Advertisement

ಭಾರತಕ್ಕೆ ಇಟಲಿ ವಿರುದ್ಧ 2-0 ಹಿನ್ನಡೆ

02:31 AM Feb 02, 2019 | |

ಕೋಲ್ಕತಾ: ಹುಲ್ಲಿನಂಗಳದಲ್ಲಿ ಆಡುವ ಗ್ಯಾಂಬ್ಲಿಂಗ್‌ನಲ್ಲಿ ಭಾರತಕ್ಕೆ ಭಾರೀ ಸೋಲಾಗಿದೆ. ಇಟಲಿ ವಿರುದ್ಧ ಇಲ್ಲಿನ ‘ಕಲ್ಕತ್ತಾ ಸೌತ್‌ ಕ್ಲಬ್‌’ನಲ್ಲಿ ಶುಕ್ರವಾರ ನಡೆದ ಡೇವಿಸ್‌ ಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಬಲಿಷ್ಠ ಇಟಲಿ ವಿರುದ್ಧದ ಮೊದಲೆರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಭಾರತ ಮುಖಭಂಗ ಅನುಭವಿಸಿದೆ.

Advertisement

ಮೊದಲ ಸಿಂಗಲ್ಸ್‌ ನಲ್ಲಿ ಇಟಲಿಯ ಅನುಭವಿ ಟೆನಿಸಿಗ ಆ್ಯಂಡ್ರಿಯಾಸ್‌ ಸೆಪ್ಪಿ 6-4, 6-2 ಅಂತರದಿಂದ ರಾಮ್‌ಕುಮಾರ್‌ ರಾಮನಾಥನ್‌ ವಿರುದ್ಧ ಜಯ ಸಾಧಿಸಿದರು. ಬಳಿಕ 22ರ ಹರೆಯದ ಮ್ಯಾಟಿಯೊ ಬಾರೆಟ್ಟಿನಿ ಭಾರೀ ನಿರೀಕ್ಷೆ ಇರಿಸಿದ್ದ ಪ್ರಜ್ಞೇಶ್‌ ಗುಣೇಶ್ವರ್‌ಗೆ 6-4, 6-3ರಿಂದ ಆಘಾತವಿಕ್ಕಿದರು. ಬಾರೆಟ್ಟಿನಿ ಅವರಿಗೆ ಇದು ಮೊದಲ ಡೇವಿಸ್‌ ಕಪ್‌ ಪಂದ್ಯವಾಗಿತ್ತು.

ಈ ಅವಳಿ ಸೋಲಿನಿಂದ ಭಾರತಕ್ಕೆ ಭಾರೀ ಹಿನ್ನಡೆಯಾಗಿದ್ದು, ಶನಿವಾರದ ಡಬಲ್ಸ್‌ ಮುಖಾಮುಖೀ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ. ಇಲ್ಲಿ ರೋಹನ್‌ ಬೋಪಣ್ಣ- ದಿವಿಜ್‌ ಶರಣ್‌ ಕಣಕ್ಕಿಳಿಯಲಿದ್ದಾರೆ. ಇವರಿಗೆ 2015ರ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಚಾಂಪಿಯನ್ಸ್‌ ಮಾರ್ಕೊ ಸೆಶಿನಾಟೊ-ಸಿಮೋನ್‌ ಬೊಲೆಲ್ಲಿ ಎದುರಾಗಲಿದ್ದಾರೆ.

ಕಳೆದ ಏಷ್ಯಾ/ಒಶಿಯಾನಿಯ ಗ್ರೂಪ್‌ ಒಂದರ ಸುತ್ತಿನ ಚೀನಾ ಎದುರಿನ ಪಂದ್ಯದ ವೇಳೆ ಭಾರತ ಇಂಥದೇ ಸಂಕಟದಿಂದ ಪಾರಾಗಿ 3-2 ಅಂತರದಿಂದ ಜಯ ಸಾಧಿಸಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಇಟಲಿ ಚೀನಾಕ್ಕಿಂತ ಬಲಿಷ್ಠ ಎಂಬುದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸವಾಲು ಕಠಿಣ: ಭೂಪತಿ

Advertisement

‘ನಮ್ಮೆಲ್ಲರ ಗಮನ ಶನಿವಾರದ ಡಬಲ್ಸ್‌ ಪಂದ್ಯದ ಮೇಲಿದೆ. ಇದು ಗೆಲ್ಲಲೇಬೇಕಾದ ಪಂದ್ಯ. ಆದರೆ ಸವಾಲು ಬಹಳ ಕಠಿಣವಾಗಿದೆ’ ಎಂದು ಭಾರತ ತಂಡದ ಆಡದ ನಾಯಕ ಮಹೇಶ್‌ ಭೂಪತಿ ಹೇಳಿದ್ದಾರೆ. ‘ಇಟಲಿ ಅನುಭವಿ ಆಟಗಾರರನ್ನು ಹೊಂದಿರುವ ತಂಡ. ಆದರೆ ಕೆಲವೊಮ್ಮೆ ಅಚ್ಚರಿಗಳು ಸಂಭವಿಸುವುದಿದೆ. ಕಳೆದ ಸಲ ಚೀನಾದಲ್ಲಿ ಇದು ಸಂಭವಿಸಿತ್ತು. ಆದರೆ ಚೀನಾಕ್ಕಿಂತ ಇಟಲಿ ಬಲಿಷ್ಠ ಎಂಬುದನ್ನು ಮರೆಯುವಂತಿಲ್ಲ’ ಎಂದು ಭೂಪತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next