Advertisement

ಉಪನಗರ ರೈಲು ಯೋಜನೆಗೆರಾಜ್ಯ ಸರ್ಕಾರಕ್ಕೆ ನಿರುತ್ಸಾಹ

12:15 PM Sep 06, 2018 | |

ಬೆಂಗಳೂರು: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ, ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ 15,825 ಕೋಟಿ ರೂ. ಸುರಿದು “ಎಲಿವೇಟೆಡ್‌ ಕಾರಿಡಾರ್‌’ ನಿರ್ಮಾಣಕ್ಕೆ ಉತ್ಸುಕತೆಯಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಇದರರ್ಧದಷ್ಟು ಮೊತ್ತದಲ್ಲಿ ನಿರ್ಮಿಸಬಹುದಾದ ಉಪನಗರ ರೈಲು ಯೋಜನೆ ಬಗ್ಗೆ ಮಾತ್ರ ನಿರುತ್ಸಾಹ ಹೊಂದಿದೆ.

Advertisement

ಏಕಕಾಲದಲ್ಲಿ ಸಾವಿರಾರು ಜನರನ್ನು ಹೊತ್ತೂಯ್ಯುವ ರೈಲು ಮತ್ತು ಹಳಿಗಳು ಸಿದ್ಧ ಇವೆ. ಅರ್ಧದಷ್ಟು ಹಣ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಮುಂದಿನ ಒಂದೇ ವರ್ಷದಲ್ಲಿ ನಗರದ 70 ಕಿ.ಮೀ. ಜಾಲದಲ್ಲಿ ರೈಲು ಓಡಿಸಲು ಪೂರಕ ವೇದಿಕೆ ಸಿದ್ಧವಾಗಿದೆ. ಬೇಕಾಗಿರುವುದು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ವಿಶೇಷ ಉದ್ದೇಶಿತ ವಾಹಕ (ಎಸ್‌ಪಿವಿ) ರಚನೆಗೆ ಅನುಮೋದನೆ ಅಷ್ಟೇ.

ಇದಕ್ಕಾಗಿ ನೈರುತ್ಯ ರೈಲ್ವೆಯಿಂದ ಒಂದೂವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಉತ್ತರ ಬಂದಿಲ್ಲ. ಈ ಮಧ್ಯೆ ಹೆಚ್ಚು-ಕಡಿಮೆ ಅದೇ ಒಂದು ತಿಂಗಳ ಅಂತರದಲ್ಲಿ ಸರ್ಕಾರದ ಕನಸಿನ ಕೂಸು “ಎಲಿವೇಟೆಡ್‌ ಕಾರಿಡಾರ್‌’ ಯೋಜನೆಗೆ ಸಂಬಂಧಿಸಿದಂತೆ “ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ ವರದಿ’ಗೆ ಸಿದ್ಧತೆ ನಡೆದಿದೆ. ಖಾಸಗಿ ವಾಹನಗಳನ್ನು ಉತ್ತೇಜಿಸುವ ಹಾಗೂ ಸಾವಿರಾರು ಕೋಟಿ
ಮೊತ್ತದ ಯೋಜನೆಗೆ ತೋರಿಸುತ್ತಿರುವ ಉತ್ಸಾಹವು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಉಪನಗರ ರೈಲು ಯೋಜನೆ ಅನುಷ್ಠಾನದಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಸಾರಿಗೆ ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ.

ಲಭ್ಯವಿರುವ ಸೌಲಭ್ಯ ಬಳಸಲಿ : “ಈಗಾಗಲೇ 160 ಕಿ.ಮೀ. ಉದ್ದದ ರೈಲು ಹಳಿಗಳಿವೆ. ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುವ ಹಳಿಗಳು ಈಗಾಗಲೇ ಲಭ್ಯ ಇವೆ. ಈ ಸೌಲಭ್ಯಗಳನ್ನು ಬಳಸಿಕೊಂಡು, ಅಲ್ಪಾವಧಿಯಲ್ಲಿ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಯಾಕೆ ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗದೆ, ದೀರ್ಘ‌ಬಾಳಿಕೆ ಇಲ್ಲದ ಎಲಿವೇಟೆಡ್‌ ಕಾರಿಡಾರ್‌ ಹಿಂದೆ ಯಾಕೆ ಬಿದ್ದಿದೆ ತಿಳಿಯುತ್ತಿಲ್ಲ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ (ಇಂಜಿಯರಿಂಗ್‌ ಸಾರಿಗೆ ವ್ಯವಸ್ಥೆಗಳು) ಸಹ ಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮ ಹೇಳುತ್ತಾರೆ.

ಅಷ್ಟಕ್ಕೂ ನಗರದ ಯಾವುದೇ ಎತ್ತರಿಸಿದ ಮಾರ್ಗಗಳು ಸಂಚಾರದಟ್ಟಣೆಗೆ ಪರಿಹಾರ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ಮುಂಬೈ ಮಾದರಿ ನಮ್ಮ ಮುಂದಿದೆ. “ಪೀಕ್‌ ಅವರ್‌’ನಲ್ಲಿ ಅಲ್ಲಿನ ಉಪನಗರ ರೈಲು 80-90 ಸಾವಿರ ಜನರನ್ನು ಕೊಂಡೊಯ್ಯುತ್ತಿದೆ. ಅಷ್ಟೇ ಯಾಕೆ, ಹೆಚ್ಚು ಹೈವೇಗಳನ್ನು ಹೊಂದಿರುವ ಮತ್ತು ಪ್ರೋತ್ಸಾಹಿಸುವ ಟೊಕಿಯೊ ಕೂಡ
ಉಪನಗರ ಮತ್ತು ಮೆಟ್ರೋ ರೈಲು ಕಡೆ ಮುಖಮಾಡುತ್ತಿದೆ ಎಂದೂ ಅವರು ತಿಳಿಸಿದರು.

Advertisement

30 ಸಾವಿರ ವಾಹನದಟ್ಟಣೆ ತಗ್ಗಲಿದೆ: ಉಪನಗರ ರೈಲು ಯೋಜನೆಯಲ್ಲೂ ಎತ್ತರಿಸಿದ ಮಾರ್ಗ ಬರುತ್ತದೆ. ಅದನ್ನು ಹೊರತುಪಡಿಸಿದರೂ ಉಳಿದ 65-70 ಕಿ.ಮೀ. ಮಾರ್ಗದಲ್ಲಿ 8-10 ತಿಂಗಳಲ್ಲಿ ರೈಲು ಸೇವೆ ಆರಂಭಿಸಬಹುದು. ಇದು
ಸಾಧ್ಯವಾದರೆ, ದಿನಕ್ಕೆ ಅಂದಾಜು 25 ರೈಲು ಸೇವೆಗಳನ್ನು ನೀಡಬಹುದು. ಇದರಿಂದ ಕನಿಷ್ಠ 1ರಿಂದ 1.20 ಲಕ್ಷ ಜನರಿಗೆ ಉಪಯೋಗ ಆಗುತ್ತದೆ. ಇದರರ್ಧದಷ್ಟು ಜನ ಖಾಸಗಿ ವಾಹನಗಳನ್ನು ಬಳಸುತ್ತಾರೆ ಎಂದುಕೊಂಡರೂ 30 ಸಾವಿರ ವಾಹನಗಳ ಹೊರೆ ಕಡಿಮೆ ಆಗಲಿದೆ. ಆದರೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕಿದೆ ಎಂದು ಉಪನಗರ ರೈಲು ಹೋರಾಟಗಾರ ಸಂಜೀವ್‌ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ.

ನಗರದಲ್ಲಿರುವ ರೈಲು ನೆಟ್‌ವರ್ಕ್‌ನಲ್ಲಿ 40 ಲೆವೆಲ್‌ ಕ್ರಾಸಿಂಗ್‌ ಬರುತ್ತವೆ. ಇವುಗಳಲ್ಲಿ ನಿತ್ಯ ಪ್ರತಿ ಕ್ರಾಸಿಂಗ್‌ನಲ್ಲಿ ಕನಿಷ್ಠ ನೂರು ವಾಹನಗಳು ಇಲ್ಲಿ ನಿಲುಗಡೆ ಆಗುತ್ತವೆ. ಅಂದರೆ 4ರಿಂದ 5 ಸಾವಿರ ವಾಹನಗಳು ರೈಲು ಹೋಗುವವರೆಗೆ ನಿಲ್ಲಬೇಕು. ಇದನ್ನು ತೆರವುಗೊಳಿಸಿ, ರೈಲು ಎತ್ತರಿಸಿದ ಮಾರ್ಗ (ಆರ್‌ಒಬಿ) ಅಥವಾ ಸುರಂಗ ಮಾರ್ಗ (ಆರ್‌
ಯುಬಿ) ನಿರ್ಮಿಸಲು ಒತ್ತುಕೊಡಬೇಕು. ಇದಕ್ಕೆ ರಾಜ್ಯದಿಂದ ಭೂಮಿ ಹಾಗೂ ಅರ್ಧದಷ್ಟು ಯೋಜನಾ ವೆಚ್ಚ ಭರಿಸುವ ಅಗತ್ಯವಿದೆ ಎಂದು ಅವರು ಹೇಳುತ್ತಾರೆ. 

ರಾಜ್ಯ ಸರ್ಕಾರಕ್ಕೆ ತಿಂಗಳ ಹಿಂದೆಯೇ ಎಸ್‌ಪಿವಿ ರಚನೆಗಾಗಿ ಪತ್ರ ಬರೆಯ ಲಾಗಿದೆ. ಉಪನಗರ ರೈಲು ಯೋಜನೆ
ಸಂಪೂರ್ಣವಾಗಿ ಜಾರಿಗೆ ಎರಡೂವರೆ ಯಿಂದ ಮೂರು ವರ್ಷ ಹಿಡಿಯುತ್ತದೆ. ಎತ್ತರಿಸಿದ ಮಾರ್ಗ ಹೊರತುಪಡಿಸಿದರೆ,
ವರ್ಷದಲ್ಲಿ ಮಾಡಿಮುಗಿಸಬಹುದು. 
 ಇ.ವಿಜಯಾ, ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ

  ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next