ಧೆ
ನಾವಿಕೋತ್ಸವದ ಸಲುವಾಗಿ ಆಯೋಜಿಸಿದ್ದ ಪ್ರತಿಷ್ಠಿತ ನಾವಿಕ ಕೋಗಿಲೆ ಗಾಯನ ಸ್ಪರ್ಧೆಯ ವಯಸ್ಕರ ವಿಭಾಗದಲ್ಲಿ ಕ್ಯಾಲಿಫೋರ್ನಿಯಾದ ಅಕ್ಷಯ್‌ ರಾವ್‌ ಹಾಗೂ ಜ್ಯೂನಿಯರ್‌ ವಿಭಾಗದಲ್ಲಿ ಡಲ್ಲಾಸ್‌ ನಗರದ ನಯನಾ ಪ್ರಸಾದ್‌ ವಿಜೇತರಾದರು.

“ನಾವಿಕ ಕಥಾ ಸ್ಪರ್ಧೆ’ಯ ಪ್ರಥಮ ಬಹುಮಾನವನ್ನು ದೀಪಕ್‌ ಜಿ.ಕೆ ಅವರ “ಯಾತ್ರೆ’, ದ್ವೀತಿಯ ಬಹುಮಾನ ಮಲ್ಲಮ್ಮ ಜೊಂಡಿ ಅವರ “ಮರಳು ಗೂಡು’, ಲಕ್ಷ್ಮಣ ವಿ.ಎ. ಅವರ “ನೀಲಾದ್ರಿ ರೋಡ್‌’, ತೃತೀಯ ಬಹುಮಾನವನ್ನು ಕ್ಷಮಾ ಜಯಂತ್‌ ಅವರ “ದೊಡ್ಡಪ್ಪ’ ಕತೆಯು ಪಡೆದುಕೊಂಡಿತು. ಸಮಾಧಾನಕರ ಬಹುಮಾನವು ಮೈಸೂರು ಮೂಲದ ನಾಗೈಶ ಅವರ “ಪ್ರಲೋಭನೆ’, ಸದಾಶಿವ ಸೊರಟೂರು ಅವರ “ಬೆಳದಿಂಗಳು ಸುರಿದ ಮನೆ’, ವಿನಾಯಕ ಅರಳಸುರಳಿ ಅವರ “ಚಿಲುಮೆ’ ಕತೆಗಳಿಗೆ ಲಭಿಸಿತು.

ಮಂದಾರ ಅನಾವರಣ
ಈ ಸಮ್ಮೇಳನದ ಸ್ಮರಣ ಸಂಚಿಕೆ “ಮಂದಾರ’ ವನ್ನು ಬಿಡುಗಡೆಗೊಳಿಸಲಾಯಿತು. ಕನ್ನಡದ ಖ್ಯಾತ ಲೇಖಕರಾದ ಡಾ| ಗಜಾನನ ಶರ್ಮಾ ಅವರು ಸಂಚಿಕೆಗೆ ವಿಶೇಷ ಲೇಖನವನ್ನು ಬರೆದು ಕೊಡುವುದರೊಂದಿಗೆ ಸಮಾವೇಶಕ್ಕೆ ಆಶಯ ಗೀತೆಯನ್ನು ಬರೆದು ಕೊಟ್ಟಿದ್ದಾರೆ. ವಿವಿಧ ಬರಹಗಳನ್ನೊಳಗೊಂಡ ಈ ಸಂಚಿಕೆ ಸುಮಾರು 260ಕ್ಕೂ ಹೆಚ್ಚಿನ ಪುಟಗಳನ್ನು ಹೊಂದಿದೆ. ಕ್ಯಾಲಿಫೋರ್ನಿಯಾದ ಗುರು ಕೃಷ್ಣಮೂರ್ತಿಯವರು ವಿದ್ವತ್‌ ಪೂರ್ಣವಾಗಿ ಡಾ| ಗಜಾನನ ಶರ್ಮ ಅವರೊಂದಿಗೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ನಾವಿಕ ಮೆರವಣಿಗೆ
ಆಶಿತಾ ಗೋರ್ವಧನ್‌ ಅವರ ಮುಂದಾಳತ್ವದಲ್ಲಿ ಕರ್ನಾಟಕದ ವಿವಿಧ ಚರಿತ್ರೆ, ಪರಂಪರೆಯನ್ನು ಬಿಂಬಿಸುವ ಪ್ರದರ್ಶನಗಳ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಶಿವಣ್ಣ ದಂಪತಿಗಳು ಭಾಗವಹಿಸಿದ್ದರು.

ವಿವಿಧ ವಿಚಾರಗೋಷ್ಠಿ
ಈ ಸಮಾವೇಶದಲ್ಲಿ ಹೂಡಿಕೆದಾರರ ಫೋರಮ್‌, ವುಮೆನ್ಸ್‌ ಫೋರಮ್‌, ಸಾಹಿತ್ಯ ಗೋಷ್ಠಿ , ಆಧ್ಯಾತ್ಮಿಕ ವೇದಿಕೆ, ವೈದ್ಯರ ಫೋರಮ್‌ , ಮೆರವಣಿಗೆ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆದವು. ಈ ಸಮಾವೇಶದಲ್ಲಿ ನೃತ್ಯ, ಸಂಗೀತ, ನಾಟಕ, ಫ್ಯಾಷನ್‌ ಶೋ ಸ್ಟಾಂಡ್‌-ಅಪ್‌ ಕಾಮಿಡಿ, ಮ್ಯಾಜಿಕ್‌ ಶೋ, ಗಾಲ#… ಪಂದ್ಯಾವಳಿ, ಮೆರವಣಿಗೆ – ಹೀಗೆ ಹಲವಾರು ಕಾರ್ಯಕ್ರಮಗಳ ಜತೆಗೆ ರಂಗಸ್ಥಳ ನಾಟಕ, ನಾವಿಕ ಕೋಗಿಲೆ ಗಾಯನ ಸ್ಪರ್ಧೆ, ನೃತ್ಯೋತ್ಸವ ನೃತ್ಯ, ಶೃಂಗಾರ ಸಿರಿ ಫ್ಯಾಶನ್‌ ಶೋ ಈಗ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲದ ಸಮ್ಮೇಳನದಲ್ಲಿ ಸಾವಿರಾರು ಕನ್ನಡಿಗರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಕರ್ನಾಟಕದ ವೈವಿಧ್ಯಮಯ ತಿನಿಸುಗಳನ್ನು ಎಲ್ಲರೂ ಸವಿದರು.

ಈ ಮಹಾಸಮ್ಮೇಳನದ ಆಯೋಜನೆಯ ಜವಾಬ್ದಾರಿಯನ್ನು ಸಂಚಾಲಕರಾದ ಸದಾಶಿವ ಕಲ್ಲೂರ್‌ ನೂರಾರು ಸ್ವಯಂಸೇವಕರ ತಂಡಗಳನ್ನು ಕಟ್ಟಿ ಕಳೆದ ಆರು ತಿಂಗಳುಗಳಿಂದ ತುಂಬಾ ಪರಿಶ್ರಮವಹಿಸಿ ತುಂಬಾ ಯಶಸ್ವಿಯಾಗಿ ನಡೆಸಿಕೊಟ್ಟರು. ವರೊಂದಿಗೆ ಆಸ್ಟಿನ್‌, ಹೂಸ್ಟನ್‌, ಸ್ಯಾನ್‌ ಅಂಟೋನಿಯೋ ಮತ್ತು ಡಲ್ಲಾಸ್‌ ನಗರದ ಕನ್ನಡಿಗರು ಸಹಕರಿಸಿದ್ದರು.

ಎಲ್ಲರ ಮನ ಗೆದ್ದ “ತುಳುನಾಡ ಐಸಿರಿ’

ಅಮೆರಿಕದ ಟೆಕ್ಸಾಸ್‌ ರಾಜ್ಯದ ರಾಜಧಾನಿ ಆಸ್ಟಿನ್‌ನಲ್ಲಿ ನಡೆದ ನಾವಿಕ 2023 ಸಮಾವೇಶದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ಪ್ರೇಕ್ಷಕರ ಮನಸೂರೆಗೊಂಡಿದ್ದು ತುಳುನಾಡ ಐಸಿರಿ ಸಂಭ್ರಮ ಪ್ರದರ್ಶನ.

ಆಸ್ಟಿನ್‌ ನಗರದಲ್ಲಿ ನೆಲೆಸಿರುವ ಅನುಸೂಯ ಪೂಂಜಾ ಅವರ ನೇತೃತ್ವದಲ್ಲಿ 60 ಕನ್ನಡಿಗರ ತಂಡವು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತ್ತು. ತುಳುನಾಡಿನ ಭವ್ಯ ಪರಂಪರೆ, ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಈ ಕಾರ್ಯಕ್ರಮವನ್ನು ನೋಡಿ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಕರತಾಡನದ ಮೂಲಕ ತಮ್ಮ ಸಂತೋಷ ಹಾಗೂ ಗೌರವ ಸೂಚಿಸಿ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದರು. ಈ ಆಲೋಚನೆ ಬಂದಿದ್ದು ಆಸ್ಟಿನ್‌ ತುಳುಕೂಟ ನಡೆಸುವ ಒಂದು ಸಂತೋಷ ಕೂಟದಲ್ಲಿ.
ಅನುಸೂಯ ಪೂಂಜಾರವರು ತುಳುನಾಡು ಬಗ್ಗೆ ಒಂದು ಕಾರ್ಯಕ್ರಮ ಯಾಕೆ ಮಾಡಬಾರದು ಎಂಬ ವಿಚಾರ ಮುಂದಿಟ್ಟರು.

ಅನಂತರದ ದಿನಗಳಲ್ಲಿ ಅನಸೂಯ, ಮಾಲತಿ ನಾಗಭೂಷಣ್‌, ವೆಂಕಟೇಶ್‌ ಆಚಾರ್ಯ, ಸುಪ್ರಿಯಾ ರಾವ್‌ ಮತ್ತು ಧನ್ಯಶ್ರೀ ಚಕ್ರಪಾಣಿ ಅನೇಕ ಬಾರಿ ಭೇಟಿಯಾಗಿ ಚರ್ಚಿಸಿ ತುಳುನಾಡ ಐಸಿರಿಯ ರೂಪರೇಖೆಯನ್ನು ಸಿದ್ಧಪಡಿಸಿದರು.
ಆರಂಭದಲ್ಲಿ 60 ಕ್ಕೂ ಹೆಚ್ಚು ಪ್ರತಿಭಾವಂತರನ್ನು ಹುಡುಕಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಟೆಕ್ಸಾಸ್‌ನ ಬಿಸಿಯನ್ನೂ ಲೆಕ್ಕಿಸದೆ ಅದಮ್ಯ ಉತ್ಸಾದಿಂದ ನಿರಂತರ ಅಭ್ಯಾಸಗಳಲ್ಲಿ ತಂಡ ಪಾಲ್ಗೊಂಡು ತಯಾರಿ ನಡೆಸಿತ್ತು. ಸೌಮ್ಯಾ ರಾವ್‌ ನೇತೃತ್ವದಲ್ಲಿ ಭೂತಾರಾಧನೆ, ಕಂಬಳ ಮತ್ತು ಯಕ್ಷಗಾನಕ್ಕೆ ಬೇಕಾದ ರಂಗಪರಿಕರಗಳನ್ನು ಸಿದ್ಧಪಡಿಸಲಾಯಿತು. ಕಾರ್ಯಕ್ರಮಕ್ಕೆ ಅಗತ್ಯವಾದ ವೇಷಭೂಷಣಗಳನ್ನು ದಕ್ಷಿಣ ಕನ್ನಡದಿಂದ ತರಿಸಲಾಗಿತ್ತು.

ಕಾರ್ಯಕ್ರಮದ ನಿರೂಪಣೆಯಿಂದ ಕೊನೆಯವರೆಗೂ ಎಲ್ಲವೂ ತುಳುನಾಡಿನ ಪರಂಪರೆಯನ್ನು ಪರಿಚಯಿಸಿತ್ತು. ವಿಶೇಷ ನೃತ್ಯದ ಮೂಲಕ ತುಳುನಾಡ ಐಸಿರಿಯನ್ನು ಪರಿಚಯಿಸಲಾಗಿತ್ತು. ಪರಶುರಾಮ ಸೃಷ್ಟಿಯಾದ ತುಳುನಾಡಿನ ಸೃಷ್ಟಿಯ ಕಥೆಯನ್ನು ಹೇಳುವುದರೊಂದಿಗೆ ರಂಗಸ್ಥಳ ಪ್ರವೇಶಿಸುವ ಮೂಲಕ ಪ್ರದರ್ಶನವನ್ನು ಆರಂಭಿಸಲಾಗುತ್ತದೆ. ಜತೆಗೆ ತುಳುನಾಡಿನಲ್ಲಿ ನಾಗಾರಾಧನೆಗೆ ಇರುವ ಪ್ರಾ ಧಾನ್ಯತೆ ಮತ್ತು ನಾಗಮಂಡಲ ಅಂದರೆ ಏನು ಎನ್ನುವುದನ್ನು ಹಂತಹಂತವಾಗಿ ಕಲಾವಿದರು ಪ್ರಸ್ತುತ ಪಡಿಸಿ ವಿವರಿಸುತ್ತಾರೆ. ಇದಾದ ಮೇಲೆ ತುಳುನಾಡಿನ ಚರಿತ್ರೆಯಲ್ಲಿ ಮಿನುಗುತ್ತಿರುವ ಅವಳಿ ವೀರರಾದ ಕೋಟಿ ಚೆನ್ನಯ್ಯರ ವೀರ ಪ್ರದರ್ಶನ. ಮಳೆಗಾಲದಲ್ಲಿ ತುಳುನಾಡು ಹೆಚ್ಚಿನ ಮಳೆಯನ್ನು ಕಾಣುತ್ತದೆ.

ಈ ಸಮಯದಲ್ಲಿ ಆಚರಿಸುವ ಆಟಿ ತಿಂಗಳಿನ ಸೊಬಗನ್ನು, ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿಯನ್ನು ತೋರಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಕುಣಿತ ಕಂಗಿಲು ನೃತ್ಯ ಮತ್ತು ಹುಲಿವೇಷ ಕುಣಿತ ಪ್ರದರ್ಶನ, ತುಳುನಾಡಿನ ವಿಶಿಷ್ಟ ಆರಾಧನಾ ಪರಂಪರೆ ಭೂತಾರಾಧನೆ, ಸುಗ್ಗಿಯ ಸಂಭ್ರಮ ಹಾಗೂ ಜಾನಪದ ಕ್ರೀಡೆಗಳಾದ ಕಂಬಳ ಮತ್ತು ಕೋರಿಕಟ್ಟ ಇವುಗಳನ್ನು ತೋರಿಸಲಾಯಿತು. ಅನಂತರ ಕರಾವಳಿಯ ಮೇರುಕಲೆ, ಸಮಗ್ರ ರಂಗಭೂಮಿ ಎಂದೇ ಪ್ರಸಿದ್ಧವಾದ ಯಕ್ಷಗಾನದ ವಿವರಣೆಯೊಂದಿಗೆ ಪಟ್ಲ ಸತೀಶ ಶೆಟ್ಟಿಯವರ ನೀರಾಟ ವಾಡಿದಳು ಹಾಡಿಗೆ ಹುಡುಗಿಯರಿಂದ ಯಕ್ಷಗಾನ ನೃತ್ಯ.

ಕಡೆಯದಾಗಿ ದೇವಿ ಮಹಾತ್ಮೆಯಲ್ಲಿ ಬರುವ ಮಾಲಿನಿಯ ಮಗನಾದ ಮಹಿಷಾಸುರನ ಅಬ್ಬರದ ರಂಗಸ್ಥಳ ಪ್ರವೇಶ ಮತ್ತು ದೇವಿ ಮಹಿಷಾಸುರನ್ನು ಸಂಹಾರ ಎಲ್ಲರನ್ನೂ ಬೆರಗಾಗಿಸಿತ್ತು. ಮಾಲತಿ ನಾಗಭೂಷಣ್‌ ಅವರ ನಿರೂಪಣೆಗೆ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಅವರು ತಮ್ಮ ಕಂಠದಿಂದ ಪ್ರಸ್ತುತ ಪಡಿಸಿದ್ದರು. ಅನುಸೂಯ ಪೂಂಜಾ, ವೆಂಕಟೇಶ್‌ ಆಚಾರ್ಯ, ಸುಪ್ರಿಯಾ ರಾವ್‌, ಧನ್ಯಶ್ರೀ ಚಕ್ರಪಾಣಿ ಮತ್ತು ದಿವ್ಯ ನವೀನ್‌ ಅವರು ನೃತ್ಯ ಮತ್ತು ಕಥಾರೂಪಕಗಳನ್ನು ಸಂಯೋಜಿಸಿದರು.
ಸುನಿಲ್‌ ರಾಮಚಂದ್ರ ಅವರು ವೀಡಿಯೋ ಸಂಕಲನದ ಸಹಕಾರ ನೀಡಿದ್ದರು.

ನಾವಿಕ 2023ರ ಅತ್ಯುನ್ನತ ಕಾರ್ಯಕ್ರಮಗಳ ಪೈಕಿ ತುಳುನಾಡ ಐಸಿರಿಯೂ ನೆರೆದಿದ್ದ ಎಲ್ಲರ ಮನಗೆದ್ದಿತ್ತು. ಸತತ ಶ್ರಮ ಹಾಗೂ ಬಿಸಿಲನ್ನು ಲೆಕ್ಕಿಸದೇ ಮಕ್ಕಳು ಹಾಗೂ ವಯಸ್ಕರು ಜತೆಗೂಡಿ ಕರಾವಳಿಯ ಇತಿಹಾಸ, ಐತಿಹ್ಯ, ಪೂಜಾ ಪದ್ಧತಿಗಳನ್ನು ನರೆದಿದ್ದವರೆಲ್ಲರಿಗೂ ಪ್ರಸ್ತುತ ಪಡಿಸಿದರು.

ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್‌, ಮಾಲತಿ ಭೂಷಣ

Advertisement

Udayavani is now on Telegram. Click here to join our channel and stay updated with the latest news.

Next