Advertisement

Motivation: ಸಾವು ದೊಡ್ಡದಲ್ಲ…

01:15 PM Oct 15, 2023 | Team Udayavani |

ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಕೆಲವರಿಗೆ ಬದುಕಿನ ಕುರಿತು ಹೆಚ್ಚು ಆಸೆ, ಇನ್ನು ಕೆಲವರಿಗೆ ಬದುಕೇ ಬೇಡವೆಂಬ ಹತಾಶೆ. ಈ ಕಾರಣಕ್ಕಾಗಿ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಜೀವನದಲ್ಲಿ ಸಂಭವಿಸುವ ಕೆಲವು ಕಹಿ ಘಟನೆಗಳು, ಹೇಳಿಕೊಳ್ಳಲಾಗದ ಸಮಸ್ಯೆಗಳು ಎದುರಾದಾಗ, ತನ್ನವರು ಯಾರು ಇಲ್ಲವೆನಿಸಿದಾಗ, ನೋವನ್ನು ಹೇಳಿಕೊಳ್ಳಬೇಕೆನಿಸಿದರು ಯಾರು ಸಿಗದಿದ್ದಾಗ, ಸಮಾಜ ಏನೆನ್ನುವುದು ಎಂಬ ಭಯವಾದಾಗ, ಭವಿಷ್ಯದ ಚಿಂತೆ ಕಾಡಿದಾಗ ಹೀಗೆ ವಾಸ್ತವಕ್ಕೂ ಮೀರಿದ ವಿಷಯಗಳು ಆತ್ಮಹತ್ಯೆಗೆ ಕಾರಣವಾಗಿಬಿಡುತ್ತವೆ.

Advertisement

ಆದರೆ ಇಲ್ಲಿ ಇನ್ನು ಮುಂದೆ ನನ್ನಿಂದ ಬದುಕಲಾಗದು ಎನ್ನುವುದು ಆತ್ಮಹತ್ಯೆಗೆ ಕಾರಣವಲ್ಲ, ಬದಲಿಗೆ ಒಂಟಿಯಾಗಿ ಬದುಕಲಾಗದು ಎನ್ನುವುದೇ ಇದಕ್ಕೆ ಮುಖ್ಯ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ 40ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಜಾಗತಿಕ ಮಟ್ಟದಲ್ಲಿ ಲುಥಿಯಾನ, ರಷ್ಯಾ ಮತ್ತು ದಕ್ಷಿಣ ಅಮೆರಿಕದ ಗುಯಾನ ದೇಶಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಇನ್ನು ಭಾರತ ಈ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದ್ದರೆ ದೇಶದಲ್ಲಿ ಕರ್ನಾಟಕವು ಮೂರನೇ ಸ್ಥಾನವನ್ನು ಪಡೆದಿದೆ. ಒಟ್ಟಾರೆಯಾಗಿ ಆತ್ಮಹತ್ಯೆ ಪ್ರಕರಣಗಳಲ್ಲಿ ಯುವ ಸಮುದಾಯದವರೇ ಹೆಚ್ಚಿನವರಿದ್ದಾರೆ. ಕಾರಣ ಪ್ರೇಮ ವೈಫಲ್ಯ, ಕೌಟುಂಬಿಕ ಸಮಸ್ಯೆ, ಹಣಕಾಸು ಸಮಸ್ಯೆ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವುದು ಇತ್ಯಾದಿ. ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಾಧ್ಯವಾಗದೆ ಇದ್ದಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.

ಆತ್ಮಹತ್ಯೆಗೆ ಪರಿಹಾರವೇನೆಂದರೆ ಮನಸ್ಸು ಭಾರವಾದಾಗ ಒಂಟಿಯಾಗಿರದೆ ನಮಗಿಷ್ಟವಾದ ಕಾರ್ಯದಲ್ಲಿ ತೊಡಗುವುದು, ಕುಟುಂಬದವರ ಜತೆ, ಸ್ನೇಹಿತರ ಜತೆ ಕಾಲ ಕಳೆಯುವುದು, ಪುಸ್ತಕಗಳನ್ನು ಓದುವುದು, ಇತರರ ಜತೆ ಬೆರೆಯುವುದು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಕಷ್ಟದ ಸಮಯದಲ್ಲಿ ಇತರರ ನೆರವನ್ನು ಪಡೆಯುವುದು. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮನೋಭಾವಗಳನ್ನು ರೂಢಿಸಿಕೊಳ್ಳಬೇಕು. ಇವು ಮಾತ್ರವಲ್ಲದೆ ಆತ್ಮಹತ್ಯೆ ತಡೆಗೆ ನಾವು ಕೂಡ ಸ್ಪಂದಿಸಬೇಕು.

ಯಾರಾದರೂ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಾಗ ಅವರಿಗೆ ಅಸಡ್ಡೆ ತೋರದೆ ಸಮಸ್ಯೆಗೆ ಪರಿಹಾರ ಒದಗಿಸುವ ಅಥವಾ ಅವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆತಂಕದಲ್ಲಿರುವವರಿಗೆ ಧೈರ್ಯ ತುಂಬಬೇಕು. ಮಾನಸಿಕವಾಗಿ ದುರ್ಬಲವಾಗಿರುವವರಿಗೆ ಜೀವನದ ಬೆಲೆಯನ್ನು ತಿಳಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕಿದೆ.

–  ಅಭಿಷೇಕ್‌ ಆರ್‌. ಕುವೆಂಪು ವಿವಿ, ಶಿವಮೊಗ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next