Advertisement

ಮತ್ತೆ ಸಮ-ಬೆಸಕ್ಕೆ ಮೊರೆ

06:00 AM Nov 10, 2017 | Harsha Rao |

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸೋಮವಾರದಿಂದ ಈ ವ್ಯವಸ್ಥೆ ಪುನಃ ಜಾರಿಗೆ ಬರಲಿದೆ. ಸಮ ಸಂಖ್ಯೆಯಿಂದ ಕೊನೆಯಾಗುವ ನೋಂದಣಿ ಸಂಖ್ಯೆ ಯುಳ್ಳ ವಾಹನಗಳನ್ನು ರಸ್ತೆಗಿಳಿಯಲು ಅನುಮತಿಸಿದರೆ, ಮರುದಿನ ಬೆಸ ಸಂಖ್ಯೆಯ ನೋಂದಣಿ ವಾಹನಗಳನ್ನು ಅನುಮತಿಸಲಾಗುತ್ತದೆ.

Advertisement

ಐದು ದಿನಗಳವರೆಗೆ ಈ ನಿಯಮ ಜಾರಿಯಲ್ಲಿರಲಿದ್ದು, ಮಹಿಳೆ ಮತ್ತು ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಇದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚಾಲ್ತಿಯಲ್ಲಿರಲಿದೆ ಎಂದು ದಿಲ್ಲಿ ಸಾರಿಗೆ ಸಚಿವ ಕೈಲಾಶ್‌ ಗೆಹೊÉàಟ್‌ ಹೇಳಿದ್ದಾರೆ. ಹೊಸ ಸಂಚಾರ ನಿಯಮ ಉಲ್ಲಂ ಸಿದರೆ 2,000 ರೂ. ದಂಡ ವಿಧಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ 100 ಸಣ್ಣ ಬಸ್‌ಗಳನ್ನು ಓಡಿಸಲಾಗುತ್ತದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ಪರಿಸರ ಸಚಿವಾಲಯವು ರಚಿಸಿದ್ದು, ಹಲವು ಶಿಫಾರಸುಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನೀಡಿದೆ. ಇನ್ನೊಂದೆಡೆ ಮಾಲಿನ್ಯ ನಿಯಂತ್ರಣ ಕ್ಕಾಗಿ ಸರಕಾರಕ್ಕೆ ಹಲವು ಸೂಚನೆಗಳನ್ನು ದಿಲ್ಲಿ ಹೈಕೋರ್ಟ್‌ ನೀಡಿದೆ. ಮಾಲಿನ್ಯವನ್ನು ನಿಯಂತ್ರಿಸಲಾಗದ್ದಕ್ಕೆ ಆಕ್ಷೇಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಿಲ್ಲಿ, ಪಂಜಾಬ್‌ ಮತ್ತು ಹರಿಯಾಣ ಸರಕಾರಕ್ಕೆ  ನೋಟಿಸ್‌ ನೀಡಿದೆ.

ಮರಗಳಿಗೆ ಜಲಾಭಿಷೇಕ: ಮರಗಳ ಮೇಲೆ ಕುಳಿತಿರುವ ಧೂಳನ್ನು ತೊಳೆಯಲು ಅಗ್ನಿಶಾಮಕ ದಳ ಮರಗಳಿಗೆ ನೀರು ಸಿಂಪಡಿಸಲು ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ಕಾರ್ಯನಿರತವಾಗಿರುವ ಅಗ್ನಿಶಾಮಕ ದಳ, 14 ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೋಡ ಬಿತ್ತನೆ, ರಸ್ತೆಗಳಿಗೆ ನೀರು ಚಿಮುಕಿಸುವ ಕ್ರಮಗಳನ್ನೂ ಕೈಗೊಳ್ಳಲು ಸರಕಾರ ಮುಂದಾಗಿದೆ.

ಕೃಷಿ ತ್ಯಾಜ್ಯ ಸುಡುವಲ್ಲೂ ರಾಜಕೀಯ: ಪಂಜಾಬ್‌, ಹರಿಯಾಣದಲ್ಲಿ ಕೃಷಿ ಕಳೆಯನ್ನು ಸುಡುವುದಕ್ಕೆ ಸಂಬಂಧಿಸಿದಂತೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹಾಗೂ ಇತರ ರಾಜ್ಯಗಳ ಮಧ್ಯೆ ತಿಕ್ಕಾಟ ಆರಂಭವಾಗಿದೆ. ಕೃಷಿ ತ್ಯಾಜ್ಯ ಸುಡುವ ಸಮಸ್ಯೆಯನ್ನು ಕೇಂದ್ರ ಸರಕಾರ, ಪಂಜಾಬ್‌ ಹಾಗೂ ಹರಿಯಾಣ ಸರಕಾರವು ನಿರ್ವಹಿಸಬೇಕು ಎಂದು ಹೇಳಿದ್ದಾರೆ. ಈ ಮಧ್ಯೆ ಕೇಜ್ರಿವಾಲ್‌ ಅವರನ್ನು ಟೀಕಿಸಿರುವ ಪಂಜಾಬ್‌ ಸಿಎಂ ಕ್ಯಾ| ಅಮರಿಂದರ್‌ ಸಿಂಗ್‌, ಲಕ್ಷಾಂತರ ಹೆಕ್ಟೇರ್‌ ತ್ಯಾಜ್ಯ ಸೃಷ್ಟಿಯಾಗುತ್ತದೆ. ಅದನ್ನು ರೈತರು ಸುಡದಂತೆ ನಾನು ಹೇಗೆ ತಡೆಯಲಿ ಎಂದಿದ್ದಾರೆ. ಕೇಜ್ರಿವಾಲ್‌ಗೆ ನಿಜವಾದ ಸಮಸ್ಯೆಯ ಬಗ್ಗೆ ಅರಿವಿಲ್ಲ ಎಂದು ಅವರು ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next