Advertisement

Covid ಪ್ರಕರಣ ಇಳಿಕೆ:ಜೂ.7ರಿಂದ ದೆಹಲಿ, ಮುಂಬೈ, ತಮಿಳುನಾಡಿನಲ್ಲಿ ಲಾಕ್ ಡೌನ್ ಸಡಿಲಿಕೆ ಶುರು

11:26 AM Jun 07, 2021 | Team Udayavani |

ನವದೆಹಲಿ:ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಎರಡು ತಿಂಗಳ ಬಳಿಕ ಮತ್ತೆ ಚಟುವಟಿಕೆಗಳು ಪುನರಾರಂಭಗೊಳ್ಳತೊಡಗಿದೆ. ಸೋಮವಾರ(ಜೂನ್ 07)ದಿಂದ ದೆಹಲಿ, ಮುಂಬಯಿ, ಜಮ್ಮು-ಕಾಶ್ಮೀರ ಮತ್ತು ತಮಿಳುನಾಡಿನಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಆರಂಭಗೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಪಾಕಿಸ್ತಾನ: ಎರಡು ರೈಲು ಡಿಕ್ಕಿ-30ಕ್ಕೂ ಅಧಿಕ ಪ್ರಯಾಣಿಕರ ಸಾವು: ಹಲವು ಮಂದಿಗೆ ಗಾಯ

ದೆಹಲಿ:
ದೆಹಲಿಯಲ್ಲಿ ಮಾಲ್ ಗಳಲ್ಲಿರುವ ಅಂಗಡಿ, ಮಾರುಕಟ್ಟೆ, ಕಾಂಪ್ಲೆಕ್ಸ್ ಗಳು, ಕಿರಾಣಿ ಅಂಗಡಿಗಳನ್ನು ಸಮ-ಬೆಸ ಮತ್ತು ಸಮಯದ  ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಮೇ 10ರಿಂದ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೋ ಕೂಡಾ ಶೇ.50ರಷ್ಟು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಕಾರ್ಯಾರಂಭಿಸಲಿದೆ. ಅಲ್ಲದೇ ಖಾಸಗಿ ಕಚೇರಿಗಳಲ್ಲಿಯೂ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಮಹಾರಾಷ್ಟ್ರ/ಮುಂಬೈ:
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಕರಣ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳ ಲಭ್ಯತೆಯ ಆಧಾರದ ಮೇಲೆ ಐದು ಹಂತಗಳಲ್ಲಿ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸಲು ನಿರ್ಧರಿಸಿದೆ. ಮುಂಬೈನಲ್ಲಿ ಇಂದಿನಿಂದ ರೆಸ್ಟೋರೆಂಟ್ಸ್, ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆದರೆ ಮಾಲ್ಸ್, ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಗಳ ಬಂದ್ ಮುಂದುವರಿಯಲಿದೆ.

ತುರ್ತು ಕೆಲಸಗಳಿಗೆ ತೆರಳುವ ನೌಕರರಿಗೆ ಮಾತ್ರ ನಗರದಲ್ಲಿ ಸ್ಥಳೀಯ ರೈಲು ಓಡಾಟ ನಡೆಸಲಿದೆ. ಅಲ್ಲದೇ ಬಸ್ ಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಆದರೆ ಪ್ರಯಾಣಿಕರು ನಿಂತು ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಉತ್ತರಪ್ರದೇಶ:
ವಾರಣಾಸಿ, ಮುಜಾಫರ್ ನಗರ್, ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ ನ ಕಂಟೈನ್ ಮೆಂಟ್ ವಲಯ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಅಂಗಡಿ ಮತ್ತು ಮಾರುಕಟ್ಟೆ ತೆರೆಯಲು ಉತ್ತರಪ್ರದೇಶ ಸರ್ಕಾರ ಅನುಮತಿ ನೀಡಿದೆ. ಈ ನಾಲ್ಕು ನಗರಗಳಲ್ಲಿ 600ಕ್ಕಿಂತ ಕಡಿಮೆ ಕೋವಿಡ್ 19 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ. ಸೋಮವಾರ ಬೆಳಗ್ಗೆ 7ಗಂಟೆಯಿಂದ ಶುಕ್ರವಾರ ಸಂಜೆ 7ಗಂಟೆವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದ್ದು, ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಮುಂದುವರಿಯಲಿದೆ ಎಂದು ತಿಳಿಸಿದೆ.

ತಮಿಳುನಾಡು:
ತಮಿಳುನಾಡಿನಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಲಾಗಿದೆ. ರಾಜ್ಯದಲ್ಲಿರುವ ಕೊಯಂಬತ್ತೂರು ಸೇರಿದಂತೆ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 5ಗಂಟೆವರೆಗೆ ಅಂಗಡಿ, ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಆಟೋದಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಮತ್ತು ಕ್ಯಾಬ್ಸ್ ನಲ್ಲಿ ಇ-ಪಾಸ್ ನೊಂದಿಗೆ ಮೂವರು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.

ಜಮ್ಮು-ಕಾಶ್ಮೀರ:
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಜೂನ್ 15ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಒಂದು ತಿಂಗಳ ಲಾಕ್ ಡೌನ್ ಬಳಿಕ ಭಾನುವಾರದಿಂದ ಜಮ್ಮುವಿನಲ್ಲಿ ಹಂತ, ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ಆರಂಭವಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next