Advertisement

ಬಹಿರಂಗ ಕ್ಷಮೆಯಾಚನೆಗೆ ಆಗ್ರಹ

08:43 AM Jan 16, 2019 | Team Udayavani |

ದಾವಣಗೆರೆ: ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕಾಂಗ್ರೆಸಿಗ, ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಅತ್ಯಂತ ಹಗುರವಾಗಿ ಮಾತನಾಡಿರುವ ಗೃಹ ಸಚಿವ ಎಂ.ಬಿ. ಪಾಟೀಲ್‌ ಶಾಮನೂರು ಶಿವಶಂಕರಪ್ಪನವರಿಗೆ ಬಹಿರಂಗ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ, ಜ.20ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಡಾ| ಶಾಮನೂರು ಶಿವಶಂಕರಪ್ಪನವರ ಅಭಿಮಾನಿ ಬಳಗ ಎಚ್ಚರಿಸಿದೆ.

Advertisement

ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಗೃಹ ಸಚಿವ ಎಂ.ಬಿ. ಪಾಟೀಲ್‌ ಅತ್ಯಂತ ಹಗುರವಾಗಿ ಮಾತನಾಡಿರುವುದು ಬಳಗ ಖಂಡಿಸುತ್ತದೆ. ಕೂಡಲೇ ಅವರು ಬಹಿರಂಗ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಭಾನುವಾರ ದಾವಣಗೆರೆಯ ಕಾಯಿಪೇಟೆಯ ಶ್ರೀ ಬಸವೇಶ್ವರ ಪ್ರತಿಮೆ ಎದುರು 10-15 ಸಾವಿರ ಜನರೊಂದಿಗೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಮಾತ್ರವಲ್ಲ ಎಂ.ಬಿ. ಪಾಟೀಲ್‌ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುವುದು ಎಂದು ಬಳಗದ ಬಿ.ಎಚ್. ವೀರಭದ್ರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ವೀರಶೈವ-ಲಿಂಗಾಯತ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಬಸವಣ್ಣನವರು ಹೇಳಿರುವ ಕಾಯಕತತ್ವದಂತೆಯೇ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಬೆಳೆದಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ. ಎಲ್ಲಾ ಜನಾಂಗದವರೊಟ್ಟಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಬಗ್ಗೆ ಮಾತನಾಡಿರುವ ಎಂ.ಬಿ. ಪಾಟೀಲ್‌ರವರ ತವರು ಜಿಲ್ಲೆ ವಿಜಯಪುರದಲ್ಲಿ ಈಗಲೂ ದಲಿತರನ್ನ ಕೀಳಾಗಿ ನೋಡುತ್ತಿರುವುದನ್ನ ಸರಿಪಡಿಸಲಿಕ್ಕೆ ಆಗದವರು. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಕೂಡಲೇ ಬಹಿರಂಗ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿ, ಎಂ.ಬಿ. ಪಾಟೀಲ್‌ರವರು ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಕೀಳಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ ಮತ್ತು ನೋವಿನ ವಿಚಾರ. ರೇಣುಕ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಿಧಾನಸಭಾ ಚುನಾವಣೆಗಿಂತಲೂ ಹಿಂದೆ ಕೆಲವರು ಪ್ರತ್ಯೇಕ ಧರ್ಮದ ವಿಚಾರ ಎತ್ತಿದ್ದು ರಾಜಕೀಯ ಕಾರಣಕ್ಕಾಗಿ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಆ ವಿಚಾರ ಪ್ರಸ್ತಾಪ ಮಾಡುತ್ತಾರೆ. ವೀರಶೈವ-ಲಿಂಗಾಯತರು ಒಂದಾಗಿ ಹೋಗೋಣ. ಆಗ ಸಕರಾತ್ಮಕವಾಗಿ ಕೆಲಸ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಹೊರತು ಯಾರ ಬಗ್ಗೆಯೂ ವೈಯಕ್ತಿಕವಾಗಿ ಹೇಳಿಲ್ಲ. ಆದರೂ, ಎಂ.ಬಿ. ಪಾಟೀಲ್‌ ಅವರೇ ತಪ್ಪಾಗಿ ತಿಳಿದುಕೊಂಡು ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಕೀಳಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವುದು ದುರುದ್ದೇಶ ಮತ್ತು ಸಂಕುಚಿತ ಮನೋಭಾವ ತೋರಿಸುತ್ತಿದೆ ಎಂದರು.

ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಸಾಧನೆ ಕುರಿತಂತೆ ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲಾಗಿದೆ. ಅಂತಹ ರಾಜಕೀಯ ಸಾಧನೆ ಮಾಡಿದವರು ಎಷ್ಟು ಜನರಿದ್ದಾರೆ ಎಂದು ಕೇಳಬೇಕಾಗುತ್ತದೆ. ಅವರ ಬಗ್ಗೆ ಈ ರೀತಿಯ ಕೀಳು ಮಟ್ಟದಲ್ಲಿ ಮಾತನಾಡುವುದು ಅವರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಅಸಹ್ಯ ತರುವಂತದ್ದು. ಮಾಧ್ಯಮಗಳ ಮುಂದೆ ಬಾಯಿ ಚಪಲಕ್ಕೆ ಮಾತನಾಡಿದರೆ ಹೀರೋ ಆಗಿ ಬಿಡುತ್ತೇವೆ ಎಂಬ ಭ್ರಮೆಯಿಂದ ಮಾತನಾಡುವುದು ಖಂಡನೀಯ. ಈ ಕಾಲದಲ್ಲಿ ದೇವರಿಗೂ ಮಾತನಾಡುತ್ತಾರೆ. ಹಾಗಂತ ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವುದು. ರಾಜಕೀಯ ಒತ್ತಾಸೆಗಾಗಿ ಕ್ಷುಲ್ಲಕ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದ್ದಲ್ಲ ಎಂದು ತಿಳಿಸಿದರು.

Advertisement

ಎಂ.ಬಿ. ಪಾಟೀಲ್‌ ಅವರು ಬಾಪೂಜಿ ವಿದ್ಯಾಸಂಸ್ಥೆ ಬಗ್ಗೆಯೂ ಮಾತನಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಯಾರನ್ನೂ ಕೊಠಡಿಯಲ್ಲಿ ಕೂಡಿ ಹಾಕಿ, ಸಂಸ್ಥೆಯನ್ನ ಬರೆಸಿಕೊಂಡಿಲ್ಲ. ಎಲ್ಲರೂ ಒಪ್ಪಿಗೆ ನೀಡಿದ್ದರಿಂದ ಬೈಲಾ ಪ್ರಕಾರವೇ ಸಂಸ್ಥೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರೇನು ಬಾಪೂಜಿ ವಿದ್ಯಾಸಂಸ್ಥೆಯನ್ನ ಮುಳುಗಿಸಿಲ್ಲ. ದಾವಣಗೆರೆಯ ಹೆಸರನ್ನು ಇಡೀ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದಾರೆ ಎಂದರು ಹೇಳಿದರು. ಉಪ ಮೇಯರ್‌ ಕೆ. ಚಮನ್‌ಸಾಬ್‌, ಮಾಜಿ ಮೇಯರ್‌ ಎಚ್.ಬಿ. ಗೋಣೆಪ್ಪ, ಸದಸ್ಯ ಎಂ. ಹಾಲೇಶ್‌, ದೇವರಮನೆ ಶಿವಕುಮಾರ್‌, ಕೆ.ಜಿ. ಶಿವಕುಮಾರ್‌, ಗೌಡ್ರ ಚನ್ನಬಸಪ್ಪ, ಎಚ್. ಹೇಮಂತರಾಜ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಿ-ಫಾರಂ ಎಸ್ಸೆಸ್‌ಗೆ ಸಂಬಂಧವೇ ಇಲ್ಲ
ಬಿ-ಫಾರಂ ಹರಿದು ಹಾಕಿರುವುದಕ್ಕೂ ಶಾಮನೂರು ಶಿವಶಂಕರಪ್ಪ ಅವರಿಗೆ ಯಾವುದೇ ಸಂಬಂಧವೇ ಇಲ್ಲ. ನಾನು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಬಿ-ಫಾರಂ ಕೇಳಿದ್ದು. ದಾವಣಗೆರೆ ಉತ್ತರ ಕ್ಷೇತ್ರದ ಬಿ-ಫಾರಂ ನೀಡಲಾಗಿತ್ತು. ನಾನೇ ನನ್ನ ಹೆಸರು ತೆಗೆದುಹಾಕಿ, ಮಲ್ಲಿಕಾರ್ಜುನ್‌ ಅವರ ಹೆಸರು ಬರೆದಿದ್ದೆ. ಶಾಮನೂರು ಶಿವಶಂಕರಪ್ಪ ಅವರಂತಹ ಹಿರಿಯ ನಾಯಕರ ಬಗ್ಗೆ ನಮ್ಮವರೇ ಆದ ಎಂ.ಬಿ. ಪಾಟೀಲ್‌ ಮಾತನಾಡುವುದರಿಂದ ಪಕ್ಷಕ್ಕೇ ಕೆಟ್ಟ ಹೆಸರು ಬರುತ್ತದೆ. ಯಾರೇ ಬಗ್ಗೆಯೇ ಮಾತನಾಡುವಾಗ ಹಿಂದೆ-ಮುಂದೆ ನೋಡಿ ಮಾತನಾಡಬೇಕು. ಎಂ.ಬಿ. ಪಾಟೀಲ್‌ ಅವರು ಬಹಿರಂಗ ಕ್ಷಮೆ ಕೋರಬೇಕು ಎಂದು ಡಾ| ಶಾಮನೂರು ಶಿವಶಂಕರಪ್ಪನವರ ಅಭಿಮಾನಿ ಬಳಗದ ಸೈಯದ್‌ ಸೈಪುಲ್ಲಾ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next