Advertisement

ಪಡಿತರ ಕದೀಮರ ಹೆಡೆಮುರಿ ಕಟ್ಟಲು ಡಿಸಿ ತಾಕೀತು

11:44 AM Oct 06, 2018 | Team Udayavani |

ಬೀದರ: ಜಿಲ್ಲೆಯ ವಿವಿಧೆಡೆ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗುತ್ತಿರುವ ಬೆನ್ನಲ್ಲೇ ಶುಕ್ರವಾರ ಹುಮನಾಬಾದ ಪಟ್ಟಣದ ಗೋದಾಮು ಒಂದರಲ್ಲಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಪ್ಯಾಕ್‌ಗಳು ಪತ್ತೆಯಾಗಿದ್ದು, ಅನೇಕ ಅನುಮಾನಗಳು ಹುಟ್ಟುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಹಾಗೂ ಸಂಗ್ರಹಣೆಯಲ್ಲಿ ತೊಡಗಿರುವ ಆರೋಪಿಗಳ ಹೆಡೆಮುರಿ ಕಟ್ಟಲು ಜಿಲ್ಲಾಧಿಕಾರಿ ಡಾ.ಎಚ್‌.ಆರ್‌. ಮಹಾದೇವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೆ.5ರಂದು “ಉದಯವಾಣಿ’ಯಲ್ಲಿ “ಪಡಿತರ ಅಕ್ಕಿ ಅಕ್ರಮ ಸಾಗಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಕಳೆದ ತಿಂಗಳಲ್ಲಿ ಕೂಡ ಹುಮನಾಬಾದ ಪಟ್ಟಣದಲ್ಲಿ ಅಕ್ಕಿ ಗೋದಾಮಿನ ಮೇಲೆ
ದಾಳಿ ನಡೆದ ಸಂದರ್ಭದಲ್ಲಿ ಕ್ಷೀರ ಭಾಗ್ಯ ಯೋಜನೆಯ 50 ಪ್ಯಾಕ್‌ ಹಾಲಿನ ಪೌಡರ್‌ ಪತ್ತೆಯಾಗಿದ್ದವು. ನಂತರ ಚಿಟಗುಪ್ಪ ಪಟ್ಟಣದಲ್ಲಿ ದಾಳಿ ನಡೆದ ಸಂದರ್ಭದಲ್ಲಿ ಕ್ಷೀರ ಭಾಗ್ಯ ಯೋಜನೆಯ ಸುಮಾರು ನಾಲ್ಕು ಕ್ವಿಂಟಲ್‌ ಹಾಲಿನ ಪ್ಯಾಕ್‌ಗಳು ಪತ್ತೆಯಾಗಿದ್ದವು. ಇದೀಗ ಹುಮನಾಬಾದ ಪಟ್ಟಣದ ಎಪಿಎಂಸಿ ಪ್ರಾಂಗಣದ ಗೋದಾಮಿನಲ್ಲಿ ದಾಳಿ ನಡೆದ ಸಂದರ್ಭದಲ್ಲಿ 74 ಪ್ಯಾಕ್‌ಗಳು ಪತ್ತೆಯಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಕಳ್ಳ ದಂಧೆಯಲ್ಲಿ ಭಾಗಿಯಾಗಿದ್ದಾರೆ
ಎಂಬ ಅನುಮಾನಕ್ಕೆ ಪುಷ್ಟಿ ಬಂದಿದೆ.

ಕ್ಷೀರ ಭಾಗ್ಯ ಯೋಜನೆ: ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಶ್ಯವಿರುವ ಪೌಷ್ಟಿಕ ಆಹಾರ ಒದಗಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗದೊಂದಿಗೆ ರಾಜ್ಯದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲು ಒದಗಿಸುವ ಕ್ಷೀರಭಾಗ್ಯ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಗಸ್ಟ್‌ 2013ರಲ್ಲಿ ಜಾರಿಗೆ ತರಲಾಗಿತ್ತು.

ಯಾರಿಗೆ ವಿತರಣೆ?: ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ 500 ಗ್ರಾಂ, ಹಾಗೂ 1 ಕೆಜಿ ಪ್ಯಾಕ್‌ ಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯದ 55,683 ಶಾಲೆಗಳ 64 ಲಕ್ಷ ಮಕ್ಕಳಿಗೆ, 5 ಲಕ್ಷ ಲೀಟರ್‌ ಹಾಲು ಹಾಗೂ 64,000 ಅಂಗನವಾಡಿ ಕೇಂದ್ರಗಳ 40 ಲಕ್ಷ ಮಕ್ಕಳಿಗೆ 3 ಲಕ್ಷ ಲೀಟರ್‌ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಹಾಲು ಮಹಾಮಂಡಳಿ ಆನ್‌ಲೈನ್‌ಲ್ಲಿ ಪ್ರಕಟಿಸಿದೆ.

ಎಷ್ಟು ಪ್ರಮಾಣ?: ಪ್ರತಿ ವಿದ್ಯಾರ್ಥಿಗೆ 80 ಗ್ರಾಂ ಅಂದರೆ 150 ಮಿ.ಲೀ. ಹಾಲಿಗೆ ಸಮವಾಗಿ ವಾರದ ಐದು ದಿನಗಳು ಕೆನೆಭರಿತ ಹಾಲು ವಿತರಣೆ ಮಾಡಬೇಕು. ಈ ಯೋಜನೆಯ ಮೂಲಕ ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶ ಹೊಂದಿದ್ದು, ಇದೀಗ ಹಾಲಿನ ಪೌಡರ್‌ ಕೂಡ ಕಳ್ಳಸಂತೆಗೆ ಸೇರುತ್ತಿದೆ. ಮಕ್ಕಳ ಆರೋಗ್ಯ ಕಾಪಾಡಬೇಕಾದವರೆ ಈ ಅಕ್ರಮದಲ್ಲಿ ಭಾಗಿಯಾಗಿ, ಮಕ್ಕಳ ಭವಿಷ್ಯದ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ.

Advertisement

ಕಾಣದ ಕೈಗಳು: ಅಕ್ರಮ ಪಡಿತರ ಅಕ್ಕಿ, ಗೋಧಿ ಹಾಗೂ ಮಕ್ಕಳ ಕ್ಷೀರಭಾಗ್ಯ ಯೋಜನೆಯ ಹಾಲಿ ಪ್ಯಾಕ್‌ಗಳು ಖಾಸಗಿ ಗೋದಾಮುಗಳಲ್ಲಿ ಪತ್ತೆಯಾಗುತ್ತಿದ್ದು, ಈ ದಂಧೆಕೋರರ ಹಿಂದೆ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಣದ ಕೈಗಳು ಈ ಅಕ್ರಮಕ್ಕೆ ಸಾಥ್‌ ನೀಡುತ್ತಿವೆ ಎಂಬ ಆರೋಪಗಳು ಇದ್ದು, ಸದ್ಯ ಜಿಲ್ಲಾಧಿಕಾರಿಗಳು ತೆಗೆದುಕೊಂಡ ದಿಟ್ಟ ಹೆಜ್ಜೆಯಿಂದ ಅಕ್ರಮ ದಂಧೆಗೆ ಕಡಿವಾಣ ಬೀಳಬಹುದೇ ಎಂಬುದನ್ನು ಕಾದುನೊಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next