Advertisement

ಸೆಲ್ಫಿಯಲ್ಲಿ ಸೆರೆಯಾದ ಸ್ನೇಹಿತನ ಸಾವು!

11:30 AM Sep 26, 2017 | Team Udayavani |

ರಾಮನಗರ/ಬೆಂಗಳೂರು: ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ಕನಕಪುರ ತಾಲೂಕಿನ ರಾಮಗೊಂಡ್ಲು ಗ್ರಾಮದ ಕಲ್ಯಾಣಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಸಹಪಾಠಿಗಳು ತೆಗೆದುಕೊಂಡ ಸೆಲ್ಫಿಯಲ್ಲಿ ವಿದ್ಯಾರ್ಥಿ ಮುಳುಗುತ್ತಿರುವ ದೃಶ್ಯ ಸೆರೆಯಾಗಿದೆ!

Advertisement

ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ವಿಶ್ವಾಸ್‌ (17) ಮೃತನು. ಬೆಂಗಳೂರಿನ ಹನುಮಂತ ನಗರದ ನಿವಾಸಿ ಗೋವಿಂದರಾಜು , ಲಕ್ಷ್ಮಿದಂಪತಿಯ ಪುತ್ರ ವಿಶ್ವಾಸ್‌, ಎನ್‌ಸಿಸಿ ಕ್ಯಾಂಪ್‌ ನಿಮಿತ್ತ ಸಹಪಾಠಿಗಳೊಂದಿಗೆ ರಾಮಗೊಂಡ್ಲು ಗ್ರಾಮಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ.

ಟ್ರಕ್ಕಿಂಗ್‌ ಮುಗಿಸಿ ನೀರಿಗಿಳಿದಿದ್ದರು: ಬೆಂಗಳೂರಿನ ನ್ಯಾಷನಲ್‌ ಪಿಯು ಕಾಲೇಜಿನ ಎನ್‌ಸಿಸಿ ವಿಭಾಗದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪ್‌ ನಿಮಿತ್ತ ಕನಕಪುರ ತಾಲೂಕಿನ ರಾಮಗೊಂಡ್ಲು ಗ್ರಾಮಕ್ಕೆ ತೆರಳಿದ್ದರು. ಭಾನುವಾರ ಬೆಳಗ್ಗೆ ಅಲ್ಲಿನ ಗುಡ್ಡವೊಂದರಲ್ಲಿ ಟ್ರಕ್ಕಿಂಗ್‌ ಮುಗಿಸಿದ್ದಾರೆ. ಬಳಿಕ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಬಳಿ ಬಂದು ಈಜಲು ಕಲ್ಯಾಣಿಗೆ ಇಳಿದಿದ್ದಾರೆ.

ಈ ನಡುವೆ ಕೆಲ ವಿದ್ಯಾರ್ಥಿಗಳು ಕಲ್ಯಾಣಿ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದು, ಇದೇ ವೇಳೆ ವಿಶ್ವಾಸ್‌ ಕಲ್ಯಾಣಿ ನೀರಿನಲ್ಲಿ ಮುಳುಗಿದ್ದಾನೆ. ಈ ದೃಶ್ಯ ಯುವಕರು ತೆಗೆದುಕೊಂಡ ಸೆಲ್ಫಿಯಲ್ಲಿ ಸೆರೆಯಾಗಿದೆ. ಆದರೆ, ವಿಶ್ವಾಸ್‌ ಮುಳುಗುವುದನ್ನು ಯಾರೂ ಗಮನಿಸಿಲ್ಲ. ಸೆಲ್ಫಿ ತೆಗೆದುಕೊಂಡ ನಂತರ ವಿದ್ಯಾರ್ಥಿಗಳು ಅಲ್ಲಿಂದ ಹೊರಟಿದ್ದಾರೆ. ಆದರೆ, ಘಟನಾ ಸ್ಥಳದಿಂದ ದಾರು ಕಿ.ಮೀ ದೂರು ಹೋದ ನಂತರ ವಿಶ್ವಾಸ್‌ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷದಣ ಕಲ್ಯಾಣಿ ಬಳಿ ವಾಪಸ್‌ ಹೋದ ವಿದ್ಯಾರ್ಥಿಗಳ ತಂಡ, ಕಲ್ಯಾಣಿಯೊಳಗೆ ಹುಡುಕಾಡಿದಾಗ ವಿಶ್ವಾಸ್‌ನ ಶವ ಪತ್ತೆಯಾಗಿದೆ.

ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ವಿಶ್ವಾಸ್‌, ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತನ ಪೋಷಕರು, ಎನ್‌ಸಿಸಿ ಅಧಿಕಾರಿ ಗಿರೀಶ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಹಪಾಠಿಗಳಿಂದ ಅಂತಿಮ ದರ್ಶನ: ಜಯನಗರ ನ್ಯಾಷನಲ್‌ಕಾಲೇಜು ಆವರಣದಲ್ಲಿ ಮೃತ ವಿಶ್ವಾಸ್‌ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಸಹಪಾಠಿಗಳು ಅಗಲಿದ ಸ್ನೇಹಿತನಿಗಾಗಿ ಕಂಬಿನಿ ಮಿಡಿದರು. ಈ ವೇಳೆ ಮೃತ ವಿಶ್ವಾಸ್‌ ಪೋಷಕರು ಮತ್ತು ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಸುತ್ತ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

“ಅಂತ್ಯ ಕ್ರಿಯೆಗಾಗಿ ವಿಶ್ವಾಸ್‌ ಕುಟುಂಬಕ್ಕೆ ಆಡಳಿತ ಮಂಡಳಿಯಿಂದ 50 ಸಾವಿರ ರೂ. ನೀಡಲಾಗಿದೆ. ಕುಟುಂಬಕ್ಕೆ ಇನ್ನು ಹೆಚ್ಚಿನ ಪರಿಹಾರ ಕೊಡುವ ಸಂಬಂಧ ಚರ್ಚಿಸಲು ಮಂಗಳವಾರ ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ. ಮಾನವೀಯತೆ ಆಧಾರದಲ್ಲಿ ಆರ್ಥಿಕ ಸಹಾಯ ಮಾಡಲಿದ್ದೇವೆ,’ ಎಂದು ನಾಗರಾಜ್‌ ತಿಳಿಸಿದ್ದಾರೆ.

ಸೆಲ್ಫಿ ಮುಖ್ಯವಾಯಿತಾ?: ಎನ್‌ಸಿಸಿ ಕ್ಯಾಂಪ್‌ಗೆ ತೆರಳಿದ್ದ ಮಗನ ಸಾವಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಎನ್‌ಸಿಸಿ ಅಧಿಕಾರಿ ಗಿರೀಶ್‌ ಕಾರಣ ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ಪೋಷಕರು ಸೋಮವಾರ ಕಾಲೇಜು ಮುಂದೆ ಪ್ರತಿಭಟಿಸಿದರು. “ನನ್ನ ಮಗ ನೀರಿನಲ್ಲಿ ಬಿದ್ದು ಮೃತಪಟ್ಟರೂ, ಎನ್‌ಸಿಸಿ ಅಧಿಕಾರಿ ಗಿರೀಶ್‌ ನಮಗೆ ಮಾಹಿತಿ ನೀಡಿಲ್ಲ. ಕಗ್ಗಲಿಪುರ ಠಾಣೆ ಪೊಲೀಸರು ದೂರವಾಣಿ ಮೂಲಕ ಮಗನ ಸಾವಿನ ವಿಚಾರ ತಿಳಿಸಿದರು. ನನ್ನ ಮಗ ಸಾಯುತ್ತಿದ್ದರೂ, ಆತನ ಸ್ನೇಹಿತರಿಗೆ ಸೆಲ್ಫಿ ಮುಖ್ಯವಾಯಿತಾ,’ ಎಂದು ವಿಶ್ವಾಸ್‌ ಪೋಷಕರು ಆಕ್ರೋಶ ವ್ಯಕಪಡಿಸಿದರು.

ಕ್ಯಾಂಪ್‌ಗೆ ಅನುಮತಿ ಪಡೆದಿರಲಿಲ್ಲ: “ನ್ಯಾಷನಲ್‌ ಕಾಲೇಜಿನ ಎನ್‌ಸಿಸಿ ಅಧಿಕಾರಿ ಗಿರೀಶ್‌, ಕ್ಯಾಂಪ್‌ ನಡೆಸುವ ಬಗ್ಗೆ ಪ್ರಾಂಶುಪಾಲರಿಂದಾಗಲಿ, ಎನ್‌ಸಿಸಿಯ ಹಿರಿಯ ಅಧಿಕಾರಿಯಿಂದಾಗಲೀ ಅನುಮತಿ ಪಡೆದಿಲ್ಲ. ಘಟನೆ ಭಾನುವಾರ ನಡೆದಿದ್ದು, ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಪ್ರಿನ್ಸಿಪಾಲ್‌ರಿಗೆ ಕರೆ ಮಾಡಿ ವಿಶ್ವಾಸ್‌ ಸಾವಿನ ಮಾಹಿತಿ ನೀಡಿದ್ದಾರೆ. ಯಾರ ಅನುಮತಿ  ಪಡೆದು ವಿದ್ಯಾರ್ಥಿಗಳನ್ನು ಕರೆದೊಯ್ದಿರಿ ಎನ್ನುವ ಪ್ರಶ್ನೆಗೆ ಗಿರೀಶ್‌ ಸ್ವಷ್ಟವಾಗಿ ಉತ್ತರ ನೀಡುತ್ತಿಲ್ಲ.

ಅದೊಂದು ಸ್ವಯಂ ಪ್ರೇರಿತ ಸ್ವತ್ಛತಾ ಕಾರ್ಯ ಎಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಒಂದೊಮ್ಮೆ ಗಿರೀಶ್‌ ತಪ್ಪು ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ,’ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ  ಪ್ರೊ ಎಸ್‌.ಎನ್‌.ನಾಗರಾಜ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next