ಮಂಗಳೂರು: ಪತಿಯನ್ನು ಬೆದರಿಸಿ ಒಂದು ಕೋಟಿ ರೂ. ಬೇಡಿಕೆ ಇಟ್ಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಅಂಬಿಕಾ ನಾಯಕ್ ವಿರುದ್ಧ ಬಾಲ್ಯ ಸ್ನೇಹಿತೆಗೆ ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶ ರವಾನಿಸುತ್ತಿದ್ದ ಆರೋಪದಡಿ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಮಣಿಪಾಲ ಅನಂತನಗರ ಮೂಲದ ಅಂಬಿಕಾ ನಾಯಕ್ಳ ಮತ್ತಷ್ಟು ಮೋಸದ ಆಟ ಬಯಲಾಗುತ್ತಿದೆ!
ಅಂಬಿಕಾಳ ಸ್ನೇಹಿತೆ ಪ್ರಸ್ತುತ ಬೆಂಗಳೂರಿನಲ್ಲಿ ಪತಿ ಜತೆ ವಾಸವಾಗಿದ್ದಾರೆ. 2015ರ ಡಿ. 12ರಿಂದ 2016ರ ಫೆ. 10ರ ತನಕ ಅಂಬಿಕಾ ತನ್ನ ಸ್ನೇಹಿತೆ ಮತ್ತು ಆಕೆಯ ಪತಿಗೆ ಸತತವಾಗಿ ಅಶ್ಲೀಲ, ನಿಂದನಾತ್ಮಕ ಮತ್ತು ಬೆದರಿಕೆಯ ಸಂದೇಶಗಳನ್ನು ವಾಟ್ಸ್ ಆ್ಯಪ್ನಲ್ಲಿ ಕಳುಹಿಸಿದ್ದಳು ಎಂದು ಆರೋಪಿಸಲಾಗಿದೆ.
ಸ್ನೇಹಿತೆಯು ಬೆಂಗಳೂರಿನ 1ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಗೂ ಪ್ರತ್ಯೇಕವಾಗಿ ಸಿವಿಲ್ ನ್ಯಾಯಾಲಯದಲ್ಲಿಯೂ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣ ವಿಚಾರಣೆಯ ಅಂತಿಮ ಘಟ್ಟದಲ್ಲಿದೆ.
ಸಂಜಯನಗರ ಪೊಲೀಸರು ಆರೋಪಿ ಅಂಬಿಕಾ ನಾಯಕ್ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆಕೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಳು. ಈಗಾಗಲೇ 20 ಬಾರಿ ಸಾಕ್ಷಿ ಗಳ ವಿಚಾರಣೆ ನಡೆದಿದ್ದು, ಎಪ್ರಿಲ್-ಮೇ ತಿಂಗಳೊಳಗೆ ವಿಚಾರಣೆ ಮುಕ್ತಾಯ ಗೊಂಡು ತೀರ್ಪು ಹೊರ ಬೀಳುವ ನಿರೀಕ್ಷೆ ಇದೆ. ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯಾಗಿರುವ ಅಂಬಿಕಾಳ ತಂದೆ ಕೆ. ವಾಸುದೇವ ಪ್ರಭುವನ್ನು ಉಳ್ಳಾಲ ಪೊಲೀಸರು ನ. 27ರಂದು ಮಣಿಪಾಲದ ನಿವಾಸದಿಂದ ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು.